ನಾವು ಸೇವಿಸುವ ಆಹಾರಗಳು ಕೇವಲ ಆರೋಗ್ಯವನ್ನಷ್ಟೇ ಕಾಪಾಡುವುದಿಲ್ಲ. ಬದಲಿಗೆ ನಮ್ಮಲ್ಲಿ ಒಳ್ಳೆಯ ಗುಣಗಳು ಬೆಳೆಯಲು ಸಹಾಯ ಮಾಡುತ್ತವೆ ಎನ್ನುವುದು ಅಧ್ಯಾತ್ಮಿಕ ಚಿಂತಕರು ಹೇಳುತ್ತಾರೆ. ಇದು ನಿಜವೂ ಹೌದು ಎಂಬುದಕ್ಕೆ ಹಲವು ನಿದರ್ಶನಗಳನ್ನು ಕೂಡ ಅವರು ನೀಡುತ್ತಾರೆ. ಇವತ್ತಿನ ಪರಿಸ್ಥಿತಿಯಲ್ಲಿ ನಾವು ಸೇವಿಸುವ ಬಹುತೇಕ ಆಹಾರ ಪದಾರ್ಥಗಳು ರಾಸಾಯನಿಕದಿಂದ ಕೂಡಿವೆ. ಜೊತೆಗೆ ಕಲಬೆರಕೆಯೂ ಆಗಿವೆ. ಇಂತಹ ಆಹಾರಗಳಿಂದ ಆರೋಗ್ಯವನ್ನು ನಿರೀಕ್ಷಿಸುವುದು ಕಷ್ಟವಾಗುತ್ತಿದೆ.
ನಾವು ಸೇವಿಸುವ ಆಹಾರವು ಸತ್ವ, ರಜ, ತಮೋ ಎಂಬ ಗುಣಗಳಿಂದ ಕೂಡಿದ್ದು ಇದರಿಂದಾಗಿ ನಾವು ಯಾವ ರೀತಿಯ ಆಹಾರ ಸೇವಿಸುತ್ತೇವೆಯೋ ಅದೇ ರೀತಿಯಲ್ಲಿ ವರ್ತಿಸುತ್ತೇವೆ. ಅದಕ್ಕಿಂತ ಹೆಚ್ಚಾಗಿ ಆಹಾರಕ್ಕೆ ಸಂಬಂಧಿಸಿದ ಗುಣಗಳು ನಮ್ಮ ಮೇಲೆ ಪರಿಣಾಮ ಬೀರುತ್ತಿವೆ. ಇವುಗಳ ಬಗ್ಗೆ ಅಧ್ಯಾತ್ಮಿಕ ಚಿಂತಕರು ವ್ಯಾಖ್ಯಾನಿಸಿದ್ದಾರೆ. ಪ್ರತಿಯೊಬ್ಬರೂ ನಮ್ಮ ಸುತ್ತಮುತ್ತ ಇರುವವರಿಂದ ಸದ್ಗುಣಗಳನ್ನೇ ಬಯಸುತ್ತಾರೆ. ಜತೆಗೆ ನಾವು ಸದ್ಗುಣಗಳನ್ನು ಬೆಳೆಸಿಕೊಂಡರೆ ಸಮಾಜದಲ್ಲಿ ಯಾರಿಗೂ ತೊಂದರೆಯಾಗದಂತೆ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತದೆ.
ಈ ಸದ್ಗುಣಗಳು ನಮ್ಮಲ್ಲಿ ಬರಬೇಕಾದರೆ ನಾವು ವಾಸಿಸುವ ವಾತಾವರಣ, ಕೆಲಸ ಮಾಡುವ ಸ್ಥಳಗಳು, ಸಜ್ಜನರ ಒಡನಾಟಗಳ ಜತೆಗೆ ಒಂದೊಳ್ಳೆಯ ಆಹಾರಗಳನ್ನು ಸೇವಿಸುವುದು ಕೂಡ ಮುಖ್ಯವಾಗುತ್ತವೆ. ಆಧ್ಯಾತ್ಮಿಕ ಚಿಂತಕರ ಪ್ರಕಾರ ಸತ್ವ, ರಜ ಮತ್ತು ತಮ ಈ ಮೂರು ಗುಣಗಳು ನಮ್ಮ ದೇಹ ಮಾತ್ರವಲ್ಲ ಮನಸ್ಸಿನ ಮೇಲೆ ಬೇರೆಯದ್ದೇ ಆದ ಪರಿಣಾಮಗಳನ್ನು ನೀಡುತ್ತದೆ. ಹೀಗಾಗಿ ಸದ್ಗುಣ ಬೆಳೆಯಬೇಕಾದರೆ ನಾವು ಸಾತ್ವಿಕ ಆಹಾರವನ್ನು ಸೇವಿಸುವುದು ಒಳ್ಳೆಯದಂತೆ. ಸತ್ವ ಗುಣವು ನೀರಿನ ಹಾಗೆ ನಿರ್ಮಲವಾದದರಿಂದ ಅದು ನಮ್ಮನ್ನು ಕಾಪಾಡುತ್ತದೆ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಲು ಸಹಕಾರಿಯಾಗುತ್ತದೆ.
