ಮಗಳು ಮನೆ ಬಿಟ್ಟಳು.. ಹೆತ್ತವರು ಹೆಣವಾದರು.. ಇದೆಂತಹ ದುರಂತ ಕಥೆ ಅಲ್ವಾ…! ಯಾರಿಗೂ ಇಂತಹ ಪರಿಸ್ಥಿತಿ ಬಾರದಿರಲಿ…

ಹೆಣ್ಣಾಗಲೀ, ಗಂಡಾಗಲೀ ತಮ್ಮ ಮಕ್ಕಳನ್ನು ಹೆತ್ತವರು ಯಾವುದೇ ಕೊರತೆಯಾಗದಂತೆ ಸಾಕಿ ಸಲಹಿ, ಅವರು ಕೇಳಿದ್ದನೆಲ್ಲ ಕೊಡಿಸಿ ತಮ್ಮ ಹೆಸರನ್ನು ಉಳಿಸಿ ಬೆಳೆಸಲಿ ಎಂದು ಬಯಸುತ್ತಾರೆ. ಅಷ್ಟೇ ಅಲ್ಲದೆ, ಮಕ್ಕಳಿಗೊಂದು ಉದ್ಯೋಗ, ಮದುವೆ ಮಾಡಿಸಿ ಜವಬ್ದಾರಿ ಕಳೆದುಕೊಳ್ಳಬೇಕೆಂದು ಬಯಸುತ್ತಾರೆ. ಅದರಲ್ಲೂ ಹೆಣ್ಣು ಹೆತ್ತವರಂತು ತಮ್ಮ ಮಗಳ ಭವಿಷ್ಯದ ಬಗ್ಗೆ ತುಸು ಜಾಸ್ತಿಯೇ ಕಾಳಜಿ ವಹಿಸುತ್ತಾರೆ. ತನ್ನ ಮಗಳನ್ನು ಮದುವೆಯಾಗುವ ಅಳಿಯ ಚೆನ್ನಾಗಿರಬೇಕು, ಮಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಹೀಗೆ ಹತ್ತಾರು ಕನಸುಗಳನ್ನು ಹೊತ್ತು ಕೊಂಡು ಬದುಕುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಮಕ್ಕಳು ದಾರಿ ತಪ್ಪಿದರೆ, ಹೆತ್ತವರು ಕಟ್ಟಿಕೊಂಡ ಆಶಾಗೋಪುರ ಕಳಚಿ ಬೀಳುತ್ತದೆ. ಈ ವೇಳೆ ನಡೆಯುವ ಘಟನೆಗಳು ಭಯಂಕರವಾಗಿರುತ್ತದೆ.
ಬಹಳಷ್ಟು ಸಲ ಹೆತ್ತವರಿಗೆ ತಮ್ಮ ಮಕ್ಕಳು ಮೋಸ ಮಾಡಲ್ಲ ನಾವು ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂಬ ಆತ್ಮವಿಶ್ವಾಸಗಳಿರುತ್ತವೆ. ಆದರೆ ಕೆಲವೊಮ್ಮೆ ಹಾಗಿರುವುದಿಲ್ಲ. ಮಕ್ಕಳು ಹೆತ್ತವರ ಅಶೋತ್ತರಗಳಿಗ ವಿರುದ್ಧವಾದ ನಿರ್ಧಾರಗಳನ್ನು ಮಾಡಿಯಾಗಿರುತ್ತದೆ. ಕಾಲೇಜಿಗೆ ಹೋಗಿ ಓದುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಲವ್ವು, ಗಿವ್ವು ಅಂಥ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಾರೆ. ಒಂದು ವೇಳೆ ಒಳ್ಳೆ ಹುಡುಗನ ಪ್ರೀತಿಸಿದರೆ ತೊಂದರೆಯಿಲ್ಲ ಆದರೆ ದಾರಿ ತಪ್ಪಿದ ಅಬ್ಬೆಪಾರಿಗಳನ್ನು ಪ್ರೀತಿಸಿ ಬಿಡುತ್ತಾರೆ.
