CinemaLatest

ಡಾ.ರಾಜ್ ಕುಮಾರ್ ರವರ ಸಿನಿಮಾ ದಾಖಲೆ ಮುರಿಯಲು ಇವತ್ತಿಗೂ ಸಾಧ್ಯವಾಗಿಲ್ಲ.. ಏಕೆ ಗೊತ್ತಾ?

ಸಿನಿಮಾ ಕ್ಷೇತ್ರದ ಇತಿಹಾಸವನ್ನು ನೋಡಿದ್ದೇ ಆದರೆ ಹಲವು ಬದಲಾವಣೆ, ಏರಿಳಿತಗಳನ್ನು ಕಂಡಿದೆ.. ಹಾಗೆಯೇ ಕಲಾವಿದರು  ಕೂಡ ಆಯಾಯ ಕಾಲಘಟ್ಟದಲ್ಲಿ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಲ್ಲದೆ, ಸಿನಿಮಾ ರಂಗವನ್ನು ಉತ್ತುಂಗಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಿಂದಿನ ಸಿನಿಮಾ ನಟ, ನಟಿಯರ ಅಭಿನಯ ಮತ್ತು ಅವರು ನಟಿಸಿರುವ ಚಿತ್ರಗಳ ಸಂಖ್ಯೆಗಳನ್ನು ಗಮನಿಸಿದರೆ ಅಚ್ಚರಿ ಮೂಡಿಸುತ್ತದೆ.  ಅವರ ಸಿನಿಮಾ ಜಗತ್ತಿನ ಸಾಧನೆ ಖುಷಿಕೊಡುತ್ತದೆ.  ಸಿನಿಮಾ ಗಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ವಿಶ್ಲೇಷಣೆ ಮಾಡುತ್ತಾ ಡಾ.ರಾಜಕುಮಾರ್ ರವರ ಸಿನಿಮಾ ದಾಖಲೆ ಮುರಿಯಲು ಇವತ್ತಿಗೂ ಸಾಧ್ಯವಾಗಿಲ್ಲ ಎಂಬುದನ್ನು ನೆನಪಿಸಿದ್ದಾರೆ.

ಇವತ್ತು ಇಡೀ ಜಗತ್ತು ತಂತ್ರಜ್ಞಾನದ ಕಾರಣಕ್ಕೆ ಅಂಗೈನಲ್ಲಿದೆ. ಹೀಗಾಗಿ ಎಲ್ಲವೂ ಸುಲಭವಾಗಿ ದಕ್ಕುತ್ತದೆ. ಆದರೆ ಅವತ್ತು ಸೀಮಿತ ತಂತ್ರಜ್ಞಾನದಲ್ಲಿ ಸಿನಿಮಾಗಳನ್ನು ತಯಾರು ಮಾಡಬೇಕಾಗಿತ್ತು.. ರೀಲ್ ಗಿಂತ ರಿಯಲ್ ಗೆ ಆದ್ಯತೆ ನೀಡಲಾಗುತ್ತಿತ್ತು. ಹೀಗಾಗಿಯೇ ಅವತ್ತಿನ ಕಲಾವಿದರು ಇವತ್ತಿಗೂ ನಮ್ಮ ಮಧ್ಯೆ ನೆನಪಾಗಿ ಉಳಿದಿದ್ದಾರೆ. ಅವರ ಅವತ್ತಿನ ಸಿನಿಮಾಗಳು ಇವತ್ತಿಗೂ ಮೆಚ್ಚಿನ ಚಿತ್ರಗಳಾಗಿ ಉಳಿಯಲು ಸಾಧ್ಯವಾಗಿವೆ. ನಟ, ನಟಿಯರು ಕೂಡ…

ಇನ್ನು ಸಿನಿಮಾ ನಟರ ವಿಚಾರ ಬಂದರೆ ಡಾ.ರಾಜ್ ಕುಮಾರ್ ಅವರು ಕನ್ನಡದ ಪಾಲಿಗೆ ಅಣ್ಣಾವ್ರರಾಗಿಯೇ ಉಳಿದು ಬಿಡುತ್ತಾರೆ. ಅವರಿಗೆ ಅವರೇ ಸಾಟಿ… ಇನ್ನು ಸಿನಿಮಾಗಳ ಗಳಿಕೆ ಲೆಕ್ಕಾಚಾರವನ್ನು ನೋಡುವುದಾದರೆ  ಅಂದಿನ ಕಾಲದ 1972 ರಲ್ಲಿ ಬಿಡುಗಡೆಯಾದ “ಬಂಗಾರದಮನುಷ್ಯ” ಸಿನಿಮಾ ದಾಖಲೆ ಗಳಿಕೆ 1.56 ಕೋಟಿ (ಬಾಕ್ಸಾಫೀಸ್ ಕಲೆಕ್ಷನ್) ಈಗಿನ ಕಾಲದ (2025ರ) 312 ಕೋಟಿ ರೂಪಾಯಿಗಳಿಗೆ ಸಮ.

