ಎಲ್ಲೆಂದರಲ್ಲಿ ಮಾರಾಟವಾಗುತ್ತಿರುವ ಕಳಪೆ ಜೇನು.. ಇದು ಕೊಡಗಿನ ಶುದ್ಧ ಜೇನಿಗೆ ಕಂಟಕ.. ತಡೆಯೋದು ಹೇಗೆಂಬುದೇ ಯಕ್ಷ ಪ್ರಶ್ನೆ…!

ಕೊಡಗಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರು ಹಿಂತಿರುಗುವಾಗ ಕೊಡಗಿನ ಜೇನನ್ನು ತಮ್ಮೊಂದಿಗೆ ಕೊಂಡೊಯ್ಯಲು ಇಷ್ಟಪಡುತ್ತಾರೆ. ಇದಕ್ಕೆ ಕೊಡಗಿನಲ್ಲಿ ಉತ್ಪತ್ತಿಯಾಗುವ ಜೇನಿನಲ್ಲಿರುವ ರೋಗ ನಿರೋಧಕ ಶಕ್ತಿಯೇ ಕಾರಣವಾಗಿದೆ ಕೊಡಗಿನ ಜೇನು ಅರ್ಥಾತ್ ಕೂರ್ಗ್ ಹನಿ ತನ್ನದೇ ಆದ ಖ್ಯಾತಿಯನ್ನು ಹೊಂದಿದೆ. ಇಲ್ಲಿನ ಜೇನಿಗೆ ಇರುವ ಜನಪ್ರಿಯತೆ ಇವತ್ತು ನಿನ್ನೆಯದಲ್ಲ ಅದಕ್ಕೆ ತಲೆಮಾರುಗಳ ಇತಿಹಾಸವಿದೆ… ಆದರೆ ಶುದ್ಧ ಕೊಡಗಿನ ಜೇನು ಕಳಪೆ ಜೇನಿನ ನಡುವೆ ತನ್ನ ಮೌಲ್ಯವನ್ನು ಕಳೆದುಕೊಳ್ಳಬೇಕಾದ ದುಸ್ಥಿತಿಗೆ ತಲುಪುವಂತಾಗಿದೆ.. ಇಷ್ಟಕ್ಕೂ ಕೊಡಗಿನಲ್ಲಿ ಆಗುತ್ತಿರುವುದೇನು?
ಮಡಿಕೇರಿ: ಕೊಡಗಿನಾದ್ಯಂತ ಎಲ್ಲೆಂದರಲ್ಲಿ ಬಾಟಲಿಗಳಲ್ಲಿ ತುಂಬಿಸಿ ಮಾರಾಟಕ್ಕಿಟ್ಟ ಜೇನನ್ನು ಕಂಡಾಗ ಕೊಡಗಿನ ಜೇನಿಗೆ ಶುಕ್ರದೆಸೆ ಶುರುವಾಗಿದೆಯಾ ಎಂದೆನಿಸದಿರದು. ಆದರೆ ಸಿಕ್ಕಸಿಕ್ಕಲ್ಲಿ ಮಾರಾಟವಾಗುತ್ತಿರುವ ಜೇನು ನಿಜಕ್ಕೂ ಕೊಡಗಿನ ಶುದ್ಧ ಜೇನಾ? ಎಂಬ ಪ್ರಶ್ನೆ ಮೂಡದಿರದು. ಏಕೆಂದರೆ ಜೇನು ಸಾಕಾಣೆದಾರರ ಪ್ರಕಾರ ಜೇನು ಉತ್ಪತ್ತಿ ಕುಂಠಿತವಾಗುತ್ತಿದೆ. ಮೊದಲಿನಷ್ಟು ಸುಲಭವಾಗಿ ಜೇನು ಉತ್ಪತ್ತಿಯಾಗುತ್ತಿಲ್ಲ ಎಂಬ ಮಾತುಗಳನ್ನಾಡುತ್ತಿದ್ದಾರೆ. ಆದರೆ ಇಷ್ಟೊಂದು ಜೇನು ಎಲ್ಲಿಂದ ಬರುತ್ತಿದೆ? ಇಷ್ಟಕ್ಕೂ ಈ ಜೇನುಗಳ ಮೂಲ ಯಾವುದು? ಎಂಬುದನ್ನು ಜಿಲ್ಲಾಡಳಿತ ಪತ್ತೆ ಹಚ್ಚಬೇಕಾಗಿದೆ. ಅಷ್ಟೇ ಅಲ್ಲದೆ ಶುದ್ಧ ಜೇನು ಹೊರತು ಪಡಿಸಿ ಕಳಪೆ ಜೇನಿಗೆ ಅವಕಾಶ ಮಾಡಿಕೊಡದಂತೆ ನೋಡಿಕೊಳ್ಳಬೇಕಿದೆ.
