ನೆನಪಾಗಿ ಕಾಡುವ ಮಡಿಕೇರಿಯ ನೆಹರು ಮಂಟಪ… ಒಂದು ಕಾಲದಲ್ಲಿ ಗುಡ್ಡದ ಮೇಲಿದ್ದ ಈ ಮಂಟಪದ ವೈಭವ ಹೇಗಿತ್ತು ಗೊತ್ತಾ?

ಗುಡ್ಡದ ಮೇಲಿರುವ ನೆಹರು ಮಂಟಪ ಒಂದು ಕಾಲದಲ್ಲಿ ನಿಸರ್ಗದ ಸುಂದರತೆಯನ್ನು ಜನರಿಗೆ ಉಣಬಡಿಸುತ್ತಿದ್ದ ತಾಣವಾಗಿತ್ತು. ಇವತ್ತು ಕಟ್ಟಡ, ಮರಗಳ ನಡುವೆ ಅದೃಶ್ಯವಾಗಿದೆ.. ನೆಹರು ಮಂಟಪದ ವಿಶೇಷತೆ ಏನು? ಇದು ಎಲ್ಲಿದೆ? ಎಂಬುದರ ಮಾಹಿತಿ ಇಲ್ಲಿದೆ…
ಮಡಿಕೇರಿ: ಕೊಡಗಿಗೆ ಬೆಟ್ಟಗುಡ್ಡಗಳೇ ಶೋಭೆಯಾಗಿದ್ದು, ಇವುಗಳ ಮೇಲಿಂದ ನಿಂತು ನಿಸರ್ಗದ ಸುಂದರತೆಯನ್ನು ಆಸ್ವಾದಿಸುವುದು ಒಂಥರಾ ಮಜಾ ಕೊಡುತ್ತದೆ. ಅದರಲ್ಲೂ ಗುಡ್ಡಗಳ ನಡುವ ನಿರ್ಮಾಣಗೊಂಡ ಮಡಿಕೇರಿ ಹೊರಗಿನಿಂದ ಬರುವವರಿಗೆ ಮಜಾ ಕೊಡುತ್ತದೆ. ಎತ್ತರದ ಗುಡ್ಡಗಳು, ಕೆಳಗಿನ ಕಂದಕಗಳು ಅವುಗಳ ನಡುವೆ ಒಂದಷ್ಟು ಸಮತಟ್ಟು ಪ್ರದೇಶಗಳು ಇದೆಲ್ಲದರ ಮೇಲೆ ನೆಲೆನಿಂತ ವಸತಿ ಪ್ರದೇಶಗಳು ಗಮನಸೆಳೆಯುತ್ತವೆ. ಹೀಗಾಗಿ ಎತ್ತರದ ಗುಡ್ಡದ ಮೇಲೆ ತೆರಳಿ ಮಡಿಕೇರಿ ನಗರವನ್ನು ವೀಕ್ಷಿಸಿದರೆ ಹತ್ತು ಹಲವು ಸುಂದರ ನೋಟಗಳು ಲಭ್ಯವಾಗುತ್ತವೆ.
ನಗರಕ್ಕೆ ಹೊಂದಿಕೊಂಡಂತೆ ಗದ್ದಿಗೆ, ನೆಹರು ಮಂಟಪ ಮತ್ತು ಸ್ಟೋನ್ ಹಿಲ್ ನಂತಹ ಎತ್ತರದ ಪ್ರದೇಶಗಳಿದ್ದು ಇಲ್ಲಿಂದ ನಿಂತು ನೋಡಿದರೆ ಮಡಿಕೇರಿ ನಗರದ ಅತ್ಯದ್ಭುತ ನೋಟ ಸಿಗುತ್ತದೆ. ಇದರಾಚೆಗೆ ರಾಜಾಸೀಟಿನಿಂದ ಮಡಿಕೇರಿ ನಗರದ ನೋಡ ಸಿಗದೆ ಹೋದರೂ ನಿಸರ್ಗದ ಚೆಲುವು ಕಣ್ಮುಂದೆ ಹಾದು ಹೋಗುತ್ತದೆ. ಹೀಗಾಗಿಯೆ ಇಲ್ಲಿನ ಸುಂದರ ನೋಟಗಳಿಗಾಗಿ ಬೆಟ್ಟಗುಡ್ಡಗಳನ್ನು ಹುಡುಕಿಕೊಂಡು ಪ್ರವಾಸಿಗರು ಅಲೆಯುವುದು ಕಂಡು ಬರುತ್ತಿದೆ. ಮಡಿಕೇರಿ ನಗರದಿಂದ ರಾಜಾಸೀಟು ಕಡೆಗೆ ಹೋದರೆ ಅಲ್ಲಿನ ಉದ್ಯಾನದಲ್ಲಿ ಅಡ್ಡಾಡಿಕೊಂಡು ಅಂಚಿಗೆ ತೆರಳಿದರೆ ಅಲ್ಲಿಂದ ಕಂಡು ಬರುವ ಪ್ರಕೃತಿಯ ಸೊಬಗು ಮೈನವಿರೇಳಿಸುತ್ತದೆ. ರಾಜರ ಕಾಲದಲ್ಲಿ ರಾಜಪರಿವಾರ ಇಲ್ಲಿ ಬಂದು ಕುಳಿತು ಕಾಲಕಳೆಯುತ್ತಿತ್ತು. ಹೀಗಾಗಿ ರಾಜಾಸೀಟು ಹೆಸರು ಬಂದಿದೆ.
