ಐವತ್ತರ ನಂತರದ ಬದುಕಿಗೆ ಮಹಿಳೆಯರು ಮಾನಸಿಕ-ದೈಹಿಕವಾಗಿ ತಯಾರಾಗುವುದು ಹೇಗೆ? ವೈದ್ಯರು ನೀಡುವ ಸಲಹೆಗಳೇನು?

ವಯಸ್ಸು ಐವತ್ತಾಗುತ್ತಿದ್ದಂತೆಯೇ ಮಹಿಳೆಯರಲ್ಲಿ ಸಣ್ಣಗಿನ ಆತಂಕ ಶುರುವಾಗಿ ಬಿಡುತ್ತದೆ. ಮೊದಲಿನಂತೆ ದೇಹ ಸ್ಪಂದಿಸದಿರುವುದು, ಆಯಾಸ, ಸುಸ್ತು, ಸೇರಿದಂತೆ ಆರೋಗ್ಯದ ಏರಿತಗಳು.. ಅದರಾಚೆಗೆ ಸಂಸಾರದ ಜವಬ್ದಾರಿಗಳು ಹೀಗೆ ಒಂದೆರಡಲ್ಲ ಹತ್ತಾರು ಕಿರಿಕಿರಿಗಳು ಸುತ್ತಿಕೊಳ್ಳುತ್ತವೆ. ಅದರಲ್ಲೂ ಋತು ಬಂಧದ ಬಳಿಕವಂತೂ ದೈಹಿಕ ಮತ್ತು ಮಾನಸಿಕವಾಗಿ ಒಂದಿಷ್ಟು ತುಮುಲಗಳು ಶುರುವಾಗಿ ಬಿಡುತ್ತವೆ.. ಇಂತಹ ಸ್ಥಿತಿಯನ್ನು ಎದುರಿಸಲು ಪ್ರತಿಯೊಬ್ಬ ಮಹಿಳೆಯೂ ಸನ್ನದ್ಧರಾಗಲೇ ಬೇಕಾಗಿದೆ.
ಸೃಷ್ಟಿಯಲ್ಲಿ ಹೆಣ್ಣು ಹುಟ್ಟಿದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ದೈಹಿಕ ಬದಲಾವಣೆ ಮತ್ತು ಮಾನಸಿಕ ಕಿರಿಕಿರಿಯನ್ನು ಎದುರಿಸುತ್ತಲೇ ಬದುಕಬೇಕಾಗಿದೆ. ಬದುಕಿನ ಪ್ರತಿಯೊಂದು ಹಂತವೂ ಆಕೆಗೆ ಸವಾಲ್ ಆಗಿದ್ದು ಅದನ್ನು ಎದುರಿಸಿಕೊಂಡು ಬರಲೇ ಬೇಕಾಗಿದೆ. ಅದರಲ್ಲೂ ದೈಹಿಕ ಮತ್ತು ಮಾನಸಿಕವಾಗಿ ಆಕೆ ಸದಾ ಗಟ್ಟಿಯಾಗಿಯೇ ಇರಬೇಕಾಗುತ್ತದೆ. ಹೀಗಾಗಿ ಬದುಕಿನ ಎಲ್ಲ ಹಂತಗಳಲ್ಲೂ ಸಮಚಿತ್ತತೆಯಿಂದ ಮುನ್ನಡೆಯ ಬೇಕಾಗುತ್ತದೆ. ಇಲ್ಲ ಸಲ್ಲದ ಒತ್ತಡಗಳನ್ನು ಎಳೆದುಕೊಳ್ಳುವುದು, ಅನಗತ್ಯ ವಿಚಾರಗಳನ್ನು ತಲೆಗೆ ಹಾಕಿಕೊಂಡು ಕೊರಗದೆ ಎಲ್ಲವನ್ನೂ ಶಾಂತಸ್ಥಿತಿಯಲ್ಲಿ ತೆಗೆದುಕೊಂಡು ಮುನ್ನಡೆಯಬೇಕಾಗುತ್ತದೆ.