ಕಳಪೆ ಜೇನಿನ ಆರ್ಭಟದಲ್ಲಿ ಶುದ್ಧ ಕೊಡಗಿನ ಜೇನಿನ ಜನಪ್ರಿಯತೆಗೆ ಧಕ್ಕೆ ಬರುವ ಸಾಧ್ಯತೆ ಹೆಚ್ಚಾಗುತ್ತಿದೆ. ಏಕೆಂದರೆ ಕೊಡಗಿನ ಶುದ್ಧ ಜೇನಿನ ವಿಶೇಷತೆಯೇ ಹಾಗಿದೆ. ಕೊಡಗಿನ ಹಸಿರ ಸಿರಿಯ ಮಡಿಲಲ್ಲಿ ಉತ್ಪತ್ತಿಯಾಗುವ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಜೇನು ದೇಶ-ವಿದೇಶದಲ್ಲಿ ಮನೆ ಮಾತಾಗಿದೆ. ಆದರೆ ಬೇಡಿಕೆಗೆ ಅನುಗುಣವಾಗಿ ಕೊಡಗಿನಲ್ಲಿ ಜೇನು ಉತ್ಪಾದನೆಯಾಗುತ್ತಿಲ್ಲ ಎಂಬ ಮಾತುಗಳು ಹಿಂದಿನಿಂದಲೂ ಕೇಳಿ ಬರುತ್ತಿದೆ. ಇವತ್ತು ಜೇನು ಪ್ರವಾಸೋದ್ಯಮದ ಒಂದು ಭಾಗವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಶುದ್ಧ ಜೇನನ್ನು ಬಯಸುತ್ತಿದ್ದಾರೆ.
ಒಂದು ಕಾಲದಲ್ಲಿ ಕೊಡಗಿನ ಜೇನು ಕಾಫಿ, ಏಲಕ್ಕಿ, ಕಿತ್ತಳೆಯಷ್ಟೇ ವಿಶ್ವ ಶ್ರೇಷ್ಠವಾಗಿತ್ತು. ಆದರೆ ನಾಶದ ಅಂಚಿನ ವಾಣಿಜ್ಯ ಬೆಳೆಗಳ ಸಾಲಿಗೆ ಸೇರಿ ಹೋದ ಸಿಹಿಜೇನು ಕ್ಷೇತ್ರ ರೋಗಬಾಧೆಯಿಂದ ಬಳಲಿತು. ಕೊಡಗಿನ ಬೆಳೆಗಾರರ ಪ್ರತಿ ತೋಟಗಳಲ್ಲಿ ಉಪಕಸುಬಾಗಿ ಕಂಗೊಳಿಸುತ್ತಿದ್ದ ಜೇನುಪೆಟ್ಟಿಗೆಗಳು ನಂತರದ ದಿನಗಳಲ್ಲಿ ಮರೆಯಾಗತೊಡಗಿದವು. ಕೊಡಗಿನ ಜೇನಿನ ಬಗ್ಗೆ ಹೇಳಬೇಕೆಂದರೆ, ಪ್ರತಿ ವರ್ಷ ಜನವರಿ ತಿಂಗಳಿನಿಂದ ಮೇ ತಿಂಗಳಿನವರೆಗೆ ಜಿಲ್ಲೆಯಲ್ಲಿ ಜೇನು ಉತ್ಪಾದನೆಯಾಗುತ್ತದೆ. ಕಾರಣ ಈ ಐದು ತಿಂಗಳುಗಳಲ್ಲಿ ಸುಮಾರು 120 ಬಗೆಯ ಹೂವುಗಳು ಕೊಡಗಿನ ಹಸಿರ ಪರಿಸರದಲ್ಲಿ ಅರಳಿ ನಿಲ್ಲುತ್ತವೆ. ಅದರಲ್ಲೂ ಹೆಚ್ಚು ಮಕರಂದ ಉತ್ಪತ್ತಿಯಾಗುವುದು ಕಾಫಿ ಗಿಡಗಳಿಂದ ಎನ್ನುವುದು ಅಷ್ಟೇ ಸತ್ಯ.
