ArticlesLatest

ಕರಿಮೆಣಸು ಬಳ್ಳಿಯನ್ನು ರಕ್ಷಿಸಿ ಫಸಲು ಪಡೆಯುವುದೇ ರೈತರಿಗೆ ಸವಾಲ್… ಕರಿಮೆಣಸಿಗೆ ತಗಲುತ್ತಿರುವ ರೋಗ ಯಾವುದು? ನಿಯಂತ್ರಣ ಹೇಗೆ?

ಕರಿಮೆಣಸಿಗೆ ಉತ್ತಮ ದರ ದೊರೆಯುತ್ತಿದೆ. ಹೀಗಾಗಿ ಕರಿಮೆಣಸನ್ನು ಬೆಳೆಯುವ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ. ಆದರೆ ಕರಿಮೆಣಸಿಗೆ ತಗಲುತ್ತಿರುವ ರೋಗಗಳು ಬೆಳೆಗಾರರಲ್ಲಿ ನಿರಾಸೆ ಮೂಡಿಸುತ್ತಿರುವುದಂತು ನಿಜ. ಬಳ್ಳಿಗಳನ್ನು ಕಾಪಾಡಿಕೊಂಡು ಫಸಲು ಪಡೆಯುವುದು ಸುಲಭವಾಗಿ ಉಳಿದಿಲ್ಲ. ಹೀಗಾಗಿ ಬಳ್ಳಿಗೆ ತಗಲುವ ರೋಗಗಳ ನಿಯಂತ್ರಣಕ್ಕಾಗಿ  ಹೋರಾಟ ಮಾಡುವುದು ಅನಿವಾರ್ಯವಾಗಿದೆ.

ಇವತ್ತು ಕರಿಮೆಣಸು ಬಳ್ಳಿಗೆ ಹೆಚ್ಚಾಗಿ ಸೊರಗು ರೋಗ ತಗಲುತ್ತಿದ್ದು ಅದು ಹುಲುಸಾಗಿ ಬೆಳೆದಿದ್ದ ಬಳ್ಳಿಯನ್ನು ಬಲಿತೆಗೆದುಕೊಳ್ಳತೊಡಗಿದೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಲ್ಲಿ ಬಹುತೇಕ ಬೆಳೆಗಾರರಿದ್ದಾರೆ. ಮಲೆನಾಡಿನ ಹಲವೆಡೆ ಕಾಫಿ, ಅಡಿಕೆ ತೋಟಗಳ ನಡುವಿನ ನೆರಳು ಮರಗಳನ್ನು ಆಶ್ರಯಿಸಿ ಬೆಳೆದು ನಿಲ್ಲುವ ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿ ಬೋರಲಾಗಿ ಬೀಳುತ್ತಿದ್ದರೆ ಬೆಳೆಗಾರರಲ್ಲಿ ಆತಂಕ ಮೂಡುತ್ತಿದೆ. ಹೀಗಾದರೆ ಹೇಗೆ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.

ಹಿಂದಿನ ಕಾಲದಿಂದಲೂ ಬೆಳೆಗಾರರು ಕಾಫಿ, ಅಡಿಕೆ ತೋಟದ ನಡುವೆ ಮಿಶ್ರ ಬೆಳೆಯಾಗಿ ಕರಿಮೆಣಸನ್ನು ಬೆಳೆಯುತ್ತಾ ಬಂದಿದ್ದಾರೆ.  ಇದರಿಂದ ಒಂದಷ್ಟು ಆದಾಯವೂ ದೊರೆಯುತ್ತಿತ್ತು. ಇದಕ್ಕೆ ಮೊದಲೆಲ್ಲ ಯಾವುದೇ ರೋಗಗಳು ತಗುಲದೆ ಇದ್ದುದರಿಂದ ಕರಿಮೆಣಸನ್ನು ಬೆಳೆಯುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯಬಹುದು ಎಂಬುವುದು ಬೆಳೆಗಾರನ ಚಿಂತನೆಯಾಗಿತ್ತು. ಅವತ್ತಿನ ದಿನಗಳಲ್ಲಿ ಮರವೊಂದರ ಬುಡಕ್ಕೆ ಬಳ್ಳಿನೆಟ್ಟು ಒಂದಿಷ್ಟು ಗೊಬ್ಬರ ಹಾಕಿದ್ದೇ ಆದರೆ ಶೀಘ್ರವೇ ಬೆಳೆದು ಫಸಲು ನೀಡುತ್ತಿತ್ತು. ಇದಕ್ಕೆ ರೋಗ ತಗಲುವ ಭಯವೂ ಇರಲಿಲ್ಲ. ಆದರೆ ಈಗ ಹಾಗಿಲ್ಲ.

