LatestLife style

ಕಾಯಕವೇ ಕೈಲಾಸ…. ನಾವು ನಮಗಾಗಿ ಕೆಲಸ ಮಾಡುವುದನ್ನು ಕಲಿಯೋಣ… ಕೆಲಸ ಕೊಟ್ಟವರು  ನಾಳೆ ಕಿತ್ತುಕೊಳ್ಳಬಹುದು!

ಕಾಯಕವೇ ಕೈಲಾಸವೆಂದು ಬಸವಣ್ಣನವರು ಹೇಳಿದ್ದಾರೆ. ಹೀಗಾಗಿ ಏನಾದರೊಂದು ಕೆಲಸಗಳನ್ನು ಬದುಕಿನುದ್ದಕ್ಕೂ ಮಾಡಲೇ ಬೇಕಾಗುತ್ತದೆ. ಆದರೆ ಇಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಾದ ವಿಚಾರವೇನೆಂದರೆ? ನಾವು ನಮ್ಮ ಜೀವನುದ್ದಕ್ಕೂ ಬೇರೆಯವರಿಗಾಗಿ ಕೆಲಸ ಮಾಡುತ್ತಿರುವುತ್ತೇವೆ. ಮತ್ತು ಅವರು ಆ ಕೆಲಸಕ್ಕಾಗಿ ಹಣವನ್ನು ನೀಡುತ್ತಾರೆ. ಹೀಗೆ ಸಿಗುವ ಹಣವನ್ನು ವೇತನವೆಂದೋ.. ಕಮೀಷನ್ ಎಂದೋ.. ವಿವಿಧ ರೀತಿಗಳಲ್ಲಿ ಸ್ವೀಕರಿಸುತ್ತೇವೆ. ಅಲ್ಲಿಗೆ ಅದು ಮುಗಿದು ಹೋಗುತ್ತದೆ.

ನಮ್ಮ ಜೀವನದುದ್ದಕ್ಕೂ ನಮ್ಮ ಬಾಸ್ ಗಾಗಿ, ಸಂಸ್ಥೆಗಾಗಿ, ನಮ್ಮ ಪ್ರತಿಭೆ, ಯೌವನ, ಸಮಯ ಮೊದಲಾದವುಗಳನ್ನು ಮೀಸಲಿಟ್ಟು ಬಿಡುತ್ತೇವೆ. ಆದರೆ ನಾವು ಯಾವತ್ತಾದರೂ ನಮಗಾಗಿ ಕೆಲಸ ಮಾಡಿದ್ದೇವೆಯೇ? ಹೀಗೊಮ್ಮೆ ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೆ ಖಂಡಿತಾ ‘ಇಲ್ಲ’ ಎಂಬ ಉತ್ತರವೇ ಬರುತ್ತದೆ. ನಾವು ಬೇರೆಯವರಿಗಾಗಿ ಮಾಡುವ ಕೆಲಸ ನಮಗೆ ಹಣವನ್ನು ತಂದುಕೊಡಬಹುದು. ಆದರೆ ನಾವು ನಮಗಾಗಿ ಮಾಡುವ ಕೆಲಸ ಆತ್ಮತೃಪ್ತಿ ನೀಡುತ್ತದೆ. ನಮ್ಮನ್ನು ಖಾಲಿ ಕೈನಲ್ಲಿ ಕೂರಿಸದೆ ಕೈತುಂಬಾ ಕೆಲಸ ಕೊಡುವ ತಾಕತ್ತು ಅದಕ್ಕಿದೆ.

ನೀವು ಬೇರೆಯವರ ಜಮೀನಿನಲ್ಲಿ ಗಿಡ ನೆಟ್ಟು ಬಂದರೆ ಅದಕ್ಕೆ ಕೂಲಿ ಸಿಗಬಹುದು.. ಆದರೆ ಅದೇ ಗಿಡವನ್ನು ನಿಮ್ಮದೇ ಜಮೀನಿನಲ್ಲಿ ಅಥವಾ ಹಿತ್ತಲಲ್ಲಿ ನೆಟ್ಟರೆ ಅದರಿಂದ ಜೀವನಪೂರ್ತಿ ನೆರೆಳು ಮತ್ತು ಹಣ್ಣು ಸಿಗುತ್ತದೆ. ಇದೊಂದು ಉದಾಹರಣೆ ಅಷ್ಟೇ… ಇದು ಬರೀ ಗಿಡದ ವಿಚಾರವಲ್ಲ. ಪ್ರತಿಯೊಂದು ವಿಷಯದಲ್ಲಿಯೂ ನಾವು ನಮಗಾಗಿ ಕೆಲಸ ಮಾಡುವುದನ್ನು ಕಲಿಯಬೇಕು. ಅದು ಇವತ್ತಲ್ಲ ನಾಳೆ ನಮ್ಮನ್ನು ಕಾಪಾಡುವುದರಲ್ಲಿ ಎರಡು ಮಾತಿಲ್ಲ.

