CinemaLatest

ಮೂರು ರಾಜ್ಯಗಳಲ್ಲಿ ಮನ್ನಣೆಗಳಿಸಿದ್ದ ಸಕಲಕಲಾವಲ್ಲಭ ಸರಸ್ವತಿಪುತ್ರ ಅಚ್ಚಕನ್ನಡಿಗ ಹೊನ್ನಪ್ಪ ಭಾಗವತರ್…!

ಮಹಾರಾಜರಿಂದ ಮತ್ತು ಬ್ರಿಟಿಷರಿಂದ ಬಿರುದು ಸಂಪಾದಿಸಿ ಮೂರೂ ರಾಜ್ಯಗಳ ಮನ್ನಣೆಗಳಿಸಿದ್ದ ಸಕಲಕಲಾವಲ್ಲಭ ಸರಸ್ವತಿಪುತ್ರ ಹೊನ್ನಪ್ಪ ಭಾಗವತರ್. ಅಚ್ಚಕನ್ನಡದ ಪ್ರತಿಭೆಯಾದ ಇವರು ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಸಾಧನೆಯ ಮುದ್ರೆ ಒತ್ತಿದವರು. ಕನ್ನಡ ಚಿತ್ರರಂಗದ ಇತಿಹಾಸವನ್ನು ತಿರುಗಿನೋಡಿದಾಗ ಮಹಾನ್ ತಾರೆಗಳ ನಡುವೆ ಸದಾ ಪ್ರಜ್ವಲಿಸುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ನೂರಾರು ತಾರೆಗಳು ಮಿನುಗಿ ಹೋಗಿವೆ. ಇಂತಹ ತಾರೆಗಳ ನೆನಪಿಸುವ ಕೆಲಸವನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ ಅವರು  ಮಾಡುತ್ತಿದ್ದಾರೆ. ಈ ಬಾರಿ ಹೊನ್ನಪ್ಪ ಭಾಗವತರ್ ಅವರ ಕುರಿತ ಬರಹವನ್ನು ನಿಮ್ಮ ಮುಂದಿಟ್ಟಿದ್ದಾರೆ. ಓದಿದ ಬಳಿಕ ಅಭಿಪ್ರಾಯ ತಿಳಿಸಿ…

ಅಚ್ಚ ಕನ್ನಡಿಗ ಹೊನ್ನಪ್ಪ ಭಾಗವತರ್ ’ಅಂಬಿಕಾಪತಿ’ ತಮಿಳು ಫಿಲಂ ಮೂಲಕ ಸಿನಿಮಾರಂಗ ಪ್ರವೇಶಿಸಿದರು. ಆದರೆ ಇವರಿಗೂ ಮೊದಲೇ ಕಾಲಿವುಡ್‌ನಲ್ಲಿ ಖ್ಯಾತರಾಗಿದ್ದ ತಮಿಳುನಟ ತ್ಯಾಗರಾಜ ಭಾಗವತರ್‌ಗೆ ನೇರ ಸ್ಫರ್ಧಿಯಾದರು. ಆ ನಂತರ “ಸುಭದ್ರಾ” ಕನ್ನಡ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ಆ ಕಾಲಕ್ಕೆ ಸ್ಫುರದ್ರೂಪಿ ನಟನಾಗಿದ್ದ ಈತ  ಪೌರಾಣಿಕ ಐತಿಹಾಸಿಕ ಭಕ್ತಿಪ್ರಧಾನ ಫಿಲಂಸ್ ಗೆ ಹೇಳಿ ಮಾಡಿಸಿದಂಥ ಸೌಮ್ಯನಟ.

ದ.ಭಾರತದಲ್ಲಿ ಭಾಗವತರ್ ಹೆಸರುಳ್ಳ ಈ ಇಬ್ಬರು ನಟರುಗಳಿಂದಾಗಿ ಕನ್ನಡ-ತಮಿಳು ಸಿನಿಮಾಪ್ರೇಕ್ಷಕರಿಗೆ ಎಷ್ಟೋಸಲ ಕನ್‌ ಫ಼್ಯುಸ್‌ ಆಗಿ ತ್ಯಾಗರಾಜ ಭಾಗವತರ್ ಫಿಲಂ ಎಂದು ಕೊಂಡು ಹೊನ್ನಪ್ಪಭಾಗವತರ್ ಸಿನಿಮಾಕ್ಕೂ, ಹೊನ್ನಪ್ಪಭಾಗವತರ್ ಫಿಲಂ ಎಂದುಕೊಂಡು ತ್ಯಾಗರಾಜ ಭಾಗವತರ್ ಸಿನಿಮಾಕ್ಕೂ ನುಗ್ಗುವ ಮೂಲಕ ಇವರಿಬ್ಬರ ಸಿನಿಮಾಗಳನ್ನೇ ಪದೇ ಪದೇ ನೋಡಿದ ಉದಾಹರಣೆಯುಂಟು.

