ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರಾ? ನವೆಂಬರ್ ನಲ್ಲಿ ಮುಂದಿನ ರಾಜಕೀಯ ಭವಿಷ್ಯ ಬಯಲಾಗುತ್ತಾ? ಸಿಎಂ ಚರ್ಚೆಗೆ ತೆರೆ ಬೀಳುತ್ತಾ?

ಬೆಂಗಳೂರು: ಸಿದ್ದರಾಮಯ್ಯ ಈ ಬಾರಿ ಸಿಎಂ ಸ್ಥಾನವನ್ನು ಹಠ ಮಾಡಿ ಪಡೆದುಕೊಂಡಿದ್ದಾರೆ ಎನ್ನವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ಚುನಾವಣೆ ಬಳಿಕ ತಾನೇ ಸಿಎಂ ಆಗಬೇಕೆಂದು ಡಿ.ಕೆ.ಶಿವಕುಮಾರ್ ಪಣತೊಟ್ಟಿದ್ದರು. ಇಬ್ಬರು ನಾಯಕರು ಸಿಎಂ ಸ್ಥಾನಕ್ಕಾಗಿ ನಡೆಸಿದ ಜಗ್ಗಾಟವನ್ನು ರಾಜ್ಯದ ಜನ ನೋಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯನವರು ಸಿಎಂ ಸ್ಥಾನವನ್ನು ಬಲವಂತವಾಗಿ ಪಡೆದುಕೊಂಡಿದ್ದಾರೆ ಎನ್ನುವುದು ಗೊತ್ತಿರುವ ವಿಚಾರವೇ.. ಆದರೆ ಸಿಎಂ ಸ್ಥಾನ ಐದು ವರ್ಷದ ತನಕ ಮುಂದುವರೆಯುತ್ತಾ? ಈ ವರ್ಷವೇ ಅಂತ್ಯವಾಗುತ್ತಾ? ಎಂಬ ಸಿಎಂನ ರಾಜಕೀಯ ಭವಿಷ್ಯವನ್ನು ನವೆಂಬರ್ ತಿಂಗಳು ಹೇಳಲಿದೆ…
ಸಿಎಂ ಆದ ಎರಡು ವರ್ಷದ ಅವಧಿಯಲ್ಲಿ ಅವರ ಮೇಲೆ ಮುಡಾ ಹಗರಣ ತಗಲಾಕಿಕೊಂಡು ತಮ್ಮದೇ ಸರ್ಕಾರದ ಕೆಳಮಟ್ಟದ ಅಧಿಕಾರಿಯಿಂದ ವಿಚಾರಣೆಗೊಳಗಾಗಿದ್ದು, ಆ ನಂತರ ಐಎಎಸ್ ಅಧಿಕಾರಿ ಮೇಲೆ ಗದರಿ ವೇದಿಕೆಯಿಂದ ಆಚೆಗೆ ಕಳಿಸಿದ್ದು, ಸಮಾವೇಶದಲ್ಲಿ ಪೊಲೀಸ್ ಅಧಿಕಾರಿ ಮೇಲೆ ಕೈ ಎತ್ತಿದ್ದು, ಕಾಲು ತುಳಿತದ ಪ್ರಕರಣದಲ್ಲಿ ಪೊಲೀಸರನ್ನು ತಲೆ ದಂಡ ಮಾಡಿ ಸಸ್ಪೆಂಡ್ ಮಾಡಿರುವುದು, ಜಾತಿಗಣತಿಯನ್ನು ಜಾರಿಗೆ ತರುವಲ್ಲಿ ವಿಫಲರಾಗಿರುವುದು, ಹಿಂದೂ ವಿರೋಧಿ ಧೋರಣೆ, ಮುಸ್ಲಿಂ ಸಮುದಾಯದ ಓಲೈಕೆ ಸೇರಿದಂತೆ ಹತ್ತು ಹಲವು ಆರೋಪಗಳು ಸಿದ್ದರಾಮಯ್ಯ ಅವರ ಮೇಲಿದೆ.
