MysoreState

‘ಹಿಂಸೆ ಮತ್ತು ಕ್ರೀಡೆಯನ್ನು ಏಕಕಾಲದಲ್ಲಿ ನಡೆಸಲು ಸಾಧ್ಯವಿಲ್ಲ’ಎಂಬ ಸಂದೇಶ ಬಾಂಗ್ಲಾಕ್ಕೆ ರವಾನಿಸಿ

ಬೆಂಗಳೂರು: ಪಾಕಿಸ್ತಾನದ ವಿಷಯದಲ್ಲಿ ‘ನೀರು ಮತ್ತು ರಕ್ತ ಏಕಕಾಲದಲ್ಲಿ ಹರಿಯಲು ಸಾಧ್ಯವಿಲ್ಲ’ ಎಂಬ ನಿಲುವನ್ನು ಭಾರತ ಸರ್ಕಾರ ಹೇಗೆ ತೆಗೆದುಕೊಂಡಿತ್ತೋ, ಅದೇ ನಿಲುವನ್ನು ಈಗ ಬಾಂಗ್ಲಾದೇಶದ ವಿರುದ್ಧವೂ ತೆಗೆದುಕೊಳ್ಳಬೇಕಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

ಈ ಕುರಿತು ಹೇಳಿಕೆ ನೀಡಿರುವ  ಹಿಂದೂ ಜನಜಾಗೃತಿ ಸಮಿತಿ, ರಾಜ್ಯ ವಕ್ತಾರರಾದ ಮೋಹನ ಗೌಡ  ಅವರು, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಅಮಾನವೀಯ ದೌರ್ಜನ್ಯಗಳನ್ನು ಮರೆತು, ಬಾಂಗ್ಲಾದೇಶಿ ಆಟಗಾರರಿಗೆ ಭಾರತದ ನೆಲದಲ್ಲಿ ‘ರೆಡ್ ಕಾರ್ಪೆಟ್’ ಸ್ವಾಗತ ನೀಡುವುದನ್ನು ನಾವು ಎಂದಿಗೂ ಸಹಿಸುವುದಿಲ್ಲ. ಐಪಿಎಲ್‌ನ ಎಲ್ಲಾ ತಂಡದ ಮಾಲೀಕರು ಇದೇ ನಿಲುವನ್ನು ತೆಗೆದುಕೊಳ್ಳಬೇಕಿತ್ತು; ಆದರೆ ‘ಬಿಸಿಸಿಐ’ (BCCI) ನಿರ್ಧಾರದ ನಂತರ ಬಾಂಗ್ಲಾದೇಶದ ಆಟಗಾರ ಮುಸ್ತಫಿಜುರ್ ರೆಹಮಾನ್ ಅವರನ್ನು ಕೈಬಿಡಲಾಗಿದೆ.

