ಈಗ ಮುಂಗಾರು ಮಳೆ ಆರಂಭದ ಕಾಲವಾಗಿದ್ದು, ಜಿಟಿ, ಜಿಟಿಯೊಂದಿಗೆ ಭೋರ್ಗರೆದು ಮಳೆ ಸುರಿಯುವುದರೊಂದಿಗೆ ಮಳೆಗಾಲದ ವಾತಾವರಣ ಶುರುವಾಗಿದೆ. ಆದರೆ ಇದೇ ಸಮಯಕ್ಕೆ ಕಾಯುತ್ತಾ ಮನೆಯ ಅಂಗಳದಲ್ಲಿ, ಜಗಲಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಎಲೆಯನ್ನೇ ಕಾಂಡವನ್ನಾಗಿಸಿ ವಿಭಿನ್ನ ಮತ್ತು ವಿಶಿಷ್ಟವಾಗಿ ಬೆಳೆದು ಹೂವಾಗಿ ಅರಳಲು ಕಾದು ನಿಂತಿದ್ದ ಗಿಡಗಳಲ್ಲಿ ಬ್ರಹ್ಮಕಮಲ (Epiphyllum oxypetalum). ಹೂವುಗಳು ನಡು ರಾತ್ರಿಯಲ್ಲಿ ಅರಳಲು ಆರಂಭಿಸಿವೆ.
ವಾಟ್ಸಪ್ ಸ್ಟೇಟಸ್ ಗಳಲ್ಲಿ ತಮ್ಮದೇ ಮನೆಯಲ್ಲಿ ಅರಳಿದ ಹೂಗಳ ಚಿತ್ರಗಳು ರಾರಾಜಿಸಲಾರಂಭಿಸಿವೆ. ಈ ಸಮಯ ಬಿಟ್ಟರೆ ಹೂಗಳನ್ನು ನೋಡಲು ಒಂದು ವರ್ಷ ಕಾಯಬೇಕಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ರಾತ್ರಿಹೊತ್ತು ಅರಳುವುದರಿಂದ ಮನೆ ಮಂದಿಗೆ ಇದರ ಚೆಲುವು ನೋಡಲು ಸಾಧ್ಯವಾಗದೆ ಹೋದರೂ ಅಚ್ಚರಿಯಿಲ್ಲ. ಸಾಮಾನ್ಯವಾಗಿ ಮುಂಗಾರು ಆರಂಭವಾಗುತ್ತಿದ್ದಂತೆಯೇ ಮನೆಗಳಲ್ಲಿ ನೆಟ್ಟು ಬೆಳೆಸಿದ ಬ್ರಹ್ಮಕಮಲಗಳು ಇರುಳಲ್ಲಿ ಅರಳಿ ಸುವಾಸನೆ ಬೀರುತ್ತಾ ಮನೆಮಂದಿಯಲ್ಲಿ ಸಂಭ್ರಮ ಮೂಡಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ಈ ಸಂಭ್ರಮವನ್ನು ಕೆಲವರು ಹೂವಿನೊಂದಿಗೆ ಸೆಲ್ಪಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಖುಷಿಪಡುವುದು ಈಗಿನ ಟ್ರೆಂಡ್ ಆಗಿದೆ.