ಈ ಚಿತ್ರವು ಕರ್ನಾಟಕ ರಾಜ್ಯದಲ್ಲಿ ಮಾತ್ರ ಬಿಡುಗಡೆ ಆಗಿತ್ತು. ರಾಜ್ಯದ ಪ್ರತಿಯೊಂದು ಹೋಬಳಿ, ತಾಲ್ಲೂಕು, ನಗರ, ಜಿಲ್ಲಾ ಮಟ್ಟದ ಟಾಕೀಸ್, ಟೂರಿಂಗ್ ಟಾಕೀಸ್, ಥಿಯೇಟರ್ ಗಳಲ್ಲಿ 50ದಿನ, 100ದಿನ, 25/50/60 ವಾರಗಳ (ಸಿಲ್ವರ್/ಗೋಲ್ಡನ್/ಡೈಮಂಡ್/ಪ್ಲಾಟಿನಂ ಜುಬ್ಲಿ) ಪ್ರದರ್ಶನ ಮಾತ್ರವಲ್ಲದೆ ಎರಡು (ಮೈಸೂರು ಬೆಂಗಳೂರು) ನಗರದಲ್ಲಿ ಸತತ 2 ವರ್ಷ ಪ್ರದರ್ಶನ ಕಂಡಿತು. ಈಗಿನ ಕಾಲದ ಲೆಕ್ಕಾಚಾರದ ಪ್ರಕಾರ ಒಂದು ವೇಳೆ ಈಗಿನಂತೆ ಬಹುಭಾಷೆಯಲ್ಲಿ (ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್, ಮುಂತಾದ ಅನೇಕ ಭಾಷೆಗಳಲ್ಲಿ) ಪ್ರಪಂಚ ದಾದ್ಯಂತ ಬಿಡುಗಡೆ ಆಗಿದ್ದರೆ ನಿವ್ವಳ ಗಳಿಕೆ 3000 ಕೋಟಿಗೆ ಸರಿಸಮಾನ ಆಗುತ್ತದೆ.

ಇದೇ ರೀತಿಯ ಅಂಕಿ- ಅಂಶ ಪ್ರಕಾರ 1978ರಲ್ಲಿ ಬಿಡುಗಡೆಯಾದ “ಶಂಕರ್ ಗುರು” ಚಿತ್ರದ ಗಳಿಕೆ ಇವತ್ತಿನ 8500 ಕೋಟಿ ರೂಪಾಯಿಗೆ ಸರಿಸಮಾನ ಆಗುತ್ತದೆ. ಡಾ.ರಾಜ್ ತ್ರಿಪಾತ್ರದ ಎರಡನೆ ಚಿತ್ರ (ಮೊದಲ ಚಿತ್ರ “ಕುಲಗೌರವ”) ಶಂಕರ್ ಗುರು. ಇದರ ರೀಮೇಕ್ ಹಿಂದಿಯಲ್ಲಿ ಅಮಿತಾಭ ಬಚ್ಚನ್ ನಟಿಸಿದ “ಮಹಾನ್”, ತಮಿಳಿನಲ್ಲಿ ಶಿವಾಜಿ ಗಣೇಶನ್ ನಟಿಸಿದ “ತ್ರಿಶೂಲಂ”, ತೆಲುಗಿನಲ್ಲಿ  ಕೃಷ್ಣ ನಟಿಸಿದ “ಕುಮಾರರಾಮ”. ಈ ರೀಮೇಕ್ ಚಿತ್ರಗಳೂ ಸಹ ನೂತನ ದಾಖಲೆ ನಿರ್ಮಿಸಿದವು.