ಇವತ್ತು ಬಹಳಷ್ಟು ಸಣ್ಣಪುಟ್ಟ ಕೆಲಸವಾದರೂ ಅದನ್ನು ನಿಯತ್ತಿನಿಂದ ಮಾಡುತ್ತಾ  ಅದಕ್ಕೆ ಸಿಗುವ ಅಷ್ಟೋ ಇಷ್ಟೋ ಆದಾಯದಲ್ಲಿ ಜೀವನ ನಿರ್ವಹಣೆ ಮಾಡಿಕೊಂಡು ಹೋಗುವ ದೊಡ್ಡವರ್ಗವಿದೆ. ಅವರು ಅವರ ಶಕ್ತಿ ಸಾಮರ್ಥ್ಯಕ್ಕೆ ಕಡಿವಾಣ ಹಾಕಿಕೊಂಡು ತನ್ನ ಬದುಕು ಇಷ್ಟೇ.. ಇದರಾಚೆಗೆ ನನ್ನಿಂದ ಸಾಧ್ಯವಿಲ್ಲ ಎಂಬ ಲಕ್ಷ್ಮಣ ರೇಖೆಯನ್ನು ಎಳೆದುಕೊಂಡಿರುತ್ತಾರೆ. ಹೀಗಾಗಿಯೇ ಅವರು ಆ ರೇಖೆ ದಾಟಿ ಹೋಗುವ ಪ್ರಯತ್ನವನ್ನೇ ಮಾಡುವುದಿಲ್ಲ. ಅದನ್ನು ತಪ್ಪು ಎನ್ನಲಾಗುವುದಿಲ್ಲ. ಆದರೆ ನಮ್ಮಲ್ಲಿ ಏನೋ ಒಂದು ಸಾಧಿಸಬೇಕೆಂಬ ತುಡಿತವಿದ್ದಾಗ ಅದಕ್ಕೆ ನೀರೆರೆದು ಪೋಷಿಸದೆ  ನಮಗೆ ನಾವೇ ಸ್ವನಿಯಂತ್ರಣ ಹೇರಿಕೊಳ್ಳುವುದೆಷ್ಟು ಸರಿ ಎಂಬುದೇ ಪ್ರಶ್ನೆಯಾಗುತ್ತದೆ.

ಆಧ್ಯಾತ್ಮದಲ್ಲಿ ವೃತ್ತಿ ಕುರಿತಂತೆ ಬಹಳಷ್ಟು ವ್ಯಾಖ್ಯಾನಗಳಿರುವುದನ್ನು ನಾವು ಕಾಣಬಹುದಾಗಿದೆ. ಹಿಂದಿನ ಕಾಲಕ್ಕೂ ಇವತ್ತಿನ ಕಾಲಕ್ಕೂ ಮಾಡುವ ಕೆಲಸಗಳಲ್ಲಿ ವ್ಯತ್ಯಾಸಗಳಿರಬಹುದು. ಅಷ್ಟೇ ಅಲ್ಲ ಅದು ತಂದು ಕೊಡುವ ಆದಾಯವೂ ಹೆಚ್ಚಿರಬಹುದು. ಹಿಂದಿನ ಕಾಲದಲ್ಲಿ ಯಾವುದೇ ಫಲಾಪೇಕ್ಷೆಗಳಿಲ್ಲದೆ ಕೆಲಸಗಳನ್ನು ಮಾಡುತ್ತಿದ್ದ ದೊಡ್ಡ ವರ್ಗವೇ ಇತ್ತು. ಅಂತಹವರ ಸಂಖ್ಯೆ ಕಡಿಮೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಕೆಲಸಕ್ಕೆ ಪ್ರತಿಫಲಗಳನ್ನು ಅಪೇಕ್ಷಿಸುತ್ತಾರೆ. ಅದು ಅನಿವಾರ್ಯವಾಗಿದೆ. ಆದರೆ ಮಾಡುವ ಕೆಲಸದಲ್ಲಿ ನಿಯತ್ತು, ಪ್ರಾಮಾಣಿಕತೆ, ವೃತ್ತಿಪರತೆ ಇಲ್ಲದೆ ಹೋದರೆ ನಾವೇನೇ ಕೆಲಸ ಮಾಡಿದರೂ ಅದು ನಮ್ಮನ್ನು ಕೈಹಿಡಿಯಲ್ಲ ಎಂಬುದು ಅಷ್ಟೇ ಸತ್ಯ.