ಇನ್ನು ರಜೋ ಹಾಗೂ ತಮೋ ಗುಣಗಳನ್ನು ಹೊಂದಿರುವ ಆಹಾರ ಸೇವಿಸುವುದರಿಂದ ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲಾಗದೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೀಗಾಗಿ ನಮ್ಮಲ್ಲಿರುವ ತಮೋ ಹಾಗೂ ರಜ ಗುಣವನ್ನು ತ್ಯಜಿಸಬೇಕಾದರೆ ಮೊದಲಿಗೆ ಸತ್ವ ಗುಣಗಳನ್ನು ಬೆಳೆಸುವ ವಿಧಾನ ಹಾಗೂ ನಡವಳಿಕೆಗಳನ್ನು ಬೆಳೆಸಿಕೊಳ್ಳಬೇಕು. ಅದು ಹೇಗೆಂದರೆ ನಾವು ಸದಾ ಸಾತ್ವಿಕ ವಸ್ತುಗಳ ಸಹವಾಸದಲ್ಲಿರಬೇಕು. ಆಗ ಆಧ್ಯಾತ್ಮಿಕತೆ ನಮ್ಮಲ್ಲಿ ಎಚ್ಚರಗೊಳ್ಳುತ್ತದೆ. ಇದರಿಂದ ಜ್ಞಾನೋದಯವಾಗುತ್ತದೆ. ಅಷ್ಟೇ ಅಲ್ಲದೆ ಜ್ಞಾನದ ಮೂಲಕ ತನ್ನ ಸ್ವಂತ ಅಸ್ತಿತ್ವದ ಅರಿವು ಮೂಡುತ್ತದೆಯಂತೆ.
ಸತ್ವದ ರಕ್ಷಣೆಯಿಂದಾಗಿ ಮನುಷ್ಯ ಅಪಾಯದಿಂದ ಅಂದರೆ ಕ್ರೋಧ, ಮೋಹ ಇತ್ಯಾದಿ ತಮೋ ಗುಣ ಪ್ರಧಾನವಾದ ಕೇಡುಗಳಿಂದ ಪಾರಾಗುತ್ತಾನೆ. ತಮಸ್ಸು ಮತ್ತು ರಜಸ್ಸು ಗುಣಗಳುಳ್ಳ ಆಹಾರವನ್ನು ಆದಷ್ಟು ಮಟ್ಟಿಗೆ ತ್ಯಜಿಸುತ್ತಾ ಸತ್ವಗುಣ ವೃದ್ದಿ ಮಾಡುವಂತಹ ಆಹಾರವನ್ನು ಸೇವಿಸಬೇಕು. ರಸಯುಕ್ತ, ಸ್ನಿಗ್ದ, ಸ್ಥಿರವಾದ ಹಾಗೂ ಮನಸ್ಸಿಗೆ ಪ್ರಿಯವಾದ ಆಹಾರಗಳು ಸತ್ವಗುಣಗಳನ್ನು, ಅತ್ಯಂತ ಕಹಿ, ಹುಳಿ, ಉಪ್ಪು, ಉಷ್ಣ, ತೀಕ್ಷ್ಣವೂ, ಒಣಕಲು ಆಹಾರವು ರಜಗುಣವನ್ನು ಮತ್ತು ಆರಿದ, ರಸಹೀನ, ದುರ್ಗಂಧಮಯವೂ, ತಂಗಳು, ಕೊಳಕಾದ ಆಹಾರವು ತಮೋ ಗುಣವನ್ನುಂಟು ಮಾಡುತ್ತದೆ. ಅಷ್ಟೇ ಅಲ್ಲದೆ, ಈ ಮೂರು ಗುಣಗಳು ಕೂಡ ಮನಸ್ಸಿನ ಮೇಲೆ ಭಾರಿ ಪರಿಣಾಮವನ್ನುಂಟು ಮಾಡುತ್ತವೆ.
