ಸಂಕಷ್ಟದಲ್ಲಿರುವ ಹಿರಿಯ ಸಾಹಿತಿ ಬನ್ನೂರು ಕೆ ರಾಜುರವರಿಗೆ ಸರ್ಕಾರ, ಸಂಘ, ಸಂಸ್ಥೆ ಸ್ಪಂದಿಸಬೇಕಿದೆ..
ಬರಹವನ್ನೇ ಬದುಕಾಗಿಸಿಕೊಂಡು, ಇವತ್ತಿಗೂ ಬರೆದೆ ಬದುಕುತ್ತಿರುವ ಅಕ್ಷರ ಪ್ರೇಮಿ

ಮೈಸೂರು: ಸಾಹಿತಿ, ಸಂಸ್ಕೃತಿಯ ಸಂಘಟಕ, ಅಂಕಣ ಬರಹಗಾರ, ಪತ್ರಕರ್ತ, ಕನ್ನಡ ನೆಲ, ಜಲ, ಭಾಷೆ ವಿಷಯಕ್ಕೆ ಬಂದಾಗ ಹೋರಾಟಕ್ಕೆ ನಿಲ್ಲುವ ಕನ್ನಡ ಪ್ರೇಮಿ, ಕವಿ ಬನ್ನೂರು ಕೆ ರಾಜು ಅವರು ಕಳೆದ 10 ತಿಂಗಳಿನಿಂದ ಪಾರ್ಶ್ವವಾಯು ಖಾಯಿಲೆಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಸಂಕಷ್ಟದಲ್ಲಿರುವ ಈ ಸಂದರ್ಭ ಅವರಿಗೆ ಸರ್ಕಾರ, ಸಂಘ, ಸಂಸ್ಥೆಗಳು ಸ್ಪಂದಿಸುವಂತೆ ರಾಜೇಂದ್ರ ಪ್ರಸಾದ್ ಹೊನ್ನಲಗೆರೆ ಮನವಿ ಮಾಡಿದ್ದಾರೆ.

ಕಳೆದ 4 ದಶಕಗಳಿಗೆ ಮಿಗಿಲಾಗಿ ಕನ್ನಡ ಸಾರಸತ್ವ ಲೋಕಕ್ಕೆ ಬರಹಗಳ ಮೂಲಕ ಚಿರಪರಿಚಿತರಾಗಿರುವ ಬನ್ನೂರು ಕೆ ರಾಜು ಅವರು ಕಥೆಗಾರರಾಗಿ, ಕವಿ, ವಿಮರ್ಶಕ, ನಾಟಕಕಾರ, ಅಂಕಣಕಾರ, ಸಾಹಿತಿ ಅಷ್ಟೇ ಅಲ್ಲ, ಸಾಹಿತ್ಯವನ್ನೇ ವೃತ್ತಿಯನ್ನಾಗಿಸಿಕೊಂಡು, ಬರಹವನ್ನೇ ಬದುಕಾಗಿಸಿಕೊಂಡು, ಇವತ್ತಿಗೂ ಬರೆದೆ ಬದುಕುತ್ತಿರುವ ಅಕ್ಷರ ಪ್ರೇಮಿ, ಬರವಣಿಗೆಯಲ್ಲೇ ಜೀವಿಸುತ್ತಿರುವ ಅಕ್ಷರ ತಪಸ್ವಿ ಇವರಾಗಿದ್ದಾರೆ. ಇವತ್ತಿಗೂ ಬನ್ನೂರು ರಾಜು ರವರಿಗೆ ಬರವಣಿಗೆಯೇ ಬದುಕಾಗಿದೆ.
