ಕುಶಾಲನಗರ (ಆರ್ ಹೆಚ್): ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಎಸ್ಎಫ್ಐ)ಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಉಗ್ರರ ದಾಳಿಗೆ ಬಲಿಯಾದ ಹಾರಂಗಿ ನಿವಾಸಿ ವೀರ ಯೋಧ ಕೆ.ರಾಘವೇಂದ್ರ ಹೆಸರನ್ನು ಹಾರಂಗಿ ಕ್ರೀಡಾಂಗಣಕ್ಕೆ ಭಾನುವಾರ ನಾಮಕರಣ ಮಾಡಲಾಯಿತು.

ಹಾರಂಗಿ ನೀರಾವರಿ ಇಲಾಖೆ, ಕೂಡುಮಂಗಳೂರು ಗ್ರಾಮ ಪಂಚಾಯತಿ, ಭಾರತ ಸರ್ಕಾರ ,ಕೇಂದ್ರ ಗೃಹ ಸಚಿವಾಲಯ,ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಐ) ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕ್ರೀಡಾಂಗಣಕ್ಕೆ ಧೀರ ಹೃದಯಿ ರಾಘವೇಂದ್ರ ಕೆ.ಕ್ರೀಡಾಂಗಣ ಎಂದು ನಾಮಕರಣ ಮಾಡಲಾಗಿದೆ.

ಶಾಸಕ ಡಾ.ಮಂತರ್ ಗೌಡ ಹಾಗೂ ಸಿಐಎಸ್ಎಫ್ ಡಿಐಜಿ ನೆಲ್ಲೂರು ಪೆರುಮಾಳ್ ಕ್ರೀಡಾಂಗಣ ನಾಮಫಲಕವನ್ನು ಉದ್ಘಾಟಿಸಿದರು. ನಂತರ ವೀರಯೋಧ ಭಾವಚಿತ್ರಕ್ಜೆ ಪುಷ್ಪ ಗುಚ್ಛವನ್ನು ಅರ್ಪಿಸುವ ಮೂಲಕ ಶಾಸಕರು ಹಾಗೂ ಅಧಿಕಾರಿಗಳು ಗೌರವ ಸಲ್ಲಿಸಿದರು. ಇದೇ ಸಂದರ್ಭ ಮೈದಾನದಲ್ಲಿ ಅಂಚಿನಲ್ಲಿ ಶಾಸಕರು ಗಿಡನೆಟ್ಟು ನೀರು ಹಾಕಿದರು.

ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಸಕರು,ಸ್ವಾತಂತ್ರ್ಯ ಹೋರಾಟಗಾರ ಕುಟುಂಬದಿಂದ ಬಂದ ರಾಘವೇಂದ್ರ ಅವರ ದೇಶಸೇವೆ ಶ್ಲಾಘನೀಯ. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು.ಇದು ಇತರೆ ಯುವ ಜನರಿಗೆ ಸ್ಪೂರ್ತಿ ಯಾಗಬೇಕು.

ರಾಘವೇಂದ್ರ ಹೆಸರನ್ನು ಮೈದಾನಕ್ಕೆ ನಾಮಕರಣ ಮಾಡಿರುವ ಕಾರ್ಯ ಶ್ಲಾಘನೀಯ ಎಂದರು. ಕ್ರೀಡಾಗಂಣ ಅಭಿವೃದ್ಧಿಗೆ ಶಾಸಕ ನಿಧಿಯಿಂದ ರೂ.15 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.ಹಾರಂಗಿ ಬಸ್ ನಿಲ್ದಾಣ ವೀರ ರಾಘವೇಂದ್ರ ಹೆಸರಿಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.ಮೈದಾನ ಅಭಿವೃದ್ಧಿ ಹಾಗೂ ಗ್ಯಾಲರಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೈದಾನದ ಅಂಚಿನಲ್ಲಿ ಗಿಡನೆಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರ ಸೂಚನೆ ನೀಡಿದರು.

ಸಿಐಎಸ್ಎಫ್ ಡಿಐಜಿ ನೆಲ್ಲೂರು ಪೆರುಮಾಳ್ ಮಾತನಾಡಿ, ರಾಘವೇಂದ್ರ ಅವರ ದೇಶ ಸೇವೆ ಶ್ಲಾಘನೀಯ ಎಂದರು.ಹುತಾತ್ಮ ಯೋಧನ ಹೆಸರನ್ನು ಚಿರಸ್ಥಾಯಿಯಾಗಿಡಲು ಮೈದಾನಕ್ಕೆ ನಾಮಕರಣ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಇಲಾಖೆ ಶ್ಲಾಘಿಸುತ್ತದೆ ಎಂದರು.
ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ರಾಘವೇಂದ್ರ ಸಹೋದರ ಸುರೇಶ್ ಬಾಬು ಮಾತನಾಡಿದರು.

ಇದೇ ಸಂದರ್ಭ ಹುತಾತ್ಮ ಯೋಧ ರಾಘವೇಂದ್ರ ಅವರ ತಾಯಿ ಕಮಲಮ್ಮ ಅವರನ್ನು ಹಾಗೂ ಸಿಐಎಸ್ಎಫ್ ಅಧಿಕಾರಿಗಳನ್ನು ಶಾಸಕ ಮಂತರ್ ಗೌಡ ಸನ್ಮಾನಿಸಿ ಗೌರವಿಸಿದರು.

ಹಾರಂಗಿ ಅಣೆಕಟ್ಟೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ, ಕಿರಿಯ ಎಂಜಿನಿಯರ್ ಕಿರಣ್,ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಸಿಐಎಸ್ಎಫ್ ಮೈಸೂರು ಆರ್.ಎಂ.ಸಿ ವಿಭಾಗದ ಅಸಿಸ್ಟೆಂಟ್ ಕಮಾಂಡರ್ ಯೋಗೇಶ್ ಚಂದ್ರಮಿಶ್ರ, ಇನ್ಸ್ಪೆಕ್ಟರ್ ಆರ್.ಕೆ.ಗೌತಮ್ , ಪಿಎಸ್ಐ ಗಳಾದ ರಾಹುಲ್, ಹರಿಕೃಷ್ಣ,ತರಬೇತಿ ಕೇಂದ್ರದ ಹೆಡ್ ಕಾನ್ಸ್ಟೇಬಲ್ ಬಿ.ಕೆ.ಗುರುಮೂರ್ತಿ ಹಾಗೂ 25 ಸಿಬ್ಬಂದಿ ಹಾಗೂ ಕೂಡ್ಲೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಎನ್.ರಾಮಚಂದ್ರ, ಹುತಾತ್ಮ ಯೋದರ ಕುಟುಂಬಸ್ಥರಾದ ಕಮಲಮ್ಮ, ಸುರೇಶ್ ಬಾಬು, ವಾಣಿ, ಅಶ್ವಥ್ ,ಮುಖಂಡರಾದ ಎಚ್.ಕೆ.ನಟೇಶ್ ಗೌಡ, ರಂಜನ್, ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.