ಆತನೊಂದಿಗೆ ಓಡಾಡುತ್ತಾ ಖುಷಿಯಾಗಿರುತ್ತಾರೆ. ಅವರ ಪ್ರೀತಿ, ಪ್ರೇಮ, ಮಾತುಕತೆ ಅಷ್ಟೇ ಕಾಣಿಸುತ್ತದೆ. ಅದರಾಚೆಗೆ ಏನಾಗಬಹುದು ಎಂಬು ಗೊತ್ತೇ ಆಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಮನೆಯಲ್ಲಿ ಈ ವಿಚಾರ ಗೊತ್ತಾದಾಗ ರದ್ಧಾಂತವಾಗುತ್ತದೆ. ಹೆತ್ತವರು ಅವನು ಸರಿಯಿಲ್ಲ ಅವನ ಮರೆತು ಬಿಡು ಎಂದು ಬುದ್ದಿ ಹೇಳಿದರೆ ಅದನ್ನು ಕೇಳುವ ಸ್ಥಿತಿಯಲ್ಲಿ ಹೆಣ್ಣು ಮಕ್ಕಳಿರುವುದಿಲ್ಲ. ಹೀಗಾಗಿ ಅವರು ಹೆತ್ತವರನ್ನು ಬಿಟ್ಟು ತಾನು ಪ್ರೀತಿಸಿದ ಹುಡುಗನೊಂದಿಗೆ ಮನೆ ಬಿಟ್ಟು ಓಡಿ ಹೋಗಲು ತಯಾರಿರುತ್ತಾರೆ. ಬಹಳಷ್ಟು ಪ್ರಕರಣಗಳಲ್ಲಿ ಎಲ್ಲರನ್ನು ಎದುರು ಹಾಕಿಕೊಂಡು ಮದುವೆಯಾದ ನಿದರ್ಶನಗಳಿವೆ. ಇಲ್ಲಿ ಹೆತ್ತವರಾಗಲೀ, ಮಗಳಾಗಲೀ ಸೋಲಲು ತಯಾರಿರುವುದಿಲ್ಲ. ಹೀಗಾಗಿ ಹಠಕ್ಕೆ ಬಿದ್ದು ಕೆಲವೊಮ್ಮೆ ಇಂತಹ ಲವ್ ಸ್ಟೋರಿಗಳು ದುರಂತದಲ್ಲಿ ಅಂತ್ಯಗೊಳ್ಳುತ್ತದೆ.
ಒಂದಲ್ಲ ಒಂದು ಕಾರಣಕ್ಕೆ ಎಲ್ಲರೂ ದಾರಿ ತಪ್ಪುತ್ತಾರೆ. ಆದರೆ ಸರಿದಾರಿ ಹುಡುಕಿಕೊಂಡು ಮುನ್ನಡೆಯುವುದು ನಿಜವಾದ ಮನುಷ್ಯನ ಲಕ್ಷಣವಾಗಿದೆ. ಲವ್ ವಿಚಾರದಲ್ಲಿ ಮನೆಯವರು ಒಪ್ಪಿಗೆ ಸೂಚಿಸಿಲ್ಲ ಎಂದು ಬೇಸರಗೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ತಮ್ಮ ಮಾತು ಕೇಳದೆ ಅನ್ಯ ಜಾತಿಯ ಮತ್ತು ಒಳ್ಳೆ ಸ್ವಭಾವದವನಲ್ಲದ ಹುಡುಗನನ್ನು ಪ್ರೀತಿಸಿ ಅವನೊಂದಿಗೆ ಮನೆ ಬಿಟ್ಟು ಓಡಿ ಹೋದಳೆಂದು ಬೇಸರಗೊಂಡು ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿ ಕೊಂಡ ಅಪರೂಪದ ಮತ್ತು ಮನವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.
