ಭಾರತದ ಚಿತ್ರರಂಗದಲ್ಲಿ ಅಚ್ಚಳಿಯದ ಹೆಸರು ಬಿ.ಆರ್.ಪಂತುಲು.. ಇವರಿಗೆ ಕನ್ನಡ ಚಿತ್ರರಂಗದ ನಂಟು ಹೇಗಿತ್ತು?

ಕನ್ನಡ ಚಿತ್ರರಂಗ ಹಲವು ಬೇರೆ ರಾಜ್ಯಗಳ ಕಲಾವಿದರನ್ನು ತನ್ನಡೆಗೆ ಸ್ವಾಗತಿಸಿ, ಅವರಿಗೆ ಹಣ, ಕೀರ್ತಿ, ಪ್ರೀತಿ ಎಲ್ಲವನ್ನೂ ನೀಡಿ ಅವರ ಬದುಕನ್ನು ಸುಖವಾಗಿಸಿದೆ. ಅವತ್ತಿನಿಂದ ಇವತ್ತಿನವರೆಗೆ ಬಹುತೇಕರು ಕನ್ನಡ ಚಿತ್ರರಂಗದ ಅನ್ನದ ಋಣದ ಬಗ್ಗೆ ಮಾತನಾಡುತ್ತಾರೆ.. ಬಹತೇಕ ಬಹುಭಾಷಾ ಕಲಾವಿದರು ಕನ್ನಡದಲ್ಲಿ ನಟಿಸಿ ಜನಮನಗೆದ್ದಿದ್ದಾರೆ. ಹಿರಿಯ ಕಲಾವಿದರ ಬಗ್ಗೆ ಮಾತನಾಡುವಾಗಲೆಲ್ಲ ಬಹುತೇಕ ಕಲಾವಿದರ ಹೆಸರುಗಳು ಪ್ರಸ್ತಾಪವಾಗಿ ಮನಪಟಲದ ತೆರೆಯಲ್ಲಿ ಮಿಂಚಾಗಿ ಸರಿದು ಹೋಗುತ್ತಿರುತ್ತಾರೆ. ಅವರೆಲ್ಲರೂ ಕನ್ನಡ ಚಿತ್ರರಂಗದ ಬೆಳ್ಳಿಮಿಂಚುಗಳು ಅವರನ್ನು ಆಗಾಗ್ಗೆ ನೆನಪಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ಗೌರವ..
ಬಹುಶಃ ಬಿ.ಆರ್.ಪಂತಲು ಅವರ ಹೆಸರು ಕೇಳದವರು ವಿರಳ.. ಅದರಲ್ಲೂ ಚಿತ್ರಪ್ರೇಮಿಗಳು ಅವರು ನಟಿಸಿದ, ನಿರ್ದೇಶಿಸಿದ, ನಿರ್ಮಿಸಿದ ಚಿತ್ರಗಳನ್ನು ನೋಡದೆ ಇರಲು ಸಾಧ್ಯವೇ ಇಲ್ಲ. ಇದೀಗ ಅವರ ಬಗ್ಗೆ ಒಂದಿಷ್ಟು ವಿಚಾರಗಳನ್ನು ತಿಳಿಸುವ ಪ್ರಯತ್ನವನ್ನು ಎಂದಿನಂತೆ ಕಳೆದ 55 ವರ್ಷಗಳಿಂದಲೂ ಚಿತ್ರರಂಗ ಸೇರಿದಂತೆ ಕಲಾವಿದರ ಬಗ್ಗೆ ಲೇಖನಗಳನ್ನು ಬರೆಯುತ್ತಿರುವ ಕುಮಾರಕವಿ ನಟರಾಜ ಅವರು ಮಾಡಿದ್ದಾರೆ.
ತಮಿಳುನಾಡು- ಕರ್ನಾಟಕ ಗಡಿನಾಡಿನ, ತೆಲುಗು ಮಾತೃಭಾಷೆಯ ಅನುಭವಿ ಚಿತ್ರೋದ್ಯಮಿ, ಕನ್ನಡವನ್ನು ಸ್ಫಷ್ಟ ಸ್ವಚ್ಚ ಸುಲಲಿತ ಭಾವನಾತ್ಮಕ ವಾಗಿ ಹೇಳುತ್ತಿದ್ದ ಸಕಲಕಲಾವಲ್ಲಭ. ನಾಡು ನುಡಿ ಜನರನ್ನು ಹೃದಯಪೂರ್ವಕವಾಗಿ ಗೌರವಿಸುತ್ತಿದ್ದ ಉಚ್ಛಗುಣದ ಸ್ವಚ್ಛಕನ್ನಡಿಗ. ವಿ.ಶಾಂತರಾಂ, ಗುರುದತ್, ಬಿ.ಆರ್.ಛೋಪ್ರ, ಎನ್ ಸಿ.ಸಿಪ್ಪಿ, ರಮಾನಂದಸಾಗರ್, ಎವಿಎಂ, ಬಿಎಸ್.ರಂಗ, ನಾಗಿರೆಡ್ಡಿ ಚಕ್ರಪಾಣಿ ಮುಂತಾದವರಿಂದ ಹೊಗಳಿಸಿಕೊಂಡರು.