ಈಗ ಕರಿಮೆಣಸು ಬೆಳೆಗಾರನಿಗೆ ಕೈಕೊಟ್ಟಿದೆ. ಏಕೆಂದರೆ ಅದಕ್ಕೆ ರೋಗಗಳು ಶೀಘ್ರಗತಿಯಲ್ಲಿ ಹರಡುತ್ತಿರುವುದರಿಂದ ಬಳ್ಳಿಯನ್ನು ನೆಟ್ಟು ಗೊಬ್ಬರ ಹಾಕಿ ಬೆಳೆಸಿದರೂ ಫಸಲು ಬರುವ ವೇಳೆಗೆ ಅಥವಾ ಫಸಲು ಬಂದ ಬಳಿಕ ಅದಕ್ಕೆ ರೋಗ ತಗಲುತ್ತಿರುವುದರಿಂದ ಅದರಿಂದ ಆದಾಯದ ನಿರೀಕ್ಷೆಯಲ್ಲಿದ್ದವರಿಗೆ ಆತಂಕ ಶುರುವಾಗುತ್ತದೆ. ಇತ್ತೀಚೆಗೆ ಸೊರಗು ರೋಗ ಕರಿಮೆಣಸಿಗೆ ತಗಲುತ್ತಿದ್ದು ಅದರಿಂದ ಬಿಡುಗಡೆ ಇಲ್ಲದಂತಾಗಿದೆ.

ಇವತ್ತು ಕರಿಮೆಣಸಿಗೆ ಕಂಠಕವಾಗಿರುವ ಸೊರಗು ರೋಗ ಮೊದಲಿಗೆ ಕೇರಳದ ವೈನಾಡಿನಲ್ಲಿ  1920ರಲ್ಲಿ ಕಾಣಿಸಿಕೊಂಡಿತು ಎನ್ನಲಾಗಿದೆ. ಆದರೆ ಅದು ಕರ್ನಾಟಕದಲ್ಲಿ ನಿಧಾನಗತಿಯಲ್ಲಿಯೇ ಹರಡಿದೆ ಎನ್ನಬಹುದು. ಮೊದಲಿಗೆ ಅಲ್ಲೊಂದು ಇಲ್ಲೊಂದು ಬಳ್ಳಿಗಳು ಸಾವನ್ನಪ್ಪುತ್ತಿದ್ದಾಗ ಬೆಳೆಗಾರರು ಕೂಡ ತಲೆಕೆಡಿಸಿಕೊಂಡಿರಲಿಲ್ಲ. ಆದರೆ 1991ರ ನಂತರ ಕರ್ನಾಟಕದಲ್ಲಿ ಇದು ತೀವ್ರಗತಿಯಲ್ಲಿ ಹರಡಿದ್ದು, ಇಲ್ಲಿಯವರೆಗೂ ರೋಗವನ್ನು ತಡೆಗಟ್ಟಲು ಸಾಧ್ಯವಾಗಿಲ್ಲ ಹಾಗಾಗಿ ಸೊರಗು ರೋಗ ಕರಿಮೆಣಸನ್ನು ಬಲಿತೆಗೆದುಕೊಳ್ಳುತ್ತಲೇ ಇದೆ.

ಕರಿಮೆಣಸು ಬಳ್ಳಿಗೆ ಸೊರಗು ರೋಗ ತಗುಲಿರುವುದನ್ನು ನಾವು ಸುಲಭವಾಗಿ ಗುರುತಿಸಬಹುದಾಗಿದೆ. ರೋಗಕ್ಕೆ ತುತ್ತಾದ ಬಳ್ಳಿಯ ಎಲೆಗಳು ನಿಧಾನವಾಗಿ ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತಾ ಬಳ್ಳಿ ಒಣಗಿ ಸಾಯುತ್ತವೆ. ಇನ್ನು  ರೋಗ ಬರಲು ಕಾರಣ ಮತ್ತು ಹೇಗೆ ಬರುತ್ತದೆ? ಎಂಬುವುದರ ಬಗ್ಗೆ ಹೇಳುವುದಾದರೆ ಈ ರೋಗ ಫೈಟೋಫೋರಾ ಕ್ಯಾಪ್ಸಿಸಿ ಎಂಬ ಶಿಲೀಂದ್ರದಿಂದ ಬರುತ್ತದೆ. ಈ ಶಿಲೀಂದ್ರವು ಮೊದಲು ಬಳ್ಳಿಯ ಬೇರಿಗೆ ಆಕ್ರಮಣ ಮಾಡುತ್ತದೆ. ಇದರಿಂದ ನೀರು, ಆಹಾರಗಳ ಚಲನೆಗೆ ಅಡ್ಡಿಯಾಗಿ ಬೇರು ಸಾಯುತ್ತದೆ. ನಂತರ ಬಳ್ಳಿ ಎಲೆಗಳನ್ನು ಆಕ್ರಮಿಸುತ್ತದೆ.

