ಕೊಡಗಿನ ಜನರು ಅದೆಂತಹ ಮಳೆಗಾಲವನ್ನೆಲ್ಲ ಎದುರಿಸಿಲ್ಲ ಹೇಳಿ? ಮಳೆಗಾಳಿ, ಪ್ರವಾಹ, ಬರೆ ಕುಸಿತ ಇದೆಲ್ಲವೂ ಹೊಸತೇನಲ್ಲ. ಎಲ್ಲವನ್ನು ಸಹಿಸಿಕೊಂಡು ಬದುಕಿದ್ದಾರೆ. ಆದರೆ ಇತ್ತೀಚೆಗೆ ಬರೀ ಪ್ರವಾಹ ಸಂಭವಿಸುತ್ತಿಲ್ಲ.. ಬರೆ ಕುಸಿತವಷ್ಟೆ ಸಂಭವಿಸುತ್ತಿಲ್ಲ… ಇಡೀ ಗುಡ್ಡಗಳೇ ಕುಸಿಯಲಾರಂಭಿಸಿವೆ…
2018ರ ನಂತರ ಕೊಡಗಿನಲ್ಲಿ ಮಳೆಗಾಲ ಬಂತೆಂದರೆ ಭಯ ಶುರುವಾಗುತ್ತದೆ… ಮಳೆ ಸುರಿದರೆ ಮಹಾಮಳೆ… ಮಳೆ ಬಾರದೆ ಹೋದರೆ ರಣ ಬಿಸಿಲು… ಹೀಗೆ ವಾತಾವರಣದಲ್ಲಿನ ಏರುಪೇರುಗಳು ಜನರ ಮೇಲೆ ಪರಿಣಾಮ ಬೀರುತ್ತಿವೆ. ಇದೀಗ ಮಳೆಗಾಲ ಆರಂಭದ ಸೂಚನೆಗಳು ಶುರುವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಕಾಲಿಡಲಿದೆ. ನಂತರ ಮಳೆಗಾಲ ಆರಂಭವಾಗಲಿದೆ. ಈಗಾಗಲೇ ಕೊಡಗಿನ ಸೋಮವಾರಪೇಟೆ ಬಳಿ ಗುಡ್ಡದಿಂದ ಹೆಬ್ಬಂಡೆಗಳು ಉರುಳಿದ ಸುದ್ದಿಯಿದೆ. ಹೀಗಾಗಿ ಗುಡ್ಡ ಕುಸಿತದ ಭಯವೂ ಇಲ್ಲದಿಲ್ಲ.
ಕೊಡಗಿನಲ್ಲಿ ಗುಡ್ಡಕುಸಿತ ತಂದ ದುರಂತಗಳು ಇಂದಿಗೂ ನಮ್ಮ ಕಣ್ಣಮುಂದೆಯೇ ಇದೆ. ಹೀಗಾಗಿ ಮಳೆಗಾಲದಲ್ಲಿ ಗುಡ್ಡಪ್ರದೇಶದಲ್ಲಿ ಮನೆ ಮಾಡಿಕೊಂಡಿರುವವರು, ತಳಭಾಗದಲ್ಲಿ ಇರುವವರು ಎಚ್ಚರಿಕೆ ವಹಿಸುವುದು ಬಹುಮುಖ್ಯವಾಗಿದೆ. ಹೋಂಸ್ಟೇ, ರೆಸಾರ್ಟ್ ಗಳು ಗುಡ್ಡ, ಬೆಟ್ಟವನ್ನೆಲ್ಲ ಆಕ್ರಮಿಸಿದ್ದು, ಅವುಗಳ ನಿರ್ಮಾಣಕ್ಕಾಗಿ ಮಾಡಿದ ರಸ್ತೆಗಳು, ನಿರ್ಮಿಸಿದ ಕಟ್ಟಡಗಳು ಎಲ್ಲವೂ ಇವತ್ತು ನಮ್ಮನ್ನು ಗುಡ್ಡದಭೂತವಾಗಿ ಕಾಡಲಾರಂಭಿಸಿವೆ.
