Cinema

ಎಂದೆಂದಿಗೂ ನೆನಪಾಗಿ ಉಳಿಯುವ ಚಿತ್ರ ಸಾಹಿತಿ ಚಿ. ಉದಯಶಂಕರ್… ಇವರ ಹಾಡಿಗೆ ತಲೆದೂಗದವರಿಲ್ಲ!

“ಕನ್ನಡಕ್ಕೊಬ್ಬನೇ ಕಣ್ಣದಾಸನ್” ಆಗಿದ್ದ ಚಿ.ಉದಯಶಂಕರ್ ಎಂದೆಂದಿಗೂ ನೆನಪಾಗಿ ಉಳಿಯುವ ಚಿತ್ರ ಸಾಹಿತಿ.. ಅವರು ರಚಿಸಿದ ಚಿತ್ರಗೀತೆಗಳು ಇವತ್ತಿಗೂ ಮುಂದೆಗೂ  ಹಸಿರಾಗಿಯೇ ಉಳಿಯುತ್ತವೆ.. ಅವರ ಹಾಡನ್ನು ಗುನುಗದವರು ಇಲ್ಲವೇ ಇಲ್ಲ ಎನ್ನಬೇಕು ಇಂತಹ ದಿಗ್ಗಜ ಚಿತ್ರಸಾಹಿತಿ ಬಗ್ಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ಬರೆದಿದ್ದಾರೆ… ನೀವೊಮ್ಮೆ  ಓದಿ ಬಿಡಿ…

“ಕನ್ನಡಕ್ಕೊಬ್ಬನೇ ಕಣ್ಣದಾಸನ್” ಎಂಬ ಖ್ಯಾತಿ ಪಡೆದಿದ್ದ ಚಿ.ಉದಯಶಂಕರ್ ರವರಿಗೆ ಈ ಬಿರುದು ನೀಡಿದ್ದವರು ಭಾರತದ ಖ್ಯಾತ ಚಿತ್ರೋದ್ಯಮಿ ಹಾಗೂ ಪ್ರತಿಷ್ಠಿತ AVM ಸಂಸ್ಥೆಯ ಮಾಲೀಕ ಎ.ವಿ.ಮೇಯಪ್ಪನ್! 18.2.1934 ರಲ್ಲಿ ಮೈಸೂರು ರಾಜ್ಯ ತುಮಕೂರಿನ ಗುಬ್ಬಿ ಬಳಿಯ ಪುಟ್ಟಗ್ರಾಮ ಚಿಟ್ಟನಹಳ್ಳಿಯಲ್ಲಿ ಜನ್ಮ ತಳೆದರು. ಇವರ ತಂದೆಯಾದ ಚಿ. ಸದಾಶಿವಯ್ಯನವರೂ ಸಹ ಖ್ಯಾತಿವೆತ್ತ ಕನ್ನಡ ಸಿನಿಲೋಕದ ಹಿರಿಯ ಸಾಹಿತಿಗಳಲ್ಲಿ ಅಗ್ರಜ.

ಇಂತಹ ಮಹಾನ್ ಚಿತ್ರಸಾಹಿತ್ಯ ಬ್ರಹ್ಮನ ವರಪುತ್ರ ಆದುದರಿಂದಲೇನೋ ಕ್ಷಣದಲ್ಲೇ-ಸ್ಥಳದಲ್ಲೇ ಚಿತ್ರಗೀತೆಗಳನ್ನು ರಚಿಸುವ ಪ್ರತಿಭೆ ರಕ್ತಗತವಾಗಿತ್ತು. ಜತೆಗೆ ಸಹಸ್ರಾರು ಭಕ್ತಿಗೀತೆ ಮತ್ತು ಭಾವಗೀತೆಗಳನ್ನೂ ಕೇವಲ ನಿಮಿಷಗಳಲ್ಲಿ ಬರೆಯುವ ಯುಕ್ತಿ ತುಂಬಿ ತುಳುಕಿತ್ತು!