ಉಪನಿಷತ್ತುಗಳಲ್ಲಿ ವಿವರಿಸಿರುವ ಪ್ರಕಾರ ನಾವು ತಿನ್ನುವ ಆಹಾರ ಅರ್ಥಾತ್ ಅನ್ನವು ಮೂರು ವಿಧವಾಗಿ ಪರಿವರ್ತಿತವಾಗುತ್ತದೆಯಂತೆ. ಅದು ಹೇಗೆಂದರೆ ಅನ್ನದಲ್ಲಿ ಯಾವುದು ಸ್ಥೂಲತಮವಾದದ್ದೋ ಅದು ಮಲವಾಗುತ್ತದೆ. ಯಾವುದು ಮಧ್ಯಮ ಧಾತುವೋ ಅದು ಮಾಂಸವಾಗುತ್ತದೆ. ಯಾವುದು ಸೂಕ್ಷ್ಮತಮ ಧಾತುವೋ ಅದು ಮನಸ್ಸಾಗುತ್ತದೆ. ಇದು ಹೇಗೆಂದರೆ ಮೊಸರನ್ನು ಕಡೆದಾಗ ಅದರ ಸೂಕ್ಷ್ಮವಾದ ಭಾಗವು ಮೇಲೆ ತೇಲಿ ಬಂದು ಬೆಣ್ಣೆಯಾಗುತ್ತದೆ.
ನಾವು ಅನ್ನವನ್ನು ತಿಂದಾಗ ಅದರ ಸೂಕ್ಷ್ಮತಮ ಧಾತುವು ಮೇಲೆದ್ದು ಮನಸ್ಸಾಗುತ್ತದೆಯಂತೆ ಹೀಗಾಗಿಯೇ ನಾವು ಸೇವಿಸುವ ಆಹಾರವು ಶುದ್ಧವಾಗಿರಬೇಕು, ಆಹಾರ ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗಿರುತ್ತದೆ. ಶುದ್ಧ ಮನಸ್ಸು ಜಿಗುಪ್ಸೆ, ಭಯ, ಭ್ರಮೆಯನ್ನು ದೂರ ಮಾಡುತ್ತದೆ. ಇದರಿಂದ ಮನಸ್ಸಿನ ಮಾಲಿನ್ಯಗಳು ದೂರವಾಗಿ ನಮ್ಮಲ್ಲಿ ಸದ್ಗುಣಗಳು ಬೆಳೆಯಲು ಸಹಕಾರಿಯಾಗುತ್ತವೆ.
ಒಂದು ಲೋಟ ಕಬ್ಬಿನ ಹಾಲು ಸೇವಿಸಿದ ವ್ಯಕ್ತಿಯ ವರ್ತನೆಗೂ, ಒಂದು ಲೋಟ ಮದ್ಯ ಸೇವಿಸಿದ ವ್ಯಕ್ತಿಯ ವರ್ತನೆಗೂ ಅಜಗಜಾಂತರ ವ್ಯತ್ಯಾಸವಿದೆ. ಕಬ್ಬಿನ ಹಾಲು ಸೇವಿಸಿದ ವ್ಯಕ್ತಿ ದೇಹದ ಜಡತ್ವ ಕಳೆದುಕೊಂಡು ಉಲ್ಲಾಸಿತನಾದರೆ, ಮದ್ಯ ಸೇವಿಸಿದ ವ್ಯಕ್ತಿ ದೇಹದ ಹಾಗೂ ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಾನೆ. ಅಷ್ಟೇ ಅಲ್ಲ ಮನಸ್ಸು ಮಲೀನಗೊಂಡು ದುಷ್ಪ್ರವೃತ್ತಿಗಳು ಆವರಿಸಿಕೊಳ್ಳುತ್ತವೆ. ಈ ಸಂದರ್ಭ ಆ ವ್ಯಕ್ತಿ ಮನಸ್ಸಿನ ಹಿಡಿತ ಕಳೆದುಕೊಂಡು ತಾನೇನು ಮಾಡುತ್ತಿದ್ದೇನೆ ಎಂಬುವುದನ್ನೇ ಮರೆತು ಹಲವು ಆಚಾತುರ್ಯಗಳಿಗೂ ಕಾರಣನಾಗುತ್ತಾನೆ. ಮನಸ್ಸಿನ ಮೇಲೆ ಪರಿಣಾಮ ಉಂಟು ಮಾಡುವ ರಜೋ ಹಾಗೂ ತಮೋ ಗುಣಗಳನ್ನು ಹೊಂದಿರುವ ಆಹಾರವನ್ನು ಆದಷ್ಟು ಮಟ್ಟಿಗೆ ಕಡಿಮೆ ಮಾಡಿ ಸತ್ವ ಗುಣಗಳುಳ್ಳ ಆಹಾರವನ್ನು ಸೇವಿಸಬೇಕು ಆಗ ನಮ್ಮಲ್ಲಿ ಸದ್ಗುಣ ಬೆಳೆಯಲು ಸಾಧ್ಯವಾಗುತ್ತದೆ.
B M Lavakumar