Latest

ಡಾ.ಬಿ.ಆರ್.ಅಂಬೇಡ್ಕರ್ ಪೂಜಿಸುವ ವಸ್ತುವಾಗಿರದೆ ಅವರು ನಮಗೆಲ್ಲಾ ಸ್ಪೂರ್ತಿಯ ಚಿಲುಮೆ:ಹೆಚ್ ಎಸ್ ಎಂ

ಕೆ.ಆರ್.ನಗರ(ಜಿಟೆಕ್ ಶಂಕರ್): ಡಾ.ಬಿ.ಆರ್.ಅಂಬೇಡ್ಕರ್ ಅವರು ಪೂಜಿಸುವ ವಸ್ತುವಾಗಿರದೆ ಅವರು ನಮಗೆಲ್ಲಾ ಸ್ಪೂರ್ತಿಯ ಚಿಲುಮೆ ಎಂದು ಸಮಾಜ ಕಲ್ಯಾಣ ಸಚಿವರು ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.

ಸಾಲಿಗ್ರಾಮ ತಾಲೂಕಿನ ಬಳ್ಳೂರು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ನಿರ್ಮಿಸಿರುವ ಬಾಬಾ ಸಾಹೇಬರ ಪ್ರತಿಮೆ ಅನಾವರಣಗೊಳಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶ ವಿದೇಶಗಳಲ್ಲಿ ಅಧ್ಯಾಯನ ಮಾಡಿ ತಮ್ಮ ಜ್ಞಾನವನ್ನು ಭಾರತದ ಜನರಿಗೆ ಧಾರೆ ಎರೆದ ಸಂವಿಧಾನ ಶಿಲ್ಪಿ ಪ್ರಜಾಪ್ರಭುತ್ವದ ಪಿತಾಮಹ ಎಂದರು.

ಅಂಬೇಡ್ಕರ್ ಅವರು ದಲಿತರಿಗೆ ಮಾತ್ರ ಸೀಮಿತವಾಗದೆ ರಾಷ್ಟ್ರದ ಸರ್ವ ಜನಾಂಗದವರ ಆಸ್ತಿಯಾಗಿದ್ದು ಅಂತಹ ಮಹಾನುಭಾವನ ಜೀವನದ  ಸಂಕಷ್ಠ ಸಾಧನೆ ಮತ್ತು ಸಾರಗಳನ್ನು ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಮಾಜದಲ್ಲಿ ಸರ್ವರೂ ಸಹೋದರತ್ವದಿಂದ ಬದುಕಬೇಕು ಎಂದು ಹೇಳಿದ ಆಶಯವನ್ನು ಈಡೇರಿಸುವಲ್ಲಿ ನಾವು ವಿಫಲರಾಗಿದ್ದು ಜಾತಿ ವ್ಯವಸ್ಥೆಯೇ ಎಂದು ವಿಷಾದಿಸಿದ ಸಚಿವರು ಅಂತಹ ಸಾಂಸ್ಕೃತಿಕ ನಾಯಕನ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕೆಂದರು.

ಪ್ರಜಾಪ್ರಭುತ್ವದ ಯಶಸ್ಸು ಅಡಕವಾಗಿರುವುದು ಪ್ರಶ್ನಿಸುವ ಜಯಮಾನದಲ್ಲಿ ಎಂದ ಹೆಚ್.ಸಿ.ಮಹದೇವಪ್ಪ, ಸಂವಿಧಾನ‌ ರಕ್ಷಣೆ ಮಾಡಲು ಜನರು ಜಾಗೃತರಾಗಬೇಕು ಎಂದರಲ್ಲದೆ ಅದನ್ನು ಬದಲಿಸಲು ಹೊರಟಿರುವವರಿಗೆ ಬುದಿಕಲಿಸಬೇಕು ಎಂದು ಕರೆ ನೀಡಿದರು.

ಶಾಸಕ ಡಿ.ರವಿಶಂಕರ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ನಮಗೆ ಸರ್ವವನ್ನು ಒದಗಿಸಿಕೊಟ್ಟಿದ್ದು ಅದಕ್ಕೆ ನಾವು ಸದಾ ಅಬಾರಿಯಾಗಿರಬೇಕು. ಭಾರತದ ಎಲ್ಲ ಜನರು ಸಮಾನತೆಯಿಂದ ಬದುಕಲು ಅನುಕೂಲವಾಗುವಂತಹ ಸಂವಿಧಾನ ರಚಿಸಿ ಕೊಟ್ಟ ಜ್ಞಾನಸೂರ್ಯ ನಮ್ಮ ದೇಶದಲ್ಲಿ ಜನಿಸಿರುವುದು ಪುಣ್ಯ ವಿಶೇಷ ಎಂದು ಬಣ್ಣಿಸಿದ ಶಾಸಕರು ಗ್ರಾಮದ ಜನತೆಯ ಬಹುದಿನಗಳ‌ ಬೇಡಿಕೆಯಾಗಿರುವ ಸಂವಿಧಾನ ಶಿಲ್ಪಿಯ ಪ್ರತಿಮೆ ಅನಾವರಣ ಮಾಡುತ್ತಿರುವುದು ಸಂತಸದ ವಿಚಾರ ಎಂದು ನುಡಿದರು.