ಸದಾ ನಗುಮುಖದ, ಹಣೆಯಲ್ಲಿ ವಿಭೂತಿ- ಕುಂಕುಮ- ಗಂಧ ವಿಜೃಂಭಿಸುವ, ಬಿಳೀ ವಸ್ತ್ರಧಾರಿಯಾಗಿ ರಾರಾಜಿಸುವ, ತಾಂಬೂಲ ತಿಂದ ಕೆಂದುಟಿಯುಳ್ಳ ಈ ವ್ಯಕ್ತಿ-ಶಕ್ತಿಯನ್ನ ಕಂಡ ಯಾರೇ ಆದರೂ ತಕ್ಷಣ ಗುರುತಿಸುತ್ತಿದ್ದರು “ಉದಯಶಂಕರ್” ಎಂದು! ಇವರಿದ್ದ ಕಡೆ ನಗುವೋ..ನಗು, ಹಾಸ್ಯದ ಚಿಲುಮೆ ಉಕ್ಕಿ ಹರಿಯುತ್ತಿತ್ತು. ತಮ್ಮ ಚಿನಕುರಳಿಮಾತಿನ ಚಟಾಕಿಯಿಂದ ಎಂಥವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಬಲು ಮಾತುಗಾರ. ಕಲ್ಲುಬಂಡೆಯನ್ನೂ ಸಹ ಮಾತನಾಡಿಸುತ್ತಿದ್ದ ವಿಶೇಷ ಕಲೆಗಾರ.

ಎಲ್ಲರೊಡನೆ ಇರಲಿ, ದ್ವೇಷಿಸುವವರೊಡನೆಯೂ ಪ್ರೀತಿಯಿಂದ ಮಾತನಾಡುತ್ತಿದ್ದ ವಾಕ್ಚತುರ. ಈರ್ಷ್ಯಾಸೂಯೆ ಉಳ್ಳವರೂ ಸಹ ಇವರೊಡನೆ ಸಹಜವಾಗಿ ಮಾತನಾಡುವಂತೆ ಮಾಡುವ ಮೋಡಿಗಾರ. ಇಂತಹ ಅಜಾತಶತ್ರು ಈ ಹೊತ್ತು ನಮ್ಮೊಡನೆ ಇಲ್ಲವೆಂಬುದು ಅದ್ಭುತ-ಆಶ್ಚರ್ಯ ಆದರೂ ವಾಸ್ತವ-ಸತ್ಯ! 1993ನೇ ಇಸವಿ ಜುಲೈ 2ರಂದು ತಮ್ಮ 60ನೆ ವಯಸ್ಸಿಗೇ ಕಾಲನ ವಶವಾಗಿ ಕೋಟ್ಯಂತರ ಅಭಿಮಾನಿಗಳನ್ನು ಮತ್ತು ಸಹೋದ್ಯೋಗಿಗಳನ್ನು ತೊರೆದು ಸ್ವರ್ಗ ಸೇರಿದರು. ಇದು ಇವತ್ತಿಗೂ ಚಂದನವನ ಚರಿತ್ರೆಯ ಕರಾಳ ಅಧ್ಯಾಯ.