ಇನ್ನು ರಾಜಾಸೀಟಿನಷ್ಟೇ ಹೆಸರು ವಾಸಿಯಾಗಿದ್ದ ತಾಣ ನೆಹರು ಮಂಟಪದ ಬಗ್ಗೆ ಹೇಳಲೇ ಬೇಕಾಗುತ್ತದೆ. ಬಹುತೇಕ ಪ್ರವಾಸಿಗರಿಗೆ ಇದರ ಬಗ್ಗೆ ಗೊತ್ತೇ ಇಲ್ಲ ಎನ್ನಬೇಕು. ಇದು ಇವತ್ತು ಕಟ್ಟಡಗಳ ನಡುವೆ ಅದೃಶ್ಯವಾಗಿರುವುದರಿಂದ ಪ್ರವಾಸಿಗರ ಕಣ್ಣಿಗೆ ಬೀಳದಿರಬಹುದು. ಆದರೆ ಇದರ ಬಗ್ಗೆ ತಿಳಿದವರು ಇತ್ತ ಬರುವ ಪ್ರಯತ್ನ ಮಾಡುತ್ತಾರೆ. ಇಷ್ಟಕ್ಕೂ ಇದು ರಾಜಾಸೀಟಿಗೆ ಹೊಂದಿಕೊಂಡಂತೆ ಎತ್ತರದ ಗುಡ್ಡದಲ್ಲಿದೆ. ನಾಲ್ಕು ದಶಕಗಳ ಹಿಂದೆ ರಾಜಾಸೀಟಿನ ಗುಡ್ಡ ಬೋಳಾಗಿತ್ತು. ಹೀಗಾಗಿ ರಾಜಾಸೀಟಿನಿಂದ ಗುಡ್ಡ ಹತ್ತಿ ಹೋದರೆ ನೆಹರು ಮಂಟಪ ಸಿಗುತ್ತಿತ್ತು. ಅಷ್ಟೇ ಅಲ್ಲದೆ ಗುಡ್ಡದ ಮೇಲಿನ ಮಂಟಪ ಗಮನಸೆಳೆಯುತ್ತಿತ್ತು.
ಇದೀಗ ಈ ಮಂಟಪ ಯಾರ ಕಣ್ಣಿಗೂ ಬೀಳದಂತೆ ಬೆಟ್ಟವನ್ನು ಮನೆ ಮತ್ತು ಕಟ್ಟಡಗಳು ಆವರಿಸಿಕೊಂಡಿವೆ ಹೀಗಾಗಿ ರಾಜಾಸೀಟಿನಿಂದ ಸ್ಟೋಲ್ ಹಿಲ್ ಕಡೆಗಿನ ರಸ್ತೆಯಲ್ಲಿ ಆಕಾಶವಾಣಿ ಕೇಂದ್ರದ ಪಕ್ಕದಲ್ಲಿ ಎಡಬದಿಗೆ ಮೆಟ್ಟಿಲು ಕಾಣಿಸುತ್ತದೆ ಅದನ್ನು ಹತ್ತಿ ಹೋದರೆ ನೆಹರು ಮಂಟಪವನ್ನು ತಲುಪಬಹುದಾಗಿದೆ. ಒಂದು ಕಾಲದಲ್ಲಿ ಈ ಮಂಟಪ ಕೂಡ ನೂರಾರು ಮಂದಿಯನ್ನು ದಿನನಿತ್ಯ ತನ್ನೆಡೆಗೆ ಸೆಳೆದು ನಿಸರ್ಗದ ಸವಿಯನ್ನುಣಿಸುತ್ತಿತ್ತು. ಇವತ್ತು ಪ್ರವಾಸಿಗರಿಂದ ದೂರವಾಗಿ ಅನಾಥವಾಗಿ ನಿಂತಂತೆ ಗೋಚರಿಸುತ್ತದೆ. ಆದರೆ ಅವತ್ತಿನ ದಿನಗಳಲ್ಲಿ ನೆಹರು ಮಂಟಪವಿರುವ ಗುಡ್ಡ ಪ್ರಕೃತಿಯ ಚೆಲುವಿನ ಆಕರ್ಷಕ ತಾಣವಾಗಿತ್ತು ಎನ್ನುವುದು ಅಷ್ಟೇ ಸತ್ಯ.
