CrimeLatest

ನಂಜಾಪುರದಲ್ಲಿ ಪ್ರಾಣ ಕಳೆದುಕೊಂಡ ಯುವಕ… ಮೈಕ್ರೋ ಫೈನಾನ್ಸ್ ಕಿರುಕುಳ  ಕಾರಣ ಆರೋಪ!

ಹುಣಸೂರು(ಮನುಕುಮಾರ್): ತಾಲೂಕಿನ ನಂಜಾಪುರ ಗ್ರಾಮದಲ್ಲಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದು ಇದಕ್ಕೆ ಖಾಸಗಿ ಮೈಕ್ರೋ ಫೈನಾನ್ಸ್ ಕಿರುಕುಳವೇ ಕಾರಣ ಎಂದು ಆರೋಪಿಸಲಾಗುತ್ತಿದೆ.

ನಂಜಾಪುರದ ನಿವಾಸಿ ವಸಂತಕುಮಾರ್ ಪುತ್ರ ರಂಜಿತ್ (32) ಮೃತರು. ಇವರಿಗೆ ತಂದೆ, ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ರಂಜಿತ್ ಕೆ.ಆರ್.ನಗರದಲ್ಲಿ ಶಾಖೆ ಹೊಂದಿರುವ ಖಾಸಗಿ ಮೈಕ್ರೋ ಫೈನಾನ್ ನಲ್ಲಿ ಮನೆ ನಿರ್ಮಾಣಕ್ಕಾಗಿ 12 ಲಕ್ಷ ರೂ. ಸಾಲ ಪಡೆದಿದ್ದರು. ಸುಸ್ತಿಯಾಗಿದ್ದಾರೆ ಎಂದು ಎರಡು ಬಾರಿ ಮನೆಗೆ ಬೀಗ ಜಡಿದಿದ್ದರು. ಕೆಲ ದಿನಗಳ ಹಿಂದೆ 3 ಲಕ್ಷ ರೂ. ಸೇರಿದಂತೆ ಈವರೆಗೆ 8 ಲಕ್ಷ ರೂ. ಪಾವತಿಸಿದ್ದರು.

ಈ ಬಾರಿ ಮಳೆ ಕೊರತೆಯಿಂದ ಜಮೀನಿನಲ್ಲಿ ಬೆಳೆಯೂ ಕೈ ಹತ್ತಿರಲಿಲ್ಲ. ಮತ್ತೆ ಮೈಕ್ರೋ ಫೈನಾನ್ ನವರು ಬಂದು ಮನೆ ಬೀಗ ಹಾಕುತ್ತಾರೆ. ಗ್ರಾಮದಲ್ಲಿ ಅವಮಾನವಾಗುತ್ತದೆ ಎಂಬ ಆತಂಕದಿಂದ ರಂಜಿತ್ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಗಾಗ ಪತ್ನಿ ಹತ್ತಿರ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ.

ಬಿಳಿಕೆರೆ ಠಾಣಾ ಪೊಲೀಸರಿಗೆ ಪತಿ ರಂಜಿತ್ ಸಾವಿಗೆ ಮೈಕ್ರೋ ಫೈನಾನ್ಸ್‌ನವರ ಕಿರುಕುಳವೇ ಕಾರಣ ಎಂದು ಪತ್ನಿ ಭಾಗ್ಯ ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ

admin
the authoradmin

Leave a Reply