ಪರಾಗ ಸ್ಪರ್ಶದ ಮೂಲಕ ಮಕರಂದವನ್ನು ಹೀರುವ ಜೇನು ನೊಣಗಳು ಜೇನಿನ ಸವಿಯನ್ನು ನೀಡುತ್ತವೆ. ಜೇನು ಕೃಷಿಯಿಂದ ಕೇವಲ ಜೇನಿನ ಲಾಭ ಮಾತ್ರವಲ್ಲ, ಮತ್ತೆರಡು ಲಾಭಗಳಿವೆ. ಪರಾಗ ಸ್ಪರ್ಶದಿಂದ ತೋಟಗಳಲ್ಲಿ ಇಳುವರಿ ಹೆಚ್ಚಾಗುತ್ತದೆ ಮತ್ತು ಪರಿಸರದ ಸಂರಕ್ಷಣೆಯಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳಿಂದ ಹನಿ ಗೂಡಿ ಹಳ್ಳ ಎನ್ನುವಂತೆ ಸಣ್ಣ ಸಣ್ಣ ಜೇನು ನೊಣಗಳು ಸಂಗ್ರಹಿಸಿದ ಜೇನಿನಲ್ಲಿ ರೋಗ ನಿರೋಧಕ ಶಕ್ತಿಯೂ ಅಡಕವಾಗಿರುತ್ತದೆ. ಇದೇ ಕಾರಣಕ್ಕೆ ಕೊಡಗಿನ ಜೇನಿಗೆ ಹೆಚ್ಚು ಬೇಡಿಕೆ ಇದೆ. ಕಳೆದ ಒಂದೆರಡು ದಶಕಗಳಿಂದ ದೇಶ-ವಿದೇಶಗಳಿಂದ ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತಿದೆ. ಅವರ ಬೇಡಿಕೆಗೆ ತಕ್ಕಂತೆ ಶುದ್ಧ ಜೇನು ಉತ್ಪತ್ತಿಯಾಗುತ್ತಿಲ್ಲ ಎನ್ನುವುದು ಅಷ್ಟೇ ಸತ್ಯ.
ಕೊಡಗಿನಲ್ಲಿ ಜೇನು ಉತ್ಪತ್ತಿಗೆ ತೊಂದರೆಯಾಗಿರುವುದು ಎಲ್ಲಿ ಎಂಬುದನ್ನು ನೋಡಿದ್ದೇ ಆದರೆ, ಕೆಲವು ವರ್ಷಗಳ ಹಿಂದೆ ಕೊಡಗಿನ ಜೇನನ್ನು ಕಾಡಿದ ರೋಗ ಬಾಧೆಯ ಆತಂಕ ಕೃಷಿಕರಿಂದ ಇನ್ನೂ ಕೂಡ ದೂರವಾಗಿಲ್ಲ. ಇದೇ ಕಾರಣಕ್ಕೆ ಇಂದು ಕೊಡಗಿನಲ್ಲಿ ಜೇನು ಕೃಷಿಯನ್ನೇ ಪ್ರಮುಖವಾಗಿ ಯಾರೂ ಕೈಗೆತ್ತಿಕೊಂಡಿಲ್ಲ. ಉಪಕಸುಬಾಗಿ ಜೇನು ಕೃಷಿ ನಡೆಯುತ್ತಿದ್ದು, ದೊಡ್ಡಮಟ್ಟದಲ್ಲಿ ಜೇನು ಕೃಷಿಯನ್ನು ಮಾಡುತ್ತಿಲ್ಲ. ಎಲ್ಲವೂ ಚೆನ್ನಾಗಿ ಆದರೆ ಒಂದು ಪೆಟ್ಟಿಗೆಯಲ್ಲಿ ಕನಿಷ್ಠ 6 ರಿಂದ 8 ಕೆಜಿ ಜೇನನ್ನು ಪಡೆಯಬಹುದಾಗಿದೆ.