ಬೂದನೂರು ಗ್ರಾಮದ ನಿವಾಸಿ ಮಹದೇವಸ್ವಾಮಿ(55) ಮತ್ತು ಪತ್ನಿ ಮಂಜುಳಾ(42) ದಂಪತಿ. ಮಹದೇವಸ್ವಾಮಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದರು. ಜತೆಗೆ ಜಮೀನು ಗುತ್ತಿಗೆ ಪಡೆದು ಕೃಷಿ ಮಾಡಿ ಕೊಂಡು ಬಂದಿದ್ದರು. ಇವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್.ಡಿ.ಕೋಟೆಯಲ್ಲಿ ಮನೆ ಮಾಡಿಕೊಂಡಿದ್ದರು.ಇವರಿಗೆ ಅಪಿತಾ ಮತ್ತು ಹರ್ಷಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಅರ್ಪಿತಾ ಮೈಸೂರಿನಲ್ಲಿ ಕಾನೂನು ಪದವಿ ಓದುತ್ತಿದ್ದಳು. ಎರಡನೇ ಮಗಳು ಬಿ.ಸಿ.ಎ ವ್ಯಾಸಂಗ ಮಾಡುತ್ತಿದ್ದಳು. ಇಬ್ಬರನ್ನು ಓದಿಸಿ ಒಳ್ಳೆಯ ಹುಡುಗನಿಗೆ ಮದುವೆ ಮಾಡಿ ಕೊಡಬೇಕೆಂದು ಕನಸು ಕಂಡಿದ್ದರು. ಅದರಂತೆ ಯಾವುದೇ ತೊಂದರೆ ಬಾರದಂತೆ ನೋಡಿಕೊಂಡಿದ್ದರು. ಆದರೆ ಎಲ್ಲವೂ ಸರಿಯಾಗಿಯೇ ಇತ್ತು. ಹಿರಿ ಮಗಳು ಅರ್ಪಿತಾ ಕಾಲೇಜಿಗಷ್ಟೇ ಹೋಗಿ ಓದಿನ ಕಡೆಗಷ್ಟೇ ಗಮನ ನೀಡಿದ್ದರೆ ಇವತ್ತು ಮೂರು ಜನರು ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲವೇನೋ? ಆದರೆ ಹದಿಹರಯದ ವಯಸ್ಸು ಕೆಲವೊಮ್ಮೆ ಯಾರ ಮಾತಿಗೂ ಬಗ್ಗದೆ ದಾರಿ ತಪ್ಪಿಸಿಬಿಡುತ್ತದೆ. ಇಲ್ಲಿ ಅರ್ಪಿತಾಳ ಬದುಕಿನಲ್ಲಿ ಅಂತಹದ್ದೇ ಘಟನೆಯೊಂದು ನಡೆದು ಹೋಗಿತ್ತು.
ಹಿರಿ ಮಗಳು ಇಡೀ ಮನೆಯ ಜವಬ್ದಾರಿ ವಹಿಸಿಕೊಳ್ಳುತ್ತಾಳೆ. ಅಷ್ಟೇ ಅಲ್ಲದೆ ಕುಟುಂಬಕ್ಕೂ ಕೀರ್ತಿ ತರುತ್ತಾಳೆ ಎಂದು ನಂಬಿದ್ದರು. ಆದರೆ ಅರ್ಪಿತಾ ಕಾಲೇಜಿಗೆ ಹೋಗುವ ವೇಳೆಯಲ್ಲಿಯೇ ಭರತ್ ಎಂಬ ಅನ್ಯ ಜಾತಿಯ ಯುವಕನನ್ನು ಲವ್ ಮಾಡಲು ಶುರುಮಾಡಿದ್ದಳು. ಆದರೆ ಅದಾಗಲೇ ಆತ ಬೇರೊಂದು ಯುವತಿಯನ್ನು ಲವ್ ಮಾಡಿ ಅದು ಬ್ರೇಕಪ್ ಆಗಿತ್ತು. ಈ ವಿಚಾರ ಎಲ್ಲರಿಗೂ ಗೊತ್ತಿತ್ತು ಎನ್ನಲಾಗಿದೆ. ಆದರೆ ಅದೇನಾಯಿತೋ ಅರ್ಪಿತಾ ಮಾತ್ರ ನಾನು ಮದುವೆಯಾಗುವುದಾದರೆ ಆತನನ್ನೇ ಮದುವೆಯಾಗುವುದಾಗಿ ಹಠಕ್ಕೆ ಬಿದ್ದಿದ್ದಳು. ಆತನಿಗೋಸ್ಕರ ಹೆತ್ತವರನ್ನೇ ಬಿಟ್ಟು ಹೋಗಲು ಆಕೆ ತಯಾರಾಗಿದ್ದಳು.