ಅವತ್ತಿನ ದಿನಗಳನ್ನು ನೆನಪಿಸಿಕೊಳ್ಳುವ ಹಿರಿಯರು ಆ ಸುಂದರ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ. ಅವರು ಹೇಳುವಂತೆ ಗುಡ್ಡದಿಂದ ನಿಂತು ನೋಡಿದ್ದೇ ಆದರೆ ಮಡಿಕೇರಿ ಪಟ್ಟಣದ ವಿಹಂಗಮ ನೋಟ ಕಣ್ಣಿಗೆ ರಾಚುತ್ತಿತ್ತಂತೆ. ದೂರದಲ್ಲಿ ಸಾಲು ಸಾಲಾಗಿ ನಿಂತು ಬಾನಿಗೆ ಮುತ್ತಿಕ್ಕುತ್ತಿವೆಯೇನೋ ಎಂಬಂತೆ ಭಾಸವಾಗುವ ಪರ್ವತ ಶ್ರೇಣಿಗಳು… ಅವುಗಳ ಇಳಿಜಾರು ಕಂದಕಗಳಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ವೃಕ್ಷ ರಾಶಿಗಳು… ಕಾಫಿ, ಏಲಕ್ಕಿ ತೋಟಗಳ ನಡುವಿನ ಗದ್ದೆ ಬಯಲುಗಳು… ಮರ ಕಾಡುಗಳ ಮಧ್ಯೆ ತಲೆ ಎತ್ತಿ ನಿಂತ ಮನೆಗಳು… ಅಂಕುಡೊಂಕಾಗಿ ಹಾದು ಹೋದ ರಸ್ತೆಗಳು ಕಣ್ಣಿಗೆ ಹಬ್ಬ ನೀಡುತ್ತಿತ್ತು. ತಮ್ಮೆಲ್ಲಾ ಜಂಜಾಟಗಳನ್ನು ಬದಿಗೊತ್ತಿ ಸಂಜೆಯ ಕ್ಷಣಗಳನ್ನು ಈ ಗುಡ್ಡದಲ್ಲಿ ಕುಳಿತು ಕಳೆಯಲೆಂದು ನಗರದ ಮಂದಿ ಇಲ್ಲಿಗೆ ಭೇಟಿ ನೀಡುತ್ತಿದ್ದರು ಎಂಬುದಾಗಿ ನೆನಪಿಸಿಕೊಳ್ಳುತ್ತಾರೆ.
ಇದೆಲ್ಲದರ ನಡುವೆ ಇಲ್ಲಿರುವ ಗುಡ್ಡದ ಮೇಲೆ ನೆಹರು ಮಂಟಪ ನಿರ್ಮಾಣವಾದ ಬಗ್ಗೆ ಕುತೂಹಲ ಕೆರಳದಿರದು. ಎಲ್ಲದಕ್ಕೂ ಇತಿಹಾಸವಿರುವಂತೆ ಇಲ್ಲಿಗೂ ಇದೆ. ಅದು 1957ರ ದಿನಗಳು. ಕೊಡಗಿಗೆ ಭೇಟಿ ನೀಡಿದ ಪ್ರಧಾನಿ ಜವಾಹರಲಾಲ್ ನೆಹರುರವರು ಕಾಫಿಗೆ ಹೆಸರಾದ ಭೂಮಿ, ಸುಂದರ ಸ್ತ್ರೀಯರ ನೆಲೆವೀಡು ಎಂದು ಇದೇ ಗುಡ್ಡದಲ್ಲಿ ಕುಳಿತು ಬಣ್ಣಿಸಿದ್ದರು ಎಂದು ಹೇಳಲಾಗುತ್ತಿದೆ. ಅವರ ಭೇಟಿಯ ಸವಿನೆನಪಿಗಾಗಿ ಆಗಿನ ರಾಜ್ಯಪಾಲ ಧರ್ಮವೀರ ಎಂಬುವರು ಮಂಟಪವೊಂದನ್ನು ನಿರ್ಮಿಸಿ ನೆಹರು ಮಂಟಪ ಎಂದು ಹೆಸರಿಟ್ಟರು. ನಂತರದ ದಿನಗಳಲ್ಲಿ ಪ್ರಸಿದ್ಧಿ ಪಡೆಯುತ್ತಾ ಹೋಯಿತು.