ಆಗಿನ ತಮಿಳ್ ಚಿತ್ರರಂಗದ ದಿಗ್ಗಜ ತ್ಯಾಗರಾಜ ಭಾಗವತರ್ ನಟನೆಯನ್ನೂ ಮೀರಿಸುವಂಥ ಶ್ರೇಷ್ಠ ಅಭಿನಯ ನೀಡುತ್ತಿದ್ದ ಹೊನ್ನಪ್ಪ ಭಾಗವತರ್ ಕನ್ನಡ ತೆಲುಗು ತಮಿಳು ಚಿತ್ರಗಳಲ್ಲಿ ನಟಿಸಿ ದಕ್ಷಿಣಭಾರತದ ಮೇರುನಟ ಎನಿಸಿ ದಾಖಲೆ ಮಾಡಿದರು. ಸಾರ್ವಜನಿಕ ವೇದಿಕೆ, ಸಮಾರಂಭ, ಕಾರ್ಯಕ್ರಮಗಳಲ್ಲಿ “ಅಪರೂಪದ ಕಲಾವಿದ” ಎಂದು ಖುದ್ದು ತ್ಯಾಗರಾಜಭಾಗವತರಿಂದಲೇ ಹೊಗಳಿಸಿಕೊಂಡದ್ದುಂಟು.  ಹೊನ್ನಪ್ಪ ಭಾಗವತರ್ ನಟಿಸಿದ ಪ್ರತಿಯೊಂದು ಸಿನಿಮಾದಲ್ಲಿ ತನ್ನ ಹಾಡಿನ ದೃಶ್ಯಗಳಿಗೆ ತಾನೇ ಹಿನ್ನೆಲೆಗಾಯಕ, ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ವಿಶಿಷ್ಟಗುಣವುಳ್ಳ ಪ್ರತಿಭಾವಂತ! ಆ ಕಾಲಕ್ಕೆ ತ್ರಿಭಾಷಾ ಚಿತ್ರರಂಗದ ಪ್ರಪ್ರಥಮ ಗಾಯಕ-ನಾಯಕನಟ ಎಂಬ ದಾಖಲೆ ಮಾಡಿದರು.

ಅಪ್ರತಿಮ ಭಕ್ತಿರಸದ ಹೀರೊ ಸುಮಾರು 50 ವರ್ಷಕಾಲ ಲಲಿತಕಲಾ ಫಿಲಂಸ್ ಬ್ಯಾನರಡಿಯಲ್ಲಿ ಕನ್ನಡ ತೆಲುಗು ತಮಿಳು ಚಿತ್ರಗಳ ನಿರ್ಮಾಪಕ ನಿರ್ದೇಶಕ ಸಂಗೀತ ನಿರ್ದೇಶಕನಾಗಿ ಬೆಳ್ಳಿತೆರೆಗೆ 32 ಫಿಲಂಸ್ ಅರ್ಪಿಸಿದ್ದ ಧೀಮಂತ ಕನ್ನಡಿಗ. 14ನೇ ಜನವರಿ 1915ರಂದು ಹೊನ್ನಪ್ಪ ಭಾಗವತರ್ ಬೆಂಗಳೂರಿನ ನೆಲಮಂಗಲ ಬಳಿ ಚೌಡಸಂದ್ರದಲ್ಲಿ ಜನಿಸಿದರು. ರಂಗ ಕಲಾವಿದನಾಗಿ ವೃತ್ತಿ ಪ್ರಾರಂಭಿಸಿ ನಾಟಕ- ಸಿನಿಮ ಎರಡೂ ಕ್ಷೇತ್ರಗಳಲ್ಲಿ ಪ್ರಭುದ್ಧನಟ ಎನಿಸಿ ಜನಪ್ರಿಯರಾದರು.