ಮಗಳು ಕಾಲೇಜಿಗಷ್ಟೇ ಹೋಗುತ್ತಿದ್ದಾಳೆ ಎಂದು ನಂಬಿದ ಹೆತ್ತವರಿಗೆ ಮಗಳು ಅನ್ಯ ಜಾತಿಯ ಯುವಕನೊಬ್ಬನನ್ನು ಲವ್ ಮಾಡುತ್ತಿದ್ದಾಳೆ ಎಂದು ತಿಳಿದಾಗ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿತ್ತು. ಇದಕ್ಕೆ ಕಾರಣವೂ ಇತ್ತು. ಅದೇನೇಂದರೆ ತನ್ನದೇ ಕುಟುಂಬದ ಮಹಿಳೆಯೊಬ್ಬಳು ಗಂಡನ ಬಿಟ್ಟು ಕೇರಳದಿಂದ ಕೆಲಸಕ್ಕೆ ಬಂದಿದ್ದ ವ್ಯಕ್ತಿಯೊಂದಿಗೆ ಹೋಗಿ ಬಿಟ್ಟಿದ್ದಳು. ಅದು ಕುಟುಂಬಕ್ಕೆ ಕಳಂಕ ತಂದಿತ್ತು. ಇನ್ನು ತನ್ನ ಮಗಳು ಬೇರೆ ಹುಡುಗನ ಅದರಲ್ಲೂ ಕೆಲಸ ಕಾರ್ಯವಿಲ್ಲದೆ ಅಂಡಲೆಯುವ ಯುವಕನ ಮದುವೆಯಾದರೆ ಆಕೆ ಹೇಗೆ ಸುಖವಾಗಿರುತ್ತಾಳೆ ಎಂಬ ಭಯ ಕಾಡಲಾರಂಭಿಸಿತ್ತು.
ಮಗಳನ್ನು ಕೂರಿಸಿಕೊಂಡು ತಂದೆ ಮಹದೇವಸ್ವಾಮಿ ಮತ್ತು ತಾಯಿ ಮಂಜುಳಾ ಬುದ್ದಿ ಹೇಳಿದ್ದರು. ನೋಡು ಇಲ್ಲಿಗೆ ಬಿಟ್ಟು ಬಿಡು ಈಗಾಗಲೇ ನಮ್ಮ ಮಾನ ಮರ್ಯಾದೆ ಹೋಗಿದೆ. ನೀನು ಕೂಡ ಕಳೆದು ಬಿಟ್ಟರೆ ನಾವು ಜೀವಂತವಾಗಿರಲ್ಲ. ನಿನ್ನಿಂದ ನಿನ್ನ ತಂಗಿ ಹರ್ಷಿತಾಳ ಬದುಕು ಹಾಳಾಗಿ ಬಿಡುತ್ತದೆ. ಅವನ ಸಹವಾಸ ಬಿಡು ನಿನಗೆ ಒಳ್ಳೆ ಕಡೆ ನೋಡಿ ಮದುವೆ ಮಾಡುತ್ತೇವೆ ಎಂದೆಲ್ಲ ಬುದ್ದಿವಾದ ಹೇಳಿದ್ದಾರೆ. ಆದರೆ ಹೆತ್ತವರ ಯಾವ ಮಾತನ್ನೂ ಕೇಳದ ಸ್ಥಿತಿಗೆ ಅರ್ಪಿತಾ ಹೋಗಿದ್ದಳು. ಆಕೆಗೆ ಗೊತ್ತಾಗಿ ಹೋಗಿತ್ತು.
