LatestNews

ನೆರವಿನ ನಿರೀಕ್ಷೆಯಲ್ಲಿ ಪತ್ರಕರ್ತ ಜಗದೀಶ್ ಬೆಳ್ಯಪ್ಪ…. ಬನ್ನಿ ಅವರಲ್ಲಿ ಭರವಸೆ ಮೂಡಿಸೋಣ..

ವಾಟ್ಸಪ್ ನಲ್ಲಿ ಬಂದ ಮೆಸೇಜು ಎದೆಯಲ್ಲಿ ಸಣ್ಣಗಿನ ಕಂಪನ ಸೃಷ್ಟಿ ಮಾಡಿದೆ…  ಏಕೆ ಹೀಗೆ ಆಗುತ್ತಿದೆ? ಇವತ್ತು ಬಹುತೇಕ ಪತ್ರಕರ್ತರು ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ.. ಸದಾ ಕೆಲಸದ ಒತ್ತಡದಲ್ಲಿ ಬದುಕು ಸವೆಸುವವರು ಎಲ್ಲವೂ ಸರಿಹೋಯಿತು ಎಂದು ಕೊಳ್ಳುವಾಗಲೇ ಏನಾದರೊಂದು ಕಾಯಿಲೆಗಳು ಅಡರಿಕೊಳ್ಳುತ್ತವೆ… ನಿಜಕ್ಕೂ ಇದು ಬೇಸರದ ಸಂಗತಿ..

ಬಹುತೇಕ ಪತ್ರಕರ್ತರ ಬದುಕು ಸಂಕಷ್ಟದಲ್ಲಿದೆ. ಎಷ್ಟೇ ಕೆಲಸ ಮಾಡಿದರೂ ತಮಗೆ ಬರುವ ಸಂಬಳದಲ್ಲಿ ಜೀವನ ಕಳೆಯಲು ಪರದಾಡಬೇಕಾದ ಸ್ಥಿತಿಯಲ್ಲಿದೆ… ಸಮಾಜದ ಅಂಕುಡೊಂಡು ತಿದ್ದುವವರ ಬದುಕು ಮೂರಾಬಟ್ಟೆಯಾಗಿದೆ. ಅದು ಆಚೆಗಿರಲಿ.. ನಾನೀಗ ಹೇಳಲು ಹೊರಟಿರುವುದು ಪತ್ರಕರ್ತ ಜಗದೀಶ್ ಬೆಳ್ಯಪ್ಪರವರ ಬಗ್ಗೆ..

ಇವತ್ತು ಬೆಳ್ಯಪ್ಪ ಟಿವಿ9 ಡಿಜಿಟಲ್ ಕನ್ನಡದಲ್ಲಿ ಡೆಪ್ಯುಟಿ ಎಡಿಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಕ್ಯಾನ್ಸರ್ ಎಂಬ ಮಹಾಮಾರಿ ಇವರನ್ನು ಇನ್ನಿಲ್ಲದಂತೆ ನಡುಗಿಸಿ ಬಿಟ್ಟಿದೆ. ಜಗದೀಶ್ ಬೆಳ್ಯಪ್ಪ ಮೂಲತಃ ಕೊಡಗಿನವರು. ಮಡಿಕೇರಿಯ ಜ್ಯೂನಿಯರ್ ಕಾಲೇಜಿನಲ್ಲಿ ಓದಿದವರು. ಹತ್ತಿರದಿಂದ ನೋಡಿದ್ದೇನೆ. ನಮಗಿಂತ ಒಂದು ವರ್ಷ ಸೀನಿಯರ್.. ಅವರ ಸಹೋದರ ರಾಜೇಶ್ ಕ್ಲಾಸ್ ಮೇಟ್…

ಕೊಡಗಿನ ಶಕ್ತಿ ಪತ್ರಿಕೆ ಮೂಲಕ ಪತ್ರಿಕೋದ್ಯಮಕ್ಕೆ ಎಂಟ್ರಿಕೊಟ್ಟ ಜಗದೀಶ್ ಆ ನಂತರ ತಿರುಗಿ ನೋಡಲೇ ಇಲ್ಲ. ಶಕ್ತಿಯ ನಂತರ ಸಂಯುಕ್ತಕರ್ನಾಟಕ, ಟಿವಿ9, ಸುವರ್ಣ, ವಿಜಯಕರ್ನಾಟಕ ಹೀಗೆ ಹಲವು ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ..  ಆದರೆ  ಆಗಿದ್ದೇ ಬೇರೆ…