ಇವರು ಕಣ್ಮರೆಯಾದ ದಿನದಂದು ಚಿತ್ರರಂಗದ ಅತಿರಥ-ಮಹಾರಥ ನಟ-ನಟಿಯರು ವಿಶೇಷವಾಗಿ ಕಳಸ್ಯ-ಗಂಟಸ್ಯರಾದ ಡಾ.ರಾಜ್- ಕಲ್ಯಾಣ್- ಉದಯಕುಮಾರ ಮೊದಲ್ಗೊಂಡು ಕನ್ನಡ ಸಿನಿಮಾ ಪ್ರಪಂಚದ ಪ್ರತಿಯೊಬ್ಬರೂ ಕಂಬನಿ ಮಿಡಿದರು! ಇಂತಹ ದಿಗ್ಗಜ ಮತ್ತೊಮ್ಮೆ ಕನ್ನಡ ನಾಡಲ್ಲಿ ಹುಟ್ಟಲಿ ಎಂದು ದೇವರಲ್ಲಿ ಮೊರೆ ಹೋಗಿ ಅತ್ಯಂತ ಭಾವಪೂರ್ಣ ಭಾಷ್ಪಾಂಜಲಿ ಅರ್ಪಿಸಿದರು! ಚಿ.ಉದಯಶಂಕರ್ ಇನ್ನಿಲ್ಲ ಎಂದು ನೆನೆದರೆ ಸಾಕು, ಕಣ್ಣೀರು ತರಿಸುತ್ತದೆ. ಅನಿರೀಕ್ಷಿತ ದೈವಸನ್ನಿಧಿ ಸೇರಿದ್ದು ನಂಬಲು ಅಸಾಧ್ಯ. ಅನೇಕ ಭಕ್ತಿಗೀತೆಗಳನ್ನು ಅಂತರಾಳದಿಂದ ರಚಿಸಿದ ಮಹಾನ್ ಆಸ್ತಿಕ.

ನೂರಾರು ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ ಅಪರೂಪದ ನಟ. ಆಟ ಊಟ ನೋಟ ಪಾಠ ಎಲ್ಲವನ್ನು ಮನಸಾರೆ ಅನುಭವಿಸುತ್ತಿದ್ದ ಪಕ್ಕಾನುಭಾವಿ. ನಟ, ನಟಿ, ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ಇವರ ಮನಸ್ಸನ್ನರಿತು ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಚಿತ್ರಗಳ ಸಾಹಿತ್ಯವನ್ನು ಎಲ್ಲರಿಗೂ ಇಷ್ಟವಾಗುವಂತೆ ಸಮಯಕ್ಕೆಸರಿಯಾಗಿ ಅಥವ ಮುಂಚಿತವಾಗೇ ರಚಿಸಿ ಕೊಡುತ್ತಿದ್ದರು.

ಹೊಸಬರಾಗಲೀ ಹಳಬರಾಗಲೀ ತಾರತಮ್ಯ ತೋರಿಸದೆ ಎಲ್ಲ ನಟ-ನಟಿ-ಚಿತ್ರೋದ್ಯಮಿಗೂ ಪ್ರಾಶಸ್ತ್ಯ ಕೊಡುತ್ತಿದ್ದರು. ವಿಶೇಷವಾಗಿ ರಾಜ್ ಚಿತ್ರ-ಪಾತ್ರಗಳಿಗೆ ತುಸು ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದರು. ಸಂಭಾವನೆಗೆ ಪ್ರಾಮುಖ್ಯತೆ ನೀಡದೆ ತಮಗೆ ಹೊರಿಸಿದ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳ ರಚನೆ ಜವಾಬ್ಧಾರಿ ಯನ್ನ ತಿಂಗಳು, ವಾರ, ದಿನ, ಗಂಟೆ, ನಿಮಿಷ ಅವಧಿಯೊಳಗೆ ರಚಿಸುತ್ತಿದ್ದ ಅಸಾಮಾನ್ಯ ಸಾಹಿತಿ. ದುಂಡು ಮೊಗದ ಈ ದಢೂತಿ ಆಸಾಮಿಯನ್ನು ಫಿಲಂ ಸ್ಟುಡಿಯೋ ವಲಯದಲ್ಲಿ “ಚಿತ್ರ ಯಂತ್ರ, ಅಕ್ಷರ ಪರ್ವತ, ಹಾಡಿನ ಗೋಡೌನ್ ಕನ್ನಡದ ಕಾಳಿದಾಸ, ಕರ್ನಾಟಕದ ರತ್ನ, ಎಂದೆಲ್ಲ ಕರೆಯುತ್ತಿದ್ದರು.

