ಮೈಸೂರು: ನಗರದ ರಾಮಕೃಷ್ಣನಗರದಲ್ಲಿರುವ ಸ್ವರಾಲಯ ಸಂಗೀತ ಸಂಸ್ಥೆ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಪ್ರಾಯೋಜಕತ್ವದಲ್ಲಿ ಜು.26ರಂದು ಭಾನುವಾರ ಸಂಜೆ 4ಗಂಟೆಗೆ ಜಯಲಕ್ಷ್ಮಿಪುರಂನಲ್ಲಿರುವ ಮಹಾಜನ ಎಜುಕೇಶನ್ ಸೊಸೈಟಿ, ಅಲ್ಯೂಮ್ನಿ ಅಸೋಸಿಯೇಷನ್, ಮಹಾಜನ ಹೈಸ್ಕೂಲ್ ಕ್ಯಾಂಪಸ್ ಸಭಾಂಗಣದಲ್ಲಿ ‘ಸ್ವರಾಲಯ ಸಾಂಸ್ಕೃತಿಕ ಸಂಭ್ರಮ 2026’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಂಗೀತ ಶಿಕ್ಷಕಿ ವಿದುಷಿ ಶ್ರೀಮತಿ ಪದ್ಮ ಅನಂತ್ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಪಿಟೀಲು ಶಿಕ್ಷಕ ವಿದ್ವಾನ್ ದಿನೇಶ್ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸ್ವರಾಲಯದ ಸಂಸ್ಥಾಪಕ ಅಧ್ಯಕ್ಷೆ ವಿದುಷಿ ಶ್ರೀಮತಿ ಡಾ.ಸುಮ ಹರಿನಾಥ್ ಅವರು ವಹಿಸಲಿದ್ದಾರೆ. ವೇದಿಕೆ ಕಾರ್ಯಕ್ರಮದ ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಾಸರ ಪದಗಳ ಗಾಯನವನ್ನು ಶ್ರೀಮತಿ ಶಿಲ್ಪಶ್ರೀ ಜಯರಾಂ ಪ್ರಸ್ತುತಪಡಿಸಲಿದ್ದಾರೆ.

ಇವರಿಗೆ ಪಕ್ಕವಾದ್ಯದಲ್ಲಿ ಪಿಟೀಲಿನಲ್ಲಿ ವಿದ್ವಾನ್ ಸಿ.ಚೇತನ್ ಹಾಗೂ ಮೃದಂಗದಲ್ಲಿ ವಿದ್ವಾನ್ ವಿ.ಶ್ಯಾಂ ಸಹಕಾರ ನೀಡಲಿದ್ದಾರೆ. ಇದಾದ ನಂತರ ‘ಹಾಡುವ ಜನಪದವ’ ಎಂಬ ಶೀರ್ಷಿಕೆಯ ಕಾರ್ಯಕ್ರಮವನ್ನು ಶ್ರೀಮತಿ ರೂಪ ನರಸಿಂಹನ್ ತಂಡದವರು ಪ್ರಸ್ತುತಪಡಿಸಲಿದ್ದಾರೆ. ತದ ನಂತರ ವಿದುಷಿ ವೈಷ್ಣವಿ ನರಸಿಂಹನ್ ತಂಡದವರಿಂದ ಭರತನಾಟ್ಯವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಪ್ರೋತ್ಸಾಹಿಸಿ, ಯಶಸ್ವಿಗೊಳಿಸಬೇಕೆಂದು ಸ್ವರಾಲಯದ ಕಾರ್ಯದರ್ಶಿ ಶ್ರೀಮತಿ ಹೆಚ್.ಎಸ್.ಶ್ರೀಕಾಂತಾಮಣಿ ಅವರು ತಿಳಿಸಿದ್ದಾರೆ.








