ಸರಗೂರು: ತಾಲೂಕಿನ ಬೇಲದಕುಪ್ಪೆ ವ್ಯಾಪ್ತಿಯಲ್ಲಿ ಈಗಾಗಲೇ ಜನ ಕಾಡಾನೆ ಹಾವಳಿಯಿಂದ ಸಂಕಷ್ಟಕ್ಕೀಡಾಗಿದ್ದು, ಇದೀಗ ಮತ್ತೊಮ್ಮೆ ಹಾಡುಹಗಲೇ ಒಂಟಿ ಸಲಗ ದರ್ಶನ ನೀಡಿ ಬೈಕ್ ಮತ್ತಿತರ ವಸ್ತುಗಳನ್ನು ಹಾಳು ಮಾಡುವ ಮೂಲಕ ಇನ್ನಷ್ಟು ಭಯಭೀತರನ್ನಾಗುವಂತೆ ಮಾಡಿದೆ.

ತಾಲೂಕಿನ ಬೇಲದಕುಪ್ಪೆ ದೇವಸ್ಥಾನ ಪ್ರವೇಶ ದ್ವಾರದ ಅರಳಹಳ್ಳಿ ಚೈನ್ ಗೇಟ್ ಬಳಿ ನುಗು ವಲಯದ ಕಾಡಿನ ಕಡೆಯಿಂದ ಬಂದ ಒಂಟಿ ಸಲಗವೊಂದು ಮಾರ್ಗದಲ್ಲಿದ್ದ ಎರಡು ಬೋರ್ ವೆಲ್, ಒಂದು ಕೆಇಬಿ ಲೈಟ್ ಕಂಬವನ್ನು ಹಾಳುಮಾಡಿದೆ ಈ ಸಂದರ್ಭದಲ್ಲಿ ವಿದ್ಯುತ್ ಆಫ್ ಆಗಿದ್ದರಿಂದ ಯಾವುದೇ ಯಾವುದೇ ದುರ್ಘಟನೆ ಸಂಭವಿಸಿರುವುದಿಲ್ಲ. ಈ ಸಂಬಂಧ ಇಲಾಖೆಯ ಕೆಲ ಬೈಕ್ಗಳು ಜಖಂಗೊಂಡಿವೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ಅರಣ್ಯದ ನುಗು ಅರಣ್ಯ ವಲಯ ಪ್ರದೇಶದಿಂದ ಹೊರ ಬಂದ ಕಾಡಾನೆಯೊಂದು ಕಾಡಿಗೆ ಹೊಂದಿಕೊಂಡಂತಿರುವ ಬೇಲದಕುಪ್ಪೆ ದೇವಸ್ಥಾನಕ್ಕೆ ಹೋಗುವ ಮೇನ್ ಗೇಟ್ ಆದ (ಚೈನ್ ಗೇಟ್) ಚೈನ್ಗೇಟ್ ಬಳಿ ಜಮೀನಿನಿಂದ ಕಾಡಿನತ್ತ ಹೋಗುವಾಗ ದೇವಸ್ಥಾನಕ್ಕೆ ತೆರಳಿದ್ದ ಭಕ್ತರು ಕೂಗಿದ ಹಿನ್ನೆಲೆ ಗಾಬರಿಗೊಂಡ ಸಲಗ ಚೈನ್ ಗೇಟ್ ಬಳಿ ಇರುವ ಅರಣ್ಯ ಇಲಾಖೆ ಕಚೇರಿ ಎದುರುಗಡೆ ನಿಲ್ಲಿಸಿದ್ದ ಬೈಕ್ ಗಳನ್ನು ಧ್ವಂಸಗೊಳಿಸಿದೆ. ಅಲ್ಲದೆ ಕಚೇರಿಯ ಮೇಲ್ಚಾವಣಿಯನ್ನು ನಾಶಗೊಳಿಸಿದ್ದು, ನಾಮಫಲಕದ ಹಲಗೆಯನ್ನು ಕಿತ್ತುಹಾಕಿದೆ.

ಇಲ್ಲಿನ ತಪಾಸಣಾ ಕಚೇರಿ ಪಕ್ಕದಲ್ಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ವಾಹನದ ಮೇಲೆ ಇದ್ದು ಆನೆ ದಾಂಧಲೆ ನಡೆಸಿದ ವೀಡಿಯೋವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ನಂತರ ಆನೆ ಕಾಡಿನತ್ತ ಹೊರಟು ಹೋಯಿತು ಎಂದು ಇಲ್ಲಿನ ಹೆಡಿಯಾಲ ಎ ಸಿ ಎಫ್ ಪರಮೇಶ್ ಡಿ ಹಾಗೂ ಹೆಡಿಯಾಲ ಅರಣ್ಯಾಧಿಕಾರಿ ಎಸ್. ಆರ್ ಕೃಷ್ಣ ರವರು ತಿಳಿಸಿದ್ದಾರೆ. ಬೋರ್ ವೆಲ್ ಹಾಗೂ ವಿದ್ಯುತ್ ಕಂಬವನ್ನು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.









