ಬನದ ಹುಣ್ಣಿಮೆ ಅಂಗವಾಗಿ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ… ಕಾವೇರಿ ನದಿ ಸಂರಕ್ಷಣೆಗೆ ಕೈ ಜೋಡಿಸಿ!

ಕುಶಾಲನಗರ(ರಘುಹೆಬ್ಬಾಲೆ) : ಪಟ್ಟಣದ ಟೋಲ್ ಗೇಟ್ ನಲ್ಲಿರುವ ಕಾವೇರಿ ದೇವಸ್ಥಾನದಲ್ಲಿ ಬಾರವಿ ಕನ್ನಡ ಅಭಿಮಾನಿ ಸಂಘದ ವತಿಯಿಂದ ಬನದ ಹುಣ್ಣಿಮೆ ಅಂಗವಾಗಿ ಅರ್ಚಕ ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ಕಾವೇರಿ ಪ್ರತಿಮೆಗೆ ವಿವಿಧ ಪುಷ್ಪ ಹಾಗೂ ವಸ್ತ್ರಗಳಿಂದ ಅಲಂಕಾರ,ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿ ಮಹಾ ಆರತಿ ಬೆಳಗಲಾಯಿತು. ಉದ್ಯಮಿ ಬೆಂಗಳೂರಿನ ಸುನಂದ ಕೌಶಿಕ್ ಹಾಗೂ ರುದ್ರೇಶ್ ಕುಟುಂಬಸ್ಥರು ಪೂಜಾ ಸೇವಾರ್ಥ ನೆರವೇರಿಸಿದರು. ಸುನಂದ ಹಾಗೂ ಕುಟುಂಬಸ್ಥರು ಕಾವೇರಿ ಮಾತೆಗೆ ವಸ್ತ್ರ ದಾನ ಮಾಡಿದರು.

ಪಿರಿಯಾಪಟ್ಟಣ ಕರುನಾಡು ಜನಜಾಗೃತಿ ವಿಚಾರ ವೇದಿಕೆ ಅಧ್ಯಕ್ಷ ಬಿ.ಟಿ.ಸಚ್ಚಿದಾನಂದ ಮಾತನಾಡಿ, ಕೊಡಗಿನ ಕಾವೇರಿ ನಾಡಿನ ಜೀವನದಿಯಾಗಿದೆ. ಕಾವೇರಿ ಲಕ್ಷಾಂತರ ರೈತರಿಗೆ ಹಾಗೂ ಪಟ್ಟಣವಾಸಿಗಳಿಗೆ ನೀರು ಒದಗಿಸುತ್ತಿದ್ದಾಳೆ. ಇಂತಹ ಜೀವನದಿ ಕಾವೇರಿ ಕಲುಷಿತ ನೀರು ಹರಿಸುವುದು ಹಾಗೂ ಕಸ ಇನ್ನಿತರ ವಸ್ತುಗಳನ್ನು ತಂದು ನದಿಗೆ ಹಾಕುವುದನ್ನು ಪ್ರತಿಯೊಬ್ಬರೂ ನಿಲ್ಲಿಸಬೇಕು.ನದಿಯ ಪಾವಿತ್ರ್ಯತೆ ಕಾಪಾಡಲು ಎಲ್ಲರೂ ಕೈಜೋಡಿಸಬೇಕು. ಬಾರವಿ ಕನ್ನಡ ಅಭಿಮಾನಿ ಸಂಘದ ವತಿಯಿಂದ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಾರವಿ ಕನ್ನಡ ಅಭಿಮಾನಿಗಳ ಸಂಘದ ಸಂಚಾಲಕ ರವೀಂದ್ರ ಪ್ರಸಾದ್ ಮಾತನಾಡಿ, ಜೀವನದಿ ಕಾವೇರಿ ಮತ್ತು ಪರಿಸರದ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ. ಕಾವೇರಿ ನದಿಯ ಸ್ವಚ್ಛತೆ ಹಾಗೂ ಸಂರಕ್ಷಣೆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಕರಿಸಿ ಸ್ವಚ್ಛ ಪರಿಸರದ ಉಳಿವಿಗೆ ಸಹಕರಿಸುವಂತೆ ಮನವಿ ಮಾಡಿದರು.
ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಬಾರವಿ ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಬಬೀಂದ್ರ ಪ್ರಸಾದ್, ಸಂಘಟನಾ ಸಂಚಾಲಕ ವಿಜಯೇಂದ್ರ ಪ್ರಸಾದ್ ಮುಖಂಡರಾದ ಕೆಇಬಿ ಲೋಕೇಶ್ , ಮನುಗೌಡ, ಪವನ್ ಕೂಡಿಗೆ, ಚಂದ್ರಣ್ಣ, ಶಂಕರ್, ತಿಲಕ್ಪುಜಾರಿ, ರಮೇಶ್ ಆವರ್ತಿ, ಮಣಿಯಣ್ಣ, ರುದ್ರೇಶ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.