‘ಹಿಂಸೆ ಮತ್ತು ಕ್ರೀಡೆಯನ್ನು ಏಕಕಾಲದಲ್ಲಿ ನಡೆಸಲು ಸಾಧ್ಯವಿಲ್ಲ’ ಎಂಬ ಸಂದೇಶವನ್ನು ಭಾರತ ಸರ್ಕಾರ ಬಾಂಗ್ಲಾದೇಶಕ್ಕೆ ನೀಡಬೇಕು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಒಬ್ಬನೇ ಒಬ್ಬ ಆಟಗಾರನಿಗೂ ಭಾರತದ ನೆಲದಲ್ಲಿ ಆಡಲು ಅವಕಾಶ ನೀಡುವುದು ಹಿಂದೂಗಳ ಗಾಯದ ಮೇಲೆ ಉಪ್ಪು ಸವರುವಂತಾಗುತ್ತದೆ. ಆದ್ದರಿಂದ ಈ ದೇಶಗಳ ಆಟಗಾರರು ಭಾರತದಲ್ಲಿ ಆಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿ ಆಟಗಾರರಿಗೆ ಭಾರತದ ನೆಲದಲ್ಲಿ ಆಡಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಹಿಂದೂ ಜನ ಜಾಗೃತಿ ಸಮಿತಿಯು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 22 ಡಿಸೆಂಬರ್ 2025 ರಂದು ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು ಮತ್ತು ಬಿಸಿಸಿಐ ಅಧ್ಯಕ್ಷರಿಗೆ ಮನವಿ ಸಲ್ಲಿಸಿತ್ತು. ಬಾಂಗ್ಲಾದೇಶಿ ಆಟಗಾರ ಮುಸ್ತಫಿಜುರ್ ರೆಹಮಾನ್ ಅವರನ್ನು ‘ಕೋಲ್ಕತ್ತಾ ನೈಟ್ ರೈಡರ್ಸ್’ ತಂಡದಿಂದ ಕೈಬಿಡಬೇಕೆಂದು ಸಮಿತಿಯು ಕೆಲವು ದಿನಗಳ ಹಿಂದೆಯೇ ಒತ್ತಾಯಿಸಿತ್ತು. ಈ ಕುರಿತು ಇಂದು ಬಿಸಿಸಿಐ ನಿರ್ಧಾರ ಕೈಗೊಂಡಿದೆ. ಬಿಸಿಸಿಐನ ಈ ಕ್ರಮವನ್ನು ನಾವು ಸ್ವಾಗತಿಸುತ್ತೇವೆ; ಆದರೆ ಈ ನಿಲುವನ್ನು ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕರು ತೆಗೆದುಕೊಳ್ಳಬೇಕಿತ್ತು.

ಶಾರುಖ್ ಖಾನ್ ಅಂತಹ ಯಾವುದೇ ನಿಲುವನ್ನು ಸ್ವತಃ ತೆಗೆದುಕೊಳ್ಳಲಿಲ್ಲ. ಅವರಿಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕಿಂತ ತನ್ನ ತಂಡ, ವ್ಯವಹಾರ ಮತ್ತು ಅದರಿಂದ ಬರುವ ಆದಾಯವೇ ಮುಖ್ಯವೆಂದು ತೋರುತ್ತದೆ, ಇದು ಅತ್ಯಂತ ಖಂಡನೀಯ. ಬಾಂಗ್ಲಾದೇಶಿ ಆಟಗಾರರನ್ನು ಪ್ರೋತ್ಸಾಹಿಸುವುದು ಎಂದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರಕ್ಕೆ ಪರೋಕ್ಷ ಬೆಂಬಲ ನೀಡಿದಂತೆಯೇ ಸರಿ. ಆದ್ದರಿಂದ ನಾವು ಶಾರುಖ್ ಖಾನ್ ಅವರನ್ನು ಬಹಿರಂಗವಾಗಿ ಖಂಡಿಸುತ್ತೇವೆ ಮತ್ತು ಅವರು ದೇಶದ ಜನತೆಯ ಎದುರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸುತ್ತೇವೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ, ಇದಲ್ಲದೆ ಕಾನೂನುಬಾಹಿರವಾಗಿ ನುಸುಳುತ್ತಿರುವ ಬಾಂಗ್ಲಾದೇಶಿಗಳಿಂದ ಭಾರತದ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಮಾನವ ಅಕ್ರಮ ಸಾಗಣೆ, ಮಾದಕ ದ್ರವ್ಯ ಜಾಲ, ವೇಶ್ಯಾವಾಟಿಕೆ ಮುಂತಾದ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಆದ್ದರಿಂದ ಬಾಂಗ್ಲಾದೇಶಿ ನುಸುಳುಕೋರರನ್ನು ಪತ್ತೆಹಚ್ಚಿ ಅವರನ್ನು ಅವರ ದೇಶಕ್ಕೆ ವಾಪಸ್ ಅಟ್ಟಬೇಕು ಎಂದು ಒತ್ತಾಯಿಸಿದ್ದಾರೆ.

admin
the authoradmin

Leave a Reply

Translate to any language you want