ಆರ್ ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತಕ್ಕೆ 11 ಬಲಿ… ಇದರ ಹೊಣೆ ಹೊರುವವರು ಯಾರು?… ಸಿದ್ಧತೆಗಳಿಲ್ಲದ ವಿಜಯೋತ್ಸವ ಬೇಕಿತ್ತಾ? ಉತ್ತರಿಸುವವರು ಯಾರು?

ಬೆಂಗಳೂರು: 18 ವರ್ಷಗಳ ಬಳಿಕ ಐಪಿಎಲ್ ಕಪ್ ಗೆದ್ದ ಕರ್ನಾಟಕದ ಆರ್ ಸಿಬಿ ತಂಡದ ವಿಜಯೋತ್ಸವ(ಜೂ.4)ಕ್ಕೆ ಸರ್ಕಾರ ಮಾಡಿದ ಎಡವಟ್ಟಿನಿಂದಾಗಿ ಸೂತಕದ ಕಳೆ ಬಂದಿದೆ. ಮೆಚ್ಚಿನ ಕ್ರಿಕೆಟ್ ಆಟಗಾರರನ್ನು ನೋಡಲು ತವಕಿಸಿ ನೂಕು ನುಗ್ಗಲಿನಲ್ಲಿ ಸಿಕ್ಕವರ ಪೈಕಿ 11 ಮಂದಿ ಕಾಲು ತುಳಿತಕ್ಕೆ ಸಿಕ್ಕಿ ಪ್ರಾಣ ಚೆಲ್ಲಿದ್ದಾರೆ… ಇಷ್ಟಕ್ಕೂ ಇದೆಲ್ಲ ಬೇಕಿತ್ತಾ? ಇದರ ಹೊಣೆ ಯಾರು ಹೊರಬೇಕು? ಹೀಗೆ ಪ್ರಶ್ನೆಗಳು ಒಂದರ ಮೇಲೊಂದರಂತೆ ಹುಟ್ಟಿಕೊಳ್ಳುತ್ತಾ ಹೋಗುತ್ತಿವೆ. ಇಲ್ಲಿ ಪ್ರಶ್ನೆಗಳಿಗೆ ಸಂಬಂಧಿಸಿದವರು ಏನೇ ಉತ್ತರಗಳನ್ನು ನೀಡಿದರೂ ಹೋದ ಪ್ರಾಣ ಮತ್ತೆ ಬರಲ್ಲ…
ಪ್ರಾಣವನ್ನು ಕಳೆದು ಕೊಂಡವರ ಕುಟುಂಬಕ್ಕಷ್ಟೇ ಇಲ್ಲಿ ನಷ್ಟವಾಗಿರೋದು.. ಉಳಿದಂತೆ ಇದೊಂದು ರಾಜಕೀಯ ಜಟಾಪಟಿಗೆ ಕಾರಣವಾಗಿ ಬೇಳೆ ಬೇಯಿಸಿಕೊಳ್ಳುವವರಿಗೆ ಅನುಕೂಲವಾಗಬಹುದಷ್ಟೆ. ಮಗನನ್ನೋ, ಮಗಳನ್ನೋ ಕಳೆದು ಕೊಂಡವರಿಗೆ ಇದೊಂದು ಕೆಟ್ಟ ಕ್ಷಣವಾಗಿ ಉಳಿದು ಹೋಗಲಿದೆ. ಒಂದೆರಡು ದಿನ ಇದರ ಬಗ್ಗೆ ಮಾತುಕತೆ ನಡೆಯುತ್ತದೆ. ಆಕ್ರೋಶಗಳು ವ್ಯಕ್ತವಾಗುತ್ತದೆ. ಒಂದು ತನಿಖೆ ನಡೆಯುತ್ತದೆ. ಯಾರೋ ಒಂದೆರಡು ಜನರ ತಲೆದಂಡವಾಗಿ ಪ್ರಕರಣ ಮುಗಿದು ಹೋಗಿ ಬಿಡುತ್ತದೆ. ಆದರೆ ಆಗಿರುವ ನೋವು, ಬಂದಿರುವ ಕಳಂಕ ಯಾವತ್ತಿಗೂ ಹೋಗಲಾರದು.
