Articles

ಹಿಗ್ಗಿನ ಸುಗ್ಗಿಯ ಸಂಕ್ರಾಂತಿಗಿದೆ ಪುರಾಣದ ನಂಟು.. ಸೂರ್ಯನ ಉತ್ತರ ದಿಕ್ಕಿನ ಪಯಣ  ಆರಂಭ..

ಸಂಕ್ರಾಂತಿ ಹಬ್ಬದ ಆಚರಣೆ ಜೋರಾಗಿದೆ.. ಕೇರಳದ ಶಬರಿ ಮಲೆಯಲ್ಲಿ ಮಕರ ಜ್ಯೋತಿಯ ದರ್ಶನ ಮಾಡಿ ಭಕ್ತಾಧಿಗಳು ಪುನೀತರಾದರೆ, ಇತ್ತ ಜಾನುವಾರುಗಳನ್ನು ಕಿಚ್ಚು ಹಾಯಿಸಿ, ಹೊಸಬಟ್ಟೆ ತೊಟ್ಟು, ಎಳ್ಳುಬೆಲ್ಲ ಬೀರಿ, ಪೊಂಗಲ್ ಸೇವಿಸಿ, ಹಬ್ಬದೂಟ ಮಾಡಿ ಖುಷಿ ಪಡುತ್ತಿದ್ದಾರೆ.

ಸಂಕ್ರಾಂತಿ ಹಬ್ಬದ ಬಗ್ಗೆ ನೋಡುತ್ತಾ ಹೋದರೆ  ಸಂಕ್ರಾಂತಿಯನ್ನು ಮುಖ್ಯವಾಗಿ ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು, ಕೇರಳಗಳಲ್ಲಿ ಆಚರಿಸಲಾಗುತ್ತದೆ.  ಧಾನ್ಯ ಲಕ್ಷ್ಮಿ ಮನೆಗೆ ಬರುವ(ಸುಗ್ಗಿ) ಸಂದರ್ಭ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರ್ಯವಾಗಿ ಆಚರಿಸಲಾಗುತ್ತಿದ್ದರೂ  ವೇದಾಂಗ ಜ್ಯೋತಿಷಶಾಸ್ತ್ರದ ತಳಹದಿ ಇದಕ್ಕಿರುವುದನ್ನು ನಾವು ಕಾಣಬಹುದಾಗಿದೆ.

ಈಗ ಉತ್ತರಾಯಣ ಡಿಸೆಂಬರ್ 22ಕ್ಕೆ ಆದರೂ, ಹಿಂದಿನಂತೆಯೇ ಜನವರಿ 14 ರಂದು ನಡೆಯುವ ಮಕರಸಂಕ್ರಾಂತಿಯಂದೇ ಉತ್ತರಾಯಣದ ಆಚರಣೆಯೂ ನಡೆಯುತ್ತದೆ.  ಮಹಾಭಾರತದ ಕತೆಯಲ್ಲಿ ಇಚ್ಚಾ ಮರಣಿಯಾದ ಭೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಎಂದು ಹೇಳಲಾಗುತ್ತದೆ. ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ನಿರಯಣ ಮಕರರಾಶಿಯನ್ನು ಪ್ರವೇಶಿಸಿದಾಗ, “ಮಕರ ಸಂಕ್ರಾಂತಿ”ಯಾಗುತ್ತದೆ.

ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ 14ರ ಸುಮಾರಿಗೆ ಬರುತ್ತದೆ. ಹಿಂದೆ, ಈ ಕಾಲವೇ ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭವನ್ನು ಸೂಚಿಸುವ ಕಾಲವೂ ಆಗಿತ್ತಾದ್ದರಿಂದ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿ-ಬೆಚ್ಚನೆಯ ವಾತಾವರಣ ಆರಂಭವಾಗಿ, ಬೆಳೆ ಕಟಾವಿನ ಕಾಲವೂ ಆಗಿತ್ತು.  ಮನೆಯಲ್ಲಿ ಎಳ್ಳನ್ನು ತಯಾರಿಸಿ ಅಥವಾ ಖರೀದಿಸಿ ತಂದು ಸುತ್ತಲಿನ ಮನೆಗಳಿಗೆ “ಎಳ್ಳು ಬೀರುವುದು” ಮತ್ತು ಸ್ನೇಹಿತರು-ಸಂಬಂಧಿಕರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದಲ್ಲಿ ಕಂಡು ಬರುವ ಸಂಪ್ರದಾಯವಾಗಿದೆ.