ಬಾಲ್ಯದಿಂದ ಪ್ರೌಢಾವಸ್ಥೆಯ ತನಕ, ಯೌವನದಿಂದ ಋತುಬಂಧದ ತನಕ ಹತ್ತು ಹಲವು ದೈಹಿಕ ಬದಲಾವಣೆಯೊಂದಿಗೆ ಬದುಕನ್ನು ಸಾಗಿಸುವುದು ಅನಿವಾರ್ಯವಾಗಿದೆ. ಹೀಗಾಗಿ ದೈಹಿಕ ಮತ್ತು ಮಾನಸಿಕವಾಗಿ ಜೀವನದಲ್ಲಿ ಬರಲಿರುವ ಎಲ್ಲ ಕಿರಿಕಿರಿಗಳನ್ನು ಹಿಮ್ಮೆಟ್ಟಿ ಮುನ್ನಡೆಯಲೇ ಬೇಕಾಗಿದೆ. ಇವತ್ತಿನ ಲೈಫ್ ಸ್ಟೈಲ್ ನಲ್ಲಿ ಋತುಬಂಧದ ಹಂತದಲ್ಲಿ ಮಹಿಳೆಯರು ಕೆಲವೊಂದು ಆರೋಗ್ಯದ ಸಮಸ್ಯೆಗಳನ್ನು ಎದುರಿಸುವುದು ಅನಿವಾರ್ಯವಾಗಿದ್ದು, ಅದನ್ನು ಎದುರಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಜಾಣತನವಾಗಿದೆ.
ಇತ್ತೀಚೆಗಿನ ಲೈಫ್ ಸ್ಟೈಲ್ ಗಳು, ಒತ್ತಡದ ಕೆಲಸಗಳು, ಸಂಸಾರದ ಜಂಜಾಟಗಳು ಮಹಿಳೆಯರ ನೆಮ್ಮದಿಯನ್ನು ಕಿತ್ತು ಹಾಕಿದೆ. ಜತೆಗೆ ಹಲವು ಕಾಯಿಲೆಗಳು ದೈಹಿಕವಾಗಿ ಕುಗ್ಗುವಂತೆ ಮಾಡಿವೆ. ಇದರಿಂದ ಐವತ್ತು ವಯಸ್ಸಾಗುತ್ತಿದ್ದಂತೆಯೇ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ಅದರಲ್ಲೂ ಋತುಬಂಧದ ಹೊತ್ತಿಗೆ ಒಂದಷ್ಟು ಆರೋಗ್ಯದ ಸಮಸ್ಯೆಗಳು ತುಸು ಜಾಸ್ತಿಯೇ ಕಾಣಿಸಿಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು.
ಭಾರತದಲ್ಲಿ ಋತುಬಂಧಕ್ಕೆ ಒಳಗಾಗುವ ಮಹಿಳೆಯರನ್ನು ಆಧರಿಸಿ ಹಲವು ರೀತಿಯ ಅಧ್ಯಯನಗಳನ್ನು ಮಾಡಲಾಗಿದ್ದು ಇದರಿಂದ ಕೆಲವೊಂದು ಸಂಗತಿಗಳು ಹೊರಬಂದಿವೆ. ಸಾಮಾನ್ಯವಾಗಿ ಋತುಬಂಧದ ಹಂತಕ್ಕೆ ಬಂದಾಗ ಬಹಳಷ್ಟು ಮಹಿಳೆಯರಿಗೆ ತಮಗೆ ವಯಸ್ಸಾಗಿ ಬಿಡ್ತು ಎನ್ನುವ ಮಾನಸಿಕ ನೋವು ಕಾಡಲಾರಂಭಿಸುತ್ತವೆ. ಆದರೆ ಇಂತಹ ಆಲೋಚನೆಗಳಿಂದ ಹೊರ ಬರಬೇಕಾಗುತ್ತದೆ. ಎಲ್ಲರೂ ಎಲ್ಲ ಹಂತಗಳನ್ನು ಅನುಭವಿಸಬೇಕು ಮತ್ತು ಅದನ್ನು ದಾಟಿ ಮುನ್ನಡೆಯಲೇ ಬೇಕು ಎನ್ನುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾಗುತ್ತದೆ.
