News

ನೂತನ ಸ್ತ್ರೀ ಶಕ್ತಿ ಭವನ ಉದ್ಘಾಟನೆ.. ನಾರಿ ಶಕ್ತಿಯೊಂದಿಗೆ ವಿಕಸಿತ ಭಾರತ ನಿರ್ಮಾಣ ಪ್ರಗತಿದಾಯಕ

ಕುಶಾಲನಗರ(ರಘುಹೆಬ್ಬಾಲೆ): ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪರಿಕಲ್ಪನೆಯ  ನಾರಿ ಶಕ್ತಿಯೊಂದಿಗೆ ವಿಕಸಿತ ಭಾರತ ನಿರ್ಮಾಣ ಪ್ರಗತಿ ದಾಯಕವಾಗುತ್ತಿರುವುದು  ಹೆಮ್ಮೆಯ ಸಂಗತಿಯಾಗಿದೆ. ಮಹಿಳಾ ಶಕ್ತಿಗೆ  ಬೇಕಾದ ಕಟ್ಟಡಗಳ ನಿರ್ಮಾಣ ಅವರ ಅಭ್ಯುದಯಕ್ಕೆ  ಪೂರಕವಾಗಿವೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.

ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ಶುಕ್ರವಾರ ನೂತನ ಶ್ರೀ ಶಕ್ತಿ ಭವನ ಉದ್ಘಾಟಿಸಿ ಅವರು ಮಾತನಾಡಿ,  ಗ್ರಾಮೀಣ ಪ್ರದೇಶಗಳಿಗೆ ಅಗತ್ಯ ಸೌಲಭ್ಯಗಳನ್ನು  ಒದಗಿಸುವ ನಿಟ್ಟಿನಲ್ಲಿ  ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ  ಯೋಜನೆಯ ಹೆಸರು ಬದಲಾವಣೆ ಮುಖ್ಯವಲ್ಲ.ಗ್ರಾಮೀಣ ಕೌಶಲ್ಯ  ಅಭಿವೃದ್ಧಿಗೆ ಬೇಕಾದ ಸವಲತ್ತುಗಳು ಹೊಸ ಹೆಸರಿನಲ್ಲಿ ಅಡಕವಾಗಿದೆ. ನರೇಗಾ ಆ ಕಾಲ ಘಟ್ಟಕ್ಕೆ ಆಗಿದ್ದು ಸರಿ. ಆದರೆ ಈಗ ಸ್ವಾವಲಂಬಿಗಳಾಗಲೂ ವಿಜಿರಾಮ್ ಜಿ ಯಂತಹ   ಹೊಸ ಹೊಸ ಯೋಜನೆಗಳ ಅನುಷ್ಠಾನ ಹಾಗೂ  ಸವಲತ್ತುಗಳು   ಅಗತ್ಯವಿದೆ.ಆದರೆ ಕಾಂಗ್ರೆಸ್ ನವರ ಅಪಪ್ರಚಾರ ಸರಿ ಅಲ್ಲ  ಎಂದು ಸಂಸದರು ಸಮರ್ಥಿಸಿಕೊಂಡರು.

ದೇಶದ ಸಂಸ್ಕ್ರತಿ, ಪರಂಪರೆ ಸಂರಕ್ಷಣೆಯಲ್ಲಿ ಮಹಿಳೆಯರ  ಪಾತ್ರ ಅಪಾರವಿದೆ.ಕೌಶಲ್ಯಾಭಿವೃದ್ದಿಗೆ ಕಟ್ಟಡಗಳು ಪೂರಕವಾಗಿದ್ದು  ಸಂಜೀವಿನಿ ಒಕ್ಕೂಟದಲ್ಲಿ  ಹೆಬ್ಬಾಲೆ ವ್ಯಾಪ್ತಿಯಲ್ಲಿ 44 ಸಂಘಗಳ   705  ಮಹಿಳಾ ಸದಸ್ಯರಿದ್ದು ಪೂರಕ   ಅಭಿವೃದ್ದಿಗೆ ಬಳಸಿಕೊಳ್ಳಬಹುದಾಗಿದೆ.  ರಾಜ್ಯ ಸರ್ಕಾರಗಳ ಉಚಿತ ಗ್ಯಾರಂಟಿ ಯೋಜನೆಗಳಿಂದಾಗಿ ಗ್ರಾಮೀಣ ಭಾಗದ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿಗಳು ಆಗುತ್ತಿಲ್ಲ ಎಂದು ಸಂಸದರು ವಿಷಾದಿಸಿದರಲ್ಲದೆ, ಸುಸಜ್ಜಿತ ರಸ್ತೆಗಳಿಲ್ಲದೇ ಉಚಿತ ಬಸ್ ಕೊಟ್ಟು ಏನು ಪ್ರಯೋಜನವಿಲ್ಲ. ಬಸ್ ನಲ್ಲಿ ಉಚಿತವಾಗಿ ತೆರಳುವವರಿಗೆ ಕೆಲಸಗಳೇ ಇಲ್ಲ. ಜಲಜೀವನ್ ಯೋಜನೆಯ ಕುಡಿವ ನೀರಿನ ಸಮರ್ಪಕ ಪೂರೈಕೆಗೆ ಒತ್ತು ನೀಡಲಾಗುತ್ತಿದೆ ಎಂದರು.

ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಭ್ರೂಣ ದಿಂದ ಬೂದಿಯಾಗುವವರೆಗೂ ಹೆಣ್ಣು ಮಕ್ಕಳು ಈ ಹಿಂದೆ ಸಾಕಷ್ಟು ಶೋಷಣೆಗೆ ಒಳಗಾಗಿದ್ದರು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಮುನ್ನುಡಿ ಬರೆಯಲಾಯಿತು. ಮರದಡಿ, ಬೇರೆ ಬೇರೆ ಮನೆಯಂಗಳದಲ್ಲಿ ಮಹಿಳಾ ಚಟುವಟಿಕೆ ಗಳ ಮನಗಂಡು ಇಂತಹ ಸ್ತ್ರೀ ಶಕ್ತಿ ಭವನ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಅತಿ ದೊಡ್ಡ ಜನಸಂಖ್ಯೆ ಇರುವ ಹೆಬ್ಬಾಲೆ ಗ್ರಾಮದ ವ್ಯಾಪ್ತಿಯ ಜನರಿಗೆ ಉದ್ಯೋಗ ಒದಗಿಸಲು ಕೈಗಾರಿಕಾ ನಿರ್ಮಾಣ, ಶಿಕ್ಷಣ ಸಂಸ್ಥೆಗಳು ಈ ಹಿಂದೆ ಆಗಬೇಕಿತ್ತು. ಆದರೆ, ನಮ್ಮನ್ನಾಳುವ ಜನಪ್ರತಿನಿಧಿಗಳ ಮನಸ್ಥಿತಿ ಯಿಂದಾಗಿ ಈ ಭಾಗ ಅಭಿವೃದ್ಧಿ ಯಿಂದ ಕಡೆಗಣಿಸಿದೆ. ಇದೀಗ ಹೋಬಳಿ ಕೇಂದ್ರವಾಗುವ ಮೂಲಕ ಹೆಬ್ಬಾಲೆ ಗ್ರಾಮ  ಸಾಮೂಹಿಕ ಅಭಿಪ್ರಾಯಗಳ ಮೂಲಕ ಸಾಕಷ್ಟು ಅಭಿವೃದ್ದಿಯಾಗಬೇಕು ಎಂದರಲ್ಲದೆ, ಜಲಜೀವನ್  ಯೋಜನೆ ಇನ್ನೂ ಕೂಡ ಪೂರ್ಣಗೊಳ್ಳದ ಬಗ್ಗೆ ಹೇಳಿದ  ಶಶಿಧರ್, ಈ ಬಗ್ಗೆ ಸಂಸದರು ಹೆಚ್ಚಿನ ಒತ್ತು ನೀಡುವ ಮೂಲಕ ಕೇಂದ್ರದ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿದರು.

ಹೆಬ್ಬಾಲೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಅರುಣಕುಮಾರಿ ಮಾತನಾಡಿ, ಖಾಯಂ ಪಿಡಿಒ ಇಲ್ಲದೇ ಪಂಚಾಯಿತಿ ಯಲ್ಲಿ ಸದಸ್ಯರುಗಳ ನಡುವೆ  ಸಾಮರಸ್ಯವಿಲ್ಲದೆ  ಇನ್ನಷ್ಟು ಒಳ್ಳೆಯ ಕೆಲಸಗಳು ನೆನೆಗುದಿಗೆ ಬಿದ್ದಿವೆ ಎಂದು ವಿಷಾದಿಸಿದರು. ಈ ಭಾಗದ ಮಹಿಳೆಯರಿಗೆ ಅತೀ  ಅಗತ್ಯವಿದ್ದ  ಸ್ತ್ರೀ ಶಕ್ತಿ ಭವನ ನಿರ್ಮಾಣ ಹೆಮ್ಮೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಸಹಾಯಕ ನಿರ್ದೇಶಕ ರಾಕೇಶ್,  ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶೋಕ್, ಗ್ರಾಪಂ ಅಧ್ಯಕ್ಷೆ ಉಪಾಧ್ಯಕ್ಷೆ ಲತಾ ತಮ್ಮಯ್ಯ, ಸದಸ್ಯರಾದ ಹೆಚ್.ಸಿ.ಮಹದೇವ,  ಮಹೇಶ್,   ಚಂದ್ರಶೇಖರ್ ಜೋಗಿ, ನಾರಾಯಣ, ಹೆಚ್.ಪಿ. ತನು ಕುಮಾರ್, ಹೆಚ್.ಬಿ.ರತ್ನಮ್ಮ, ಪುಟ್ಟಲಕ್ಷ್ಮಮ್ಮ, ಯಶಸ್ವಿನಿ, ಪವಿತ್ರ, ಕವಿತಾ, ಪಂಚಾಯಿತಿ ಪಿಡಿಒ ರವಿಕುಮಾರ್,  ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎಸ್.ರಘು, ಹೆಬ್ಬಾಲೆ ವಿದ್ಯಾಸಂಸ್ಥೆ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

admin
the authoradmin

Leave a Reply

Translate to any language you want