ಮೈಸೂರು: ಬಿಗ್ಬಾಸ್ ಮಾಜಿ ಸ್ಪರ್ಧಿ ರಜತ್ ಗೂ ವಿವಾದಕ್ಕೂ ಅದ್ಯಾವ ನಂಟೋ ಗೊತ್ತಿಲ್ಲ. ಅವರು ಮಾಡುವ ರೀಲ್ಸ್ ಅವರಿಗೆ ಶತ್ರುವಾಗಿ ಕಾಡಲಾರಂಭಿಸಿದೆ. ಮಚ್ಚು ಹಿಡಿದು ಮಾಡಿದ ರೀಲ್ಸ್ ಜೈಲಿಗೂ ಕಳಿಸಿತ್ತು. ಇದೀಗ ಪಾರಂಪರಿಕ ಕಟ್ಟಡದ ಎದುರು ಸಿಗರೇಟ್ ಸೇದುವ ರೀಲ್ಸ್ ಸಾರ್ವಜನಿಕರು ರೊಚ್ಚಿಗೇಳುವಂತೆ ಮಾಡಿದೆ.. ಇಷ್ಟಕ್ಕೂ ರಜತ್ ಮಾಡಿದ್ದೇನು?
ಮೈಸೂರು ನಗರದ ಪಾರಂಪರಿಕ ಕಟ್ಟಡವಾದ ಜಿಲ್ಲಾಧಿಕಾರಿ ಕಚೇರಿ ಬಳಿ ಸಿಗರೇಟ್ ಸೇದುತ್ತಾ ಫೋಟೋ ಶೂಟ್ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶವನ್ನು ತಂದಿದ್ದು, ಈ ಸಂಬಂಧ ಅವರ ವಿರುದ್ಧ ದೂರು ಕೂಡ ದಾಖಲಾಗಿದೆ.

ರಜತ್ ಮೈಸೂರಿನ ಹಳೇ ಜಿಲ್ಲಾಧಿಖಾರಿ ಕಚೇರಿ ಕಟ್ಟಡದ ಬಳಿ ಫೋಟೋ ಶೂಟ್ ಮಾಡಿಸಿದ್ದರು. ಈ ವೇಳೆ ಅವರು ಕೈಯಲ್ಲಿ ಸಿಗರೇಟ್ ಹಿಡಿದು, ಹೊಗೆ ಬಿಡುತ್ತಾ ಪೋಸ್ ನೀಡಿದ್ದರು. ಪಾರಂಪರಿಕ ತಾಣಗಳಲ್ಲಿ ಧೂಮಪಾನ ಮಾಡುವುದು ಹಾಗೂ ಅಂತಹ ಸ್ಥಳಗಳ ಘನತೆಗೆ ಕುಂದು ತರುವಂತೆ ವರ್ತಿಸುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಪಾರಂಪರಿಕ ಕಟ್ಟಡವೊಂದರ ಮುಂದೆ ನಿಯಮ ಮೀರಿ ಫೋಟೋ ಶೂಟ್ ಮಾಡಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ರಜತ್ ವಿರುದ್ಧ ದೂರು ದಾಖಲಾಗಿದೆ.








