ಬೆಂಗಳೂರಿನ ಬಿಜಿಎಸ್ ಕಾಲೇಜ್ ವಿದ್ಯಾರ್ಥಿ ಎಸ್. ಅಭಿಷೇಕ್ ಗೌಡಗೆ ‘ಡಾ.ಎಸ್.ಕೆ. ಶಿವಕುಮಾರ್ ಆವಿಷ್ಕಾರ ಪ್ರಶಸ್ತಿ’

ಮಂಡ್ಯ : ತಾಲ್ಲೂಕಿನ ಮಂಗಲ ಗ್ರಾಮದ ಪತ್ರಕರ್ತ ಹಾಗೂ ಸಂಘಟಕ ಜೀವನ್ಮುಖಿ ಸುರೇಶ್ ಅವರ ಸುಪುತ್ರ ಹಾಗೂ ಬೆಂಗಳೂರಿನ ಬಿಜಿಎಸ್ ಕಾಲೇಜ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ವಿದ್ಯಾರ್ಥಿ ಎಸ್. ಅಭಿಷೇಕ್ ಗೌಡ ನೇತೃತ್ವದ ತಂಡಕ್ಕೆ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ನೀಡಲಾಗುವ ‘ಡಾ.ಎಸ್.ಕೆ. ಶಿವಕುಮಾರ್ ಆವಿಷ್ಕಾರ ಪ್ರಶಸ್ತಿ’ ಲಭಿಸಿದೆ.
ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಜಿಎಸ್ ತಾಂತ್ರಿಕ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಎಸ್. ಅಭಿಷೇಕ್ ಗೌಡ ಹಾಗೂ ಅವರ ತಂಡ ಐಓಟಿ ತಂತ್ರಜ್ಞಾನ ಆಧಾರಿತ ಸಂಶೋಧನಾ ಕಾರ್ಯದ ಕಿರಿಯ ವಿಜ್ಞಾನಿಗಳ ಸಾಧನೆಗಾಗಿ ನೀಡುವ 10,000 ರೂ. ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡ ‘ಡಾ. ಎಸ್. ಕೆ. ಶಿವಕುಮಾರ್ ಆವಿಷ್ಕಾರ ಪ್ರಶಸ್ತಿ’ಯನ್ನು ಸ್ವೀಕರಿಸಿದರು.

ಕಾಲೇಜಿನ ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಜಿ. ಸತೀಶ್ ಮಾರ್ಗದರ್ಶನದಲ್ಲಿ ಎಸ್. ಅಭಿಷೇಕ್ ಗೌಡ ನೇತೃತ್ವ ನಿಹಾಲ್ ಎಲ್. ಕೃಷ್ಣ, ಎಂ.ಟಿ. ವಿನೋದ್ ಗೌಡ, ಕೆ.ವಿ. ಅಭಿಷೇಕ್ ತಂಡವು ‘Hybrid Eco ISA’ ನವೀನ ಯೋಜನೆಯ ಆವಿಷ್ಕಾರ ಮಾಡಿದ್ದು, ಇದು ಪ್ಲಗ್-ಇನ್ ಹೈಬ್ರಿಡ್ ವಾಹನಗಳಿಗಾಗಿ ಸ್ವಯಂಚಾಲಿತ ವೇಗ ಮಿತಿ ಏಕೀಕರಣ ವ್ಯವಸ್ಥೆಯನ್ನು ಒಳಗೊಂಡ ನವೀನ ಸಂಶೋಧನೆಯಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಅಬಕಾರಿ ಸಚಿವ ಎಸ್. ಬೋಸರಾಜು, ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್. ಕಿರಣ್ ಕುಮಾರ್, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ರಾಜಾಸಾಬ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಸದಾಶಿವ ಪ್ರಭು, ಸರ್ಕಾರದ ಉನ್ನತ ಶಿಕ್ಷಣ ಕಾರ್ಯದರ್ಶಿ ಡಾ.ಎನ್. ಮಂಜುಳಾ ಅವರು ಎಸ್. ಅಭಿಷೇಕ್ ಗೌಡ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿ ಎಸ್. ಅಭಿಷೇಕ್ ಗೌಡ ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಅವರ ಸಹೋದರ ಜೀವನ್ಮುಖಿ ಸುರೇಶ್ ಅವರ ಸುಪುತ್ರರಾಗಿದ್ದಾರೆ.







