ಹನಿಟ್ರ್ಯಾಪ್ ಅಡ್ಡಾದಲ್ಲಿ ಖತರ್ ನಾಕ್ ಪೊಲೀಸ್ ಪೇದೆ… ಬಟ್ಟೆ ವ್ಯಾಪಾರಿಗೆ ಖೆಡ್ಡಾ ತೋಡಿದ್ದು ಹೇಗೆ ಗೊತ್ತಾ?

ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಹನಿಟ್ರ್ಯಾಪ್ ಪ್ರಕರಣಗಳು ಬಹಳಷ್ಟು ನಡೆದಿದ್ದು ಪೊಲೀಸ್ ಪೇದೆ ಸೇರಿದಂತೆ ಮೂರು ಜನ ಖತರ್ ನಾಕ್ ಗಳು ಹುಡುಗಿ ಮೂಲಕ ಬಟ್ಟೆ ವ್ಯಾಪಾರಿಯನ್ನು ಖೆಡ್ಡಾಕ್ಕೆ ಕೆಡವಿ 10ಲಕ್ಷಕ್ಕೆ ಡಿಮ್ಯಾಂಡ್ ಮಾಡಿ ಪೊಲೀಸ್ ಅತಿಥಿಯಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ನಡೆದಿದ್ದು ಜನ ಬೆಚ್ಚಿ ಬೀಳುವಂತೆ ಮಾಡಿದೆ.. ಹಾಗೆಯೇ ಪೊಲೀಸ್ ಪೇದೆ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಪೊಲಿಸ್ ಅಧಿಕಾರಿಗಳು ತಲೆಕೆಡಿಸಿಕೊಳ್ಳುವಂತಾಗಿದೆ.
ಹನಿಟ್ರ್ಯಾಪ್ ಜಾಲ ಆಕ್ಟೋಪಾಸ್ ನಂತೆ ಹರಡಿಕೊಂಡಿದ್ದು ಯಾವಾಗ, ಯಾರನ್ನು ಟಾರ್ಗೆಟ್ ಮಾಡುತ್ತಾರೆ ಎಂಬುದನ್ನು ಹೇಳಲಾರದ ಸ್ಥಿತಿ ನಿರ್ಮಾಣವಾಗಿದೆ. ಉದ್ಯಮಿ, ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಹಣವಿರುವವರಿಗೆ ಖೆಡ್ಡಾ ತೋಡುತ್ತಿರುವ ದಂಧೆಕೋರರು ಯುವತಿಯರು, ಮಹಿಳೆಯರನ್ನು ಮುಂದೆ ಬಿಟ್ಟು ಅವರ ಮೂಲಕವೇ ತಮ್ಮ ತಂತ್ರ ರೂಪಿಸುತ್ತಿದ್ದಾರೆ. ಇಲ್ಲಿ ಮಾಯಾಂಗನೆಯರ ಮಾತಿಗೆ ಕರಗಿ ಅವರು ಕರೆದಲ್ಲಿಗೆ ಹೋದರೆ ಅವರ ಕಥೆ ಮುಗಿದಂತೆಯೇ….
ಹನಿಟ್ರ್ಯಾಪ್ ನಲ್ಲಿ ಬಹಳಷ್ಟು ವಿಧಗಳಿದ್ದು ಕೆಲವರು ಯುವತಿಯರನ್ನು ಮುಂದೆ ಬಿಟ್ಟು ಆ ಮೂಲಕ ಗಂಡಸರನ್ನು ತಾವಿದ್ದ ಸ್ಥಳಕ್ಕೆ ಕರೆಯಿಸಿಕೊಂಡು ಯುವತಿಯರ ಜತೆಗೆ ಇದ್ದಾಗ ಎಂಟ್ರಿ ಕೊಟ್ಟು ಆತನನ್ನು ಹೆದರಿಸಿ, ಬೆದರಿಸಿ ಆತ ಯುವತಿ ಜತೆಗಿರುವ ವೀಡಿಯೋ ಮಾಡಿ ಹಣ ವಸೂಲಿ ಮಾಡುವುದು, ಇನ್ನು ವೀಡಿಯೋ ಕಾಲ್ ಮಾಡುತ್ತಾ ಎದುರಿನ ವ್ಯಕ್ತಿಯನ್ನು ಮಾತಿನಿಂದಲೇ ಉದ್ರೇಕಿಸಿ ಆತನ ನಗ್ನ ಚಿತ್ರವನ್ನು ಸೆರೆ ಹಿಡಿದು ಬಳಿಕ ಅದನ್ನು ಆತನಿಗೆ ಕಳುಹಿಸಿ ಹಣ ಪೀಕುವುದು ಹೀಗೆ ಹಲವು ರೀತಿಯಲ್ಲಿ ನಡೆಯುತ್ತಿದೆ.