ಐಎಪಿಎಲ್ ನಲ್ಲಿ ಗೆದ್ದು ಬೀಗಿದ ಆರ್ ಸಿಬಿ ತಂಡದ ಆಟಗಾರರನ್ನು ಬೆಂಗಳೂರಿನಲ್ಲಿ ಕರೆಯಿಸಿ ಗೌರವಿಸುವುದರೊಂದಿಗೆ ವಿಜಯೋತ್ಸವ ಆಚರಿಸುವ ಹೊಣೆ ಹೊತ್ತವರು ಯಾರು? ಇದನ್ನು ಆಯೋಜಿಸಿದವರು ಯಾರು? ಸದ್ಯಕ್ಕೆ ಯಾರೂ ಹೊಣೆಯನ್ನು ಹೊತ್ತುಕೊಂಡಂತೆ ಕಾಣುತ್ತಿಲ್ಲ. ಸರ್ಕಾರದ ಪರವಾಗಿ ಮುಂದೆ ಬಂದು ಮಾತನಾಡುವ ಧೈರ್ಯವನ್ನು ಯಾವ ಸಚಿವರೂ ಮಾಡುತ್ತಿಲ್ಲ. ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಹೊರತುಪಡಿಸಿ ಮತ್ಯಾರು ಮಾತನಾಡುತ್ತಿಲ್ಲ. ಸತ್ತ ಜೀವಗಳಿಗೆ ಸಾಂತ್ವನ ಹೇಳುವಷ್ಟು ಸೌಜನ್ಯವೂ ಇಲ್ಲದಾಗಿದೆ.
ಒಂದು ವೇಳೆ ವಿಜಯೋತ್ಸವ ಯಶಸ್ವಿಯಾಗಿ ನಡೆದಿದ್ದರೆ ಅದರ ಕ್ರೆಡಿಟ್ ತೆಗೆದುಕೊಳ್ಳಲು ಎಲ್ಲ ನಾಯಕರು ಮುಂದೆ ಬರುತ್ತಿದ್ದರು. ಆದರೆ ಅದ್ಯಾಕೋ ಗೊತ್ತಿಲ್ಲ. ಸರ್ಕಾರದ ಪರವಾಗಿ ಮಾತನಾಡಲು ಸಚಿವರಾಗಲೀ, ನಾಯಕರಾಗಲೀ, ಅಧಿಕಾರಿಗಳಾಗಲೀ ಯಾರೂ ಬಾರದಿರುವುದು ಅಚ್ಚರಿ ಮೂಡಿಸುತ್ತಿದೆ. ಗೃಹಸಚಿವ ಡಾ.ಜಿ.ಪರಮೇಶ್ವರ್ ರಾಜ್ಯದಲ್ಲಿ ಎಲ್ಲ ಘಟನೆಗಳು ನಡೆದಾಗಲೂ ಪ್ರತಿಕ್ರಿಯೆ ನೀಡುತ್ತಾರೆ. ಇಲ್ಲಿ ತಮ್ಮದೇ ಇಲಾಖೆ ವೈಫಲ್ಯತೆ ಎಂದು ಹೇಳುತ್ತಾರಾ? ಇಲ್ಲಿ ಇಂಟಲಿಜೆನ್ಸ್ ಫೆಲ್ಯೂವರ್ ಆಗಿಲ್ವ? ಉತ್ತರಗಳು ಇಲ್ಲದಾಗಿದೆ.