ಇಷ್ಟಾದರೂ ಜವರಾಯನ ಆಣತಿಯಂತೆ ತುಂಬಿದಕೊಡ ಒಡೆದೇ ಹೋಯಿತು, ಉ[ಮು]ದ್ದಿನ ಮೂಟೆ ಉರುಳೇ ಹೋಯಿತು, ಕನ್ನಡ ನಾಡಿಗೆ ತುಂಬಲಾರದ ನಷ್ಟವಂತೂ ಆಯಿತು ಉದಯಶಂಕರ್ ರವರ ಜೀವನ ಚರಿತ್ರೆಯು ಅವಿಸ್ಮರಣೀಯ ಮಾತ್ರವಲ್ಲ, ಅಷ್ಟೇ ದುರಂತಮಯವೂ ಹೌದು!  1952ರಲ್ಲಿ ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಅಂದಿನ ಕನ್ನಡ ಚಿತ್ರರಂಗದಲ್ಲಿ ಸಮರ್ಥ ಚಿತ್ರಸಾಹಿತಿಗಳ ಕೊರತೆಯಿತ್ತು. ಬಹುಶಃ ಚಿ.ಸದಾಶಿವಯ್ಯನ ಪುತ್ರನೆಂಬ ಮುಲಾಜಿಗೋಏನೋ 1958ರಲ್ಲಿ ಕನ್ನಡ ಚಿತ್ರಕ್ಕೆ ತಮ್ಮ ತಂದೆಯೊಡನೆ ಸೇರಿ ಗೀತೆಯೊಂದನ್ನು ಬರೆಯುವ ಮೂಲಕ ಪ್ರಥಮ ಬಾರಿಗೆ ಪಾರ್ಟ್ ಟೈಮ್ ಚಿತ್ರಸಾಹಿತಿ ಎನಿಸಿದರು.

ಆ ನಂತರ 1963ರಲ್ಲಿ ರಾಜ್ ಅಭಿನಯದ ‘ಸಂತತುಕಾರಾಂ’ ಚಿತ್ರಕ್ಕೆ ಮೊಟ್ಟಮೊದಲ ಬಾರಿಗೆ ಸಂಭಾಷಣೆ ಬರೆದರು. ಅಂದಿನಿಂದ ಮತ್ತೆಂದೂ ಹಿನ್ನಡೆಯದೆ ತಮ್ಮ ಅಂತ್ಯಕಾಲದ (1993)ವರೆಗೂ 450ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಿತ್ಯ ಬರೆದು 100ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ 4000ಕ್ಕೂ ಅಧಿಕ ಸಂಖ್ಯೆಯ ಭಕ್ತಿಗೀತೆ ಭಾವಗೀತೆ ಚಿತ್ರಗೀತೆ ಗಳನ್ನು ರಚಿಸಿ ಗಿನ್ನಿಸ್ ದಾಖಲೆ ನಿರ್ಮಿಸಿದ ವಿಶ್ವಮಾನವ.

ಉದಯಶಂಕರ್ ಓರ್ವ ಪವಾಡ ಪುರುಷ. ಅದೆಷ್ಟೋ ಸಲ ಊರಿಗೆ ಮುಂಚೆಯೆ ರಚಿಸಲ್ಪಟ್ಟ ಹಾಡುಗಳಿಗೆ ತದನಂತರ ಪಾತ್ರಸೃಷ್ಟಿಸಿ ಸ್ಥಳಹುಡುಕಿ ಚಿತ್ರೀಕರಣ ಮುಗಿಸಿರುವ ಅನೇಕ ಘಟನೆಗಳಿವೆ! ಯಾರಿಗೋ ಬರೆದ ಹಾಡನ್ನು ಇನ್ನಾರಿಗೋ ಉಪಯೋಗಿಸಿಕೊಂಡ ಉದಾಹರಣೆ ಉಂಟು! ಇವರ ಬಗ್ಗೆ ಅದೆಷ್ಟು ಬರೆದರೂ ಅಪೂರ್ಣ ಎನಿಸುತ್ತದೆ. ಇವರೇ ರಚಿಸಿದ “ಸೂರ್ಯನ… ಸೂರ್ಯನೇ ಸಾಟಿ..” ಚಿತ್ರಗೀತೆಯಂತೆ “ಇವರಿಗಿವರೇ ಸರಿಸಾಟಿ ಬೇರೇ ಯಾರಿಲ್ಲ” ಎಂಬುದು ಅತಿಶಯೋಕ್ತಿಯಲ್ಲ.