ಗಿಡನೆಟ್ಟು ಪೋಷಿಸಿ ಹೂ ಬಿಡುವುದನ್ನೇ ಕಾಯುವ ಪುಷ್ಪಪ್ರೇಮಿಗಳಿಗೆ ಗಿಡದಲ್ಲಿ ಗೊಂಚಲು ಗೊಂಚಲಾಗಿ ಹೂ ಬಿಟ್ಟು ಘಮ್ಮೆನ್ನುವಾಗ ಖುಷಿಯಾಗದಿರದು. ಅಷ್ಟೇ ಅಲ್ಲದೆ, ಸಂಭ್ರಮದೊಂದಿಗೆ ಸಾರ್ಥಕ ಭಾವವೂ ಮನತುಂಬುತ್ತದೆ. ಸದ್ಯ ಮಳೆಗಾಲದ ಆರಂಭದ ದಿನವಾಗಿರುವುದರಿಂದ ಹುಲುಸಾಗಿ ಬೆಳೆದ ಬ್ರಹ್ಮಕಮಲ ಗಿಡಗಳಲ್ಲಿ ಮೊಗ್ಗಾಗಿ ಹೂವಾಗಿ ಅರಳುವ ಸಮಯವಾಗಿರುವುದರಿಂದ ಗಿಡನೆಟ್ಟ ಪ್ರತಿ ಪುಷ್ಪಪ್ರೇಮಿಯಲ್ಲೂ ಹೂ ಅರಳುವುದನ್ನು ನೋಡುವ ತವಕ ಇದ್ದೇ ಇರುತ್ತದೆ. ಅದರಲ್ಲೂ ಬ್ರಹ್ಮಕಮಲ ಗಿಡವವಂತು ಇತರೆ ಹೂಗಿಡಗಳಂತೆ ಆಗಾಗ್ಗೆ ಹೂ ಬಿಡುವುದಿಲ್ಲ. ವರ್ಷಕ್ಕೋ… ಎರಡು ವರ್ಷಕ್ಕೊಮ್ಮೆ ಹೂ ಬಿಡುತ್ತದೆ. ಅದೂ ಕೂಡ ನಡು ರಾತ್ರಿಯಲ್ಲಿ. ಆದ್ದರಿಂದ ಪ್ರತಿಯೊಬ್ಬರೂ ಹೂವು ಅರಳುವ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಮರೆಯುವುದಿಲ್ಲ.
ಬ್ರಹ್ಮಕಮಲದ ಬಗ್ಗೆ ಹೇಳಬೇಕೆಂದರೆ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಗಿಡಗಳು ಹೂಗಳು ಬಿಡಲಾರಂಭಿಸುತ್ತವೆ. ಆಷಾಡದಲ್ಲಂತೂ ಗಿಡಗಳು ಒಂದಕ್ಕಿಂತ ಮತ್ತೊಂದು, ತನ್ನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಹೂಗಳನ್ನು ಬಿಟ್ಟು ಮನೆಯಂಗಳದಲ್ಲಿ ಶೋಭಿಸುತ್ತವೆ. ಹೀಗಾಗಿ ಇದನ್ನು ಪುಷ್ಪಲೋಕದ ಅಚ್ಚರಿ ಎಂದರೂ ತಪ್ಪಾಗಲಾರದು. ಕ್ಯಾಕ್ಟಸ್ ಜಾತಿಗೆ ಸೇರಿದ ಬ್ರಹ್ಮಕಮಲದ ವೈಜ್ಞಾನಿಕ ಹೆಸರು ಎಪಿಫಿಲ್ಲಂ ಅಕ್ಸಿಪೆಟಲಂ (Epiphyllum oxypetalum). ಹಿಂದಿಯಲ್ಲಿ ನಿಶಾಗಂಧಿ, ಅಮೇರಿಕಾದಲ್ಲಿ ಮಿಡ್ನೈಟ್ ಲಿಲ್ಲಿ, ಅರ್ಚಿಡ್ ಕ್ಯಾಕ್ಟಸ್, ಪೋಡ್ ಲಿಲ್ಲಿ, ಕ್ಯಾಕ್ಟಸ್ ಬೆಥ್ಲೆಹೆಮ್ ಲಿಲ್ಲಿ ಹೀಗೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.