ಹೆತ್ತವರು ಯಾವುದೇ ಕಾರಣಕ್ಕೂ ಭರತ್ ಜೊತೆಗೆ ಮದುವೆ ಮಾಡಿಕೊಡುವುದಿಲ್ಲ. ಆದ್ದರಿಂದ ಮನೆ ಬಿಟ್ಟು ಆತನೊಂದಿಗೆ ಹೋಗಿ ಬಿಡುವುದೇ ಇದಕ್ಕಿರುವ ಪರಿಹಾರ ಎಂದು ನಿಶ್ಚಯ ಮಾಡಿಕೊಂಡಿದ್ದಳು. ಹೀಗಾಗಿ ಅರ್ಪಿತಾ ಮನೆಬಿಟ್ಟು ಪ್ರಿಯಕರ ಭರತ್ ಜತೆಗೆ ಹೋಗಿದ್ದಳು. ಈ ಘಟನೆ ಮಹದೇವಸ್ವಾಮಿ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿತ್ತು. ಅವರಿಗೆ ಮಗಳು ಮಾಡಿದ ಅದೊಂದು ಕೆಲಸ ಬದುಕೇ ಸಾಕು ಎನಿಸುವಂತೆ ಮಾಡಿತ್ತು. ಮಗಳಿಂದಾಗಿ ಸಮಾಜದಲ್ಲಿ ತಲೆ ಎತ್ತಿ ನಡೆಯೋ ಹಾಗಿಲ್ಲ. ಸಾಕು ಇಲ್ಲಿಗೆ ಬದುಕನ್ನು ಮುಗಿಸಿ ಬಿಡೋಣ ಎಂಬ ಕಠಿಣ ನಿರ್ಧಾರವನ್ನು ಅವರು ಅಂದರೆ ಅರ್ಪಿತಾಳ ತಂದೆ ಮಹದೇವಸ್ವಾಮಿ, ತಾಯಿ ಮಂಜುಳಾ, ತಂಗಿ ಹರ್ಷಿತಾ ಮಾಡಿದ್ದರು.
ಹೀಗಾಗಿ ಮಗಳು ಅರ್ಪಿತಾ ಮನೆ ಬಿಟ್ಟು ಹೋದ ನಂತರ ಇಡೀ ಕುಟುಂಬ ಮಂಕಾಗಿ ಹೋಗಿತ್ತು. ಊರಿನವರ ಮುಂದೆ ಕಾಣಿಸಿಕೊಳ್ಳುತ್ತಿರಲಿಲ್ಲ. ಸದಾ ಕಣ್ಣೀರು ಹಾಕುತ್ತಾ ಮೌನಕ್ಕೆ ಜಾರಿ ಬಿಟ್ಟಿದ್ದರು. ಅವರಿಗೆ ಮಗಳು ತಮ್ಮ ಕುಟುಂಬದ ಮಾನ ಕಳೆದಿದ್ದಾಳೆ. ನಮ್ಮ ಮಾನ ಮರ್ಯಾದೆ ಹೋದ ಮೇಲೆ ಊರಲ್ಲಿ ತಲೆ ಎತ್ತಿ ನಡೆಯುವುದಾದರೂ ಹೇಗೆ? ನಾಳೆ ಇನ್ನೊಬ್ಬ ಮಗಳ ಭವಿಷ್ಯವೇನು? ಹೀಗೆ ತಲೆ ತುಂಬಾ ಗೊಂದಲಗಳನ್ನು ತುಂಬಿಕೊಂಡೇ ಓಡಾಡಿದ್ದಾರೆ. ತಮ್ಮ ಸಮಸ್ಯೆಗೆ ಸಾವೇ ಪರಿಹಾರ ಎಂಬ ನಿರ್ಧಾರಕ್ಕೂ ಬಂದಿದ್ದರು.
