Mysore

ವಸತಿ ಶಾಲೆಯ ಪ್ರಭಾರ ಪ್ರಾಂಶುಪಾಲೆ ವರ್ತನೆ ವಿರೋಧಿಸಿ ಪರೀಕ್ಷೆಗೆ ಹಾಜರಾಗದೆ ಪ್ರತಿಭಟಿಸಿದ ವಿದ್ಯಾರ್ಥಿಗಳು

ಕೆ.ಆರ್.ನಗರ(ಜಿಟೆಕ್ ಶಂಕರ್): ಪ್ರಭಾರ ಪ್ರಾಂಶುಪಾಲೆಯ ವರ್ತನೆ ಮತ್ತು ಸರ್ವಾಧಿಕಾರವನ್ನು ಖಂಡಿಸಿ ಪಟ್ಟಣದ ಆಂಜನೇಯ ಬಡಾವಣೆಯಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಹಾಜರಾಗದೆ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಸಂದರ್ಭದಲ್ಲಿ ಇವರಿಗೆ ಪೋಷಕರು ಸಹ ಸಾಥ್ ನೀಡಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಪಟ್ಟಣದ ಆಂಜನೇಯ ಬಡಾವಣೆಯಲ್ಲಿರುವ ಇಂದಿರಾಗಾಂಧಿ ವಸತಿಶಾಲೆಯ ಪ್ರಭಾರ ಪ್ರಾಂಶುಪಾಲೆ ಪಿ.ಪವಿತ ಅವರ ದೌರ್ಜನ್ಯ ಮತ್ತು ವರ್ತನೆಯನ್ನು ಖಂಡಿಸುವುದಾಗಿ ಹೇಳಿ ಪೋಷಕರು ವಿದ್ಯಾರ್ಥಿಗಳನ್ನು ಬೆಂಬಲಿಸಿ ನಿಲಯದ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಪೋಷಕರು ಕಳೆದ ಎರಡು ವರ್ಷಗಳ ಹಿಂದೆ ಇಂದಿರಾಗಾಂಧಿ ವಸತಿ ಶಾಲೆಯ ಪ್ರಭಾರ ಪ್ರಾಂಶುಪಾಲೆಯಾಗಿ ಉಸ್ತುವಾರಿ ವಹಿಸಿರುವ ಇವರು ನಿಯಮಾನುಸಾರ ಹುದ್ದೆಗೆ ಅರ್ಹರಾಗಿಲ್ಲದಿದ್ದರು ರಾಜಕೀಯ ಪ್ರಭಾವ ಬಳಸಿ ಕೆಲಸ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ನಿಲಯದಲ್ಲಿರುವ ಮಕ್ಕಳಿಗೆ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸದೆ ಅವರೊಂದಿಗೆ ದುವರ್ತನೆ ತೋರಿ ಹಲ್ಲೆ ಮಾಡುವಮಟ್ಟಕ್ಕೂ ಹೋಗಿದ್ದು ಇದನ್ನು ಹೇಳುವವರು ಕೇಳುವವರು ಯಾರು ಇಲ್ಲವೆ ಎಂದು ಪ್ರಶ್ನಿಸಿದರು.

ವಸತಿ ಶಾಲೆ ಆರಂಭವಾದಾಗಿನಿಂದಲೂ ಈವರೆಗೆ ಪ್ರಭಾರ ಪ್ರಾಂಶುಪಾಲೆ ನಿಯಮಬಾಹಿರವಾಗಿ ರಾಜಕೀಯ ಒತ್ತಡ ತಂದು ಕೆಲಸ ಮಾಡುತ್ತಿದ್ದು ಕೂಡಲೇ ಇವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದ ಪೋಷಕರು, ಪ್ರಭಾರ ಪ್ರಾಂಶುಪಾಲೆ ಸರಕಾರದ ಸವತ್ತುಗಳನ್ನು ಮಕ್ಕಳಿಗೆ ತಲುಪಿಸದೆ ಅಕ್ರಮ ಎಸಗಿದ್ದು ಇವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರಲ್ಲದೆ ಶಾಸಕರು ಮತ್ತು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ವಸತಿ ಶಾಲೆಯ ಮುಂದೆ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ವಿಚಾರ ತಿಳಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪೋಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಸಮಸ್ಯೆಯ ಗಂಭೀರತೆಯನ್ನು ಅರಿತು ಈ ಕೂಡಲೇ ಪ್ರಭಾರ ಪ್ರಾಂಶುಪಾಲೆಯನ್ನು ಪ್ರಾಂಶುಪಾಲೆ ಹುದ್ದೆಯಿಂದ ಮುಕ್ತಗೊಳಿಸಿ ಆ ಸ್ಥಾನಕ್ಕೆ ಪ್ರಭಾಕರ್ ಅವರನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಪ್ರಕಟಿಸಿದರು.

ವಸತಿ ಶಾಲೆಯ ಅಕ್ರಮ ಮತ್ತು ದುರ್ಬಳಕೆ ಖಂಡಿಸಿ ಪೋಷಕರು ಮತ್ತು ವಿದ್ಯಾರ್ಥಿಗಳ ವಿರೋಧವನ್ನು ಹತ್ತಿಕ್ಕಲು ಪ್ರಭಾರ ಪ್ರಾಂಶುಪಾಲೆ ಪೋಲೀಸರನ್ನು ಬಳಸಿಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಪೋಷಕರು ನಾವೇನು ಇಲ್ಲಿ ಯಾರನ್ನು ದಂಡಿಸಲು ಬಂದಿಲ್ಲ ನಮ್ಮ ಹಕ್ಕನ್ನು ಕೇಳಲು ಬಂದಿದ್ದು ಈ ಸಂದರ್ಭದಲ್ಲಿ ಪೋಲೀಸರನ್ನು ಕರೆಸಿ ಬೆದರಿಸುವ ಕೆಲಸ ಮಾಡಿದ್ದು ಸರಿಯಲ್ಲ ಎಂದು ಖಂಡಿಸಿದರು.

ಪ್ರತಿಭಟನೆ ವಿಚಾರದ ತಿಳಿದ ಉಪನಿರ್ದೇಶಕರು ತಮ್ಮ ಕಛೇರಿಯ ಸಿಬ್ಬಂದಿ ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಮಕ್ಕಳು ಮತ್ತು ಪೋಷಕರ ಮನವೊಲಿಸಿ ಪರೀಕ್ಷೆಗೆ ಹಾಜರಾಗುವಂತೆ ಮನವಿ ಮಾಡಿದರು. ನಂತರ ವಿದ್ಯಾರ್ಥಿಗಳು ಪರೀಕ್ಷೆ ಮುಗಿಯುವವರೆಗೂ ಹಾಜರಿದ್ದು ಪರೀಕ್ಷೆ ಬರೆಸುವಲ್ಲಿ ಯಶಸ್ವಿಯಾದರು.

ಈ ಸಂದರ್ಭದಲ್ಲಿ ಪೋಷಕರಾದ ರವಿಕುಮಾರ್, ಮಂಜುಳ, ಶೀಲಾ, ಶಿಲ್ಪಾ, ಶಂಕರಪ್ಪ, ಚಂದ್ರಶೇಖರ್, ಪ್ರಶಾಂತ್‌ಬಾಬು, ವೀಣಾ, ಸ್ಮಿತಾ, ಮಂಜುನಾಥ್ ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿ ಪೋಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

admin
the authoradmin

Leave a Reply

Translate to any language you want