ಇವರು ಸಾಹಿತ್ಯ ಬರೆದ ಒಟ್ಟು ಚಿತ್ರಗಳ ಪೈಕಿ ಅರ್ಧದಷ್ಟು ಪಾಲು ಡಾ.ರಾಜ್ ಮತ್ತು ಕುಟುಂಬದವರ ಸಿನಿಮಾಗಳೇ ಆಗಿವೆ. ಇದಕ್ಕೆ ಪ್ರಮುಖ ಕಾರಣ ಇವರಿಬ್ಬರ ಕುಟುಂಬದ ಪರಸ್ಪರ ಸ್ನೇಹ ಪ್ರೀತಿ ವಿಶ್ವಾಸ ಅಭಿಮಾನ ನಿಷ್ಕಲ್ಮಶತೆ ಹೃದಯವಂತಿಕೆ ಹಾಸ್ಯಪ್ರಜ್ಞೆ ಹಾಗೂ ನಂಬಿಕೆಗಳೇ ಆಗಿವೆ. ಇವತ್ತಿಗೂ ಇವರ ಕಥೆ ಚಿತ್ರಕಥೆ ಸಂಭಾಷಣೆ ಹಾಡುಗಳು ಮತ್ತು ಸಿನಿಮಾಗಳು ಅಬಾಲ ವೃದ್ಧರಾದಿಯಾಗಿ ಹಳ್ಳಿಯಿಂದ ದಿಲ್ಲಿವರೆಗೆ ಜವಾನನಿಂದ ದಿವಾನವರೆಗೆ ರೋಗಿ ನಿರೋಗಿ ಭೈರಾಗಿ ವಿರಾಗಿ ಖಾಕಿ ಖಾದಿ ಖಾವಿ ರೈತ ಯೋಧ ಅರ್ಚಕ ಆರಾಧಕ ಪಂಡಿತನಿಂದ ಪಾಮರನವರೆಗೆ ಪ್ರತಿಯೊಬ್ಬ ಕನ್ನಡಿಗರ ತನುಮನ-ಮನೆಮನೆಯಲ್ಲಿ ತುಂಬಿದೆ.

ಇಂಥ ಸುಗುಣವಂತನ ಪಡೆದ ಕನ್ನಡಮ್ಮನೇ ಮಾನ್ಯಳು, ಕನ್ನಡಿಗರೇ ಧನ್ಯರು! ತಾವು ಬದುಕಿದ್ದಷ್ಟು ಕಾಲ ಮಕ್ಕಳೊಡನೆ ಮಕ್ಕಳಾಗಿ, ಯುವಕರೊಡನೆ ಯುವಕರಾಗಿ, ಮುದುಕ ರೊಡನೆ ಮುದುಕರಾಗಿ, ಎಲ್ಲರೊಡನೆ ಬೆರೆತು ಒಂದಾಗಿ, ಒಳಗಡೆ ದುಃಖವಿದ್ದರೂ ಹೊರಗಡೆ ತೋರ್ಪಡಿಸದೇ ಎಲ್ಲರನ್ನು ನಗಿಸುತ್ತ, ತಾವೂ ನಗುತ್ತ ಬದುಕಿದರು. ಇವರ ಧರ್ಮಪತ್ನಿ ಶಾರದಮ್ಮ. ಇವರ ಮೂವರು ಮಕ್ಕಳಲ್ಲಿ ಗುರುದತ್ ಮತ್ತು ಅಕಾಲಮೃತ್ಯುವಾದ ರವಿಶಂಕರ್ ಚಂದನವನ ಬೆಳ್ಳಿತೆರೆಯ ಕಲಾವಿದರು.

