ಮೈಸೂರು: ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ನಿಂದ “ಚೇತನೋತ್ಸವ 2026” ಭರತನಾಟ್ಯ ನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ಜ.24ರಂದು ಶನಿವಾರ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ, ಮಧ್ಯಾಹ್ನ 3:30 ರಿಂದ ಸಂಜೆ 7.30 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಶಾಸ್ತ್ರೀಯ ನೃತ್ಯ ಪ್ರದರ್ಶನ, ಗುರುದೇವ ಪ್ರಶಸ್ತಿ ಪ್ರಧಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆಯಲಿದೆ.
ಅತಿಥಿ ಕಲಾವಿದರಿಂದ ಭರತನಾಟ್ಯ ಪ್ರದರ್ಶನ ಮಧ್ಯಾಹ್ನ 3.30 ರಿಂದ 4.30 ರವರೆಗೆ ನಡೆಯಲಿದೆ ಆ ನಂತರ ಸಂಜೆ 4.30 ರಿಂದ 5.30 ಗುರುದೇವ ಅಕಾಡೆಮಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ನಡೆಯಲಿದೆ. ಸಂಜೆ 5.30ಕ್ಕೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಎಂ ಜಗನ್ನಾಥ ಶೆಣೈ ನೆರವೇರಿಸಲಿದ್ದಾರೆ. ವಿಜಯನಗರದ ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಡಾ. ಎನ್. ಶ್ರೀನಿವಾಸನ್ ಆಶೀರ್ವಚನ ನೀಡಲಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ತಾಪಂ ಮಾಜಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನಸ್ವಾಮಿ, ದೇವಸ್ಯ ಅಸೋಸಿಯೇಟ್ಸ್ ನ ವಕೀಲರಾದ ವಿಶ್ವನಾಥ ದೇವಸ್ಯ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಗುರುದೇವ ಪ್ರಶಸ್ತಿ ಪುರಸ್ಕಾರವನ್ನು ಕಲಾ ಪೋಷಕರು ಹಾಗೂ ಸಮಾಜ ಸೇವಕರಾದ ಅಚ್ಯುತ ರಾಮಪ್ರಸಾದ ಕಾಮತ್ ಅವರಿಗೆ ನೀಡಿ ಗೌರವಿಸಲಾಗುವುದು. ಪ್ರತಿಭಾ ಪುರಸ್ಕಾರವನ್ನು ವಿಶ್ರುತ ಎಸ್ ಚಡಗ, ಗೌರಿ ಹರ್ಷ ಹೆಗಡೆ, ಪುರ್ವಿ ಕಲ್ಯಾಣಿ, ಜಯಶ್ರೀ ಶ್ರೀಹರಿದ್ರ ಎಸ್, ಪರೀಕ್ಷಿತ ಜೆ, ತಪಸ್ಯ ವರ್ಧನ್, ದೇವಿಕಾ ಎಸ್, ದಿಶಾ ನಾಯರ್, ಮೈತ್ರಿ ಮಹಿರಾಮ್ ಮತ್ತು ಭಾಗ್ಯಲಕ್ಷ್ಮಿ ಇವರಿಗೆ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಗುತ್ತದೆ.

ಸಭಾ ಕಾರ್ಯಕ್ರಮದ ಬಳಿಕ ಸಂಜೆ 6 ರಿಂದ ಗುರುದೇವ ಅಕಾಡೆಮಿಯ ಕಲಾವಿದರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದ್ದು, ಹಿಮ್ಮೇಳ ಸಂಗೀತದಲ್ಲಿ ನಟುವಾಂಗದಲ್ಲಿ ಗುರು ವಿದುಷಿ ಡಾ. ಚೇತನರಾಧಾಕೃಷ್ಣ ಪಿಎಂ ಮೈಸೂರು, ಗಾಯನದಲ್ಲಿ ವಿದುಷಿ ಸಿ. ಎಸ್. ಲಕ್ಷ್ಮಿ ಮೈಸೂರು, ಮೃದಂಗದಲ್ಲಿ ವಿದ್ವಾನ್ ಡಾ. ಹನುಮಂತರಾಜು ಮೈಸೂರು ಮತ್ತು ಪಿಟೀಲು ವಾದನದಲ್ಲಿ ವಿದ್ವಾನ್ ತಾಂಡವಮೂರ್ತಿ ಮೈಸೂರು ಇವರುಗಳು ಭಾಗವಹಿಸುತ್ತಿದ್ದಾರೆ. ನಿರೂಪಣೆ ಹಾಗೂ ಬೆಳಕಿನ ವಿನ್ಯಾಸದಲ್ಲಿ ಶ್ರೀ ಎಂ.ಎಲ್ ರಾಜನ್ ನಿರ್ವಹಿಸಲಿದ್ದಾರೆ.