ಹನಿಟ್ರ್ಯಾಪ್ ಗೆ ಒಳಗಾದ ವ್ಯಕ್ತಿ ಮಾನ ಮರ್ಯಾದೆಗೆ ಹೆದರುವುದರಿಂದ ಕೇಳಿದಷ್ಟು ಹಣ ನೀಡುವುದಲ್ಲದೆ, ದೂರು ನೀಡಿದರೆ ಮರ್ಯಾದೆ ಮಣ್ಣು ಪಾಲಾಗುತ್ತದೆ ಎಂಬ ಭಯದಿಂದ ತೆಪ್ಪಗಿರುತ್ತಾರೆ. ಇದು ದಂಧೆ ನಡೆಸುವವರಿಗೆ ಟಾನಿಕ್ ಆಗಿದೆ. ಹೀಗಾಗಿ ನಾವು ಸಿಕ್ಕಿ ಬೀಳಲ್ಲ ಎಂಬ ಧೈರ್ಯದಿಂದಲೇ ಆಗಾಗ್ಗೆ ಹೊಸದೊಂದು ಮಿಕಗಳನ್ನು ಹುಡುಕುತ್ತಾ ಹೋಗುತ್ತಾರೆ. ಇದೀಗ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ಇದು ನಿಜಕ್ಕೂ ಸಮಾಜ ಅಚ್ಚರಿ ಪಡುವ ವಿಚಾರವೇ ಏಕೆಂದರೆ ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೂ ಹಬ್ಬಿರುವುದು ಯೋಚಿಸುವ ವಿಚಾರವೇ.. ಅಷ್ಟೇ ಅಲ್ಲದೆ ಈ ದಂಧೆಯಲ್ಲಿ ಪೊಲೀಸ್ ಪೇದೆಯೂ ಭಾಗಿಯಾಗಿರುವುದು ಪೊಲೀಸ್ ಇಲಾಖೆ ಮತ್ತು ಸರ್ಕಾರಕ್ಕೆ ಆಗಿರುವ ಅವಮಾನ ಎಂದರೆ ತಪ್ಪಾಗಲಾರದು.
ಇಷ್ಟಕ್ಕೂ ಏನಿದು ಹನಿಟ್ರ್ಯಾಪ್ ಪ್ರಕರಣ? ನಡೆದಿದ್ದೇನು? ಎಂಬುದನ್ನು ನೋಡುತ್ತಾ ಹೋದರೆ ಯುವತಿಯನ್ನು ಬಳಸಿಕೊಂಡು ಬಟ್ಟೆ ವ್ಯಾಪಾರಿಯನ್ನು ಆಕೆಯ ಮಗ್ಗುಲಿಗೆ ಕೆಡವಿ ಆತನಿಂದ 10ಲಕ್ಷ ವಸೂಲಿ ಮಾಡಲು ಮುಂದಾಗಿರುವುದು ಮೇಲ್ಮೋಟಕ್ಕೆ ಗೋಚರಿಸುತ್ತಿದೆ. ಅವಳು 23 ವರ್ಷದ ಸುಂದರ ಯುವತಿ, ಮುಂದಿನ ಸುಂದರ ಬದುಕನ್ನು ಕಟ್ಟಿಕೊಳ್ಳುವ ವಯಸ್ಸಿನಲ್ಲಿಯೇ ಆಕೆ ಅಡ್ಡದಾರಿಯಿಂದ ಲಕ್ಷ, ಲಕ್ಷ ಪೀಕಿ ಜಾಲಿಯಾಗಿರುವ ಕನಸು ಕಂಡಿದ್ದಳು. ಆಕೆಗೆ ಹನಿಟ್ರ್ಯಾಪ್ ನಂತಹ ಕೃತ್ಯಕ್ಕೆ ಕೈಹಾಕಲು ಜತೆಗಿದ್ದ ಖತರ್ ನಾಕ್ ಮೂರ್ತಿ, ಮಾಕನಹಳ್ಳಿ ಪಾಳ್ಯ ನಿವಾಸಿ, ಹುಣಸೂರು ಗ್ರಾಮಾಂತರ ಠಾಣೆ ಪೊಲೀಸ್ ಪೇದೆ ಶಿವಣ್ಣ ಹಾಗೂ ಗಣೇಶ್ ಗೌಡ ಕುಮ್ಮಕ್ಕು ನೀಡಿದ್ದರು. ಅವಳನ್ನು ಮುಂದಿಟ್ಟುಕೊಂಡೇ 10ಲಕ್ಷ ಹಣವನ್ನು ಬಗಲಿಗೆ ಹಾಕಿಕೊಳ್ಳಲು ತಯಾರಿ ನಡೆಸಿದ್ದರು. ಅದರಂತೆ ಪಿರಿಯಾಪಟ್ಟಣ ಬಳಿಯ ಕಂಪಲಾಪುರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ದಿನೇಶ್ ಕುಮಾರ್ ನ್ನು ಆರೋಪಿಗಳು ಟಾರ್ಗೆಟ್ ಮಾಡಿದ್ದರು.
ಆ ಯುವತಿ ಕಂಪಲಾಪುರದಲ್ಲಿದ್ದ ದಿನೇಶ್ ಕುಮಾರ್ ನ ಬಟ್ಟೆ ಅಂಗಡಿಗೆ ಹೋಗಿ ಬಟ್ಟೆ ಖರೀದಿಸಿದ್ದಲ್ಲದೆ ದಿನೇಶ್ ಕುಮಾರನ ಮೊಬೈಲ್ ನಂಬರ್ ಪಡೆದುಕೊಂಡು ಪರಿಚಯ ಮಾಡಿಕೊಂಡಿದ್ದಳು. ಬಳಿಕ ಅವಳೇ ಚಾಟಿಂಗ್ ಶುರು ಮಾಡಿದ್ದಳು. ನಂತರ ಆಕೆ ಆತನೊಂದಿಗೆ ತುಂಬಾ ಕ್ಲೋಸ್ ಆಗಿ ಮಾತನಾಡುತ್ತಾ ಬಗಲಿಗೆ ಬೀಳಿಸಿಕೊಂಡಿದ್ದಳು. ಮಿಕ ಬೀಳುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಜತೆಗಿದ್ದ ಮೂರ್ತಿ, ಪೇದೆ ಶಿವಣ್ಣ ಹಾಗೂ ಗಣೇಶ್ ಗೌಡರಿಗೆ ಮಾಹಿತಿ ನೀಡಿದ್ದಾಳೆ. ಎಲ್ಲರೂ ಸೇರಿ ಬಟ್ಟೆ ವ್ಯಾಪಾರಿ ದಿನೇಶ್ ಕುಮಾರ್ ನನ್ನು ಬಲೆಗೆ ಕೆಡವಿ ಹಣ ವಸೂಲಿ ಮಾಡಲು ಸಜ್ಜಾಗಿದ್ದಾರೆ.
ಜೂನ್ 14ರಂದು ಮುಹೂರ್ತ ಫಿಕ್ಸ್ ಮಾಡಿದ ತಂಡ ಅವನನ್ನು ಕರೆಯಿಸಿ ಕೊಳ್ಳಲು ಸ್ಕೆಚ್ ಹಾಕಿತ್ತು. ಅವಳು ವಾಟ್ಸಾಪ್ ಮೂಲಕ ಚಾಟಿಂಗ್ ಮಾಡುತ್ತಾ ನಾನು ಚಿಕ್ಕಮ್ಮನ ಮನೆ ಮರಡಿಯೂರು ಗ್ರಾಮದಲ್ಲಿದ್ದು, ಮನೆಯಲ್ಲಿ ಯಾರೂ ಇಲ್ಲ ನಾನು ಕಳಿಸುವ ಲೋಕೇಷನ್ ಗೆ ಬನ್ನಿ ಎಂದು ದಿನೇಶ್ ಕುಮಾರ್ ನನ್ನು ಕರೆದಿದ್ದಾಳೆ. ಅದರಂತೆ ಅವನು ಅವಳು ಹೇಳಿದ ಸ್ಥಳಕ್ಕೆ ಹೋಗಿದ್ದಾನೆ. ಆಕೆ ಖುಷಿಯಿಂದಲೇ ಬರಮಾಡಿಕೊಂಡಿದ್ದಾಳೆ.
