ಕಾನನದ ಹೆಬ್ಬಂಡೆಗಳ ಮೇಲೆ ನಾಟ್ಯವಾಡುವ ಪುಟ್ಟ ಸುಂದರಿ ಹಾಲೇರಿ ಜಲಧಾರೆ… ಇದರ ಸನಿಹಕ್ಕೆ ಹೋಗುವುದು ಹೇಗೆ?

ಬೇಸಿಗೆಯಲ್ಲಿ ಬಿಸಿಲಿನ ಝಳಕ್ಕೆ ಹೆದರಿ ಹೆಬ್ಬಂಡೆಗಳಲ್ಲಿ ಲೀನವಾಗಿ ಹೋಗಿದ್ದ ಜಲಧಾರೆಗಳು ಇದೀಗ ಸುರಿಯುತ್ತಿರುವ ಮುಂಗಾರು ಮಳೆಗೆ ಜೀವ ತುಂಬಿಕೊಂಡು ಧುಮ್ಮಿಕ್ಕಲು ಆರಂಭಿಸಿವೆ.. ಕಾನಗಳ ನಡುವಿನ ಪ್ರಶಾಂತೆಯನ್ನು ಸೀಳಿಕೊಂಡು ಭೋರ್ಗರೆಯುತ್ತಿವೆ. ಇಂತಹ ಜಲಪಾತಗಳ ನಡುವೆ ಮಡಿಕೇರಿಗೆ ಸಮೀಪದ ಹಾಲೇರಿ ಜಲಧಾರೆ ಗಮನಸೆಳೆಯುತ್ತದೆ. ಇದು ಜನಜಂಗುಳಿಯಿಂದ ದೂರವಿದ್ದು, ಕಾಫಿ ತೋಟಗಳ ನಡುವೆ ತನ್ನಪಾಡಿಗೆ ತಾನು ಎಂಬಂತೆ ಧುಮ್ಮಿಕ್ಕುತ್ತಾ ತನ್ನನ್ನು ಅರಸಿ ಬಂದವರಿಗೆ ಚೆಲುವನ್ನು ತೆರೆದಿಡುತ್ತಿದೆ…
ಹಾಗೆನೋಡಿದರೆ ಈ ಬಾರಿಯ ಮುಂಗಾರು ಮಳೆ ಹೊಸ ಭಾಷ್ಯವನ್ನೇ ಬರೆದಿದೆ. ಮುಂಗಾರು ಆರಂಭಕ್ಕೆ ಮುನ್ನವೇ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಅಬ್ಬರಿಸಿ, ಬೊಬ್ಬಿರಿದಿದೆ. ಹೀಗಾಗಿ ಸೊರಗಿ ಹೋಗಿದ್ದ ಜಲಧಾರೆಗಳೆಲ್ಲವೂ ಮೈಕೈ ತುಂಬಿಕೊಂಡ ಷೋಢಷಿಯರಂತೆ ಕಂಗೊಳಿಸುತ್ತಾ ಹೆಬ್ಬಂಡೆಗಳ ಮೇಲೆ ನರ್ತಿಸಲಾರಂಭಿಸಿವೆ. ಇವುಗಳ ಚೆಲುವನ್ನು ಅರಸಿ ಹೋಗುವವರಿಗೆ ಹಬ್ಬವೇ.. ಇದೀಗ ಕೊಡಗಿಗೆ ಸುತ್ತು ಹೊಡೆದರೆ ಬೆಟ್ಟಗುಡ್ಡ, ತೋಟಗಳ, ರಸ್ತೆ ಬದಿಯ ಹೀಗೆ ಹಲವೆಡೆಗಳಲ್ಲಿರುವ ಜಲಧಾರೆಗಳು ಧುಮ್ಮಿಕ್ಕಲಾರಂಭಿಸಿವೆ. ಇವುಗಳ ನೈಜ ಸೌಂದರ್ಯವನ್ನು ಆಸ್ವಾದಿಸುವುದೇ ಒಂಥರಾ ಮಜಾ…