ಇಷ್ಟಕ್ಕೂ ಬ್ರಹ್ಮಕಮಲ ಭಾರತದ್ದಲ್ಲ ಎಂಬ ಮಾತುಗಳಿವೆ. ದಕ್ಷಿಣ ಅಮೇರಿಕಾ ಇದರ ತವರೆಂದು ಅಲ್ಲಿಂದ ಸ್ಪೆಲಿಷರು ಪೋರ್ಚ್ಗೀಸ್ ನಾವಿಕರ ಮೂಲಕ ವಿಶ್ವದ ಇತರ ಕಡೆಗೆ ಹರಡಿದರೆಂದು ಹೇಳಲಾಗಿದೆ. ಆದರೆ ಬ್ರಹ್ಮಕಮಲ ಭಾರತದತ್ತ ಹದಿನೇಳನೇ ಶತಮಾನದಲ್ಲಿ ಬಂದಿತೆಂದು ಹೇಳಲಾಗುತ್ತಿದೆ. ಹಿಮಾಚಲಪ್ರದೇಶ, ಕಾಶ್ಮೀರ ಮೊದಲಾದ ಪ್ರದೇಶಗಳಲ್ಲಿ ಭಾರತದ್ದೇ ಆದ ನೈಜ ಜಾತಿಯ ಗಿಡಗಳು ಇಂದಿಗೂ ಕಂಡು ಬರುತ್ತವೆ. ಇತರೆ ಪುಷ್ಪಗಿಡಗಳಿಗಿಂತ ವಿಭಿನ್ನವಾಗಿರುವ ಇವು ಸುಮಾರು ಹತ್ತರಿಂದ ಇಪ್ಪತ್ತು ಅಡಿಯಷ್ಟು ಎತ್ತರಕ್ಕೆ ಬೆಳೆಯುತ್ತವೆ. ಈ ಸಸ್ಯದಲ್ಲಿ ರೆಂಬೆ, ಕೊಂಬೆಗಳೇ ಇಡೀ ಸಸ್ಯದ ಜೀವಾಳವಾಗಿದೆ.
ಚಪ್ಪಟೆಯಾಗಿರುವ ಕಾಂಡ, ರೆಂಬೆಗಳು ಹಚ್ಚಹಸಿರಿನಿಂದ ಕೂಡಿದ್ದು, ಇವುಗಳೇ ಧ್ಯುತಿಸಂಶ್ಲೇಷಣಾ ಕ್ರಿಯೆ ನಡೆಸುತ್ತವೆ. ತುದಿಭಾಗ ನೀಳವಾಗಿ ಹಾಗೂ ಅಗಲವಾಗಿ ಹರಡಿಕೊಂಡಿರುವ ಎಲೆಯೇ ಕಾಂಡವಾಗಿದ್ದು, ಇದನ್ನು ಪರ್ಣಸ್ಥಂಭ ರಚನೆ ಎಂದು ಕರೆಯುತ್ತಾರೆ. ಇದರ ಸಸ್ಯಾಭಿವೃದ್ಧಿ ಅಷ್ಟೇನು ಕಷ್ಟವಲ್ಲ. ಬಲಿತ ಎಲೆಯನ್ನೇ ನೆಟ್ಟರೆ ಸಾಕು ಚಿಗುರು ಮೂಡಿ ಸಸ್ಯ ಬೆಳೆಯುತ್ತದೆ. ಹೆಚ್ಚಿನ ನೀರು, ಗೊಬ್ಬರವನ್ನೂ ಇದು ಅಪೇಕ್ಷಿಸುವುದಿಲ್ಲ. ಹೀಗಾಗಿ ಇದನ್ನು ಮನೆಯ ಅಂಗಳದಲ್ಲಿ ಅಥವಾ ಹೂಕುಂಡಗಳಲ್ಲಿ ಸುಲಭವಾಗಿ ಬೆಳೆಸಬಹುದಾಗಿದೆ. ಮನೆಯ ಒಳಗೆ ಕುಂಡದಲ್ಲಿ ಬೆಳೆಸುವುದರಿಂದ ವಾಯು ಮಾಲಿನ್ಯವನ್ನು ತಡೆಗಟ್ಟಬಹುದು ಎಂದು ಹೇಳಲಾಗುತ್ತದೆ.