ಟೀಮ್ ಮಾಧ್ಯಮ ಸ್ಪಂದನದ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಕಳುಹಿಸಿರುವ ಪ್ರಕಟಣೆಯೊಂದು ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ.. ಅದನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ.. ಓದಿದ ಮೇಲೆ ಮನಮಿಡಿದರೆ ಉಪಕಾರವಾದೀತು…

ನಮ್ಮ ಒಂದು ಸಣ್ಣ ನೆರವು ಅವರಿಗೆ ಸಹಾಯವಾಗಬಹುದು…

ಮೂರು ದಶಕಗಳ ಕಾಲ ಸಮಾಜದ ನೋವಿಗೆ ಧ್ವನಿಯಾದವರು… ಅನ್ಯಾಯದ ವಿರುದ್ಧ ಅಕ್ಷರಗಳ ಮೂಲಕ ಹೋರಾಡಿದವರು… ಕಷ್ಟದಲ್ಲಿದ್ದವರ ಕಣ್ಣೀರನ್ನು ಸಮಾಜದ ಮುಂದೆ ತಂದವರು… ಇಂದು ತಮ್ಮದೇ ಬದುಕನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ.

ಟಿವಿ9 ಡಿಜಿಟಲ್ ಕನ್ನಡದಲ್ಲಿ ಡೆಪ್ಯುಟಿ ಎಡಿಟರ್ ಆಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ಪಂಜೇರಿರ ಜಗದೀಶ್ ಬೆಳ್ಯಪ್ಪ (ಪಿ.ಬಿ. ಜಗದೀಶ್) ಅವರಿಗೆ ಕಳೆದ ಅಕ್ಟೋಬರ್‌ನಲ್ಲಿ ಬಾಯಿಯ ವಸಡಿನಲ್ಲಿ ಕ್ಯಾನ್ಸರ್ ಪತ್ತೆಯಾಯಿತು. ಧೈರ್ಯ ಕಳೆದುಕೊಳ್ಳದೆ ಚಿಕಿತ್ಸೆ ಪಡೆದು ಮತ್ತೆ ಬದುಕಿನತ್ತ ಮರಳುವ ಕನಸು ಕಂಡರು. ಆದರೆ ವಿಧಿಯ ಹೊಡೆತ ಮತ್ತಷ್ಟು ಕಠಿಣವಾಗಿತ್ತು.

ಕೆಲವೇ ತಿಂಗಳಲ್ಲಿ ಕ್ಯಾನ್ಸರ್ ಮತ್ತೆ ಮರುಕಳಿಸಿತು. ಇದೀಗ ಅದು ಸ್ಟೇಜ್-4 ತಲುಪಿ ಶ್ವಾಸಕೋಶ ಹಾಗೂ ಸ್ಪೈನಲ್ ಕಾರ್ಡ್‌ಗೂ ವ್ಯಾಪಿಸಿದೆ. ಪ್ರತಿದಿನವೂ ನೋವು, ಚಿಕಿತ್ಸೆ, ಆಸ್ಪತ್ರೆ ಮತ್ತು ಅನಿಶ್ಚಿತತೆಯ ನಡುವೆ ಸಾಗುತ್ತಿದೆ. ಆದರೂ ಜಗದೀಶ್ ಅವರು ಬದುಕುವ ಆಸೆಯನ್ನು ಕೈಬಿಟ್ಟಿಲ್ಲ. ಈಗಾಗಲೇ ಚಿಕಿತ್ಸೆಗೆ 34 ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದೆ. ಇನ್ನೂ ಸುಮಾರು 15 ಲಕ್ಷ ರೂಪಾಯಿ ಅಗತ್ಯವಿದೆ. ಚಿಕಿತ್ಸೆ ಮುಂದುವರಿಸಬೇಕು ಎಂಬ ಬಲವಾದ ಇಚ್ಛೆ ಅವರಲ್ಲಿದೆ. ಆದರೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚವನ್ನು ಭರಿಸುವುದು ಕುಟುಂಬಕ್ಕೆ ಅಸಾಧ್ಯವಾಗುತ್ತಿದೆ.