ಸಾಮಾನ್ಯವಾಗಿ ಬೇಸಿಗೆಯ ಬಿಸಿಲಿನ ಝಳಕ್ಕೆ ಬೆಂದ ಪ್ರಕೃತಿ ಮಳೆ ಸುರಿದಾಗ ಪುಳಕಗೊಳ್ಳುವುದು ಸಾಮಾನ್ಯ. ಇಂತಹ ಸಮಯದಲ್ಲಿ ಕಾಡಿನ ನಡುವಿನ ಹಸಿರನ್ನೊದ್ದ ಗಿಡ ಮರಗಳ ನಡುವಿನ ಜಲಧಾರೆಯನ್ನರಸುತ್ತಾ ತೆರಳುವುದು ನಿಸರ್ಗ ಪ್ರೇಮಿಗಳಿಗೆ ಖುಷಿಯೋ ಖುಷಿ.. ಒಂದೆಡೆ ಮಳೆ ನೀರಹನಿಯಲ್ಲಿ ತೊಯ್ದು ನಿಸರ್ಗದ ನಡುವಿನ ಹಾಡಿಗೆ ತಲೆದೂಗುತ್ತಾ ಒಂದೊಂದೇ ಹೆಜ್ಜೆ ಹಾಕುತ್ತಾ ಜಲಧಾರೆಗಳನ್ನು ಅರಸಿಕೊಂಡು ಹೋಗುವುದು ಒಂದು ಮರೆಯಲಾರದ ಅನುಭವವೇ…
ಕೊಡಗಿನಲ್ಲಿ ಸೃಷ್ಠಿಯಾಗಿರುವ ಜಲಧಾರೆಗಳ ಪೈಕಿ ಹೆಚ್ಚಿನವು ಅಲ್ಪಾಯುಷಿಗಳು.. ಇವು ಮಳೆಗಾಲದಲ್ಲಿ ಧಾರಾಕಾರ ಮಳೆ ಸುರಿದಾಗ ಮಾತ್ರ ಸೃಷ್ಠಿಯಾಗುವ ಜಲಧಾರೆಗಳು. ಕಾಡಿನ ನಡುವೆ, ಬೆಟ್ಟದ ಮೇಲೆ ಹೀಗೆ ಎಲ್ಲೆಲ್ಲೋ ಇರುವುದರಿಂದಾಗಿ ಅವುಗಳತ್ತ ಹೆಜ್ಜೆ ಹಾಕಿದರಷ್ಟೆ ಅವುಗಳ ಸೊಬಗು ಸವಿಯಲು ಸಾಧ್ಯ. ಇಂತಹ ಜಲಧಾರೆಗಳ ನಡುವೆ ಮಡಿಕೇರಿಗೆ ಸುಮಾರು 10ಕಿ.ಮೀ ದೂರದಲ್ಲಿರುವ ಹಾಲೇರಿ ಜಲಧಾರೆ ಸ್ಥಾನಪಡೆಯುತ್ತದೆ. ಇದನ್ನರಸಿ ಹೋಗುವವರ ಸಂಖ್ಯೆ ದೊಡ್ಡಮಟ್ಟದಲ್ಲಿದೆ.
ಮಡಿಕೇರಿ-ಮೈಸೂರು ಹೆದ್ದಾರಿಯಲ್ಲಿರುವ ಸುಮಾರು ಒಂಬತ್ತು ಕಿ.ಮೀ. ದೂರದಲ್ಲಿರುವ ಕೆದಕಲ್ನಿಂದ ಎಡಕ್ಕೆ ಹಾಲೇರಿಗೆ ತೆರಳುವ ರಸ್ತೆಯಲ್ಲಿ ಒಂದು ಕಿ.ಮೀ.ನಷ್ಟು ತೆರಳಿ ಅಲ್ಲಿಂದ ಮೋದೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯತ್ತ ತಿರುಗಿದರೆ ಆ ಹಾದಿ ಹಾಲೇರಿ ಜಲಧಾರೆಯತ್ತ ಕರೆದೊಯ್ಯುತ್ತದೆ. ಈ ಜಲಧಾರೆ ಸುಮಾರು ಐವತ್ತು ಅಡಿ ಎತ್ತರದಿಂದ ಕಲ್ಲುಬಂಡೆಗಳ ಮೇಲಿನಿಂದ ಧುಮುಕುತ್ತಾ ತನ್ನ ಸೌಂದರ್ಯವನ್ನು ಪ್ರದರ್ಶಿಸುತ್ತದೆ. ಮೇಲ್ನೋಟಕ್ಕೆ ಅದರಲ್ಲೂ ಬೇರೆ ಜಲಧಾರೆಗಳಿಗೆ ಹೋಲಿಸಿದರೆ ಇದು ಪುಟ್ಟದಾದರೂ ಒಂಥರಾ ಅದ್ಭುತವಾಗಿದೆ.