ಸಾಮಾನ್ಯವಾಗಿ ಮುಂಗಾರು ಆರಂಭವಾಗುತ್ತಿದ್ದಂತೆಯೇ ಬಲಿತ ಗಿಡಗಳ ಎಲೆಗಳ ರಚನೆಯ ಅಂಚಿನಲ್ಲಿ ಪುಟ್ಟದಾಗಿ ನಸುಕೆಂಪು ಬಣ್ಣದ ಮೊಗ್ಗುಗಳು ಹೊರಬಂದು ಸುಮಾರು ಎರಡು ವಾರಗಳಲ್ಲಿ ಬೊಗಸೆಗಿಂತಲೂ ದೊಡ್ಡದಾಗಿ ಬೆಳೆದು ನೆಲದತ್ತ ಮುಖಮಾಡಿ ತೂಗಾಡುತ್ತವೆ. ಆದರೆ ಮೊಗ್ಗುಗಳು ಪಕ್ವಗೊಂಡು ಹೂ ಅರಳುವ ಸಮಯ ಮಾತ್ರ ರಾತ್ರಿಯೇ… ಹೂಗಳು ರಾತ್ರಿ ಸುಮಾರು ಎಂಟು ಗಂಟೆಯಿಂದ ಅರಳಲು ಆರಂಭವಾಗಿ ಮಧ್ಯರಾತ್ರಿ ವೇಳೆಗೆಲ್ಲಾ ಪೂರ್ಣವಾಗಿ ಅರಳಿ ಸುವಾಸನೆಯನ್ನು ಬೀರಲಾರಂಭಿಸುತ್ತವೆ. ಕೆಂಪು ಪುಷ್ಪಪತ್ರೆಯಲ್ಲಿ ಅಚ್ಚ ಬಿಳಿಯ ದಳಗಳನ್ನೊಳಗೊಂಡ ಹೂಗಳು ಸುಂದರವಾಗಿಯೂ, ಮೋಹಕವಾಗಿಯೂ ನೋಡುಗರನ್ನು ಆಕರ್ಷಿಸುತ್ತವೆ.
ವರ್ಷದಿಂದ ಕಾದು ಕುಳಿತ ಮನೆ ಮಂದಿಗೆ ಕೊನೆಗೂ ಮಧ್ಯರಾತ್ರಿಯಲ್ಲಿ ಅರಳಿ ತನ್ನ ಚೆಲುವನ್ನು ಪ್ರದರ್ಶಿಸುವ ಮೂಲಕ ತುಂಟ ನಗು ಬೀರುವ ಬ್ರಹ್ಮಕಮಲ ತನ್ನ ಸೌಂದರ್ಯವನ್ನು ಹೆಚ್ಚು ಸಮಯಗಳ ಕಾಲ ಸವಿಯಲು ಅವಕಾಶ ನೀಡುವುದಿಲ್ಲ. ರಾತ್ರಿ ಅರಳಿದ ಹೂ ಬೆಳಿಗ್ಗೆಯಾಗುತ್ತಿದ್ದಂತೆಯೇ ಮುದುಡಿ ಮೊಗ್ಗಿನಂತಾಗಿ ಕೊನೆಗೆ ಉದುರಿ ಬಿದ್ದು ಹೋಗಿ ಬಿಡುತ್ತದೆ. ಒಂದು ಗಿಡ ಇಷ್ಟೇ ಹೂ ಬಿಡುತ್ತದೆ ಎಂದು ಹೇಳಲಾಗುವುದಿಲ್ಲ. ಗಿಡಗಳ ಬೆಳವಣಿಗೆ ಹಾಗೂ ಅವುಗಳ ಶಕ್ತಿಯಾನುಸಾರ ಹೂ ಬಿಡುತ್ತದೆ. ಗಿಡವೊಂದರಲ್ಲಿ ನಾಲ್ಕರಿಂದ ಪ್ರಾರಂಭವಾಗಿ ನೂರಾರು ಹೂಗಳನ್ನು ಬಿಡುತ್ತವೆ. ಅದೇನೇ ಇರಲಿ ರಾತ್ರಿ ವೇಳೆಯಲ್ಲಿ ಗಿಡದ ತುಂಬಾ ಹೂವಿನಿಂದ ಕಂಗೊಳಿಸುವ ಬ್ರಹ್ಮಕಮಲವನ್ನು ನೋಡುವುದು ಕಣ್ಣಿಗೆ ಹಬ್ಬ.
B.M.Lavakumar