ಹಾಗಾಗಿ ಅವರು ತಾವು ಕೊಡಬೇಕಾಗಿದ್ದ ಹಣವನ್ನು ಗೂಗಲ್ ಪೇ, ಸೇರಿದಂತೆ ಇನ್ನಿತರ ಮೂಲಗಳ ಮೂಲಕ ಯಾರಿಗೆಲ್ಲ ಕೊಡಬೇಕಾಗಿತ್ತೋ ಅವರಿಗೆಲ್ಲ ಕೊಟ್ಟಿದ್ದಾರೆ. ಇದಾದ ಬಳಿಕ ತಾವೇಕೆ ಸಾಯುತ್ತಿದ್ದೇವೆ? ಎಂಬುದರ ಕುರಿತಂತೆ ಮಗಳು ಹರ್ಷಿತಾಳ ಕೈನಲ್ಲಿ ನಾಲ್ಕು ಪುಟಗಳಷ್ಟು ಡೆತ್ ನೋಟ್ ಬರೆಸಿದ್ದಾರೆ. ಅದರಲ್ಲಿ ಹತ್ತಾರು ವಿಚಾರಗಳನ್ನು ಪ್ರಸ್ತಾಪಿಸಿದ್ದು, ಮುಖ್ಯವಾಗಿ ಆಸ್ತಿ, ಹಣ ಅವಳಿಗೆ ಹಿರಿಯ ಮಗಳು ಅರ್ಪಿತಾಗೆ ಸಿಗಬಾರದು. ನಮ್ಮನ್ನ ಹೂಳಬೇಡಿ, ಅಗ್ನಿ ಸ್ಪರ್ಶ ಮಾಡಿ. ನಮ್ಮ ಸಾವಿಗೆ ನಾವೇ ಕಾರಣ. ಬೆಳಗಿನ ಜಾವ 4 ಗಂಟೆಗೆ ನಿದ್ದೆ ಬರಲಾರದೆ ಒದ್ದಾಡಿ ಬರೆದಿದ್ದೇವೆ.
ಮಾನಕ್ಕೆ ಅಂಜಿ ಹೀಗೆ ಮಾಡಿಕೊಳ್ಳುತ್ತಿದ್ದೇವೆ. ನನ್ನ ಮಗಳು ನಮಗೆಲ್ಲ ಮೋಸ ಮಾಡಿದಳು. ನಮ್ಮ ಪರಿಸ್ಥಿತಿ ಜಗತ್ತಿನಲ್ಲಿ ಯಾರಿಗೂ ಬರಬಾರದು. ನಮ್ಮ ಆಸ್ತಿ ಒಂದು ರೂಪಾಯಿಯೂ ಅವಳಿಗೆ ಸಿಗಬಾರದು. ಎಲ್ಲಾ ಆಸ್ತಿಯನ್ನ ಚಿಕ್ಕಪ್ಪನಿಗೆ ನೀಡಿ. ಮನೆ, ಸೈಟ್, ಮನೆಯಲ್ಲಿರುವ ಎರಡೂವರೆ ಲಕ್ಷ ಹಣ ಯಾವುದು ಅವಳಿಗೆ ಸಿಗಬಾರದು. ಚಿಕ್ಕಪ್ಪನ ಹೆಂಡತಿ ಸೌಮ್ಯಗೂ ಸಿಗಬಾರದು ಎಂಬ ವಿಚಾರಗಳನ್ನು ಅದರಲ್ಲಿ ಉಲ್ಲೇಖಿಸಿದ್ದಾರೆ. ಇದಾದ ನಂತರ ಮೇ.24ರ ಶನಿವಾರ ಬೆಳಗ್ಗಿನ ಜಾವ ಬೆಳಕು ಹರಿಯುವ ಮುನ್ನವೇ ಮೊದಲೇ ಮಾಡಿಕೊಂಡ ತೀರ್ಮಾನದಂತೆ ಬೈಕ್ ನಲ್ಲಿ ಮೂವರು ಹೆಬ್ಬಾಳ ಜಲಾಶಯದತ್ತ ತೆರಳಿದ್ದಾರೆ.
