National

ವಿಮಾನ ದುರಂತ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ… ದು:ಖಿತ ಕುಟುಂಬಕ್ಕೆ ಮೋದಿ ಸಂತಾಪ

ಗುಜರಾತ್: ಈ ದುರಂತ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ ಮತ್ತು ಅನೇಕ ಜನರನ್ನು ಕಳೆದುಕೊಂಡ ನಂತರ, ನಾನು ಈ ಘಟನೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಎಲ್ಲಾ ದುಃಖಿತ ಕುಟುಂಬಗಳಿಗೆ ನನ್ನ ಸಂತಾಪಗಳು… ಇದು ಪ್ರಧಾನಿ ನರೇಂದ್ರ ಮೋದಿ ಅವರು ಘಟನಾ ಸ್ಥಳಕ್ಕೆ ತೆರಳಿದ ಮತ್ತು ಗಾಯಾಳುಗಳನ್ನು ಭೇಟಿ ಮಾಡಿದ ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡ ನೋವಿನ ಮಾತುಗಳು..

ನಿಜ ಹೇಳಬೇಕೆಂದರೆ ಯಾರೂ ಊಹಿಸದ ರೀತಿಯಲ್ಲಿ ವಿಮಾನ ಪತನವಾಗಿ ಮಹಾದುರಂತವೊಂದು ಅಹಮದಾಬಾದ್ ನಲ್ಲಿ ನಡೆದು ಹೋಗಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ದುರಂತದ ಬಳಿಕದ ದೃಶ್ಯಗಳು ಕರಳು ಹಿಂಡುವಂತಿವೆ. ಸುಟ್ಟು ಕರಕಲಾದ ಶವಗಳ ಗುರುತು ಪತ್ತೆ ಹಚ್ಚುವ ಕೆಲಸ ಸವಾಲ್ ಆಗಿದ್ದು, ಡಿಎನ್‌ಎ ಪರೀಕ್ಷೆ ಮೂಲಕವೇ ಗುರುತು ಪತ್ತೆ ಹಚ್ಚಬೇಕಾಗುವುದರಿಂದ ಇನ್ನೂ ಮೂರರಿಂದ ನಾಲ್ಕು ದಿನಗಳು ಬೇಕಾಗಬಹುದೆಂದು ಹೇಳಲಾಗುತ್ತಿದೆ.

ಅಹಮದಾಬಾದ್ ನಿಂದ  ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಅಹಮದಾಬಾದ್ ನ ಮೇಘನಿನಗರದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುವಾಗ ಅಪಘಾತಕ್ಕೀಡಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಗುರುವಾರ ಮಧ್ಯಾಹ್ನ 1.38 ಕ್ಕೆ ವಿಮಾನ ನಿಲ್ದಾಣದಿಂದ ಹೊರಟಿದ್ದು, 1.40 ಕ್ಕೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಸಧ್ಯ 265 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಅಧಿಕೃತ ಮಾಹಿತಿಗಳು ಬರಬೇಕಾಗುತ್ತದೆ.

ವಿಮಾನ ಅಪಘಾತದಲ್ಲಿ ಭಾಗಿಯಾದ ಪ್ರಯಾಣಿಕರ ಮತ್ತು ಮೆಡಿಕಲ್ ಹಾಸ್ಟೆಲ್ ನಲ್ಲಿ ದುರಂತಕ್ಕೆ ಬಲಿಯಾದರವ ದೇಹಗಳನ್ನು ಡಿಎನ್ಎ ಹೊಂದಾಣಿಕೆ ಮಾಡಿದ ನಂತರ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆ ಆಡಳಿತ ತಿಳಿಸಿದೆ. ಪ್ರಸ್ತುತ ಡಿಎನ್ಎ ಪರೀಕ್ಷೆ ಪ್ರಕ್ರಿಯೆ ನಡೆಯುತ್ತಿದ್ದು, ಮೃತರ  ಮಾದರಿಗಳನ್ನು ತೆಗೆದುಕೊಂಡ ನಂತರ, ಅವುಗಳನ್ನು ಪ್ರಯೋಗಾಲಯಕ್ಕೆ ಹೊಂದಾಣಿಕೆಗಾಗಿ ಕಳುಹಿಸಲಾಗುತ್ತಿದೆ.