ಇವರ ಸ್ವಂತ ಸಂಸ್ಥೆ ಪದ್ಮಿನಿ ಪಿಕ್ಚರ್ಸ್ ಮೂಲಕ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಸಿನಿಮಾಗಳನ್ನು ನಿರ್ಮಿಸಿದ ದೇಶದ ಏಕೈಕ ಬಹುಭಾಷಾ ನಟ ನಿರ್ಮಾಪಕ ನಿರ್ದೇಶಕ ಎಂಬ ದಾಖಲೆಯನ್ನು ಇವತ್ತಿಗೂ ಮುರಿಯಲಾಗಿಲ್ಲ! ಭಾರತ ಚಿತ್ರರಂಗದಲ್ಲಿ ಪಂತುಲು ಹೆಸರನ್ನು ಕೇಳಿರದವರಿಲ್ಲ. ಅವರು ಎಂದೆಂದಿಗೂ ಅಮರ…
26.7.1910ರಂದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕ್ ಬುದ್ಗೂರಲ್ಲಿ ಜನಿಸಿ ಇಂಟರ್ ಮಿಡಿಯೆಟ್ ಮುಗಿಸಿದ ನಂತರ ಶಿಕ್ಷಕ ವೃತ್ತಿ ಸೇರಿದರೂ ಸಹ ಚಂದ್ರಕಲ ನಾಟಕ ಮಂಡಲಿ, ಗುಬ್ಬಿವೀರಣ್ಣ ಕಂಪನಿ ಹಾಗೂ ಸ್ವಂತದ್ದಾದ ಕಲಾಸೇವ ನಾಟಕ ಮಂಡಲಿ ಮುಖೇನ ಸಂಸಾರನೌಕ ಸದಾರಮೆ ಶ್ರೀಕೃಷ್ಣಗಾರುಡಿ ಮುಂತಾದ ನಾಟಕಗಳಲ್ಲಿ ಜನಪ್ರಿಯ ನಟರಾದರು. ಕ್ರಮೇಣ ನೌಕರಿಗೆ ರಾಜೀನಾಮೆ ನೀಡಿ ಸಿನಿಲೋಕದಲ್ಲಿ ಶಾಶ್ವತವಾಗಿ ತೊಡಗಿಸಿಕೊಂಡರು.
ಭಾರತದ ಪ್ರಪ್ರಥಮ ಚಿತ್ರ ನಿರ್ಮಾಪಕಿ ಎಂಬ ಕೀರ್ತಿ ಪಡೆದು ದ.ಭಾರತದ ನೂರಾರು ಚಿತ್ರಗಳಲ್ಲಿ ಅಭಿನಯಿಸುತ್ತಿದ ಚತುರ್ಭಾಷಾ ಖ್ಯಾತನಟಿ ಎಂ.ವಿ.ರಾಜಮ್ಮ ಇವರ ತಾರಾಪತ್ನಿ, ಮಕ್ಕಳು ರವಿಶಂಕರ್ ಮತ್ತು ವಿಜಯಲಕ್ಷ್ಮಿ. ಸದೃಢರಾಗಿದ್ದ ಬಿ.ಆರ್.ಪಂತುಲು 8.10.1974ರಂದು ಕಾಲವಾಗಿ ಭರಿಸಲಾರದ ನಷ್ಟವುಂಟಾಯಿತು.
1958ರಲ್ಲಿ ಅಖಿಲ ಭಾರತ ದಾಖಲೆ ನಿರ್ಮಿಸಿ ರಾಷ್ಟ್ರಪ್ರಶಸ್ತಿ ಪಡೆದ ಸ್ಕೂಲ್ ಮಾಸ್ಟರ್ ಚಿತ್ರ ಹಿಂದಿ, ತಮಿಳ್, ತೆಲುಗು, ಮಲಯಾಳಂ ಭಾಷೆಗಳಲ್ಲಿ ಡಬ್- ರಿಮೇಕ್ ಆಗಿ ಇತಿಹಾಸ ಬರೆಯಿತು! ಕಿತ್ತೂರು ಚೆನ್ನಮ್ಮ ಮತ್ತು (ಕನ್ನಡದ ಡಾ.ರಾಜ್ ರವರ ಪ್ರಥಮ ಐತಿಹಾಸಿಕ ಕಲರ್ ಚಿತ್ರ) ಶ್ರೀಕೃಷ್ಣದೇವರಾಯ ಇಂತಹ ಅಮೋಘ ಚಿತ್ರಗಳನ್ನರ್ಪಿಸಿದ ಅಪ್ರತಿಮ ಸಾಧಕ! ಈ ಚಿತ್ರದ ಮಹಾಮಂತ್ರಿ ತಿಮ್ಮರಸು ಪಾತ್ರಕ್ಕೆ ಅತ್ಯುತ್ತಮ ನಟ ರಾಜ್ಯಪ್ರಶಸ್ತಿ ದೊರೆತಾಗ, ನಮ್ರವಾಗಿ ತಿರಸ್ಕರಿಸಿ ಸರ್ಕಾರಕ್ಕೆ ವಿನಂತಿಸಿ ಪ್ರಶಸ್ತಿಯನ್ನು ರಾಜ್ ಕುಮಾರ್ ಗೆ ಕೊಡಿಸಿದ ಮಹಾತ್ಯಾಗಿ, ಇದೂ ವಿಶ್ವದಾಖಲೆ.
