District

ಸರಗೂರು ತಹಶೀಲ್ದಾರ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಇಮೇಲ್: ತಪಾಸಣೆ ಬಳಿಕ ನಿಟ್ಟುಸಿರು ಬಿಟ್ಟ ಜನ

ಸರಗೂರು:ಇಲ್ಲಿನ ತಹಶೀಲ್ದಾರ್ ಕಚೇರಿಗೆ ಸೋಮವಾರ ಬೆಳಗಿನ ಜಾವ ಬಾಂಬ್ ಇಡಲಾಗಿದೆ, ಒಂದು ಗಂಟೆಯೊಳಗೆ ಸ್ಫೋಟವಾಗಲಿದೆ ಎಂಬ ಬೆದರಿಕೆ ಸಂದೇಶ ಇಮೇಲ್ ಮೂಲಕ ಬಂದಿದ್ದು, ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಗೈನಾ ರಮೇಶ್ @ ಔಟ್‌ಲುಕ್ ಡಾಟ್ ಕಾಮ್’ ಎಂಬ ಇಮೇಲ್ ಐಡಿಯಿಂದ ಬೆಳಿಗ್ಗೆ ಸುಮಾರು 5 ಗಂಟೆ ಸಮಯದಲ್ಲಿ ಈ ಸಂದೇಶ ಕಳುಹಿಸಲಾಗಿದ್ದು, ಪ್ರತಿ ದಿನದಂತೆ ಕಚೇರಿ ಸಿಬ್ಬಂದಿ ಇಮೇಲ್‌ಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಸಿಬ್ಬಂದಿ ಮದನ್ ಅವರಿಗೆ ಈ ಸಂದೇಶ ಗಮನಕ್ಕೆ ಬಂದಿದೆ. ತಕ್ಷಣ ಈ ವಿಷಯವನ್ನು ಅವರು ಶಿರಸ್ತೇದಾರ್ ಮನೋಹರ್ ಅವರಿಗೆ ತಿಳಿಸಿದ್ದು, ಬಳಿಕ ತಹಶೀಲ್ದಾರ್ ಮೋಹನ್ ಕುಮಾರಿ ಅವರ ಗಮನಕ್ಕೆ ತರಲಾಗಿದೆ.

ತಹಶೀಲ್ದಾರ್ ಅವರು ಕೂಡಲೇ ಈ ಬಗ್ಗೆ ಸರಗೂರು ಪೊಲೀಸ್ ಠಾಣೆಗೆ, ಹಾಗೆಯೇ ಉನ್ನತಾಧಿಕಾರಿಗಳಾದ ಎಸಿ, ಡಿಸಿ ಅವರಿಗೂ ಮಾಹಿತಿ ನೀಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ತಕ್ಷಣ ಸ್ಥಳಕ್ಕೆ ಧಾವಿಸಿ ಭದ್ರತಾ ಕ್ರಮಗಳನ್ನು ಕೈಗೊಂಡಿತು.

ಸರಗೂರು ಆರಕ್ಷಕ ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್, ಆರಕ್ಷಕ ಉಪನಿರೀಕ್ಷಕ ಕಿರಣ್, ಗೋಪಾಲ್, ಎಎಸ್‌ಐ ಕೃಷ್ಣಕುಮಾರ್ ಸೇರಿದಂತೆ ಸಿಬ್ಬಂದಿಗಳಾದ ಇಮ್ರಾನ್, ಆನಂದ್, ಕೃಷ್ಣಯ್ಯ, ಸುನಿಲ್ ಹಾಗೂ ಇತರೆ ಪೊಲೀಸ್ ಪಡೆಗಳು ಸ್ಥಳದಲ್ಲಿ ಹೆಚ್ಚಿನ ಬಂದೋಬಸ್ತ್ ವಹಿಸಿದ್ದರು.

ಇದಲ್ಲದೆ ಮೈಸೂರಿನಿಂದ ವಿಧ್ವಂಸಕ ಕೃತ್ಯಗಳ ತಪಾಸಣಾ ದಳ ಹಾಗೂ ಶ್ವಾನದಳ ಸ್ಥಳಕ್ಕೆ ಆಗಮಿಸಿ ತಹಶೀಲ್ದಾರ್ ಕಚೇರಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮತ್ತು ಪಕ್ಕದ ಹೆಣ್ಣುಮಕ್ಕಳ ಹಾಸ್ಟೆಲ್ ನಲ್ಲಿಯೂ ಸುದೀರ್ಘ ತಪಾಸಣೆ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಎಆರ್‌ಎಸ್‌ಐ ರಾಘವೇಂದ್ರ, ಪುಟ್ಟರಾಜು, ರಾಜೇಶ್, ಮಂಜುನಾಥ್, ಬೈರನಾಯ್ಕ, ಚಾಲಕ ಮಂಜು ಹಾಗೂ ಶ್ವಾನ ಇಶಾ ಭಾಗವಹಿಸಿದ್ದರು.

ಸುದೀರ್ಘ ಪರಿಶೀಲನೆಯ ಬಳಿಕ ಯಾವುದೇ ಅಪಾಯಕಾರಿ ವಸ್ತುಗಳು ಪತ್ತೆಯಾಗಿಲ್ಲ ಎಂದು ತಪಾಸಣಾಧಿಕಾರಿಗಳು ಪೊಲೀಸ್ ಇಲಾಖೆಗೆ ಹಾಗೂ ತಹಶೀಲ್ದಾರ್ ಅವರಿಗೆ ಅಧಿಕೃತವಾಗಿ ತಿಳಿಸಿದರು. ಇದರಿಂದ ಸಾರ್ವಜನಿಕರು ಮತ್ತು ಸಿಬ್ಬಂದಿ ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಟ್ಟರು.

ಈ ಸಂದರ್ಭ ಕಂದಾಯ ಇಲಾಖೆಯ ಗ್ರೇಡ್–2 ತಹಶೀಲ್ದಾರ್ ಪರಶಿವಮೂರ್ತಿ, ಶಿರಸ್ತೇದಾರ್ ಮನೋಹರ್, ಉಪ ತಹಶೀಲ್ದಾರ್ ಸುನಿಲ್, ಆರ್‌ಐಗಳಾದ ರವಿಚಂದ್ರನ್, ಮುಜೀಬ್, ಶ್ರೀನಿವಾಸ್, ಸರಗೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರ ಸ್ವಾಮಿ, ಉಪಾಧ್ಯಕ್ಷ ಶಿವಕುಮಾರ್, ಸದಸ್ಯ ಶ್ರೀನಿವಾಸ್, ಅಕ್ರಮ–ಸಕ್ರಮ ಸಮಿತಿ ಸದಸ್ಯ ಶಿವಶಂಕರನ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

admin
the authoradmin

Leave a Reply