ಆರ್ ಸಿಬಿ ತಂಡಕ್ಕೆ ಅಭಿಮಾನಿಗಳ ದೊಡ್ಡ ಸಮೂಹವೇ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ಅದಕ್ಕೆ ಸಾಕ್ಷಿ ಪಂದ್ಯ ನಡೆದ ದಿನ ಅಹಮದಾಬಾದ್ ಸ್ಟೇಡಿಯಂನಲ್ಲಿ ಸೇರಿದ ಜನ. ಹಾಗೆಯೇ ದೇಶ, ವಿದೇಶಗಳಲ್ಲಿ ಗೆಲುವನ್ನು ಸಂಭ್ರಮಿಸಿದ ಕ್ಷಣಗಳು ಸಾಕ್ಷಿಯಾಗಿವೆ. ಬೆಂಗಳೂರಿನಲ್ಲಿಯೂ ರಾತ್ರಿ ಪೂರ್ತಿ ಜನ ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ದಾರೆ. ಅವರನ್ನೆಲ್ಲ ಸುರಕ್ಷಿತವಾಗಿ ಮನೆಗೆ ಕಳಿಸುವ ಹೊತ್ತಿಗೆ ಪೊಲೀಸರು ಸುಸ್ತಾಗಿದ್ದರು. ಹೀಗಿರುವಾಗ ಸಮರ್ಪಕ ಸಿದ್ಧತೆ, ಸೂಕ್ತ ಭದ್ರತೆಗಳನ್ನು ಮಾಡಿಕೊಳ್ಳದೆ ತರಾತುರಿಯಲ್ಲಿ ಬೆಂಗಳೂರಿಗೆ ಆಟಗಾರರನ್ನು ಕರೆಯಿಸಿ ಸನ್ಮಾನ ಮಾಡುವ ಅಗತ್ಯತೆ ಇತ್ತಾ..? ಗೊತ್ತಿಲ್ಲ.
ಈಗ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಕಾಲವೂ ಅಲ್ಲ. ಯಾರೋ ಆಯೋ(ಜಕ)ಗ್ಯರು ಅವರು ಮಾಡಿದ ಎಡವಟ್ಟಿಗೆ ಹನ್ನೊಂದು ಬಲಿ ಪಡೆದಾಗಿದೆ. ಸುಮಾರು ನಲುವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸದ್ಯಕ್ಕೆ ಇನ್ನೇನು ಉಳಿದಿಲ್ಲ. ಕಾಟಾಚಾರಕ್ಕೆ ಎಂಬಂತೆ ಆಟಗಾರರನ್ನು ಕರೆಯಿಸಿ, ಸನ್ಮಾನಿಸಿ ಕಳಿಸಲಾಗಿದೆ. ಕಾರ್ಯಕ್ರಮವಂತು ಅಚ್ಚುಕಟ್ಟಾಗಿ ನಡೆದಿಲ್ಲ. ಒಂದು ಕಡೆ ಸಾವು ಮತ್ತೊಂದು ಕಡೆ ಸನ್ಮಾನ ಸಂಭ್ರಮ.. ನಿಜಕ್ಕೂ ಬೇಸರವಾಗದಿರದು. ಸತ್ತವರ ಕುಟುಂಬಕ್ಕೆ 10ಲಕ್ಷ ಸರ್ಕಾರ ಪರಿಹಾರ ಘೋಷಿಸಿದೆ. ಆದರೆ ದುರಂತ ಮಾತ್ರ ಐಪಿಎಲ್ ಇತಿಹಾಸದಲ್ಲಿ ಬೆಂಗಳೂರಿಗೆ ಕಪ್ಪು ಚುಕ್ಕೆಯಾಗಿ ಉಳಿಯಲಿದೆ. ಇನ್ನಾದರೂ ಯಾರೇ ಆಗಲಿ ತಮ್ಮ ತೆವಲುಗಳಿಗೆ ಅಮಾಯಕರ ಜೀವ ತೆಗೆಯುವ ಕೆಲಸವನ್ನು ಮಾಡಬೇಡಿ ಎನ್ನುವುದಷ್ಟೇ ನಮ್ಮ ಕಳಕಳಿ..
B.M.Lavakumar