ಈ ಎಳ್ಳುಬೆಲ್ಲದ ತಯಾರಿಕೆ ಕೂಡ ಹಬ್ಬಕ್ಕೆ ಇನ್ನು ತಿಂಗಳು ಇರುವಾಗಲೇ ಆರಂಭವಾಗುತ್ತದೆ. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ “ಎಳ್ಳು” ತಯಾರಿಸಲಾಗುತ್ತದೆ. ಎಳ್ಳು ಬೀರುವ ಸಂದರ್ಭ ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ನೀಡಲಾಗುತ್ತದೆ. ಹಬ್ಬದ ಸಂದರ್ಭ ಕಬ್ಬಿಗೆ ಮಾತ್ರ ಎಲ್ಲಿಲ್ಲದ ಬೇಡಿಕೆ ಕಂಡು ಬರುತ್ತದೆ.

ತಮಿಳುನಾಡಿನಲ್ಲಿ ಈ ಹಬ್ಬವನ್ನು “ಪೊಂಗಲ್” ಎಂದು ಕರೆಯಲಾಗುತ್ತದೆ. ಇಲ್ಲಿ ಇದು ನಾಲ್ಕು ದಿನಗಳಕಾಲ ನಡೆಯುತ್ತದೆ. ಈ ಸಂದರ್ಭ ಹೊಸಬಟ್ಟೆ ತೊಡುವುದು, ಸಮೃದ್ದಿಯ ಸಂಕೇತವಾಗಿ  ಹಾಲು-ಬೆಲ್ಲಗಳನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸುವುದು, ಗೋಪೂಜೆ, ಗೂಳಿಯನ್ನು ಪಳಗಿಸುವ ಆಟವೂ ನಡೆಯುತ್ತದೆ. ಹಲವೆಡೆ ವರ್ಷಪೂರ್ತಿ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳನ್ನು ಕಿಚ್ಚು ಹಾಯಿಸುವ ಸಂಪ್ರದಾಯವೂ ಇದೆ.

ಕೇರಳದಲ್ಲಿ ಮಕರ ಸಂಕ್ರಾಂತಿಯಂದು  ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಯ್ಯಪ್ಪ ವೃತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆದರೆ ಜನ್ಮ ಸಾರ್ಥಕವಾಗುವುದೆಂಬ ನಂಬಿಕೆಯಿಂದಾಗಿ ಲಕ್ಷೋಪಲಕ್ಷ ಜನರು ಈ ಜ್ಯೋತಿಯ ದರ್ಶನಕ್ಕಾಗಿ ವರ್ಷಂಪ್ರತಿ ಶಬರಿಮಲೆ ಸನ್ನಿಧಾನಕ್ಕಾಗಮಿಸುತ್ತಾರೆ. “ಮಕರ ವಿಳಕ್ಕು” ಎಂದು ಕರೆಯಲ್ಪಡುವ ಈ ಜ್ಯೋತಿಯು ಶಬರಿಮಲೆಯ ಬೆಟ್ಟದಿಂದ ಮೂರು ಬಾರಿ ಗೋಚರವಾಗುತ್ತದೆ.

ಶಬರಿಮಲೆಗೆ ತೆರಳಿದ ವೃತಧಾರಿಗಳು ಇದನ್ನು ವೀಕ್ಷಿಸಿದರೆ ಜೀವನ ಪಾವನ ಎಂಬ ನಂಬಿಕೆಯೂ ಇದೆ. ದೇಶದ ವಿವಿಧೆಡೆ ಬೇರೆ ಬೇರೆ ಹೆಸರುಗಳಲ್ಲಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಹಾಗೂ ಎಳ್ಳಿನ ಉಂಡೆಗಳನ್ನು ಹಂಚುವ ಸಂಪ್ರದಾಯವೂ ಇಲ್ಲಿದೆ.  ಪಂಜಾಬ್ ಮತ್ತು ಹರಿಯಾಣಗಳಲ್ಲಿ ಸಂಕ್ರಾಂತಿಯನ್ನು “ಲೋಹರಿ,” ಎಂದು ಕರೆಯುತ್ತಾರೆ. ಹಬ್ಬದ ಆಚರಣೆ ಕುರಿತಂತೆ ವಿಭಿನ್ನತೆ ಕಂಡು ಬಂದರೂ ಸಂಕ್ರಾಂತಿ ಸಮೃದ್ಧಿಯ ಸಂಕೇತವಾಗಿ ಉಳಿದಿರುವುದಂತು ಸತ್ಯ.

 

-ಬಿ.ಎಂ.ಲವಕುಮಾರ್

 

 

admin
the authoradmin

Leave a Reply

Translate to any language you want