ಈ ದುರಂತ ಗಂಭೀರವಾಗಿದ್ದು ಮತ್ತು ಮೃತಪಟ್ಟವರ ದೇಹ ಸುಟ್ಟು ಕರಕಲಾಗಿರುವುದರಿಂದ ಪತ್ತೆ ಹಚ್ಚಿ ಸಂಬಂಧಿಕರಿಗೆ ಹಸ್ತಾಂತರ ಮಾಡುವುದು ಸುಲಭದ ಕೆಲಸವಾಗಿ ಉಳಿದಿಲ್ಲ. ಹೀಗಾಗಿ ಕನಿಷ್ಟ ಮೂರು ದಿನ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಮೃತರ ಸಂಬಂಧಿಕರಿಗೆ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆಯಿಂದ ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಣಿ ಸಂಖ್ಯೆಯನ್ನು ತೆರೆಯಲಾಗಿದ್ದು, ಸಂಬಂಧಿಸಿದವರು  6357373831 ಮತ್ತು 6357373841 ಗೆ ಕರೆ ಮಾಡುವ ಮೂಲಕ ಮಾಹಿತಿಯನ್ನು ಪಡೆಯಬಹುದಾಗಿದೆ.

ಇದೆಲ್ಲದರ ನಡುವೆ ಶುಕ್ರವಾರ ದುರಂತ ನಡೆದ ಸ್ಥಳಕ್ಕೆ ಹಾಗೂ ಸಿವಿಲ್ ಆಸ್ಪತ್ರೆಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರು ದುರಂತವನ್ನು ಹತ್ತಿರದಿಂದ ನೋಡಿದರಲ್ಲದೆ, ಸ್ಥಳದ ಮಾಹಿತಿಯನ್ನು ಸಂಬಂಧಿಸಿದ ಅಧಿಕಾರಿಗಳಿಂದ ಪಡೆದುಕೊಂಡರು ಆ ನಂತರ ಸಿವಿಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ದಾಖಲಾಗಿರುವ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಅದಾದ ನಂತರ, ಅವರು ಗುಜ್ಸೆಲ್‌ನಲ್ಲಿ ಮುಖ್ಯಮಂತ್ರಿ ಸೇರಿದಂತೆ ಗುಜರಾತ್ ಸರ್ಕಾರದ ಹಿರಿಯ ಅಧಿಕಾರಿಗಳಿಂದ ಅಪಘಾತದ ಬಗ್ಗೆ ವಿವರಗಳನ್ನು ಸಂಗ್ರಹಿಸಿದ್ದಾರೆ.

ಈ ಕುರಿತಂತೆ ಎಕ್ಸ್ ನಲ್ಲಿ ನೋವು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ದುರಂತ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ ಮತ್ತು ಅನೇಕ ಜನರನ್ನು ಕಳೆದುಕೊಂಡ ನಂತರ, ನಾನು ಈ ಘಟನೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಎಲ್ಲಾ ದುಃಖಿತ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ಬರೆದುಕೊಂಡಿದ್ದಾರೆ.ಈ ದುರಂತದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಅವರು ಮೃತಪಟ್ಟಿದ್ದಾರೆ. ಪ್ರಸ್ತುತ, ವಿಸಾವದರ್ ವಿಧಾನಸಭೆಗೆ ಉಪಚುನಾವಣೆ ನಡೆಯುತ್ತಿದೆ.

ಉಪಚುನಾವಣೆಗೆ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಸ್ಟಾರ್ ಪ್ರಚಾರಕರನ್ನಾಗಿ ನೇಮಕ ಮಾಡಲಾಗಿತ್ತು. ಅವರು ವಿಸಾವದರ್ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಬರಬೇಕಿತ್ತು, ಆದರೆ ಅವರು ಲಂಡನ್ ಗೆ ಹೋಗಬೇಕಾಗಿದ್ದರಿಂದ ತಮ್ಮ ಚುನಾವಣಾ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು. ಒಟ್ಟಾರೆ ಒಂದು ಮಹಾದುರಂತ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.

admin
the authoradmin

Leave a Reply