ಇವರು ಇದುವರೆಗೆ 156 ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಬಿಡುಗಡೆಗೊಳಿಸಿ ಸಹೃದಯರ ಮನ ಆಕರ್ಷಣೆಗೆ ಭಾಜನರಾಗಿದ್ದಾರೆ, ಜೊತೆಗೆ 5400ಕ್ಕೂ ಹೆಚ್ಚು ಲೇಖನಗಳನ್ನು ಬರೆದು ನಾಡಿನ ವಿವಿಧ ಪತ್ರಿಕೆಗಳಲ್ಲಿ ನಿತ್ಯವೂ ಪ್ರಕಟಿಸಿರುವುದು ಕನ್ನಡಿಗರಾದ ಸಹೃದಯಿ ಬಂಧುಗಳು ನಾವು ನಿತ್ಯವೂ ಪತ್ರಿಕೆಗಳನ್ನು ಓದುವುದರ ಮೂಲಕ ಗಮನಿಸುತ್ತಾ ಬಂದಿದ್ದೇವೆ. ಖಾಯಿಲೆಗೆ ಒಳಗಾದ ಬನ್ನೂರು ರಾಜು ರವರು ಇಂದಿಗೂ ಬರೆಯುವುದನ್ನು ನಿಲ್ಲಿಸಿಲ್ಲ. ಪಾರ್ಶ್ವವಾಯು ಖಾಯಿಲೆಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ಚೇತರಿಕೆ ಆಗುತ್ತಿರುವ ಇವರು ಇವತ್ತಿಗೂ ಅಂಕಣವನ್ನು ಬರೆಯುವುದನ್ನು ನಿಲ್ಲಿಸಿಲ್ಲ.

ಅನಾರೋಗ್ಯ ನಿಮಿತ್ತ ಕೈಯಲ್ಲಿ ಬರೆಯಲು ಸಾಧ್ಯವಾಗದೆ ಧ್ವನಿಯ ಮೂಲಕ ಬರಹಗಳನ್ನು ದಾಖಲಿಸಿ, ಪತ್ರಿಕೆಗಳಿಗೆ ಕಳುಹಿಸುತ್ತಿರುವುದನ್ನು ಇಂದಿಗೂ ಕಾಣುತ್ತಿದ್ದೇವೆ. ಇಷ್ಟೆಲ್ಲದರ ನಡುವೆ ಸರ್ಕಾರವಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಭೇಟಿ ನೀಡಿ, ಆರೋಗ್ಯವನ್ನು ವಿಚಾರಿಸದೇ ಚಿಕಿತ್ಸೆಯ ಖರ್ಚು-ವೆಚ್ಚಗಳಿಗೆ ಆಸರೆಯಾಗಿ ನಿಲ್ಲದಿರುವುದು ತುಂಬಾ ಬೇಸರದ ಸಂಗತಿಯಾಗಿದೆ. ಸಾಹಿತ್ಯ ಓದುವ ಹವ್ಯಾಸ ಇಲ್ಲದಿದ್ದರೂ ಸರಿಯೇ, ಕನ್ನಡ ದಿನಪತ್ರಿಕೆಗಳನ್ನು ಓದುವ ಅಭ್ಯಾಸವಿದ್ದರೆ ಸಾಕು, ಅಂತಹ ಎಲ್ಲರಿಗೂ ಬನ್ನೂರು ಕೆ ರಾಜು ಅವರು ಅಂಕಣ ಬರಹ ಎಲ್ಲಾ ಪತ್ರಿಕೆಗಳಲ್ಲೂ ಹೆಸರು ಚಿರಪರಿಚಿತವಾಗಿದೆ.
ಇವರ ಸಾಹಿತ್ಯ ಹಾಗೂ ಅಂಕಣಗಳ ಬರಹಗಳನ್ನು ಗಮನಿಸಿದ ನಾಡಿನ ಹಿರಿಯ ಸಾಹಿತಿಗಳು, ನಾಡೋಜ, ಡಾ.ದೇ.ಜ.ಗೌ ಅವರು ಬನ್ನೂರು ಕೆ ರಾಜು ಅವರ ಬರಹಗಳಿಗೆ ಅವರೇ ಸಾಟಿ, ಬೇರೊಬ್ಬರಿಗೆ ಓಲಿಸಲು, ಊಹಿಸಲು ಸಾಧ್ಯವೇ ಇಲ್ಲ, ಅಂತಹ ಬರಹಗಳನ್ನು ದಿನನಿತ್ಯ ಓದುಗರಿಗೆ ನೀಡುತ್ತಾ ಬಂದಿದ್ದಾರೆಂದು ವ್ಯಾಖ್ಯಾನಿಸಿದ್ದಾರೆ. ವಿದ್ವಾಂಸರಾದ ಡಾ.ಸಿ.ಪಿ.ಕೃಷ್ಣಕುಮಾರ್ (ಸಿ.ಪಿ.ಕೆ) ಅವರು ರಾಜು ರವರ ಬರಹವನ್ನು ಗಮನಿಸಿ ‘ಅಂಕಣ ಬ್ರಹ್ಮ’ಎಂದು ಪ್ರಶಂಸಿಸಿರುವುದನ್ನು ಈಗಲೂ ನೆನೆಯಬಹುದು.