ಮನೆಯ ಕೊಠಡಿಗೆ ಕರೆದೊಯ್ದು ಅವನನ್ನು ಲೈಂಗಿಕ ಕ್ರಿಯೆಗೆ ಪ್ರಚೋದಿಸಿದ್ದಾಳೆ. ಇದೇ ವೇಳೆ ಅದೇ ಮನೆಯಲ್ಲಿದ್ದ ಮೂರ್ತಿ ಮತ್ತು ಪೇದೆ ಶಿವಣ್ಣ ಅಲ್ಲಿಗೆ ಬಂದು ಇಲ್ಲಿ ಅನೈತಿಕ ಚಟುವಟಿಕೆ ಮೇಲೆ ದಾಳಿ ಎಂಬಂತೆ ನಾಟಕ ಮಾಡಿ ದಿನೇಶ್ ಕುಮಾರ್ ಗೆ ಥಳಿಸಿದ್ದಲ್ಲದೆ, ಅವನು ಅವಳ ಜತೆಗಿರುವ ಫೋಟೋ, ವೀಡಿಯೋ ಮಾಡಿದ್ದಾರೆ. ಅಲ್ಲದೆ ಇದನ್ನು ಪೊಲೀಸ್ ಸ್ಟೇಷನ್ ಗೆ ಕೊಡುವುದಾಗಿ ನಿನ್ನನ್ನು ಒದ್ದು ಒಳಗೆ ಹಾಕುವುದಾಗಿ ಬೆದರಿಸಿದ್ದಾರೆ. ಮಾನ ಮರ್ಯಾದೆಗೆ ಅಂಜಿದ ಆತ ಬಿಟ್ಟು ಬಿಡುವಂತೆ ಬೇಡಿಕೊಂಡಿದ್ದಾನೆ. ಈ ವೇಳೆ ಅವರು ಬೆದರಿಸಿ 10 ಲಕ್ಷ ಕೊಟ್ಟರೆ ಬಿಡುವುದಾಗಿ ಹೇಳಿದ್ದಾರೆ. ಇಲ್ಲದೆ ಹೋದರೆ ಒಳಗೆ ಹಾಕುವುದಲ್ಲದೆ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ.
ಹೆದರಿದ ದಿನೇಶ್ ಕುಮಾರ್ ತನ್ನ ಸಹೋದರ ಮಹೇಂದ್ರ ಚೌದರಿಗೆ ಫೋನ್ ಮಾಡಿ 10 ಲಕ್ಷ ರೂ. ಹಣವನ್ನು ತೆಗೆದುಕೊಂಡು ಬಂದು ಪೊಲೀಸ್ ಪೇದೆ ಶಿವಣ್ಣನಿಗೆ ನೀಡುವಂತೆ ಹೇಳಿದ್ದಾನೆ. ಆದರೆ ಹಣವನ್ನು ತೆಗೆದುಕೊಂಡು ಹೋಗುವ ಮುನ್ನ ದಿನೇಶನ ಸಹೋದರ ಮಹೇಂದ್ರ ಚೌದರಿಗೆ ಅನುಮಾನ ಬಂದಿದ್ದು ಆತ ನೇರವಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಇನ್ಸ್ ಪೆಕ್ಟರ್ ದೀಪಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕಿದೆ. ಇದೇ ಮೊದಲಾ? ಇದೇ ರೀತಿ ಇನ್ನಷ್ಟು ಮಂದಿಗೆ ಖೆಡ್ಡಾ ತೋಡಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡಬೇಕಾಗಿದೆ.
B M Lavakumar