LatestMysore

ಇಂದಿರಾಗಾಂಧಿ ವಸತಿ ಶಾಲೆಗೆ ಶಾಸಕ ರವಿಶಂಕರ್, ಎಂಎಲ್ಸಿ ಸಿ.ಎನ್.ಮಂಜೇಗೌಡ ಭೇಟಿ

ವಿದ್ಯಾರ್ಥಿಗಳಿಂದ ದೂರಿನ ಸುರಿಮಳೆ

ಕೆ.ಆರ್.ನಗರ (ಜಿಟೆಕ್ ಶಂಕರ್): ಪಟ್ಟಣದ ಆಂಜನೇಯ ಬಡಾವಣೆಯಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ‌ ವಿಷಯ ಮಾಧ್ಯಮಗಳಲ್ಲಿ ಪ್ರಕಟಗೊಂಡ ಹಿನ್ನಲೆಯಲ್ಲಿ ಶಾಸಕ ಡಿ.ರವಿಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಲೆಗೆ ಶಾಸಕರು ಭೇಟಿ ನೀಡುತ್ತಿದ್ದಂತೆ ಪ್ರಭಾರ ಪ್ರಾಂಶುಪಾಲೆ ಪಿ.ಪವಿತ  ವಿರುದ್ದ ದೂರಿನ ಸುರಿಮಳೆ ಗೈದ ವಿದ್ಯಾರ್ಥಿಗಳು ಕೂಡಲೇ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು.

ಪ್ರಭಾರ ಪ್ರಾಂಶುಪಾಲೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ನಮಗೆ ನೀಡುವುದಿಲ್ಲ ಮತ್ತು ಅದನ್ನು‌ ಒತ್ತಾಯಿಸಿ ಪ್ರಶ್ನಿಸಿದರೆ ಅವುಗಳನ್ನು ನೀಡಲು ಹಣ ಕೇಳುತ್ತಾರೆ ಹಾಗೂ  ಎಸ್ ಎಸ್ ಎಲ್ ಸಿ ವಾರ್ಷಿಕ  ಪರೀಕ್ಷೆಗೆ ಕೂರಿಸುವುದಿಲ್ಲ, ಪ್ರವೇಶ ಪತ್ರ ನೀಡುವುದಿಲ್ಲ ಎಂದು ಹೆದರಿಸುತ್ತಾರೆ ಎಂದು ತಿಳಿಸಿದರು.

ನಂತರ ಶಾಸಕರು ಪೋಷಕರ ಅಹವಾಲುಗಳನ್ನು ಆಲಿಸುವುದರ ಜತೆಗೆ  ಸಿಬ್ಬಂದಿಗಳ  ಸಭೆ ನಡೆಸಿ ಮಕ್ಕಳಿಗೆ ಶೈಕ್ಷಣಿಕ ಅಭಿವೃದ್ಧಿಗೆ  ತೊಂದರೆಯಾಗದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದ ಅವರು ಮುಂದೆ ಈ ರೀತಿಯ ಸಮಸ್ಯೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಸ್ಥಳದಲ್ಲಿದ್ದ  ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ಪ್ರಭಾರ ಪ್ರಾಂಶುಪಾಲೆ ಪಿ.ಪವಿತ ಅವರನ್ನು ಕೂಡಲೇ ಬೇರೆಡೆಗೆ ವರ್ಗಾವಣೆಗೊಳಿಸಿ ನನಗೆ ವರದಿ ಮಾಡುವಂತೆ ಆದೇಶಿದರು.

ಆ ನಂತರ ಪ್ರಭಾರ ಪ್ರಾಂಶುಪಾಲೆ ಪಿ.ಪವಿತ ಅವರನ್ನು ಸಾಲಿಗ್ರಾಮ ತಾಲೂಕಿನ ರಾಂಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ವರ್ಗಾವಣೆ ಮಾಡಿ ಆದೇಶದ ಪ್ರತಿಯನ್ನು ಶಾಸಕ‌ ಡಿ.ರವಿಶಂಕರ್ ಅವರಿಗೆ ಕಳುಹಿಸಿದ ಜಿಲ್ಲಾ ಅಧಿಕಾರಿ ರಾಘವೇಂದ್ರ ಅದೇ ಶಾಲೆಯ ಪ್ರಾಂಶುಪಾಲ ಎನ್.ಮರಯ್ಯ ಅವರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಪ್ರಾಂಶುಪಾಲರ ಹುದ್ದೆಯ ಹೆಚ್ಚುವರಿ‌ ಪ್ರಭಾರವನ್ನು ವಹಿಸಿ ಆದೇಶಿಸಿದರು.