ಹಿಂದಿನ ಕಾಲದಲ್ಲಿ 20 ರಿಂದ 25 ಕೆಜಿಯಷ್ಟು ಜೇನು ಉತ್ಪಾದನೆಯಾಗುತ್ತಿತ್ತು ಎಂದು ಕಳೆದ ಮೂರು ದಶಕಗಳಿಂದ ಜೇನು ಕೃಷಿಯನ್ನೇ ಅವಲಂಭಿಸಿರುವ ಮಡಿಕೇರಿಯ ಎಸ್.ಕೆ.ವಸಂತ ಹೇಳುತ್ತಾರೆ. ಜೇನು ಕೃಷಿಗೆ ತಗಲುವ ವೈರಸ್ ನ್ನು ಸಂಪೂರ್ಣವಾಗಿ ಹತೋಟಿಗೆ ತರಲು ಸಾಧ್ಯವಾಗಿಲ್ಲ. ಕಾರಣ ಅರಣ್ಯ ಪ್ರದೇಶದಿಂದ ಆಗಮಿಸುವ ಜೇನು ನೊಣಗಳು ಪರಾಗಸ್ಪರ್ಷ ಕ್ರಿಯೆಯಲ್ಲಿ ತೊಡಗುವಾಗ ಇವುಗಳಲ್ಲಿರುವ ವೈರಸ್ ಹೂವುಗಳಿಗೆ ಹರಡುತ್ತವೆ. ಇದೇ ಹೂವುಗಳನ್ನು ಕೃಷಿಕರು ಬೆಳೆಸಿದ ಜೇನುನೊಣಗಳು ಸ್ಪರ್ಶಿಸಿದಾಗ ಆರೋಗ್ಯವಂತ ನೊಣಗಳ ಪೆಟ್ಟಿಗೆಗಳನ್ನೂ ರೋಗಬಾಧೆ ಕಾಡುತ್ತದೆ ಎಂದು ಇವರು ಅಭಿಪ್ರಾಯಪಡುತ್ತಾರೆ.
ಈಗಾಗಲೇ ಜೇನುಕೃಷಿಕ ವಸಂತ್ ಅವರು ಜೇನು ಕೃಷಿಯಲ್ಲಿ ಹಲವು ರೀತಿಯ ಪ್ರಯೋಗಗಳನ್ನು ಮಾಡಿದ್ದಾರೆ. ಪೆಟ್ಟಿಗೆಗಳನ್ನು ಇಡಲು ಕಬ್ಬಿಣದ ಸ್ಟ್ಯಾಂಡ್ ನ್ನು ತಯಾರಿಸಿರುವ ಇವರು ಭೂಮಟ್ಟದಿಂದ ಮೇಲಕ್ಕೇರುವ ಇರುವೆಗಳನ್ನು ತಡೆಯಲು ಸ್ಟ್ಯಾಂಡ್ ನ ನಡುವಿನಲ್ಲಿ ವೇಸ್ಟ್ ಆಯಿಲ್ ಸುರಿಯಲು ವ್ಯವಸ್ಥೆಯನ್ನು ಮಾಡಿದ್ದಾರೆ. ಜೇನಿನನ ಆಸೆಗೆ ಮೇಲೇರುವ ಇರುವೆಗಳು ವೇಸ್ಟ್ ಆಯಿಲ್ ನಲ್ಲಿ ಬಿದ್ದು, ಸಾವನ್ನಪ್ಪುತ್ತವೆ. ಈ ಆಯಿಲ್ ಗೆ ರಾಣಿ ಜೇನು ನೊಣ ಬೀಳಬಾರದೆಂದು ಮೇಲ್ಭಾಗದಲ್ಲಿ ರಕ್ಷಣಾ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಇದೊಂದು ಯಶಸ್ವೀ ಪ್ರಯೋಗವೆಂದು ಎಸ್.ಕೆ.ವಸಂತ್ ಹೆಮ್ಮೆ ವ್ಯಕ್ತಪಡಿಸುತ್ತಾರೆ.
