ಭತ್ತದ ಹುಲ್ಲಿನ ಮೆದೆಗೆ ಬೆಂಕಿ ಬಿದ್ದು ಸಂಪೂರ್ಣ ನಾಶ… ರೈತನ ಕಷ್ಟಕ್ಕೆ ಸ್ಪಂದಿಸುವವರು ಯಾರು?

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಭತ್ತದ ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ ಬಿದ್ದು ಹುಲ್ಲು ಸುಟ್ಟು ಕರಕಲಾಗಿರುವ ಘಟನೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 4ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಪರಿಣಾಮ ಸುಮಾರು ಎರಡು ಲಕ್ಷ ರೂ. ಮೌಲ್ಯದ ಹುಲ್ಲು ಸುಟ್ಟುಬೂದಿಯಾಗಿದೆ.
ಗ್ರಾಮದ ನಿವಾಸಿ ವೆಂಕಟೇಶ್ ಎಂಬುವರಿಗೆ ಸೇರಿದ ಹುಲ್ಲಿನ ಮೆದೆ ಬೆಂಕಿಗೆ ಆಹುತಿಯಾಗಿದ್ದು, ಮುಂದೇನು ಎಂಬ ಚಿಂತೆ ಆವರಿಸಿದೆ. ಏಕೆಂದರೆ ಈ ಹುಲ್ಲು ತಾವು ಸಾಕಿರುವ ರಾಸುಗಳ ಮೇವಿಗಾಗಿ ಸಂಗ್ರಹಿಸಿಡಲಾಗಿತ್ತು. ಸುಮಾರು ಏಳು ಎಕರೆಯಲ್ಲಿ ಬೆಳೆದಿದ್ದ ಹುಲ್ಲಿನ ಮೇದೆ ಇದಾಗಿದೆ.

ರೈತ ವೆಂಕಟೇಶ್ ಅವರು ಸುಮಾರು 3 ಜೊತೆಗೂ ಹೆಚ್ಚು ಜಾತ್ರೆ ಹೋರಿಗಳನ್ನು ಸಾಕುತ್ತಿದ್ದು ಜೊತೆಗೆ ಹಾಲು ಕರೆಯುವ ಹಸುಗಳಿವೆ. ಹೀಗಾಗಿ ಇವುಗಳಿಗೆ ಮೇವಿನ ಕೊರತೆಯಾಗದಂತೆ ಹುಲ್ಲನ್ನು ಸಂಗ್ರಹಿಸಿಟ್ಟಿದ್ದರು. ಆದರೆ ಆಕಸ್ಮಿಕವಾಗಿ ಹುಲ್ಲಿನ ಮೆದೆಗೆ ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿರುವುದು ಕಾಣಿಸುತ್ತಿದ್ದಂತೆಯೇ ಇಡೀ ಗ್ರಾಮದವರು ಸೇರಿ ಪಂಪ್ ಸೆಟ್ ಹಾಗೂ ನಳಗಳಿಂದ ನೀರು ಸುರಿದು ಬೆಂಕಿಯನ್ನು ನಂದಿಸಲು ಮುಂದಾಗಿದ್ದು, ಅದು ಸಾಧ್ಯವಾಗಲಿಲ್ಲ.

ತಕ್ಷಣ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದಾಗ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾದರೂ ಅಷ್ಟರೊಳಗೆ ಸಂಪೂರ್ಣವಾಗಿ ರಾಸುಗಳ ಮೇವು ಸುಟ್ಟು ಕರಕಲಾಗಿತ್ತು. ರಾಸು ಸಾಕಿದ ಕುಟುಂಬಸ್ಥರು ಹಾಗೂ ಗ್ರಾಮದ ಹಲವು ರೈತರು ಕಣ್ಣೀರು ಹಾಕುಗುತ್ತಿರುವ ದೃಶ್ಯ ಮನಕಲುಕುವಂತಿತು.

ಸರ್ಕಾರಗಳು ಇಂತಹ ಘಟನೆಗಳಿಂದ ರೈತರು ಯಾವುದೇ ಪರಿಕರಗಳನ್ನು ಕಳೆದುಕೊಂಡರೂ ಅವರಿಗೆ ಪರಿಹಾರವನ್ನು ನೀಡಿ ಸಂಕಷ್ಟದಲ್ಲಿ ರೈತರ ನೆರವಿಗೆ ಧಾವಿಸಬೇಕೆನ್ನುವುದು ಸ್ಥಳೀಯ ರೈತರ ಒತ್ತಾಯವಾಗಿದೆ. ಬೇಸಿಗೆ ದಿನವಾಗಿರುವುದರಿಂದ ರೈತರು ಎಚ್ಚರಿಕೆಯಿಂದ ಇರುವುದು. ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತಗಳಾಗುವ ಸಂಭವ ಹೆಚ್ಚಾಗಿದೆ.







