State

ಬಿಳಿಗಿರಿರಂಗನ ಬೆಟ್ಟದಲ್ಲಿ ಮುಂಜಾನೆ ಅಗ್ನಿ ಅನಾಹುತ… ಹೊತ್ತಿ ಉರಿದ ಅಂಗಡಿ ಮಳಿಗೆಗಳು…  ವ್ಯಾಪಾರಸ್ಥರ ಕಣ್ಣೀರು!

ಯಳಂದೂರು(ನಾಗರಾಜ ವೈ.ಕೆ.ಮೊಳೆ): ಎಲ್ಲರೂ ಬೆಳಗ್ಗಿನ ಜಾವದ ಸಿಹಿ ನಿದ್ದೆಯಲ್ಲಿದ್ದಾಗಲೇ ಸಂಭವಿಸಿದ ಅಗ್ನಿ ಅನಾಹುತಕ್ಕೆ ಹತ್ತಾರು ಅಂಗಡಿ ಮಳಿಗೆಗಳು ಸುಟ್ಟು ಕರಕಲಾಗಿ ಲಕ್ಷಾಂತರ ರೂ ನಷ್ಟವಾಗಿರುವ ಘಟನೆ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಬಸ್ ನಿಲ್ದಾಣದ ಬಳಿಯ ಸರ್ಕಲ್ ನಲ್ಲಿ ಶುಕ್ರವಾರ (ಜ.09) ಮುಂಜಾನೆ ಸರಿ ಸುಮಾರು 3.30ರ  ವೇಳೆಗೆ ನಡೆದಿದ್ದು, ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಬಿಳಿಗಿರಿರಂಗನ ಬೆಟ್ಟದ ಸರ್ಕಲ್ ನಲ್ಲಿ ಅಂಗಡಿ, ಮುಂಗಟ್ಟುಗಳು, ಜ್ಯೂಸ್ ಸೆಂಟರ್, ಟೀ ಅಂಗಡಿ, ಬಜ್ಜಿ ಬೋಂಡ ಅಂಗಡಿ, ಹೀಗೆ ಹತ್ತಾರು ವ್ಯಾಪಾರ ಮಳಿಗೆಗಳಿದ್ದು, ಸಮೀಪದಲ್ಲಿಯೇ ಪಶುಸಂಗೋಪನ ಇಲಾಖೆಯ ಕಚೇರಿ ಹಾಗೂ ಸ್ವಲ್ಪ ದೂರದಲ್ಲಿ ಬಸ್ ನಿಲ್ದಾಣವೂ ಇದೆ. ಹೀಗಾಗಿ ವ್ಯಾಪಾರ ವಹಿವಾಟುಗಳು ಈ ಸಂರ್ಕಲ್ ನಲ್ಲಿ ಜೋರಾಗಿ ನಡೆಯುತ್ತಿದ್ದು, ವ್ಯಾಪಾರಸ್ಥರು ಇದೇ ಅಂಗಡಿ ಮಳಿಗೆಗಳಿಂದ ಬದುಕು ಕಟ್ಟಿಕೊಂಡಿದ್ದಾರೆ.

ಗುರುವಾರ ರಾತ್ರಿ ಎಂದಿನಂತೆ ವ್ಯಾಪಾರ ಮುಗಿಸಿಕೊಂಡು ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ತಮ್ಮ ಮನೆಗೆ ತೆರಳಿದ್ದರು. ಆದರೆ ಅವರೆಲ್ಲರೂ ಮುಂಜಾನೆಯ ಸಿಹಿ ನಿದ್ದೆಯಲ್ಲಿದ್ದಾಗಲೇ ಅಘಾತ ಸುದ್ದಿ ಅವರ ಕಿವಿಗೆ ಬಂದು ಬಡಿದಿದೆ. ಬೆಳಗ್ಗಿನ 3.30ರ ಸಮಯದಲ್ಲಿ ಇಲ್ಲಿ ಕಾಣಿಸಿಕೊಂಡ ಬೆಂಕಿ ಒಮ್ಮೆಲೆ ಹತ್ತಿ ಉರಿಯಲಾರಂಭಿಸಿತು. ಇದ್ದಕ್ಕಿದ್ದಂತೆ ದಟ್ಟ ಹೊಗೆ ಹಾಗೂ ಬೆಂಕಿಯ ಜ್ವಾಲೆಯನ್ನು ಕಂಡ ಸ್ಥಳೀಯರು ಬೆಚ್ಚಿ ಬಿದ್ದಿದ್ದು ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡುವ ಕೆಲಸ ಮಾಡಿದ್ದಾರೆ.