ತಜ್ಞರು ಹೇಳುವ ಪ್ರಕಾರ ಋತು ಬಂಧ ಎನ್ನುವುದು ಪ್ರತಿ ಮಹಿಳೆಯರು ಅನುಭವಿಸುವ ಬದುಕಿನ ಒಂದು ಹಂತ. ಈ ವೇಳೆ ತಮ್ಮ ಆರೋಗ್ಯದಲ್ಲಿ ಕಂಡು ಬರುವ ಏರುಪೇರುಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಅದಕ್ಕೆ ತಕ್ಕ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಬದುಕುವುದಕ್ಕೆ ಆದ್ಯತೆ ನೀಡಬೇಕು. ಅದನ್ನು ಬಿಟ್ಟು ಬೇರೆ ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬಾರದು. ಪ್ರಕೃತಿ ನಿಯಮವನ್ನು ಯಾರೂ ಮೀರಿ ಬದುಕಲಾಗುವುದಿಲ್ಲ. ಅದಕ್ಕೆ ನಾವು ಹೊಂದಿಕೊಂಡು ಮುನ್ನಡೆಯಬೇಕೆಂಬ ಸಲಹೆಗಳನ್ನು ನೀಡುತ್ತಾರೆ.
ಎಲ್ಲಾ ಮಹಿಳೆಯರು ತಮ್ಮ ಜೀವನದ ಯಾವುದಾದರೊಂದು ಹಂತದಲ್ಲಿ ಋತುಬಂಧವನ್ನು ಅನುಭವಿಸಬೇಕಾಗುತ್ತದೆ. ಒಬ್ಬರಿಂದ ಮತ್ತೊಬ್ಬರಿಗೆ ವಯಸ್ಸಿನ ಅಂತರದಲ್ಲಿ ಸ್ವಲ್ಪ ವ್ಯತ್ಯಾಸಗಳಾಗಬಹುದಷ್ಟೆ. ಜತೆಗೆ ಯಾವುದೇ ದುಶ್ಚಟಗಳಿಲ್ಲದೆ, ವ್ಯಾಯಾಮ, ಶಿಸ್ತು ಬದ್ಧ ಜೀವನ ನಡೆಸುವವರಿಗೆ ಆರೋಗ್ಯದ ವಿಚಾರದಲ್ಲಿ ಸಮಸ್ಯೆಗಳು ಕಡಿಮೆಯಿರಬಹುದು. ಆದರೆ ಸಾಮಾನ್ಯವಾಗಿ ಈ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಕೆಲವೊಂದು ಕಿರಿಕಿರಿಗಳನ್ನು ಎದುರಿಸುತ್ತಾರೆ. ಅದಕ್ಕೆ ಕಾರಣ ಮಹಿಳೆಯ ದೇಹದಲ್ಲಿನ ಬದಲಾವಣೆ ಮತ್ತು ಈಸ್ಟ್ರೊಜೆನ್ ಮಟ್ಟಗಳಲ್ಲಿ ಕುಸಿತ ಎಂದು ಹೇಳಲಾಗುತ್ತಿದೆ.