ಕೊಡಗಿನ ಜೇನಿನಲ್ಲಿ ರೋಗ ನಿರೋಧಕ ಶಕ್ತಿ ಇದೆ ಎನ್ನುವ ಕಾರಣಕ್ಕಾಗಿಯೇ ಬೇಡಿಕೆ ಹೆಚ್ಚಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕೆಲವು ವ್ಯಾಪಾರಿಗಳು ಕಲಬೆರಕೆ ಜೇನಿನ ಮಾರಾಟದ ಮೂಲಕ ಲಾಭ ಗಳಿಸುವ ದಂಧೆ ಮಾಡುತ್ತಿದ್ದಾರೆ. ಶುದ್ಧ ಜೇನನ್ನು ನೀಡುವ ಪ್ರಾಮಾಣಿಕ ಕೃಷಿಕರು ಅತಿ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ಜೇನಿನ ಬೆಲೆಯನ್ನು ದುಬಾರಿಗೊಳಿಸಿದ್ದಾರೆ. ಶುದ್ಧ ಜೇನಿನ ಬೆಲೆಯನ್ನು ಸಹಿಸಿಕೊಳ್ಳುವ ಆರ್ಥಿಕ ಬಲ ಎಲ್ಲಾ ಪ್ರವಾಸಿಗರಲ್ಲಿ ಇರುವುದಿಲ್ಲ. ಆದ್ದರಿಂದ ಶುದ್ಧ ಜೇನಿಗಿಂತ ಇಂದು ಕಲಬೆರಕೆಯ ಅಶುದ್ಧ ಜೇನಿಗೆ ಬೇಡಿಕೆ ಹೆಚ್ಚಿದೆ.
ನಿಜಹೇಳಬೇಕೆಂದರೆ ಜೇನು ಕೃಷಿ ಲಾಭದಾಯಕ ಕೃಷಿಯಾಗಿದ್ದು, ಬೆಲೆ ನಿಗಧಿ ಅಥವಾ ಬೆಲೆ ನಿಯಂತ್ರಣದ ಬಗ್ಗೆ ಮತ್ತು ಕಲಬೆರಕೆ ಜೇನಿನ ಬಗ್ಗೆ ಆಡಳಿತ ವ್ಯವಸ್ಥೆ ಗಮನ ಹರಿಸಬೇಕಾಗಿದೆ. ಇಲ್ಲದಿದ್ದಲ್ಲಿ ವಿಶ್ವ ವಿಖ್ಯಾತಿಯನ್ನು ಪಡೆದಿರುವ ಕೊಡಗಿನ ಸಿಹಿ ಜೇನು ಸತ್ಯ ಬಯಲಿನಿಂದ ಕಹಿಯಾಗಿ ಬಿಡಬಹುದು. ಶುದ್ಧ ಜೇನನ್ನು ಉತ್ಪಾದನೆ ಮಾಡುವ ಪ್ರಾಮಾಣಿಕ ಕೃಷಿಕರ ಜೀವನದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದು. ಇನ್ನು ಜೇನು ನೊಣಗಳಿಲ್ಲದ ವಿಶ್ವದಲ್ಲಿ ಮಾನವ ಕೇವಲ 4 ವರ್ಷಗಳು ಮಾತ್ರ ಬದುಕಬಲ್ಲ ಎನ್ನುವ ಸತ್ಯವನ್ನು ಪ್ರತಿಯೊಬ್ಬರು ಅರಿತುಕೊಳ್ಳುವ ಅಗತ್ಯವಿದೆ. ತಪ್ಪಿದ್ದಲ್ಲಿ ಜೇನು ನೊಣಗಳ ನಾಶದೊಂದಿಗೆ ನಮ್ಮ ನಾಶವೂ ಕಾದಿದೆ. ಜೇನು ಕೃಷಿಕಗೆ ಸರಕಾರ ಇನ್ನಷ್ಟು ಉತ್ತೇಜನ ನೀಡುವ ಮೂಲಕ ಕೊಡಗಿನಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಕೈ ಜೋಡಿಸಬೇಕಾಗಿದೆ.
By B.M.Lavakumar