ರಾಜ್, ಕಲ್ಯಾಣ್, ಉದಯ್, ಕುಮಾರತ್ರಯರು ಕಲ್ಪನ, ಭಾರತಿ, ಜಯಂತಿ, ಜಯಲಲಿತ ಮುಂತಾದ ಹಳೆ ನಟನಟಿಯರಿಗೆ ಪುನರ್ಜೀವನ ನೀಡಿದ ಮತ್ತು ಅನೇಕ ಹೊಸಬರನ್ನು ಪರಿಚಯಿಸಿದ ಗ್ರೇಟ್ ಲೆಜೆಂಡ್. ಇವರ ಸಂಸ್ಥೆಯಲ್ಲಿ ಶಾಶ್ವತ ಕಥಾ-ಸಾಹಿತ್ಯ-ತಾಂತ್ರಿಕ ವಿಭಾಗವಿತ್ತು. ಉದಾ: ಸಂಗೀತಕ್ಕೆ ಟಿ.ಜಿ.ಲಿಂಗಪ್ಪ, ಛಾಯಾಗ್ರಾಹಣಕ್ಕೆ ಬಿ.ಎನ್.ಹರಿದಾಸ್, ಇತ್ಯಾದಿ. ಪಂತುಲು ನಿಧನಾನಂತರ ಅರ್ಧಕ್ಕೆ ಸ್ಥಗಿತಗೊಂಡಿದ್ದ ಕಾಲೇಜುರಂಗ ಚಿತ್ರವನ್ನು 1976ರಲ್ಲಿ ಇವರ ಶಿಷ್ಯ ಪುಟ್ಟಣ್ಣಕಣಗಾಲ್ ಪೂರ್ಣಗೊಳಿಸಿದರು. ಒಟ್ಟಾರೆ 5ಭಾಷೆಗಳಲ್ಲಿ ನಿರ್ಮಿಸಿದ 52 ಚಿತ್ರಗಳ ಪೈಕಿ 25 ಕನ್ನಡ ಚಿತ್ರಗಳು. ರಾಜೇಂದ್ರಪ್ರಸಾದ್, ನೆಹರು ಗಣ್ಯರಿಂದ ತಾಮ್ರಪತ್ರ, ರಾಷ್ಟ್ರಪ್ರಶಸ್ತಿ ಪಡೆದರಲ್ಲದೆ ವಿವಿಧ ರಾಜ್ಯಗಳ ಪ್ರಶಸ್ತಿ, ಅಂತರ್ರಾಷ್ಟ್ರ ಪ್ರಶಸ್ತಿಗಳನ್ನು ಪಡೆದರು.
ಪಂತುಲು ನಿರ್ಮಿಸಿ,ನಿರ್ದೇಶಿಸಿ,ನಟಿಸಿದ ಕನ್ನಡ ಫಿಲಮ್ಸ್: ಸಂಸಾರನೌಕ, ರಾಧಾರಮಣ, ಜಲದುರ್ಗ, ಮೊದಲತೇದಿ, ಶಿವಶರಣೆ ನಂಬಿಯಕ್ಕ, ಸ್ಕೂಲ್ ಮಾಸ್ಟರ್, ಅಬ್ಬಾ ಆ ಹುಡುಗಿ, ರತ್ನಗಿರಿರಹಸ್ಯ, ಮಕ್ಕಳ ರಾಜ್ಯ, ಕಿತ್ತೂರು ಚೆನ್ನಮ್ಮ, ಗಾಳಿಗೋಪುರ, ಸಾಕುಮಗಳು, ಚಿನ್ನದಗೊಂಬೆ, ಗಂಗೆಗೌರಿ, ಎಮ್ಮೆತಮ್ಮಣ್ಣ, ಬೀದಿಬಸವಣ್ಣ, ಚಿನ್ನಾರಿಪುಟ್ಟಣ್ಣ, ದುಡ್ಡೇ ದೊಡ್ಡಪ್ಪ, ಅಮ್ಮ, ಅಳಿಯ ಗೆಳೆಯ, ಗಂಡೊಂದುಹೆಣ್ಣಾರು, ಶ್ರೀಕೃಷ್ಣದೇವರಾಯ, ಮಾಲತಿ ಮಾಧವ, ಒಂದು ಹೆಣ್ಣಿನ ಕಥೆ, ಕಾಲೇಜುರಂಗ ಇವತ್ತಿಗೂ ಕುತೂಹಲ ಕೆರಳಿಸುತ್ತವೆ.
Wonderful article about BR PANTULU 👏 👌 👍 I am not aware of this legendary personality of Indian film industry, thank you very much sir 🙏