ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅತ್ಯಂತ ಅಗತ್ಯ.. ವಿದ್ಯಾರ್ಥಿ ದೆಸೆಯಿಂದಲೇ ಅರಿತುಕೊಳ್ಳಬೇಕು

ಕೆ.ಆರ್.ನಗರ(ಜಿಟೆಕ್ ಶಂಕರ್): ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅತ್ಯಂತ ಅಗತ್ಯವಾಗಿ ಬೇಕಾಗಿದ್ದು ವಿದ್ಯಾರ್ಥಿ ದೆಸೆಯಿಂದಲೇ ಅದನ್ನು ತಿಳಿದುಕೊಂಡು ಜೀವನ ಪೂರ್ತಿ ಅದನ್ನು ಪಾಲಿಸಬೇಕು ಎಂದು ವಕೀಲ ಟಿ.ಪುರುಷೋತ್ತಮ್ ಹೇಳಿದರು.
ಪಟ್ಟಣದ ಜಿಜಿಎಂಎಸ್ ಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾನತೆ ಮತ್ತು ಶಾಂತಿಯುತ ಜೀವನ ನಿರ್ಮಾಣ ಮಾಡಲು ನಾಗರೀಕರು ಕಾನೂನು ತಿಳಿದು ಉತ್ತಮ ಬದುಕು ಸಾಧಿಸಬೇಕು ಎಂದರು.
ಭಾರತದ ಶ್ರೇಷ್ಠ ಸಂವಿಧಾನ ನಮಗೆ ಹತ್ತು ಹಲವು ಹಕ್ಕು ಮತ್ತು ಕರ್ತವ್ಯ ಗಳನ್ನು ನೀಡಿದ್ದು ಎಲ್ಲರು ಅವುಗಳ ಸದ್ಬಳಕೆ ಮಾಡಿಕೊಂಡು ಇತರರಿಗೂ ಆ ಬಗ್ಗೆ ಮನವರಿಕೆ ಮಾಡಿಕೊಡಬೇಕೆಂದರು. ಬಾಲ್ಯ ವಿವಾಹ ಪದ್ದತಿ ನಿರ್ಮೂಲನೆಗೆ ಪ್ರತಿಯೊಬ್ಬರು ಪರಸ್ಪರ ಕೈ ಜೋಡಿಸಿ ಕೆಲಸ ಮಾಡಬೇಕೆಂದ ವಕೀಲರು ಇತ್ತಿಚ್ಚೆಗೆ ಹೊಸ ಕಾನೂನು ತಂದಿದ್ದು ನಿಗಧಿತ ವಯಸ್ಸಿನೊಳಗೆ ಮದುವೆ ಮಾಡುವವುದರ ಜತೆಗೆ ನಿಶ್ಚಿತಾರ್ಥ ಮಾಡುವುದು ಅಪರಾಧವಾಗಿದ್ದು ಈ ಬಗ್ಗೆ ಎಲ್ಲರೂ ತಿಳಿಯಬೇಕೆಂದರು.

ವಕೀಲ ಟಿ.ಎಸ್.ಸಂತೋಷ್ ಮಾತನಾಡಿ ಕಾನೂನಿನ ಅರಿವು ನೆರವು ಮತ್ತು ರಕ್ಷಣೆ ಇಲ್ಲದೆ ಸಮಾಜದಲ್ಲಿ ಯಾರಿಂದಲೂ ಬದಕಲು ಸಾಧ್ಯವಿಲ್ಲ ಹಾಗಾಗಿ ಇದನ್ನು ಅರಿತು ನಾಗರೀಕರು ಕಾನೂನನ್ನು ಗೌರವಿಸಬೇಕು ಎಂದು ನುಡಿದರು. ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬರು ಕಾನೂನು ಶಿಸ್ತು ಮತ್ತು ಪ್ರಬುದ್ದತೆ ಹೊಂದಲು ಶಿಕ್ಷಣ ಅತ್ಯಂತ ಅಗತ್ಯವಾಗಿದ್ದು ವಿದ್ಯಾರ್ಥಿಗಳು ಕಲಿಕಾ ಅವಧಿಯಲ್ಲಿ ಶ್ರದ್ದೆಯಿಂದ ಅಧ್ಯಯನ ಮಾಡಿ ಇತರರಿಗೆ ಮಾದರಿಯಾಗಿ ಎಂದು ಸಲಹೆ ನೀಡಿದರು.
ಶಾಲಾ ಮುಖ್ಯ ಶಿಕ್ಷಕಿ ಹೆಚ್.ಎಂ.ಸುಧಾಲತಾ, ಶಿಕ್ಷಕರಾದ ಒಂಟಿಮನೆನಾಗರಾಜು, ರುಕ್ಮಿಣಿಯಮ್ಮ, ಜ್ಯೋತಿ, ರೂಪ, ಕೇಶವ, ನೇತ್ರ, ರೇವತಿ, ಟಿ.ಜೆ.ರವಿ, ಕವಿತ, ಪುನೀತ್ ಮತ್ತು ವಿದ್ಯಾರ್ಥಿಗಳು ಇದ್ದರು.