ಪುರಸಭೆ ಮಾಜಿ ಅಧ್ಯಕ್ಷರಾದ ಕೋಳಿಪ್ರಕಾಶ್, ನರಸಿಂಹರಾಜು, ಮಾಜಿ ಸದಸ್ಯರದ ಕೆ.ಎಸ್.ಶಂಕರ್, ನಟರಾಜು, ಕೆ.ವಿನಯ್, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್.ಪ್ರಸನ್ನ, ಮುಖಂಡರಾದ ನವೀದ್, ಕೆಂಚಿಮಂಜು, ಪುಟ್ಟಾಚಾರಿ, ಭಾಸ್ಕರ್ , ಬಸವರಾಜು ಸೇರಿದಂತೆ ಪೋಷಕರು ಹಾಜರಿದ್ದರು.

ಅಹವಾಲು ಆಲಿಸಿದ ಎಂಎಲ್ಸಿ ಸಿ.ಎನ್.ಮಂಜೇಗೌಡ

ಕೆ.ಆರ್.ನಗರ ನಗರದ  ಆಂಜನೇಯ ಬಡಾವಣೆಯಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಅವ್ಯವಸ್ಥೆ ಮತ್ತು ವಿದ್ಯಾರ್ಥಿಗಳಿಗೆ ಆಗುತ್ತಿರುವ‌ ಅನಾನುಕೂಲಗಳನ್ನ ಪೋಷಕರು ನೀಡಿದ ದೂರಿನ ಹಿನ್ನಲೆಯಲ್ಲಿ ವಿಧಾನ ಪರಿಷತ್ ಸದಸ್ಯ‌ ಸಿ.ಎನ್.ಮಂಜೇಗೌಡ ಶನಿವಾರ ಶಾಲೆಗೆ ಭೇಟಿ‌ ನೀಡಿ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಆಹವಾಲುಗಳನ್ನು ಆಲಿಸಿದರು.

ಶಾಲೆಯ ಮಕ್ಕಳೊಂದಿಗೆ ಸಮಸ್ಯೆಗಳನ್ನು ತಿಳಿದರಲ್ಲದೆ ನಿಲಯದ ಅವ್ಯವಸ್ಥೆಯ ಬಗ್ಗೆ ಖುದ್ದು ಭೇಟಿ‌ ನೀಡಿ ಪರಿಶೀಲಿಸಿದ ವಿಧಾನ ಪರಿಷತ್ ಸದಸ್ಯರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ  ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸಮಸ್ಯೆಗೆ ಕೂಡಲೇ ಪರಿಹರಿಸುವಂತೆ ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮಸ್ಯೆಯ ಗಂಭೀರತೆಯ ಬಗ್ಗೆ ಖುದ್ದು ಭೇಟಿ ನೀಡಿ ಅರಿತುಕೊಂಡಿದ್ದು ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳವಾರ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವುದರ ಜತೆಗೆ ತಪ್ಪಿಸ್ತೆ ಪ್ರಭಾರ ಪ್ರಾಂಶುಪಾಲೆ ಪಿ.ಪವಿತ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

ಜೆಡಿಎಸ್ ನಗರ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಪೋಷಕರಾದ ಸ್ಮಿತಾ, ಶ್ವೇತಾ, ರವಿಕುಮಾರ್, ಪ್ರಶಾಂತ್ ಬಾಬು, ಮಂಜುಳ, ವೀಣಾ, ಶೀಲಾ, ಮಂಜುನಾಥ್, ಚಂದ್ರಶೇಖರ್ ಹಾಜರಿದ್ದರು.

admin
the authoradmin

Leave a Reply

Translate to any language you want