ಜನರ ನೋವಿಗೆ ಧ್ವನಿಯಾದ ಪತ್ರಕರ್ತನ ನೋವು ಇಂದು ನಾಲ್ಕು ಗೋಡೆಗಳೊಳಗೆ ಸಿಲುಕಿದೆ. ಸಾವಿರಾರು ಸುದ್ದಿಗಳನ್ನು ಸಮಾಜದ ಮುಂದೆ ತಂದ ಕೈಗಳು… ಇಂದು ನೆರವಿಗಾಗಿ ಚಾಚಿಕೊಂಡಿವೆ. ಇತರರ ಕಣ್ಣೀರನ್ನು ಒರೆಸಲು ಓಡಿದ ವ್ಯಕ್ತಿಯ ಕಣ್ಣಲ್ಲೇ ಇಂದು ಬದುಕಿನ ಕಣ್ಣೀರು ತುಂಬಿದೆ.

ಇದು ಕೇವಲ ಒಬ್ಬ ಪತ್ರಕರ್ತನಿಗಾಗಿ ಮಾಡುವ ಮನವಿಯಲ್ಲ… ಒಬ್ಬ ಮನುಷ್ಯನ ಬದುಕನ್ನು ಉಳಿಸಲು ಮಾಡುವ ಮನವಿ.

ಮಾಧ್ಯಮ ಸಹೋದ್ಯೋಗಿಗಳು, ಸ್ನೇಹಿತರು, ಬಂಧುಗಳು, ಸಾರ್ವಜನಿಕರು ಹಾಗೂ ಸಮಾಜದ ಹೃದಯವಂತರು ತಮ್ಮ ಕೈಲಾದಷ್ಟು ಆರ್ಥಿಕ ನೆರವನ್ನು ನೀಡಿ ಜಗದೀಶ್ ಬೆಳ್ಯಪ್ಪ ಅವರ ಚಿಕಿತ್ಸೆಗೆ ಸ್ಪಂದಿಸುವಂತೆ ‘ಮಾಧ್ಯಮ ಸ್ಪಂದನ’ದ ಮೂಲಕ ಕಳಕಳಿಯ ಮನವಿ ಮಾಡುತ್ತೇವೆ.

ನಮ್ಮ ಒಂದು ಸಣ್ಣ ನೆರವು…

ಅವರ ಪಾಲಿಗೆ ಇನ್ನೊಂದು ಉಸಿರಾಗಬಹುದು…

ಬನ್ನಿ… ಸಮಾಜದ ಧ್ವನಿಯಾಗಿದ್ದ ಜಗದೀಶ್ ಬೆಳ್ಯಪ್ಪ ಅವರ ಬದುಕಿನ ಹೋರಾಟದಲ್ಲಿ ಇಂದು ನಾವೇ ಅವರ ಧ್ವನಿಯಾಗೋಣ. ಅವರ ಕೈ ಹಿಡಿಯೋಣ… ಕುಟುಂಬದ ಕಣ್ಣೀರು ಒರೆಸೋಣ… ಬದುಕಿನ ಭರವಸೆ ಮೂಡಿಸೋಣ. ಒಂದು ಜೀವ ಉಳಿಸುವ ಅವಕಾಶ ನಮ್ಮ ಕೈಯಲ್ಲಿದ್ದರೆ… ಅದನ್ನು ಕೈಚೆಲ್ಲದಿರೋಣ. ಜಗದೀಶ್ ಬೆಳ್ಯಪ್ಪ ಅವರ ಚಿಕಿತ್ಸೆಗೆ ನಿಮ್ಮ ಹೃದಯಪೂರ್ವಕ ನೆರವು ಅಗತ್ಯ.

ಜಗದೀಶ್ ಬೆಳ್ಯಪ್ಪ ಅವರಿಗೆ ನೇರವಾಗಿ ನೆರವಿನ ಹಣ ಜಮಾ ಮಾಡಿ.

Account Details

Bank Name: Axis Bank

Account Number: 009010101338636

Primary Account Holder: Jagadish P B

IFSC Code: UTIB0000009

Account Type: Savings A/c

—————-

Google Pay/ Phone Pay Number :

9060137282

8660529389

ಅಜ್ಜಮಾಡ ರಮೇಶ್ ಕುಟ್ಟಪ್ಪ

ಟೀಮ್ ಮಾಧ್ಯಮ ಸ್ಪಂದನ

9880060229

admin
the authoradmin

Leave a Reply