ಮುಖ್ಯವಾಗಿ ಸೊರಗು ರೋಗವು ಮಳೆಗಾಲದಲ್ಲಿ ಹರಡುತ್ತದೆ. ಏಕೆಂದರೆ ಮಳೆಗಾಲದಲ್ಲಿ ಮಳೆಹನಿ ಬಿದ್ದು ಚಿಮ್ಮುವಾಗ ಬಳ್ಳಿ ಹಾಗೂ ಎಲೆಗಳಲ್ಲಿರುವ ಶಿಲೀಂದ್ರದ ಬೀಜಾಣುಗಳು  ಸುಲಭವಾಗಿ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡುತ್ತವೆ. ಇನ್ನು ’ಮೆಲೋಯ್ಡೋಗೈನ್ ಇಂಕಾಗ್ನಿಟ’ ಎಂಬ ಜಂತು ಹುಳದಿಂದಲೂ ಸೊರಗು ರೋಗ ಹರಡುತ್ತದೆ ಎಂದು ಹೇಳಲಾಗುತ್ತಿದೆ. ಸೊರಗುರೋಗದಲ್ಲಿ ಎರಡು ವಿಧವಿದೆ. ಒಂದು ಶೀಘ್ರಗತಿಯಲ್ಲಿ ಹರಡಿದರೆ ಮತ್ತೊಂದು ನಿಧಾನಗತಿಯ ಸೊರಗುರೋಗ. ನಿಧಾನಗತಿಯ ಸೊರಗುರೋಗಕ್ಕೆ ತುತ್ತಾದ ಬಳ್ಳಿಯ ಶಾಖೆ ಬೇರುಗಳಿಗೆ ಶಿಲೀಂದ್ರಗಳು ದಾಳಿ ಮಾಡುವುದರಿಂದ ಬೇರು ಸಾಯುವುದರಿಂದ ನೀರು, ಗೊಬ್ಬರ ಬಳ್ಳಿಗೆ ದೊರೆಯದೆ  ಎಲೆಗಳು ನಿಧಾನವಾಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಬಳಿಕ ಉದುರುತ್ತದೆ. ಆದರೆ ಕೆಲವೊಮ್ಮೆ ಮಳೆಗಾಲದಲ್ಲಿ ಮತ್ತೆ ಚೇತರಿಸಿದಂತೆ ಕಂಡು ಬಂದರೂ ಬಳಿಕ ಅದು ಸಾಯುತ್ತದೆ.

ಈಗಾಗಲೇ ಸೊರಗುರೋಗವನ್ನು ತಡೆಗಟ್ಟುವಲ್ಲಿ ಹಲವು ಸಂಶೋಧನೆ ನಡೆದಿದ್ದು, ಕೆಲವು ಸುಧಾರಿತ ತಳಿಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ. ಕಲ್ಲಿಕೋಟೆಯ ನ್ಯಾಷನಲ್ ರೀಸರ್ಚ್ ಸೆಂಟರ್ ಫಾರ್ ಸ್ಪೈಷಸ್ ಜೈವಿಕ ನಿಯಂತ್ರಣದಿಂದ ಟ್ರೈಕೋಡರ್ಮ್ ಹಾಗೂ ಗ್ಲಿಯೋಕ್ಲಾಡಿಯಂನ ಕೆಲವು ಪ್ರಭೇದಗಳನ್ನು ಉಪಯೋಗಿಸಿ ಸಂಶೋಧನೆ ನಡೆಸಿ ಒಂದಷ್ಟು ಯಶಸ್ಸು ಕಂಡಿದೆ. ಅವರ ಸಂಶೋಧನೆಯ ಪ್ರಕಾರ ರೋಗವನ್ನು ಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲವಾದರೂ ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ರೋಗವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು ಎಂಬುವುದನ್ನು ತೋರಿಸಿಕೊಟ್ಟಿದೆ.

