ಹುಣಸೂರು: ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ಬೆಳಕು ಸೇವಾ ಸಂಸ್ಥೆಯ ಅನಾಥ ಮಕ್ಕಳಿಗೆ ಹೆಚ್.ಡಿ.ಪಿ. ಫೈನಾನ್ಸ್ ವತಿಯಿಂದ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ವೇಳೆ ಹೆಚ್.ಡಿ.ಪಿ. ಫೈನಾನ್ಸ್ ವ್ಯವಸ್ಥಾಪಕಿ ಶ್ವೇತ ಮಾತನಾಡಿ ಕೌಟುಂಬಿಕ ಕಲಹದಿಂದ ಬಳಲುತ್ತಾ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಬೆಳಕು ಸೇವಾ ಸಂಸ್ಥೆಯು ಆಶ್ರಯ ನೀಡಿ ಶಿಕ್ಷಣ ಕೊಡಿಸಿ ಸಮಾಜ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡುತ್ತಿರುವುದು ಅತ್ಯಂತ ಮಾನವೀಯ ಕೆಲಸವಾಗಿದ್ದು, ನಮ್ಮ ಹೆಚ್.ಡಿ ಪಿ ಫೈನಾನ್ಸ್ ಸಿಬ್ಬಂದಿಗಳ ವತಿಯಿಂದ ವರ್ಷದ ವೇತನದ ಉಳಿತಾಯದ ಹಣದಿಂದ ಸಂಸ್ಥೆಯ ಮಕ್ಕಳಿಗೆ ಬೇಕಾಗಿದ್ದ ತಟ್ಟೆ, ಲೋಟ, ಬಕೇಟ್ ಗಳು, ಬಟ್ಟೆಗಳು, ಆಟದ ಸಾಮಗ್ರಿಗಳನ್ನು ವಿತರಿಸಿದ್ದೇವೆ. ನಮ್ಮ ದುಡಿಮೆಯ ಒಂದಿಷ್ಟು ಉಳಿತಾಯದ ಹಣವನ್ನು ಇಂತಹ ಸಂಕಷ್ಟದಲ್ಲಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಟ್ಟು ಅವರಿಗೆ ಸಹಾಯ ಮಾಡುವುದು ನಮಗೆ ಸಮಾಧಾನ ತಂದಿದೆ ಎಂದರು.

ಸಂಸ್ಥೆಯ ನಿಂಗರಾಜ್ ಮಲ್ಲಾಡಿ ಮಾತನಾಡಿ ಹೆಚ್.ಡಿ ಪಿ ಫೈನಾನ್ಸ್ ಸಂಸ್ಥೆಯವರು ಬಂದು ಸಂಕಷ್ಟದಲ್ಲಿರುವ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿ ಅವರಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಕೊಟ್ಟು ಅವರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಸಂತೈಸಿರುವುದು ಇವರ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಮೇಲ್ವಿಚಾರಕಿ ಮನು, ಹೆಚ್.ಡಿ.ಪಿ. ಫೈನಾನ್ಸ್ ಸಿಬ್ಬಂದಿ, ಸಂಸ್ಥೆಯ ಮಕ್ಕಳು ಹಾಜರಿದ್ದರು.