ಆ ನಂತರ ಜಲಾಶಯದ ದಡದಲ್ಲಿ ಮೂವರು ತಮ್ಮ ಚಪ್ಪಲಿಗಳನ್ನು ಬಿಚ್ಚಿಟ್ಟು, ತಮ್ಮ ಕಾಲಿಗೆ ಹಗ್ಗಗಳನ್ನು ಕಟ್ಟಿಕೊಂಡು ನೀರಿಗೆ ಹಾರಿದ್ದಾರೆ. ಅಷ್ಟೇ ಅಲ್ಲಿಗೆ ಒಂದು ಇಡೀ ಕುಟುಂಬ ಜಲಸಮಾಧಿಯಾಗಿದೆ. ಅದಕ್ಕೂ ಹಿಂದಿನ ದಿನ ಎಲ್ಲರಿಗೂ ಮಗಳು ಹರ್ಷಿತಾ ಮೂಲಕ ಫೋನ್ ಮಾಡಿಸಿ ನಾಳೆ ಮನೆಗೆ ಬರುವಂತೆ ಹೇಳಿಸಿದ್ದರು. ಅದರಂತೆ ಕೆಲವರು ಮನೆಗೆ ಬಂದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಅಲ್ಲಿಯೇ ಸಿಕ್ಕಿದ ಡೆತ್ ನೋಟ್ ಅವರ ಸಾವಿನ ಕಥೆ ಹೇಳಿದೆ. ಅವರನ್ನು ಹುಡುಕಿಕೊಂಡು ಹೋದವರಿಗೆ ಜಲಾಶಯದ ದಡದಲ್ಲಿ ಚಪ್ಪಲಿಗಳು ಸಿಕ್ಕಿವೆ. ಆ ಮೂಲಕ ಅವರು ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ದೃಢವಾಗಿದೆ.
ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಹೆಚ್.ಡಿ.ಕೋಟೆ ಪೊಲೀಸ್ ಇನ್ಸ್ ಪೆಕ್ಟರ್ ಗಂಗಾಧರ್, ಎಸ್ ಐ ಚಿಕ್ಕನಾಯಕ, ಸುರೇಶ್ ಹಾಗೂ ಸಿಬ್ಬಂದಿ ಆಗಮಿಸಿದ್ದು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ ಮೇರೆಗೆ ಹೆಚ್.ಡಿ.ಕೋಟೆ ಅಗ್ನಿಶಾಮಕ ಠಾಣಾಧಿಕಾರಿ ಸೋಮಣ್ಣ, ಹುಣಸೂರು ಸಹಾಯಕ ಅಗ್ನಿಶಾಮ ಠಾಣಾಧಿಕಾರಿ ಕೆ.ಸಿ.ಸತೀಶ್, ರವಿ, ಪ್ರಸಾದ್, ರಂಜಿತ್, ದಿನೇಶ್, ಸಂಗಮೇಶ್ ರಾಹುಲ್, ಬಾಲಕೃಷ್ಣ, ವಿನಯ್ ಕುಮಾರ್, ಗಣೇಶ್, ಅಶೋಕ್, ವಿಶಾಲ್ ಮಂಜು ಮೊದಲಾದವರು ಆಗಮಿಸಿ ಜಲಾಶಯದಲ್ಲಿ ಶವವನ್ನು ಶೋಧಿಸಿ ಹೊರತೆಗೆದಿದ್ದಾರೆ. ಆ ನಂತರ ಅಂತ್ಯಕ್ರಿಯೆ ನಡೆಸಲಾಗಿದೆ. ಆದರೆ ಮನೆ ಬಿಟ್ಟು ಹೋದ ಮಗಳು ಮಾತ್ರ ಅಂತ್ಯಕ್ರಿಯೆಗೂ ಬರಲಿಲ್ಲ ಎನ್ನುವುದೇ ಬೇಸರದ ಸಂಗತಿ.
B.M.Lavakumar