ಉದಯಶಂಕರ್ ರವರು ಕಾರಣಕರ್ತರಾಗಿ ಅಮೋಘ ಸಾಧನೆ ಮಾಡಿ ನೂತನ ದಾಖಲೆ ನಿರ್ಮಿಸಿದ ನೂರಾರು ಸಿನಿಮಾಗಳಲ್ಲಿ ಕೆಲವು ಉದಾಹರಣೆ:- ಮಹಾಸತಿ ಅನಸೂಯ, ಬಾಲನಾಗಮ್ಮ, ಸತಿಸಾವಿತ್ರಿ, ಲಗ್ನಪತ್ರಿಕೆ, ಬಂಗಾರದಹೂವು, ಭಾಗ್ಯದ ಬಾಗಿಲು, ಎಮ್ಮೆತಮ್ಮಣ್ಣ, ಬೀದಿಬಸವಣ್ಣ, ರೌಡಿರಂಗಣ್ಣ, ಚೂರಿಚಿಕ್ಕಣ್ಣ, ಸಿಐಡಿ ರಾಜಣ್ಣ, ಮೇಯರ್ ಮುತ್ತಣ್ಣ, ಭಲೆಜೋಡಿ, ಭಲೇರಾಜ, ಭಲೇಹುಚ್ಚ, ಭಲೆಬಸವ, ನ್ಯಾಯವೇದೇವರು, ದೂರದಬೆಟ್ಟ, ಬಂಗಾರದಮನುಷ್ಯ, ಬಂಗಾರದಪಂಜರ, ಬಿಡುಗಡೆ, ದೇವರು ಕೊಟ್ಟತಂಗಿ, ಗಂಧದಗುಡಿ, ಸಂಪತ್ತಿಗೆಸವಾಲ್.

ಎರಡುಕನಸು, ಮಯೂರ, ಬಾಳುಬೆಳಗಿತು, ನಮ್ಮಸಂಸಾರ, ಹೃದಯಸಂಗಮ, ಬಾಳಬಂಧನ, ಬಡವರಬಂಧು, ತ್ರಿಮೂರ್ತಿ, ದಾರಿತಪ್ಪಿದಮಗ, ಪರೋಪಕಾರಿ, ತಾಯಿಗೆತಕ್ಕಮಗ, ಶ್ರೀನಿವಾಸಕಲ್ಯಾಣ, ಪ್ರೇಮದ ಕಾಣಿಕೆ, ಚಲಿಸುವ ಮೋಡಗಳು, ಮೂರೂವರೆ ವಜ್ರಗಳು, ಒಲವುಗೆಲುವು, ನಾನಿನ್ನಮರೆಯಲಾರೆ, ಸನಾದಿಅಪ್ಪಣ್ಣ, ಕವಿರತ್ನಕಾಳಿದಾಸ. ಕೆರಳಿದಸಿಂಹ, ಆಪರೇಷನ್ ಡೈಮಂಡ್ ರಾಕೆಟ್, ಕರುಣಾಮಯಿ, ನಂಜುಂಡಿಕಲ್ಯಾಣ, ಅಂತ, ಆಟೋರಾಜ, ದಾದಾ, ಚಂದನದಗೊಂಬೆ, ಬಯಲುದಾರಿ, ನನ್ನದೇವರು, ಬಾಡದಹೂ, ಬೆಸುಗೆ, ಕನಸುನನಸು, ನಾಗರಹಾವು, ಭೂತಯ್ಯನ ಮಗ ಅಯ್ಯು, ಮುಂತಾದವು ಚಿರಸ್ಮರಣೀಯ.