ಆ ಹೊತ್ತಿಗೆ ಹೆಚ್ಚಿನ ಜನ ನಿದ್ದೆಯಲ್ಲಿದ್ದುದರಿಂದ ಹೊರಗೆ ಏನಾಗುತ್ತಿದೆ ಎಂಬುದು ಗೊತ್ತಾಗಿಲ್ಲ. ಆದರೂ ಬೆಂಕಿ ಉರಿಯುವುದನ್ನು ನೋಡಿದ ಕೆಲವರು ಕೂಗಿ ಕರೆದು ಬೆಂಕಿ ನಂದಿಸಲು ಮುಂದಾಗಿದ್ದಾರೆ.

ಆದರೆ ಅಷ್ಟರಲ್ಲೇ ಬೆಂಕಿಯ ಕೆನ್ನಾಲಗೆ ಎಲ್ಲಡೆ ಚಾಚಿದ್ದರಿಂದ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಸುಟ್ಟು ಕರಕರಲಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪುವ ಹೊತ್ತಿಗೆ ಅಂಗಡಿ ಮಳಿಗೆ ಮತ್ತು ಅಲ್ಲಿದ್ದ ಪದಾರ್ಥಗಳು ಸುಟ್ಟು ಭಸ್ಮವಾಗಿದ್ದವು.

ಸದ್ಯ ಸ್ಥಳದಲ್ಲಿ ನೀರವ ಮೌನ ಆವರಿಸಿದ್ದು, ತಂಪು ಪಾನೀಯ, ಟೀ ಕಾಫಿ, ಬಜ್ಜಿ ಬೋಂಡಾ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ತಮ್ಮ ಅಂಗಡಿ ಅದರೊಳಗಿದ್ದ ವಸ್ತುಗಳು, ಹಣ ಎಲ್ಲವನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದಂತಾಗಿದೆ. ಜತೆಗೆ ಅನಾಹುತ ನಡೆಯುವಾಗ ಯಾರೂ ಇಲ್ಲಿ ಇಲ್ಲದೆ ಇದ್ದುದರಿಂದ ಅಗ್ನಿ ಅನಾಹುತಕ್ಕೆ ಕಾರಣವೇನು ಎಂಬುದು ಪರಿಶೀಲನೆ ಬಳಿಕ ಗೊತ್ತಾಗ ಬೇಕಿದೆ.

ಮೀನಾ ನಾಗೇಂದ್ರ, ಡಿ.ರಾಜು, ಸುಮಾ ಶೇಷಾದ್ರಿ, ಎಲ್.ಸ್ವಾಮಿ, ಆರ್.ನಾಗೇಂದ್ರ, ಜಿ.ಕುಮಾರ್, ಎಲ್ ಗೋವಿಂದ ಮೊದಲಾದವರ ಅಂಗಡಿ ಮಳಿಗೆಗಳು ಅಗ್ನಿ ದುರಂತದಲ್ಲಿ ನಾಶವಾಗಿದ್ದು,  ಮುಂದೇನು ಎಂಬ ಚಿಂತೆಯಲ್ಲಿ ಕಣ್ಣೀರಿಡುತ್ತಿದ್ದಾರೆ. ಈ ಬೆಂಕಿ ಅವಘಡದಿಂದ ಸಂಪೂರ್ಣ ಭಸ್ಮವಾಗಿರುವ ಖಾಸಗಿ ಅಂಗಡಿ ಮಾಲೀಕರುಗಳಿಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು, ಪರಿಹಾರ ಕೊಡಿಸುವವರೇ ಎಂಬುದನ್ನು ಕಾದು ನೋಡಬೇಕಿದೆ.?

admin
the authoradmin

Leave a Reply

Translate to any language you want