ಯಾರು ತಮ್ಮ ವೃತ್ತಿಯನ್ನು ಗೌರವಿಸುತ್ತಾ ಇರುವುದರಲ್ಲಿ ತೃಪ್ತಿ ಪಡುತ್ತಾರೋ ಅವರು ಸುಖಿಗಳಾಗಿರುತ್ತಾರೆ. ಅಧ್ಯಾತ್ಮದಲ್ಲಿ ನಾವು ಏನನ್ನು ಮಾಡುತ್ತೇವೆಯೋ ಅದನ್ನು “ಕರ್ತವ್ಯ” ಎಂಬಂತೆ ಭಾವಿಸಿ ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇ ಆದರೆ ಅದರಿಂದ ಒಳ್ಳೆಯ ಪ್ರತಿಫಲ ಸಿಗುತ್ತದೆ ಎಂದು  ಹೇಳಲಾಗಿದೆ. ಸ್ವಾಮಿ ವಿವೇಕಾನಂದರು ಕರ್ಮಯೋಗದಲ್ಲಿ ಕರ್ತವ್ಯದ ಬಗ್ಗೆ ಒಂದಷ್ಟು ಹೇಳಿದ್ದಾರೆ. ಕರ್ತವ್ಯ ಎಂದರೆ ಏನು? ಎಂಬುದನ್ನು ನೋಡುತ್ತಾ ಹೋದರೆ ನಾವು ಮಾಡುವ ಕೆಲಸವೇ ಕರ್ತವ್ಯವಾಗಿದೆ. ಕರ್ತವ್ಯವನ್ನು ವ್ಯಕ್ತಿ ನಿಷ್ಠ ದೃಷ್ಟಿಯಿಂದ ನೋಡಿದ್ದೇ ಆದರೆ ಅದು ದೈವೋನ್ಮುಖವಾಗಿ ನಮ್ಮನ್ನು ಮುಂದುವರೆಸುವ ಕಾರ್ಯವಾಗಲಿದೆ.

ನಾವು ಮಾಡುವ ಕೆಲಸಕ್ಕೆ ಇಂತಿಷ್ಟು ಎಂದು ಕೂಲಿಯನ್ನು ಮಾಲೀಕರು ನೀಡಬಹುದು. ಆದರೆ ಅದರಾಚೆಗೂ ಅದರಲ್ಲಿ ಸತ್ಕರ್ಮ ಸತ್ ಕ್ರಿಯೆ. ಇದ್ದೇ ಇದೆ. ಹೀಗಾಗಿಯೇ ಕೆಲಸವನ್ನು ಪ್ರಾಮಾಣಿಕವಾಗಿ  ಮಾಡುವುದು ನಮ್ಮ ಕರ್ತವ್ಯವಾಗುತ್ತದೆ. ಇದೆಲ್ಲದರ ನಡುವೆಯೂ ನಮ್ಮಲ್ಲೊಂದು ಅಂದರೆ ನಮ್ಮ ಸ್ವಭಾವದಲ್ಲೊಂದು ಅಪಾಯವಿದೆ. ಅದೇನೆಂದರೆ ತನ್ನನ್ನು ತಾನು ಪರೀಕ್ಷಿಸಿಕೊಳ್ಳದಿರುವುದು. ಮೊದಲು ನಾವು ಮಾಡಿದ ಕಾರ್ಯದ ಬಗ್ಗೆ ಪರೀಕ್ಷಿಸಿಕೊಳ್ಳಬೇಕು. ಕರ್ತವ್ಯವನ್ನು ಯಶಸ್ವಿಯಾಗಿ ನೆರವೇರಿಸಿದ್ದೇನೆಯೇ ಎಂಬುವುದನ್ನು ಅರಿತುಕೊಳ್ಳಬೇಕು.  ಹೀಗಾದಾಗ ತಕ್ಷಣಕ್ಕೆ ಸಾಧಕ-ಬಾಧಕಗಳ ಅರಿವಾಗುತ್ತದೆ.

ಇದರ ಜತೆಗೆ ಕೆಳಮಟ್ಟದ ಕೆಲಸ ಮಾಡುವುದರಿಂದ ವ್ಯಕ್ತಿ ಕೀಳಾಗುವುದಿಲ್ಲ. ವ್ಯಕ್ತಿಯು ಮಾಡುವ ಕರ್ತವ್ಯದ ಸ್ವಭಾವದ ದೃಷ್ಟಿಯಿಂದ ಅವನ ಯೋಗ್ಯತೆಯನ್ನು ನಿರ್ಣಯಿಸದೆ ಅದನ್ನು ಆತನು ಮಾಡುವ ರೀತಿಯಿಂದಲೂ, ಯಾವ ಮನೋಭಾವದಿಂದ ಮಾಡುತ್ತಾನೆ ಎಂಬುವುದರಿಂದಲೂ ನಿರ್ಣಯಿಸಬೇಕು. ಕರ್ತವ್ಯ ತತ್ವವು ಅದು ನೈತಿಕ ರೂಪದಲ್ಲಿರಲಿ ಅಥವಾ ಪ್ರೀತಿಯ ರೂಪದಲ್ಲಿರಲಿ ಎಲ್ಲ ಯೋಗಗಳಿಗೆ ಸಮಾನಾಗಿರುತ್ತದೆ.