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ ಎಂದು ಅಕ್ಕಮಾದೇವಿ ಸುಮಾರು 863 ವರ್ಷಗಳ ಹಿಂದೆಯೇ ಹೇಳಿದ್ದರು. ಆದರೆ ಇವತ್ತು ನಾವು ಬೆಟ್ಟಗುಡ್ಡ, ಕಾಡುಗಳಲ್ಲಿ ಮನೆ ಮಾಡಿದ್ದರೂ ಮೃಗಗಳಿಗೆ ಹೆದರುತ್ತಿಲ್ಲ ಬದಲಾಗಿ ಮಳೆಗಾಲದಲ್ಲಿ ಸಂಭವಿಸಬಹುದಾದ ಭೂಕುಸಿತಕ್ಕಾಗಿ ಹೆದರುವಂತಾಗಿದೆ. ಇದಕ್ಕೆ ಕಾರಣ ನಾವೇ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಕೊಡಗಿನಲ್ಲಿ ಭೂಕುಸಿತದಂತಹ ಘಟನೆಗಳು ಹಿಂದೆ ನಡೆಯುತ್ತಿದ್ದದ್ದು ಅಪರೂಪವೇ.
ಮಳೆಗಾಲ ಕೂಡ ಭೀಕರತೆಯನ್ನು ಪಡೆಯುತ್ತಿರಲಿಲ್ಲ. ಜಿಟಿಜಿಟಿಯಾಗಿ ಆರಂಭವಾಗುತ್ತಿದ್ದ ಮಳೆಗಾಲ ಜುಲೈ ಆಗಸ್ಟ್ ತಿಂಗಳಲ್ಲಿ ಬಿರುಸು ಪಡೆಯುತ್ತಿತ್ತು. ಈ ಸಂದರ್ಭ ತೊರೆ, ನದಿಗಳು ತುಂಬಿ ಹರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತಾದರೂ ಅದು ಜನ ಸಾಮಾನ್ಯರ ಜೀವನಕ್ಕೆ ಅಷ್ಟೊಂದು ಅಡ್ಡಿಯಾಗುತ್ತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಮಳೆಗಾಲಕ್ಕೆ ಮೊದಲೇ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದುದರಿಂದ ಮಳೆಗಾಲದ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವಾಗುತ್ತಿರಲಿಲ್ಲ.
ಕೊಡಗಿನಲ್ಲಿ ಒಂದೆರಡು ದಶಕಗಳ ಹಿಂದೆಗೂ ಇವತ್ತಿಗೂ ಬಹಳಷ್ಟು ಬದಲಾವಣೆಗಳು ಆಗಿರುವುದನ್ನು ನಾವು ಕಾಣಬಹುದಾಗಿದೆ. ನಮ್ಮ ಆಧುನಿಕತೆ ಮತ್ತು ಅದರಾಚೆಗಿನ ಸ್ವಾರ್ಥ, ವಾಣಿಜ್ಯಕರಣದ ವ್ಯಾಮೋಹ ಹೀಗೆ ಎಲ್ಲವೂ ನೇರ ಪರಿಣಾಮ ಬೀರಿದ್ದು ಪರಿಸರದ ಮೇಲೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದಕ್ಕೆ ಅಳಿದ ಕಾಡುಗಳು, ಬೆಟ್ಟಗುಡ್ಡಗಳಲ್ಲಿ ನಿರ್ಮಾಣವಾದ ರಸ್ತೆ ಮತ್ತು ಅಲ್ಲಿ ತಲೆ ಎತ್ತಿದ ಭವ್ಯ ಬಂಗಲೆ, ರೆಸಾರ್ಟ್, ಹೋಂಸ್ಟೇಗಳು ಸಾಕ್ಷಿಯಾಗಿ ನಿಂತಿವೆ.