ಇದು ಹೇಗೆಂದರೆ ತೋಟದೊಳಗೆ ಬಸಿಲು ಕಾಲುವೆಯನ್ನು ತೋಡುವುದರ ಮೂಲಕ ಮಣ್ಣಿನ ತೇವಾಂಶ ಕಡಿಮೆಗೊಳಿಸಿ, ಭೂಮಿಯ ಮೇಲೆ ಕೊಳೆತ ಎಲೆ, ಹುಲ್ಲಿನ ಕಡ್ಡಿಯ ಪದರವಿರುವಂತೆ ಮಾಡಬೇಕು. ಬಳ್ಳಿಯ ಬುಡದಿಂದ ಚಿಗುರಿ ನೆಲದಲ್ಲಿ ಹರಡುವ ಮರಿ ಬಳ್ಳಿಗಳನ್ನು ಕತ್ತರಿಸಿ ಅಥವಾ ಮೇಲೆ ಹಬ್ಬುವಂತೆ ಮಾಡುವುದರಿಂದ ಬಳ್ಳಿಯಿಂದ ಬಳ್ಳಿಗೆ ಹರಡುವ ರೋಗವನ್ನು ತಡೆಗಟ್ಟಬಹುದಾಗಿದೆ. ತೋಟದಲ್ಲಿ ಬಿಸಿಲು ಹಾಯಲು ಸೂಕ್ತವಾಗುವಂತೆ ಮರದ ನೆರಳನ್ನು ತೆಗೆಯಬೇಕು. ರೋಗರಹಿತ ಪಾತಿಯಿಂದಲೇ ಆಯ್ದು ಆರೋಗ್ಯವಂತ ಬಳ್ಳಿಯ ತುಂಡುಗಳನ್ನು ಸಸ್ಯಾಭಿವೃದ್ಧಿಗೆ ಉಪಯೋಗಿಸಬೇಕು. ತೋಟದಲ್ಲಿ ರೋಗವಿದೆ ಎಂದಾದಲ್ಲಿ ನೆಡುವ ಜಾಗವನ್ನು ’ಮೆಟಲಕ್ಸಿಲ್’ ಎಂಬ ಶಿಲೀಂದ್ರ ನಾಶಕದ ಶೇ. 0.3 ದ್ರಾವಣದಿಂದ ತೋಯಿಸಬೇಕು.

ಮಳೆಗಾಲವು ಪ್ರಾರಂಭವಾಗುವ ಮುನ್ನ ಮೇ, ಜೂನ್ ತಿಂಗಳಲ್ಲಿ ಶೇಕಡ ಒಂದರ ಬೋರ್ಡೋ ಮಿಶ್ರಣವನ್ನು ಬಳ್ಳಿಗೆ ಮೊದಲು ಸಿಂಪಡಿಸಬೇಕು. ಈ ರೀತಿಯ ಕೆಲವು ಕ್ರಮಗಳನ್ನು ಮಾಡುವುದರಿಂದ ರೋಗವನ್ನು ಸ್ವಲ್ಪ ಮಟ್ಟಿಗೆ ಹತೋಟಿಗೆ ತರಬಹುದಾಗಿದೆ. ದೂರದ ಥಾಯ್ಲೆಂಡ್‌ನಲ್ಲಿ ಹೆಕ್ಟೇರಿಗೆ 4200 ಕಿ.ಗ್ರಾಂ.ನಷ್ಟು ಇಳುವರಿ ದೊರೆತರೆ,  ನಮ್ಮ ದೇಶದಲ್ಲಿ ಕೇವಲ 240 ಕಿ.ಗ್ರಾಂ.ನಷ್ಟು ಮಾತ್ರ ಇಳುವರಿ ಪಡೆಯುತ್ತಿದ್ದೇವೆ ಎಂದರೆ ಅಚ್ಚರಿಯಾಗಬಹುದು. ಕರಿಮೆಣಸಿಗೆ ಇದೀಗ ದೊರೆಯುತ್ತಿರುವಂತೆ ದರ ದೊರೆತರೆ ಬೆಳೆಗಾರರ ಬದುಕು ಹಸನಾಗಲಿದೆ. ಆದರೆ ಬಳ್ಳಿಯನ್ನು ರಕ್ಷಿಸಿ ಫಸಲು ಪಡೆಯುವುದೇ ಸವಾಲ್ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

admin
the authoradmin

Leave a Reply