‘ಕಾಡಿನಲ್ಲಿ ಕನ್ಯೆಯರು’ ಪತ್ತೆದಾರಿ ಕಾದಂಬರಿಯ ಮೂಲಕ ಮೊದಲಿಗೆ ಕನ್ನಡ ಸಾರಸ್ವತ ಲೋಕಕ್ಕೆ ಪಾದಾರ್ಪಣೆ ಮಾಡಿದ ಇವರು. ಪತ್ತೇದಾರಿ ಕಾದಂಬರಿಗಳ ಸುಗ್ಗಿ ಕಾಲವೇ ಆಗಿದ್ದ 70-80ರ ದಶಕಗಳಲ್ಲಿ ಒಮ್ಮೆಗೆ 25 ಪತ್ತೇದಾರಿ ಕಿರು ಕಾದಂಬರಿಗಳನ್ನು ಬರೆದು ಪ್ರಕಟಿಸಿದ ಹೆಗ್ಗಳಿಕೆ ಬನ್ನೂರು ರಾಜು ರವರಿಗೆ ಸಲ್ಲುತ್ತದೆ. ಇವರ ಬರಹ ಹಾಗೂ ಸಾಹಿತ್ಯವನ್ನು ಗಮನಿಸಿ ಅಂದಿನ ಹೆಸರಾಂತ ವಿಚಾರವಾದಿಗಳು, ಶಿಕ್ಷಣ ತಜ್ಞರಾದ ಡಾ.ಎಚ್.ನರಸಿಂಹಯ್ಯ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಕೆ.ಶಿವರಾಮ ಕಾರಂತ ರಾಷ್ಟ್ರಕವಿ ಕುವೆಂಪು, ಮೈಸೂರು ರತ್ನ, ಹೆಚ್ಚೆಸ್ಕೆ, ಗಾಂಧಿವಾದಿ ಎಸ್.ನಂಜುಂಡಯ್ಯ ಪ್ರಶಸ್ತಿಗಳನ್ನು ಒಳಗೊಂಡಂತೆ ಹಾಗೂ ಭಾರತ ಸರ್ಕಾರದ ನೆಹರು ಯುವ ಕೇಂದ್ರದ ಶ್ರೇಷ್ಠ ಯುವಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಬನ್ನೂರು ಕೆ.ರಾಜು ರವರವ ಚಿಕಿತ್ಸಾ ಖರ್ಚು-ವೆಚ್ಚಕ್ಕೆ ಸ್ಪಂದಿಸಿ, ನೆರವು ನೀಡಿ ಮಾನವೀಯತೆಯನ್ನು ಎತ್ತಿ ಹಿಡಿಯಬೇಕೆಂದು ಮನವಿಯನ್ನು ಮಾಡುತ್ತಾ ಹಾಗೂ ಬನ್ನೂರು ರಾಜು ರವರು ಚೇತರಿಸಿಕೊಂಡ ನಂತರ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಮತ್ತಷ್ಟು ಪುಸ್ತಕಗಳು ಪ್ರಕಟಿಸಲೆಂದು ಕನ್ನಡಾಭಿಮಾನಿಗಳ ಆಶಯ, ಒತ್ತಾಯ ಹಾಗೂ ಮನವಿ ಮಾಡಿಕೊಳ್ಳುತ್ತಿರುವುದಾಗಿ ರಾಜೇಂದ್ರ ಪ್ರಸಾದ್, ಹೊನ್ನಲಗೆರೆ ಅವರು ತಿಳಿಸಿದ್ದಾರೆ.(ಸಂಪರ್ಕ: ಬನ್ನೂರು ರಾಜು-9481533167)