ಇದೆಲ್ಲದರ ನಡುವೆ ಡಿ.ಕೆ.ಶಿವಕುಮಾರ್ ಉಳಿದ ಅವಧಿಗೆ ಸಿಎಂ ಆಗಲೇ ಬೇಕೆಂಬ ಹಠತೊಟ್ಟಿದ್ದಾರೆ. ಅವರ ಬೆಂಬಲಿಗರು ಸಮಯ ಸಿಕ್ಕಾಗಲೆಲ್ಲ ಸಿಎಂ ಬದಲಾವಣೆ ವಿಚಾರ ಕುರಿತಂತೆ ಮಾತನಾಡುತ್ತಿದ್ದಾರೆ. ಇನ್ನು ಏನೇನು ಒಪ್ಪಂದ ಆಗಿವೆ ಎನ್ನುವುದು ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಮಾತ್ರ ಗೊತ್ತಿದೆ. ಹೀಗಾಗಿ ಈ ವಿಚಾರದಲ್ಲಿ ಸತ್ಯ ಏನೆಂಬುದು ಯಾರಿಗೂ ಗೊತ್ತಿಲ್ಲ. ಕೇವಲ ಊಹಾಪೋಹದ ಮಾತುಗಳಷ್ಟೆ ಹರಿದಾಡುತ್ತಿವೆ. ಹೈಕಮಾಂಡ್ ಮಟ್ಟದಲ್ಲಿ ಡಿ.ಕೆ.ಶಿವಕುಮಾರ್ ಪ್ರಭಾವಶಾಲಿಗಳಾಗಿದ್ದಾರೆ. ಅವರ ಮಾತುಗಳು ನಡೆಯುತ್ತವೆ ಎನ್ನುವುದು ಜಾತಿಗಣತಿ ವಿಚಾರದಲ್ಲಿಯೇ ಗೊತ್ತಾಗಿದೆ.
ಕಳೆದ 2013ರಿಂದ 2018ರವರೆಗೆ ಸಿಎಂ ಆಗಿ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರಿಗೆ ಇಷ್ಟೊಂದು ಸವಾಲ್ ಗಳಿರಲಿಲ್ಲ. ಜತೆಗೆ ಹಿತಶತ್ರುಗಳ ಪ್ರಮಾಣವೂ ಕಡಿಮೆಯಿತ್ತು. ಆದರೆ ಈ ಬಾರಿ ಅವರಿಗೆ ಹೆಜ್ಜೆ ಹೆಜ್ಜೆಗೂ ಅಗ್ನಿಪರೀಕ್ಷೆಗಳೇ ಇದ್ದು ಅವುಗಳನ್ನು ಎದುರಿಸಬೇಕಾಗಿದೆ. ಇದುವರೆಗಿನ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರವನ್ನು ನಡೆಸಿಕೊಂಡು ಬಂದಿರುವುದೇ ಸಾಧನೆಯಾಗಿದೆ. ಗ್ಯಾರಂಟಿ ಯೋಜನೆಗಳನ್ನು ನೀಡಿದ್ದರೂ ಅದರ ಬಗ್ಗೆ ಅಪಸ್ವರಗಳು ಹೆಚ್ಚಾಗಿವೆ. ಅಷ್ಟೇ ಅಲ್ಲದೆ ಮುಂದುವರೆಸಿಕೊಂಡು ಹೋಗುವುದು ಕೂಡ ಸವಾಲ್ ಆಗಿದೆ.
ತಮ್ಮದೇ ಶಾಸಕರ ವಿರೋಧದ ನಡುವೆ, ಈಗಿರುವ ಸವಾಲ್ ಗಳೆಲ್ಲವನ್ನು ಎದುರಿಸಿ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರೆಯುತ್ತಾರಾ? ಎಂಬುದು ಸದ್ಯಕ್ಕಿರುವ ಪ್ರಶ್ನೆ. ಎಲ್ಲರೂ ನವೆಂಬರ್ ನಲ್ಲಿ ಅಧಿಕಾರ ಹಸ್ತಾಂತರವಾಗುತ್ತದೆ ಎಂದು ಕಾಯುತ್ತಿದ್ದಾರೆ. ಆದರೆ ಅದೆಲ್ಲವೂ ಗೊತ್ತಾಗಬೇಕಾದರೆ ಮುಂದಿನ ನವೆಂಬರ್ ತನಕ ಕಾಯಲೇ ಬೇಕಾಗುತ್ತದೆ. ರಾಜಕೀಯದಲ್ಲಿ ಏನೆಲ್ಲ ಬೆಳವಣಿಗೆ ಆಗುತ್ತದೆ ಎಂಬುದು ತಿಳಿಯಬೇಕಾದರೆ ನವೆಂಬರ್ ತನಕ ಕಾದು ನೋಡುವುದು ಅನಿವಾರ್ಯವಾಗಿದೆ.
B.M.Lavakumar