ಸರಗೂರು(ದಾಸೇಗೌಡ): ತಾಲ್ಲೂಕಿನ ಕೊತ್ತೆಗಾಲ ಗ್ರಾಮ ಮೂಲದ ಯುವ ಪ್ರತಿಭೆ ಮನ್ವಿತ್, ಕೃಷಿಕ ಕುಟುಂಬದಲ್ಲಿ ಜನಿಸಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿ ಭರವಸೆಯ ನಾಯಕನಾಗಿ ಬೆಳೆಯುತ್ತಿರುವುದು ಹೆಮ್ಮೆಯಾಗಿದೆ. ಮೈಸೂರಿನ ರಂಗಾಯಣದ “ಸಂಚಲನ” ರಂಗತಂಡದಲ್ಲಿ ಸೇರಿ ಸುಮಾರು 12 ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ನಟನೆಯನ್ನು ಮೈಗೂಡಿಸಿಕೊಂಡಿದ್ದಾರೆ.
2021ರಲ್ಲಿ “ಆಂಗರ್” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮನ್ವಿತ್, ನಂತರ “ಭಾರತದ ಪ್ರಜೆಗಳಾದ ನಾವು” ಚಿತ್ರದಲ್ಲಿ ನಾಯಕನಾಗಿ ನಟಿಸಿ ಸಾಮಾಜಿಕ ಸಂದೇಶ ನೀಡಿದ ಉತ್ತಮ ಚಿತ್ರವೆಂದು ಕರ್ನಾಟಕ ಸರ್ಕಾರದಿಂದ ಪ್ರಶಂಸೆಗೆ ಪಾತ್ರರಾದರು. “ಸಂಜು” ಚಿತ್ರದಲ್ಲಿ ಲವರ್ ಬಾಯ್ ಪಾತ್ರದ ಮೂಲಕ ಯುವಜನರಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

ಪ್ರಸ್ತುತ ಮನ್ವಿತ್ ಅವರ ಕೈಯಲ್ಲಿ “ಹೈವೇ ನಂಬರ್ 275” (ಹಾರರ್), “ಡೆತ್ ಸರ್ಟಿಫಿಕೇಟ್, “ಬೇಬಿ @2025” ಹಾಗೂ “ಧ್ರುವನಕ್ಷತ್ರ” ಸೇರಿದಂತೆ ನಾಲ್ಕು ಕನ್ನಡ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಜೊತೆಗೆ ತಮಿಳಿನ “ಕೊಪ್ಪಂ” ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದು, ಬಿಡುಗಡೆಯ ನಿರೀಕ್ಷೆಯಲ್ಲಿದೆ. ಹಿಂದಿ ಚಿತ್ರರಂಗದಲ್ಲಿಯೂ ನಾಯಕನಾಗಿ ನಟಿಸಲು ಅವಕಾಶ ದೊರೆತಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ.
ಗ್ರಾಮೀಣ ಹಿನ್ನೆಲೆಯಿಂದ ಬಂದ ಈ ಪ್ರತಿಭಾವಂತ ನಟ ಇನ್ನಷ್ಟು ಎತ್ತರಗಳಿಗೆ ಏರಲಿ, ನಾಡಿನ ಹೆಮ್ಮೆ ಆಗಲಿ ಎಂದು ಹಾರೈಸುತ್ತಾ, ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಸಲ್ಲಿಸಲಾಗಿವೆ.