ಸಾವಿರಾರು ಭಕ್ತಿಗೀತೆ- ಚಿತ್ರಗೀತೆಗಳ ಪೈಕಿ ಹಲವು ಉದಾಹರಣೆ… ಆಕಾಶವೇ ಬೀಳಲಿ ಮೇಲೆ, ಎಂದೆಂದೂ ನಿನ್ನ ನುಮರೆತು, ಬಾನಲ್ಲುನೀನೆ, ಕಾಣದಂತೆ ಮಾಯವಾದನು, ಬಾನದಾರಿಯಲ್ಲಿ….ಮಲಗು ನೀ ಪುಟ್ಟಕಂದ, ಚಳಿಚಳಿತಾಳೇನು, ನಲಿವಾಗುಲಾಬಿಹೂವೆ, ಜೋಕೆನಾನುಬಳ್ಳಿಯ, ದೂರದಿಂದಬಂಧಂತ, ಆಡಿಸಿನೋಡುಬೀಳಿಸಿನೋಡು, ನಾಅಮ್ಮಾ.. ಎಂದಾಗ, ಒಳಗೆಸೇರಿದರೆಗುಂಡು, ನಗುನಗುತಾನಲೀ, ಕನ್ನಡನಾಡಿನ ವೀರರಮಣಿವಿರಸವೆಂಬ ವಿಷಕೆ, ಮುಂತಾದವು ಸ್ಮರಣೀಯ! ಚಿ.ಉದಯಶಂಕರ್ ಬರೆದ ಗೀತೆಗಳೆಲ್ಲ ದಿಗ್ವಿಜಯ ಸಾಧಿಸಿ ಕುಣಿದು ಕುಪ್ಪಳಿಸುವಂತಿವೆ.

ಮನಸ್ಸಿಗೆ ನಾಟುವಂತಹ ಸಂಭಾಷಣೆಗಳಂತು ಎಲ್ಲರನ್ನ ಬಡಿದು ಎಬ್ಬಿಸುತ್ತವೆ. ಪ್ರತಿಯೊಂದು ಕಥೆ-ಚಿತ್ರಕಥೆ  ಮನಮುಟ್ಟುವಂತೆ, ತನುತಟ್ಟುವಂತೆ ಇವೆ. ಸಮಾಜಕ್ಕೆ ಸಂದೇಶಸಾರುತ್ತವೆ, ಮೂರ್ಖರಿಗೆ ಮಾರ್ಗದರ್ಶನ ಮಾಡುತ್ತವೆ. ಪ್ರತಿಯೊಂದು ರಚನೆಯಲ್ಲೂ ಭಾರತದ, ಕನ್ನಡದ ಸಂಸ್ಕೃತಿ, ನಾಗರಿಕತೆ ಪದ್ಧತಿ ಆಚಾರ ವಿಚಾರ ತುಂಬಿ ತುಳುಕುತ್ತದೆ. ಸ್ವದೇಶೀ ಗಟ್ಟಿತನ, ಸ್ವಂತಿಕೆಯ ದಿಟ್ಟತನ ಅಡಗಿದೆ!

“ಶರಣರ ಗುಣವ ಮರಣದಲ್ಲಿ ಕಾಣು” ಎಂಬ ನಾಣ್ಣುಡಿಯಂತೆ ಇಂದಿನ ಸಮಾಜದಲ್ಲಿ ಬದುಕಿದ್ದರೂ ಸತ್ತಂತಿರುವಂಥ ಪಾಪಾತ್ಮಗಳಿಗೆ ಹೋಲಿಸಿದರೆ ಸತ್ತರೂ ಬದುಕಿರುವಂಥ, ಅಳಿದರೂ ಉಳಿದಿರುವಂಥ ಮಹಾತ್ಮರ ಪಟ್ಟಿಗೆ ಸೇರಿದ್ದಾರೆ. ದೇಹವನ್ನು ಮಾತ್ರ ತೊರೆದು ಹೋದ ಉದಯಶಂಕರ್ ಆತ್ಮವು ಆಚಂದ್ರಾರ್ಕ ಅಜರಾಮರ!

https://janamanakannada.com/category/cinema/

admin
the authoradmin

Leave a Reply

Translate to any language you want