ಇದರ ಉದ್ದೇಶ ಅಲ್ಪಾತ್ಮವನ್ನು ನಿಗ್ರಹಿಸಿ, ಉನ್ನತ ಆತ್ಮವು ಬೆಳಗುವಂತೆ ಮಾಡುವುದಾಗಿದೆ. ಅಷ್ಟೇ ಅಲ್ಲದೆ ಕೆಳಮಟ್ಟದಲ್ಲಿ ನಮ್ಮ ಶಕ್ತಿ ಪೋಲಾಗದಂತೆ ನೋಡಿಕೊಂಡು ಅದು ಉನ್ನತ ಸ್ತರದಲ್ಲಿ ವ್ಯಕ್ತವಾಗುವಂತೆ ಮಾಡಬೇಕು. ಇದು ಸಿದ್ದಿಸಬೇಕಾದರೆ ನಮ್ಮಲ್ಲಿ ತುಚ್ಛಾಭಿಲಾಷೆಗಳು ಮೇಲೇಳದಂತೆ ತಡೆಯಬೇಕು. ಇದು ಕರ್ತವ್ಯ ಪಾಲನೆಗೆ ಅತ್ಯವಶ್ಯಕ.

ನಾವು ಶ್ರಮಪಟ್ಟು ದುಡಿಯದ ಹೊರತು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ನಾವೇನು ಮಾಡುತ್ತಿದ್ದೇವೆಯೋ ಅದನ್ನು ಪ್ರಾಮಾಣಿಕವಾಗಿ ಮಾಡಬೇಕು. ಮೋಸ ವಂಚನೆ ತಾತ್ಕಾಲಿಕವಾಗಿ ಎಲ್ಲವನ್ನು ತಂದು ನಮ್ಮ ಮುಂದೆ ಗುಡ್ಡೆ ಹಾಕಬಹುದು. ಆದರೆ ಅದಕ್ಕೆ ತಕ್ಕ ಸಮಯದಲ್ಲಿ ಕಂದಾಯವನ್ನು ಅದು ಕೇಳಿಯೇ ಕೇಳುತ್ತದೆ. ಇದೆಲ್ಲದರ ನಡುವೆ ಹಣಕ್ಕಾಗಿ ಕತ್ತೆಯಂತೆ ದುಡಿಯುವ ನೀವು ನಿಮಗಾಗಿ ದುಡಿಯುವುದನ್ನು ಕಲಿಯಬೇಕಿದೆ. ಹಾಗೆ ಆಗಬೇಕಾದರೆ ಸ್ವಂತ ಉದ್ಯೋಗದ ಅಗತ್ಯವಿದೆ.

ಸಾಧ್ಯವಾದಷ್ಟು ಸ್ವಂತ ಉದ್ಯೋಗಿಯಾಗಿ ಬದುಕುವುದರತ್ತ ಚಿಂತನೆ ಮಾಡಿ.. ಹಾಗೊಂದು ವೇಳೆ ನೀವು ಸ್ವಂತ ಕೆಲಸ ಶುರು ಮಾಡಿದ್ದೀರಾ ಎನ್ನುವುದಾದರೆ ನೀವು ನಿಮಗಾಗಿ ಕೆಲಸ ಮಾಡೋ ಸಮಯ ಬಂದಿದೆ ಎಂದರ್ಥ… ನೆನಪಿರಲಿ ನಿಮಗಾಗಿ ನೀವು ಮಾಡುವ ಕೆಲಸಗಳು ಕಷ್ಟದಲ್ಲಿ ನಿಮ್ಮ ಕೈಹಿಡಿಯುತ್ತದೆ. ಏಕೆಂದರೆ ನಿಮಗೆ ಕೆಲಸ ಕೊಟ್ಟವರು ನಿಮ್ಮನ್ನು ಯಾವಾಗ ಬೇಕಾದರೂ ತೆಗೆಯಬಹುದು… ಆದರೆ ನೀವೇ ಸೃಷ್ಟಿಸಿಕೊಂಡ ಕೆಲಸಗಳು ನಿಮ್ಮ ಕೈಗೆ ಯಾವತ್ತೂ ಕೆಲಸ ಕೊಡದೆ ತೆಪ್ಪಗೆ ಕೂರಿಸಲಾರವು…

 

-B.M.Lavakumar

admin
the authoradmin

Leave a Reply