ಋತುಬಂಧದ ಹಂತದಲ್ಲಿ ಆಗುವ ದೈಹಿಕ ಸಮಸ್ಯೆಗಳು, ಆರೋಗ್ಯದಲ್ಲಿ ಏರುಪೇರು ಇದ್ಯಾವುದೂ ಹೆಚ್ಚಿನ ಮಹಿಳೆಯರಿಗೆ ಅರ್ಥವಾಗುವುದಿಲ್ಲ. ಕಾರಣ ಆ ಬಗ್ಗೆ ಅವರು ಗಮನಹರಿಸುವುದೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಇದೆಲ್ಲವೂ ಅವರಲ್ಲಿ ಮುಂದಿನ ದಿನಗಳಲ್ಲಿ ಸುಖಮಯ ಜೀವನ ನಡೆಸಲು ಅಡ್ಡಿಯಾಗುತ್ತಿದೆ ಎನ್ನುವುದು ಅಷ್ಟೇ ಸತ್ಯ. ಅಧ್ಯಯನಗಳು ಹೇಳುವ ಪ್ರಕಾರ ಋತುಬಂಧವು ಪ್ರತಿ ಮಹಿಳೆಯಲ್ಲಿ ವೈವಿಧ್ಯಮಯ ಚಿಂತೆಗಳನ್ನು ಹುಟ್ಟುಹಾಕುತ್ತವೆಯಂತೆ. ಕೆಲವರಿಗೆ ಪ್ರತಿ ತಿಂಗಳ ಕಿರಿಕಿರಿಯಿಂದ ಬಿಡುಗಡೆಯಾಗುವ ಸಮಾಧಾನದ ಭಾವನೆ ಮೂಡುತ್ತದೆಯಂತೆ.
ಇನ್ನು ಕೆಲವರಿಗೆ ವಯಸ್ಸಾಗಿ ಬಿಡ್ತಲ್ಲ ಎನ್ನುವ ಸಣ್ಣಗಿನ ನೋವು.. ಮತ್ತೆ ಕೆಲವರಿಗೆ ಮುಂದೇನು ಎಂಬ ಕುತೂಹಲ. ಆದರೆ ಇದೆಲ್ಲದರ ನಡುವೆಯೂ ಮಹಿಳೆಯರು ಋತುಬಂಧದ ನಂತರ ಉಂಟಾಗಬಹುದಾದ ಸಾಮಾನ್ಯ ಆರೋಗ್ಯ ಪರಿಸ್ಥಿತಿಗಳ ಬಗ್ಗೆ ಅರಿತುಕೊಳ್ಳುವುದು ಬಹುಮುಖ್ಯವಾಗುತ್ತದೆ. ಈ ಹಂತದಲ್ಲಿ ದೇಹದಲ್ಲಿ ಈಸ್ಟ್ರೊಜೆನ್ ಮಟ್ಟದಲ್ಲಿನ ಇಳಿಕೆಯಿಂದಾಗಿ ಮೂಳೆ ಸವೆತವಾಗುವುದರಿಂದ ಮಂಡಿನೋವು ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಹಿರಿಯ ಸಲಹೆಗಾರ್ತಿ ಶೀಲಾ ಮಾನೆ ಅವರ ಪ್ರಕಾರ ಭಾರತದಲ್ಲಿ ಋತುಬಂಧಕ್ಕೆ ಒಳಗಾಗುವ ಮಹಿಳೆಯರನ್ನು ಆಧರಿಸಿ ಮಾಡಿದ ಅಧ್ಯಯನಗಳಲ್ಲಿ ಸಾಮಾನ್ಯವಾಗಿ ವರದಿಯಾಗಿರುವ ರೋಗಲಕ್ಷಣಗಳಲ್ಲಿ ಮೈ ಬಿಸಿಯಾಗುವುದು ಮತ್ತು ರಾತ್ರಿಯಲ್ಲಿ ಬೆವರುವಿಕೆಗಳ ಜೊತೆಗೆ ಇತರ ರೋಗಲಕ್ಷಣಗಳಾದ ನಿದ್ರಾಹೀನತೆ, ಆತಂಕ, ಕಿರಿಕಿರಿ, ಕೀಲು ನೋವು ಮತ್ತು ಯೋನಿ ಶುಷ್ಕತೆ ಮುಂತಾದ ಲಕ್ಷಣಗಳು ಕಂಡು ಬಂದಿವೆಯಂತೆ. ಹೀಗಾಗಿ ಇಂತಹ ಸಮಸ್ಯೆಗಳು ಸಾಮಾನ್ಯವಾಗಿದ್ದು, ಮಹಿಳಾ ತಜ್ಞೆಯರ ಸಲಹೆ ಪಡೆದು ತಕ್ಕ ಚಿಕಿತ್ಸೆ ಪಡೆದರೆ ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ.
B M Lavakumar