ಕೃಷಿಯನ್ನೇ ನಂಬಿ ಅದರಲ್ಲೇ ಬದುಕು ಕಟ್ಟಿಕೊಂಡಿರುವ ಸಣ್ಣ ಹಿಡುವಳಿದಾರ ರೈತರು ಇವತ್ತಿಗೂ ಹಾಗೆಯೇ ಉಳಿದಿದ್ದಾರೆ. ತಮ್ಮ, ತೋಟ, ಗದ್ದೆಯನ್ನು ಜತನದಿಂದ ಕಾಪಾಡಿಕೊಂಡು ಅದರಲ್ಲಿಯೇ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರಿಗೆ ಗಿಡನೆಟ್ಟು ಮತ್ತು ನೆಟ್ಟಗಿಡವನ್ನು ಕಾಪಾಡಿ ಗೊತ್ತಿರುವುದರಿಂದ ಅವರಿಗೆ ಯಾವುದೇ ಪರಿಸರದ ಪಾಠ ಬೇಕಾಗಿಲ್ಲ. ಬಂಡವಾಳ ಶಾಹಿಗಳು, ಶ್ರೀಮಂತ ರಾಜಕಾರಣಿಗಳು ಸೇರಿದಂತೆ ಉದ್ಯಮಿಗಳು ಕೊಡಗಿನ ಮೇಲೆ ಯಾವಾಗ ವಕ್ರದೃಷ್ಠಿ ಬೀರಿದರೋ ಅವತ್ತೇ ಇಲ್ಲಿನ ಸ್ಥಿತಿ ಬದಲಾಗಿ ಹೋಗಿದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.
ಎರಡು ದಶಕಗಳ ಹಿಂದೆ ವರ್ಷದ ಆರು ತಿಂಗಳು ಮಳೆ ಸುರಿಯುತ್ತಿತ್ತು. ಜತೆಗೆ ಪ್ರವಾಸೋದ್ಯಮ ಅಷ್ಟೊಂದು ಬೆಳೆದಿರಲಿಲ್ಲ. ಜನರಲ್ಲಿ ಹೋಂಸ್ಟೇ, ರೆಸಾರ್ಟ್ ಕಲ್ಪನೆಗಳು ಇರಲಿಲ್ಲ. ಇಲ್ಲಿನ ಬೆಳೆಗಾರರು ಮೈಬಗ್ಗಿಸಿ ದುಡಿಯುವುದರಲ್ಲೇ ಸಮಯ ಕಳೆದು ಹೋಗುತ್ತಿತ್ತು. ಈಗ್ಗೆ ಎರಡು ದಶಕಗಳ ಅವಧಿಯಲ್ಲಿ ಕೊಡಗಿನಲ್ಲಿ ಪರಿಸರ ಎಗ್ಗಿಲ್ಲದೆ ನಾಶವಾಯಿತು. ಮಳೆಯ ಪ್ರಮಾಣ ಕಡಿಮೆಯಾಯಿತು. ಪ್ರವಾಸೋದ್ಯಮ ಬೆಳೆಯಲಾರಂಭಿಸಿತು. ಜನ ಬರತೊಡಗಿದರು. ಬಂಡವಾಳ ಶಾಹಿಗಳು ರೆಸಾರ್ಟ್, ಹೋಂಸ್ಟೇ, ಹೋಟೆಲ್ ನಿರ್ಮಿಸಿದರು.
ಕೆಲವು ರಾಜಕಾರಣಿಗಳು ಭ್ರಷ್ಟಾಚಾರದ ಹಣವನ್ನು ತಂದು ಕಾಫಿತೋಟಗಳನ್ನು ಖರೀದಿಸಿ ಬಂಗಲೆ ನಿರ್ಮಿಸಿ ತಮ್ಮ ಕಾರ್ಯ ಚಟುವಟಿಕೆ ನಡೆಸಲು ಆರಂಭಿಸಿದರು. ಬೆಟ್ಟಗುಡ್ಡಗಳನ್ನು ಕೊರೆದು ರಸ್ತೆ ಮಾಡಿದರು, ಮತ್ತೆ ಕೆಲವರು ಗುಡ್ಡವನ್ನು ಜೆಸಿಬಿ ಬಳಸಿ ಸಮತಟ್ಟು ಮಾಡಿ ಬಂಗಲೆ ನಿರ್ಮಿಸಿದರು. ಇದೆಲ್ಲವೂ ಒಂದು ರೀತಿಯಲ್ಲಿ ಕೊಡಗಿನ ಪರಿಸರದ ಮೇಲೆ ನಡೆದ ಅತ್ಯಾಚಾರ ಎಂದರೆ ಕಠೋರ ಎನಿಸದು.