ನೆಹರು ಮಂಟಪ ನಿರ್ಮಾಣವಾದ ಮೊದಲ ದಿನಗಳಲ್ಲಿ ರಾಜಾಸೀಟಿನಷ್ಟೇ ವೈಭವವನ್ನು ಇದು ಸಂಪಾದಿಸಿತ್ತು. ವೀಕ್ಷಕರ ದಂಡು ಇಲ್ಲಿಗೆ ಸದಾ ಸುಳಿಯುತ್ತಿತ್ತು. ಪಟ್ಟಣದ ಗುಡ್ಡದ ಮೇಲಿದ್ದ ಕಾರಣ ಮಂಟಪ ಎಲ್ಲರ ಕಣ್ಣಿಗೆ ನಿಲುಕುವ ಮೂಲಕ ಅತ್ತಕಡೆ ಸೆಳೆಯುತ್ತಿತ್ತು. ಆದರೆ ನೆಹರು ಮಂಟಪದ ವೈಭವ ನಿಧಾನವಾಗಿ ಮರೆಯಾಗಲಾರಂಭಿಸಿತು. ನಾಗರಿಕತೆಯ ಪ್ರಭಾವ, ಜನಸಂಖ್ಯೆ ಹೆಚ್ಚಳ, ಹೀಗಾಗಿ ಪ್ರಶಾಂತವಾಗಿದ್ದ ಗುಡ್ಡಗಳ ಮೇಲೆ ಮನೆಗಳು ತಲೆ ಎತ್ತಲಾರಂಭಿಸಿದವು. ಸಾಲದೆಂಬಂತೆ ಅರಣ್ಯ ಇಲಾಖೆ ಮಂಟಪದ ಸುತ್ತಲೂ ಗಿಡಗಳನ್ನು ನೆಟ್ಟಿತು. ಅವು ಬೆಳೆದು ಹೆಮ್ಮರವಾಗುತ್ತಿದ್ದಂತೆಯೇ ಆಕಾಶವಾಣಿ ಕಟ್ಟಡ ಇಲ್ಲಿ ನಿರ್ಮಾಣವಾಯಿತು. ಪರಿಣಾಮ ನೆಹರು ಮಂಟಪ ಅದೃಶ್ಯವಾಯಿತು.
ಬಹಳಷ್ಟು ವರ್ಷಗಳ ಕಾಲ ಇದು ನೆಹರು ಮಂಟಪ ಎನ್ನುವುದಕ್ಕಿಂತ ಹೆಚ್ಚಾಗಿ ಪಾಳು ಮಂಟಪವಾಗಿ ಉಳಿದು ಹೋಗಿತ್ತು. ಸುಣ್ಣ ಬಣ್ಣ ಕಾಣದೆ ಕಳಾಹೀನವಾಗಿತ್ತು. ಜನ ನೆಹರು ಮಂಟಪವಿದೆ ಎನ್ನುವುದನ್ನೇ ಮರೆತು ಬಿಟ್ಟಿದ್ದರು. ಆದರೆ 2019ರಲ್ಲಿ ಇದಕ್ಕೊಂದು ಕಾಯಕಲ್ಪವನ್ನು ಆಗಿನ ಜಿಲ್ಲಾಧಿಕಾರಿಯಾಗಿದ್ದ ಅನ್ನೀಶ್ ಕಣ್ಮಣಿ ಜಾಯ್ ನೀಡಿದರು. ಹಿಂದೆ ಇದ್ದಂತಹ ಮಂಟಪವನ್ನು ನವೀಕರಣಗೊಳಿಸಿ ಅದಕ್ಕೆ ಹೆಂಚಿನ ಛಾವಣಿ ನಿರ್ಮಿಸಿ, ಮಂಟಪಕ್ಕೆ ಗಾಜನ್ನು ಅಳವಡಿಸಿ ಮಂಟಪಕ್ಕೆ ಮೆರಗು ತಂದರು. ಇವತ್ತು ಮಂಟಪದ ಕಡೆಗೆ ತೆರಳುವವರ ಸಂಖ್ಯೆ ಕಡಿಮೆಯೇ ಇರಬಹುದು ಆದರೆ ಇದರ ವೈಭವ ಮರೆಯಲಾರದ್ದಾಗಿದೆ. ಅದು ಏನೇ ಇರಲಿ ಮಡಿಕೇರಿಗೆ ಹೋದವರು ಇದರತ್ತ ತೆರಳಲು ಮರೆಯದಿರಿ.