ಕುಶಾಲನಗರದಲ್ಲಿ ಅಬಾಕಸ್ ಸ್ಪರ್ಧೆ…ಕಲಿಕೆ ಮೂಲಕ ಪ್ರತಿಭಾನ್ವಿತರಾಗಲು ಶಾಸಕ ಡಾ ಮಂತರ್ ಗೌಡರ ಸಲಹೆ

ಕುಶಾಲನಗರ(ರಘುಹೆಬ್ಬಾಲೆ): ಶಿಕ್ಷಣದೊಂದಿಗೆ ವಿಶೇಷ ಕಲಿಕೆಯ ಮೂಲಕ ಪ್ರತಿಭಾನ್ವಿತರಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡು ಸಾಧನೆ ಮಾಡಬೇಕು ಎಂದು ಶಾಸಕ ಡಾ ಮಂತರ್ ಗೌಡ ಸಲಹೆ ನೀಡಿದರು.
ಇಲ್ಲಿನ ಸ್ಮಾರ್ಟ್ ಬ್ರೈನ್ ಅಬಾಕಸ್ ಅಕಾಡೆಮಿ ವತಿಯಿಂದ ಸಹಕಾರ ಭವನದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಚಿಕ್ಕವಯಸ್ಸಿನಲ್ಲೇ ಸ್ಪರ್ಧಾತ್ಮಕಕ ಕಾರ್ಯಕ್ರಮಗಳಲ್ಲಿ ಭಾಗಹಿಸುವುದರಿಂದ ಸ್ಪರ್ಧಾ ಯುಗಕ್ಕೆ ಹೇಗೆ ತೆರೆದುಕೊಳ್ಳಬೇಕು ಎಂಬುದು ತಿಳಿಯುತ್ತದೆ. ಸ್ಪರ್ಧೆಗಳಲ್ಲಿ ಸೋಲು ಗೆಲುವಿಗಾಗಿ ಅಲ್ಲದೆ ಒಳ್ಳೆಯ ಅನುಭವಕ್ಕಾಗಿ ಭಾಗವಹಿಸಬೇಕು. ವಿಶೇಷವಾಗಿ ಸೋತಾಗ ನಮಗೆ ಸಿಗುವ ಅನುಭವ ಮತ್ತು ಜೀವನದ ಪಾಠ ಗೆದ್ದಾಗ ಸಿಗುವುದಿಲ್ಲ. ಅಲ್ಲದೇ, ಒಮ್ಮೆ ಸೋತವರು ಮತ್ತೊಮ್ಮೆ ಗೆಲ್ಲಲೇ ಬೇಕು. ಅದಕ್ಕೆ ನಿರಂತರ ಪರಿಶ್ರಮ ಬೇಕಾಗುತ್ತದೆ.
ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ಶಿಕ್ಷಣ ಕಲಿಕೆ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು ಮುನ್ನಡೆಯುವುದರ ಮೂಲಕ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಅಬಾಕಸ್ ಪೂರಕವಾಗಿದೆ ಇದರ ಸದುಪಯೋಗಪಡಿಸಿಕೊಂಡು ಪ್ರತಿಭಾನ್ವಿತರಾಗಿ ಮುಂದೆ ಬರಬೇಕು ಎಂದರು.

ತಾಲ್ಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ,ಶಿಕ್ಷಣದೊಂದಿಗೆ ಅಬಾಕಸ್ ಮೂಲಕವೂ ವಿದ್ಯಾರ್ಥಿಗಳು ವಿಶೇಷ ಕಲಿಕ ಸಾಮರ್ಥ್ಯದೊಂದಿಗೆ ತಮ್ಮ ಪ್ರತಿಭಾನ್ವಿತ ಸಾಧನೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡು ಮುನ್ನಡೆಯುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಸ್ಮಾರ್ಟ್ ಬ್ರೈನ್ಸ್ ಅಬಾಕಸ್ ಆಕಾಡೆಮಿ ನಿರ್ದೇಶಕಿ ಕುಸುಮಾ ಎಸ್. ರಾಜ್ ಮಾತನಾಡಿದರು. ಈ ಸಂದರ್ಭ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಕೇಶ್, ಸಮಾಜ ಸೇವಕ ಸೈಜನ್ ಕೆ ಪೀಟರ್, ಸುಕೇಶ್ ರಾಜ್, ಪ್ರಮುಖರಾದ ವಿಶಾಲಕ್ಷಿ, ಪ್ರಭಾವತಿ, ಸೇರಿದಂತೆ ಗಣ್ಯರು, ವಿದ್ಯಾರ್ಥಿಗಳ ಪೋಷಕರು ಪಾಲ್ಗೊಂಡಿದ್ದರು.

ಅಬಾಕಸ್ ಆಕಾಡೆಮಿ ವತಿಯಿಂದ 4 ನೇ ವರ್ಷದ ರಾಜ್ಯ ಮಟ್ಟದ ಅಬಾಕಸ್, ವೇದಿಕ್ ಮ್ಯಾಥ್ಸ್, ರೂಬಿಕ್ಸ್ ಕ್ಯೂಬ್,ಕ್ಯಾಲಿಗ್ರಫಿ ಮತ್ತು ಮಿಡ್ಬ್ರೇನ್ ಆಕ್ಟಿವೇಶನ್ ಸ್ಪರ್ಧೆಯನ್ನು ಇಲ್ಲಿನ ರೈತ ಸಹಕಾರ ಭವನದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 30ಕ್ಕೂ ಹೆಚ್ಚು ಶಾಲೆಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಅಬಾಕಸ್, ವೇದಿಕ್ ಮ್ಯಾಥ್ಸ್, ರೂಬಿಕ್ಸ್ ಕ್ಯೂಬ್,ಕ್ಯಾಲಿಗ್ರಫಿ ಮತ್ತು ಮಿಡ್ಬ್ರೇನ್ ಆಕ್ಟಿವೇಶನ್, ಚಿತ್ರಕಲೆ ಸ್ಪರ್ಧೆಲ್ಲಿ ಪಾಲ್ಗೊಂಡು ತಮ್ಮ ಪ್ರತಿಭಾ ಅನಾವರಣಗೊಳಿಸಿದರು. ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಬಹುಮಾನ ವಿತರಣೆ ಮಾಡಲಾಯಿತು.ಅಬಾಕಸ್ ನಲ್ಲಿ ಕಲಿಕಾ ಶಿಕ್ಷಣ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಯೂನಿಕ್ ಅಕಾಡೆಮಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಚಿನ್ಮಯ್ ಅಬಾಕಸ್ ಅಕಾಡೆಮಿಯಲ್ಲಿ ಕಲಿತು ಕಣ್ಣಿಗೆ ಬಟ್ಟೆ ಕಟ್ಟಿ ನಿಗದಿತ ಸಮಯದಲ್ಲಿ ಚೆಸ್ ಆಡುವ ಮೂಲಕ ಇಂಡಿಯಾ ಹಾಗೂ ಎಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿರುವುದನ್ನು ಪರಿಗಣಿಸಿ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕುಶಾಲನಗರದ ರೈತ ಭವನದಲ್ಲಿ ಸ್ಮಾರ್ಟ್ ಬ್ರೈನ್ ಅಬಾಕಸ್ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.