ಕಾಫಿ ತೋಟದ ನಡುವೆ ಹೆಬ್ಬಂಡೆ ಮೇಲಿನಿಂದ ಎರಡು ಹಂತದಲ್ಲಿ ಧುಮುಕುವ ಜಲಧಾರೆ. ಮೊದಲಿಗೆ ಐವತ್ತು ಅಡಿ ಎತ್ತರದಿಂದ ರಭಸದಿಂದ ಧುಮುಕುತ್ತದೆಯಾದರೂ ಬಳಿಕ ಹತ್ತು ಅಡಿ ಎತ್ತರದಿಂದ ಚಿಕ್ಕಾತಿ ಚಿಕ್ಕ ಜಲಧಾರೆಗಳಾಗಿ ಹರಿದು ಹೋಗುತ್ತದೆ. ಮೊದಲೆಲ್ಲ ಸಮೀಪದ ತೋಟಕ್ಕೆ ಕೆಲಸಕ್ಕೆ ಬರುವ ಕಾರ್ಮಿಕರು ಹೊರತುಪಡಿಸಿದರೆ ಹೆಚ್ಚಿನವರು ಯಾರೂ ಇದರತ್ತ ಸುಳಿಯುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ. ಸುತ್ತಮುತ್ತಲಲ್ಲಿ ಇರುವ ಹೋಂಸ್ಟೇ ಗಳಲ್ಲಿ ವಾಸ್ತವ್ಯ ಹೂಡುವ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಪ್ರವಾಸಿಗರು ಕೂಡ ಈ ಜಲಧಾರೆಯನ್ನು ಹುಡುಕಿಕೊಂಡು ಬರುತ್ತಾರೆ. ಹೀಗಾಗಿ ಇದು ತನ್ನ ಖ್ಯಾತಿಯನ್ನು ಇಮ್ಮಡಿಸುತ್ತಾ ಸಾಗುತ್ತಿದೆ.
ಈ ಜಲಧಾರೆಯ ವಿಶೇಷವೇನೆಂದರೆ ಮಳೆಗಾಲದಲ್ಲಿ ಭೋರ್ಗರೆದು ಧುಮ್ಮಿಕ್ಕಿ ನಂತರದ ದಿನಗಳಲ್ಲಿ ಅಬ್ಬರವನ್ನು ಕಡಿಮೆ ಮಾಡಿಕೊಂಡು ಬೇಸಿಗೆಯ ದಿನಗಳು ಬರುತ್ತಿದ್ದಂತೆಯೇ ಹೆಬ್ಬಂಡೆಯಲ್ಲೇ ಲೀನವಾಗಿ ಬಿಡುತ್ತದೆ. ಹೀಗಾಗಿ ಇದು ಮಳೆಗಾಲದ ಜಲಧಾರೆಯಾಗಿ ಗಮನಸೆಳೆಯುತ್ತದೆ. ಹೀಗಾಗಿ ಮಳೆಗಾಲದ ದಿನಗಳಲ್ಲಿಯೇ ಇದನ್ನು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಕಂಡು ಬರುತ್ತದೆ. ಮಾನ್ಸೂನ್ ಟ್ರಿಪ್ ಗೆ ಈ ಜಲಧಾರೆ ಹೇಳಿ ಮಾಡಿಸಿದ್ದಾಗಿದೆ.
B.M.Lavakumar