ಕೆ.ಆರ್.ನಗರ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿಗೆ 5 ಕೋಟಿ ರೂಗಳ ಅವಶ್ಯಕತೆ ಇದು ನಾನು ಈಗಾಗಲೇ ಶಾಸಕರ ನಿಧಿಯಿಂದ 1  ಕೋಟಿ ಹಣ ನೀಡಿದ್ದು ಉಳಿದ 4  ಕೋಟಿ ರೂಗಳನ್ನು ಕೊಡಬೇಕೆಂದು ಮನವಿ ಮಾಡಿಕೊಂಡರು.

ಕ್ಷೇತ್ರದ ವ್ಯಾಪ್ತಿಯ ಪ್ರತಿಯೊಂದು ಅಂಬೇಡ್ಕರ್ ಸಮುದಾಯ ಭವನಗಳಲ್ಲಿಯೂ ಡಿಜಿಟಲ್ ಗ್ರಂಥಾಲಯ ಆರಂಭಿಸುವುದಾಗಿ ಘೋಷಿಸಿದ ಡಿ.ರವಿಶಂಕರ್ ಬಳ್ಳೂರು ಗ್ರಾಮದ ಸಿಸಿ ರಸ್ತೆ ಕಾಮಗಾರಿಗೆ ಅನುದಾನ ನೀಡಬೇಕು ಎಂದು ಮನವಿ ಮಾಡಿದಾಗ ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು ಕೂಡಲೇ ಹಣ ಬಿಡುಗಡೆ ಮಾಡುವ ಭರವಸೆ ನೀಡಿದರು

ಕೂಡೂರಿನ ನಳಂದ ಬುದ್ಧ ವಿಹಾರದ ಬಂತೇ ಬೋದಿರತ್ನ, ಜಿ.ಪಂ.ಮಾಜಿ ಸದಸ್ಯ ಅಚ್ಚುತಾನಂದ, ಗ್ರಾ.ಪಂ.ಅಧ್ಯಕ್ಷೆ ಭವಾನಿನರೇಂದ್ರ, ಸದಸ್ಯ ಕೃಷ್ಣ, ಪಿಡಿಒ ಷಡಕ್ಷರಿ, ಮೈಸೂರು ಗ್ರಾಮಾಂತರ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಆರ್.ಕಾಂತರಾಜು, ತಾಲೂಕು ಅಧ್ಯಕ್ಷ ಬಿ.ಎಂ.ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್.ಮಹದೇವ್, ವಕ್ತಾರ ಸೈಯದ್ ಜಾಬೀರ್

ಎಸ್ ಸಿ ಘಟಕದ ಅಧ್ಯಕ್ಷರಾದ ಕಂಠಿಕುಮಾರ್, ನಂದೀಶ್,  ಡಿಎಸ್ ಎಸ್ ಸಂಚಾಲಕ ಕೆ.ಚಂದ್ರು, ತಾ.ಪಂ.ಮಾಜಿ ಸದಸ್ಯ ಸಣ್ಣಪ್ಪ,  ಅಂಬೇಡ್ಕರ್ ಸಂಘದ ಪದಾಧಿಕಾರಿಗಳಾದ ಬಿ.ಆರ್.ಮಧು, ಬಿ.ಎಸ್.ಸ್ವಾಮಿ, ಅನಿಲ್‌ಕುಮಾರ್,  ಸಚಿನ್, ಪ್ರಜ್ವಲ್, ರಾಮಚಂದ್ರ, ಯೋಗೀಶ್, ಭರತ್, ನವೀನ್,  ಗ್ರಾಮದ ಮುಖಂಡರಾದ ಕೃಷ್ಣಯ್ಯ, ದೇವಯ್ಯ, ಬಿ.ಟಿ.ರಮೇಶ್, ತಹಶೀಲ್ದಾರ್ ರುಕೀಯಾಬೇಗಂ, ತಾ.ಪಂ.ಇಒ ಎ.ಎನ್.ರವಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಎಲ್.ಶಂಕರಮೂರ್ತಿ ಸೇರಿದಂತೆ ಗ್ರಾಮದ ಯಜಮಾನರು ಮತ್ತು ಮುಖಂಡರು ಹಾಜರಿದ್ದರು.

admin
the authoradmin

Leave a Reply

Translate to any language you want