ಮಕ್ಕಳು ಪೋಷಕರಿಗೆ ಶುದ್ಧನೀರನ್ನು ಬಳಸುವಂತೆ ತಿಳಿಸಬೇಕೆಂದು ಎಸ್ ಡಿಎಂಸಿ ಅಧ್ಯಕ್ಷರ ಕಿವಿಮಾತು

ಹೆಚ್.ಡಿ.ಕೋಟೆ: ಶುದ್ಧ ಕುಡಿಯುವ ನೀರಿನ ಬಳಕೆ ಮಾಡುವ ಕುಟುಂಬಗಳ ಸಂಖ್ಯೆ ತೀರಾ ಕಡಿಮೆಯಿದ್ದು ಮಕ್ಕಳು ತಮ್ಮ ಮನೆಗಳಲ್ಲಿ ತಂದೆ ತಾಯಿಗಳಿಗೆ ಶುದ್ಧ ನೀರನ್ನು ಬಳಸುವಂತೆ ತಿಳುವಳಿಕೆ ನೀಡಬೇಕೆಂದು ಎಸ್ ಡಿಎಂ ಸಿ ಅಧ್ಯಕ್ಷರಾದ ಕುಮಾರಣ್ಣ ಮಕ್ಕಳಿಗೆ ಕಿವಿಮಾತು ಹೇಳಿದರು.
ಎಚ್.ಡಿ.ಕೋಟೆ ತಾಲೂಕಿನ ಕ್ಯಾತನಹಳ್ಳಿ ಶುದ್ಧಗಂಗಾ ಘಟಕ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಭಾಗಿತ್ವದಲ್ಲಿ ಶುದ್ಧ ಜಲ ಅಭಿಯಾನದ ಕುರಿತು ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಯಾತನಹಳ್ಳಿ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಪಾಲಾಕ್ಷರವರು ಶುದ್ಧ ಕುಡಿಯುವ ನೀರಿನಿಂದ ಆಗುವ ಉಪಯೋಗಗಳು ಹಾಗೂ ಅಶುದ್ಧ ನೀರಿನಿಂದ ಆಗುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರೆ, ಶುದ್ಧ ಗಂಗಾ ಮೇಲ್ವಿಚಾರಕ ರೇವಣಸಿದ್ದೇಶ್ ಯೋಜನೆಯ ಹಿನ್ನಲೆ ಶುದ್ದಗಂಗಾ ಕಾರ್ಯಕ್ರಮದ ಮಹತ್ವ ಹಾಗೂ ಶುದ್ಧ ಕುಡಿಯುವ ನೀರನ್ನು ಬಳಸುವ ವಿಧಾನಗಳ ಬಗ್ಗೆ ತಿಳಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿ ಅನಿವಲ್ ಸುಜಾತ ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವಾರು ಕಾರ್ಯಕ್ರಮಗಳು ಸಮಾಜಮುಖಿಯಾಗಿದ್ದು, ಈ ಕಾರ್ಯಕ್ರಮದ ಉಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶುದ್ಧ ನೀರು ಮತ್ತು ಶುದ್ಧ ನೀರಿನಲ್ಲಿರುವ ಲವಣಾಂಶಗಳನ್ನು ಕುರಿತ ಪ್ರಾತ್ಯಕ್ಷತೆ ತೋರಿಸಲಾಯಿತು. ಇದೇ ವೇಳೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲಾ ಮಕ್ಕಳು ಶುದ್ಧ ಕುಡಿಯುವ ನೀರಿನ ಘೋಷಣಗಳೊಂದಿಗೆ ಜಾಥಾದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಆಂತರಿಕ ಲೆಕ್ಕಪರಿಶೋಧಕರಾದ ವಿರುಪಾಕ್ಷ, ಶುದ್ದಗಂಗಾ ಪ್ರೇರಕರು, ಸೇವಾ ಪ್ರತಿನಿಧಿ ಹಾಗೂ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.