ಬಂಗಾರದ ಮನುಷ್ಯ ಮತ್ತು ಶಂಕರಗುರು ಇವೆರಡೂ ಚಿತ್ರಗಳನ್ನು ಉದಾಹರಣೆ ಆಗಿ ತೆಗೆದುಕೊಳ್ಳಲಾಗಿದೆ ಅಷ್ಟೆ. ಇಂಥ ನೂರಾರು ದಾಖಲೆ ನಿರ್ಮಿಸಿದ ಕನ್ನಡ ಚಿತ್ರಗಳು ಇವೆ. ಈ ಲೆಕ್ಕಾಚಾರವನ್ನು ವೈಜ್ಞಾನಿಕ ಮತ್ತು ತಂತ್ರಜ್ಞಾನ ಆಧರಿಸಿದ ಜನಸಂಖ್ಯೆ, ಚಿನ್ನ-ಬೆಳ್ಳಿ, ದವಸಧಾನ್ಯ, ರಿಯಲ್ ಎಸ್ಟೇಟ್ ಹಾಗೂ ಕಾಸ್ಟ್ ಆಫ್ ಲಿವಿಂಗ್ ಆಧಾರದ ಮೇಲೆ ಅವಲಂಬಿಸಿ ಲೆಕ್ಕಾಚಾರ ಮಾಡಲಾಗಿದೆ. ಅದು ಏನೇ  ಇರಲಿ.. ಅವತ್ತು ಸಿನಿಮಾಗಳು ರಾಜ್ಯದಾದ್ಯಂತ ಎಲ್ಲ ಥಿಯೇಟರ್ ಗಳಲ್ಲಿ ತೆರೆ ಕಾಣುತ್ತಿದ್ದವು. ಕನ್ನಡದ ನಟರನ್ನು ಕನ್ನಡಿಗರೇ ಸಿನಿಮಾ ನೋಡಿ ಪ್ರೋತ್ಸಾಹಿಸುತ್ತಿದ್ದರು..

ಇವತ್ತು ಪ್ಯಾನ್ ಇಂಡಿಯಾ ಟ್ರೆಂಡಿಂಗ್ ಶುರುವಾಗಿದೆ. ಹೀಗಾಗಿ ಯುವ ಜನ ಪ್ರತಿಯೊಂದು ಸಿನಿಮಾವನ್ನು ಆ ನಿರೀಕ್ಷೆಯಿಂದಲೇ ನೋಡಲು ಆರಂಭಿಸಿದ್ದಾನೆ. ಕನ್ನಡದ ನಿರ್ಮಾಪಕರು, ನಿರ್ದೇಶಕರು, ನಟರಿಗೆ  ಹೊಸ ಸವಾಲ್ ಗಳು ಆರಂಭವಾಗಿವೆ.. ಜನ ಕೂಡ ಸಿನಿಮಾದ ಬಗ್ಗೆ ಮಾತಾಡುವುದಕ್ಕಿಂತ ಹೆಚ್ಚಾಗಿ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಚರ್ಚೆ ಮಾಡಲು ಆರಂಭಿಸಿದ್ದಾರೆ. ಅದು ಏನೇ ಇರಲಿ.. ಕನ್ನಡದ ಸಿನಿಮಾಗಳು ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಹಿಂದೆ ಬಿದ್ದಿಲ್ಲ ಎನ್ನುವುದು ಕೂಡ ಖುಷಿಕೊಡುವ ವಿಚಾರವೇ…

(ಚಂದನವನ ಚರಿತ್ರೆ”10 ಸಂಪುಟಗಳ ಹಾಗೂ 2000ಕ್ಕೂ ಹೆಚ್ಚು ಪ್ರಕಟಿತ ಲೇಖನಗಳ ತಜ್ಞ ಬರಹಗಾರ, ಅಂಕಣಕಾರ. ಮಹತ್ವ ಇತಿಹಾಸದ ಸಾಕ್ಷ್ಯಗಳಿಗೆ ಅಥವ ಹೆಚ್ಚಿನ ಮಾಹಿತಿಗೆ, ಯಾರು ಬೇಕಾದರೂ ಇವರನ್ನು ಸಂಪರ್ಕಿಸಬಹುದು. ಆದರೆ ನೆನಪಿರಲಿ… ಅದಕ್ಕೂ ಮುನ್ನ (SANDALWOOD STORY) ಚಂದನವನ ಚರಿತ್ರೆಯ ಲೇಖನಗಳನ್ನು ಓದಿ  ನಂತರ ಸಂಪರ್ಕಿಸಿ.. ಚರ್ಚಿಸಿ)

admin
the authoradmin

Leave a Reply

Translate to any language you want