ಪ್ರಕೃತಿ ಮೇಲೆ ನಡೆಸಿದ ಅನಾಚಾರಗಳಿಗೆ ಈಗ ಬೆಲೆ ಕಟ್ಟುವ ಸಮಯ ಬಂದಿದೆ. ಅದು ತನ್ನ ಪರಿಮಿತಿಯನ್ನು ಮತ್ತೆ ಸರಿಪಡಿಸಿಕೊಳ್ಳಲು ಮುಂದಾಗಿದೆ. ಇದಕ್ಕೆ ಕಳೆದ ಎಂಟು ವರ್ಷಗಳಿಂದ ಕೊಡಗಿನಲ್ಲಿ ನಡೆಯುತ್ತಿರುವ ಪಾಕೃತಿಕ ವಿಕೋಪಗಳು ನಿದರ್ಶನವಾಗಿವೆ. ನದಿ ತಟವನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ಮನೆ, ಬಂಗಲೆ ನಿರ್ಮಿಸಿದವರಿಗೆ ಅದು ನನಗೆ ಸೇರಿದ್ದು ಎಂಬುದಾಗಿ ಪ್ರವಾಹದ ಮೂಲಕ ತೋರಿಸುತ್ತಿದೆ. ಇನ್ನು ಬೆಟ್ಟಗುಡ್ಡಗಳನ್ನು ಕೊರೆದು, ಮರಗಿಡಗಳನ್ನು ಕಡಿದು ಬೋಳು ಮಾಡಿದ್ದಕ್ಕೆ ಭೂಕುಸಿತದ ಮೂಲಕ ಮನೆ, ತೋಟ, ಗದ್ದೆ ಎಲ್ಲವನ್ನೂ ನಾಶ ಮಾಡಿ ಇದು ನನ್ನದು ಎಂಬುದನ್ನು ಸಾರಿ ಹೇಳುತ್ತಿದೆ.
ಕೊಡಗಿನ ಮೂಲ ನಿವಾಸಿಗಳು ಪ್ರಕೃತಿಯೊಂದಿಗೆ ಬದುಕಿದವರು ಮತ್ತು ಆರಾಧಕರು. ಇವತ್ತಿಗೂ ಮರಕಾಡು, ಬೆಟ್ಟಗುಡ್ಡಗಳನ್ನು ಪ್ರೀತಿಸುತ್ತಾ, ಪೂಜಿಸುತ್ತಾ ಬಂದವರು. ಪ್ರತಿ ಊರಿನಲ್ಲಿ ನಿರ್ದಿಷ್ಟ ಕಾಡನ್ನು ಮೀಸಲಿಟ್ಟು ಅದನ್ನು ದೇವರಕಾಡೆಂದು ಪೂಜಿಸಿಕೊಂಡು ಬರುತ್ತಿದ್ದಾರೆ. ಪ್ರತಿ ಮರಗಿಡ, ಕಲ್ಲುಗಳಲ್ಲಿ ದೇವರನ್ನು ಕಾಣುತ್ತಿದ್ದಾರೆ. ಇದು ಇಲ್ಲಿನವರ ಪರಿಸರ ಪ್ರೀತಿಗೆ ಸಾಕ್ಷಿ. ಇಂತಹ ಕೊಡಗಿನ ಪರಿಸರದ ಮೇಲೆ ಯಾರಿಂದಲೋ ಆದ ಪ್ರಮಾದಕ್ಕೆ ಇಲ್ಲಿನ ಜನರೇ ಕಷ್ಟ, ನಷ್ಟ ಅನುಭವಿಸುತ್ತಿದ್ದಾರೆ. ಇನ್ನಾದರೂ ಜನ ಹೆಚ್ಚಿನ ಬೆಲೆ ಸಿಗುತ್ತದೆ ಎಂಬ ಒಂದೇ ಕಾರಣಕ್ಕೆ ಆಸ್ತಿಯನ್ನೆಲ್ಲ ದೂರದ ಬಂಡವಾಳ ಶಾಹಿಗಳಿಗೆ ನೀಡಿ ಕೈತೊಳೆದುಕೊಳ್ಳದೆ, ಎಚ್ಚೆತ್ತುಕೊಂಡು ತಮ್ಮತನವನ್ನು ಉಳಿಸಿಕೊಳ್ಳಬೇಕಿದೆ. ಇಲ್ಲದೆ ಹೋದರೆ ಭವಿಷ್ಯದಲ್ಲಿ ದೊಡ್ಡಮಟ್ಟದ ಕಂದಾಯ ಕಟ್ಟಬೇಕಾಗಿ ಬರಬಹುದು…