ಮಹಾರಾಜರಿಂದ ಮತ್ತು ಬ್ರಿಟಿಷರಿಂದ ಬಿರುದು ಸಂಪಾದಿಸಿ ಮೂರೂ ರಾಜ್ಯಗಳ ಮನ್ನಣೆಗಳಿಸಿದ್ದ ಸಕಲಕಲಾವಲ್ಲಭ! ಸರಸ್ವತಿಪುತ್ರ ಹೊನ್ನಪ್ಪ ಭಾಗವತರ್ 2.10.1992ರಂದು ತಮ್ಮ 77ನೇ ವಯಸ್ಸಲ್ಲಿ ಬೆಂಗಳೂರಿನಲ್ಲಿ ದೈವಾಧೀನರಾಗಿ ಅಮರರಾದರು! ಇವರ ಮಕ್ಕಳಪೈಕಿ, ಬೆಳ್ಳಿತೆರೆ-ಕಿರುತೆರೆ ಎರಡರಲ್ಲೂ ನಟ, ನಿರ್ಮಾಪಕ, ನಿರ್ದೇಶಕನಾಗಿ ಭರತ್ ಭಾಗವತರ್ ಯಶಸ್ಸು ಕೀರ್ತಿ ಸಂಪಾದಿಸುವ ಮೂಲಕ ತಮ್ಮತಂದೆಯ ಹೆಸರುಳಿಸುವಂಥ ಸತ್ಕಾರ್ಯನಿರ್ವಹಿಸಿ ಸಮರ್ಥ ಸಾಧನೆಗೈದರು. ಆದರೆ 25.1.2009 ರಂದು ತಮ್ಮ 50ನೇ ವಯಸ್ಸಿಗೇ ಅಕಾಲಿಕ ಮೃತ್ಯುಗೆ ಬಲಿಯಾದರು.

ಹೊನ್ನಪ್ಪ ಭಾಗವತರ್ಗೆ ಸಂದ ಪದವಿ ಪ್ರಶಸ್ತಿ ಬಿರುದು ಬಹುಮಾನಗಳ ಬಗ್ಗೆ ನೋಡಿದ್ದೇ ಆದರೆ, 1955: ಮಹಾಕವಿಕಾಳಿದಾಸ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ, 1956: ಪಂಚರತ್ನ ಚಿತ್ರದ ಅಭಿನಯಕ್ಕೆ ಮದ್ರಾಸ್ ಚಲನಚಿತ್ರ ಅಭಿಮಾನಿ ಸಂಘದ  ’ದಕ್ಷಿಣಭಾರತದ ಅತ್ಯುತ್ತಮ ನಟ’ ಪ್ರಶಸ್ತಿ, 1959: ಜಗಜ್ಯೋತಿಬಸವೇಶ್ವರ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಗೆ ಬಾಜನರಾಗಿದ್ದಾರೆ.

1960:ನಾದಬ್ರಹ್ಮ ಸಂಗೀತ ವಿದ್ಯಾಲಯದ ಸಂಸ್ಥಾಪಕ-ಅಧ್ಯಕ್ಷ, ಪ್ರಾಚಾರ್ಯ-ನಿರ್ದೇಶಕ, 1961:ಕನ್ನಡ ಫ಼ಿಲಂಸ್ ಸಲಹಾ ಸಮಿತಿ ಸದಸ್ಯ, 1962: ಕರ್ನಾಟಕ ಸಂಗೀತ-ನೃತ್ಯ ಅಕ್ಯಾಡೆಮಿ ಸದಸ್ಯ, 1976:’ಗಾನಕಲಾಭೂಷಣ’ ಪ್ರಶಸ್ತಿ, 1978:’ಗಾನಕಲಾಗಂಧರ್ವ’ತಾಮ್ರಪತ್ರ ಮತ್ತು  ನಗದು ಬಹುಮಾನ, 1980:’ಗಾನಾಭಿನಯಚಂದ್ರ’ ಬಿರುದು, ಮದ್ರಾಸ್ ಚಲನಚಿತ್ರ ಅಭಿಮಾನಿಗಳಿಂದ. 1986:’ರಾಜ್ಯೋತ್ಸವ ಪ್ರಶಸ್ತಿ’ ಕರ್ನಾಟಕ ಸರ್ಕಾರ.

1987:’ನಟನಾಚಾರ್ಯ’ ಬಿರುದು. ಸೌತ್ ಇಂಡಿಯನ್ ಫಿಲಂಫ಼್ಯಾನ್ಸ್ ಅಸೋಸಿಯೇಷನ್, ಹೈದ್ರಾಬಾದ್, 1990: ಭಾರತದ ರಾಷ್ಟ್ರಪತಿಗಳಿಂದ ಕೇಂದ್ರ ಸರ್ಕಾರದ ’ಸಂಗೀತ ನಾಟಕ ಅಕ್ಯಾಡೆಮಿ’ ಪ್ರಶಸ್ತಿ, 1991:’ವರ್ಷದ ಅತ್ಯುತ್ತಮ ಸಂಗೀತಗಾರ’ ಪ್ರಶಸ್ತಿ, ರಾಷ್ಟ್ರೀಯ ಸಂಗೀತ-ನಾಟಕ ಅಕ್ಯಾಡೆಮಿ, ನವದೆಹಲಿ.

ಹೊನ್ನಪ್ಪಭಾಗವತರ್ ನಟಿಸಿದ ಚಿತ್ರಗಳು: ಸುಭದ್ರಾ(ಕನ್ನಡ-ತೆಲುಗು/1941), ಹೇಮರೆಡ್ಡಿಮಲ್ಲಮ್ಮ, ಭಕ್ತಕುಂಬಾರ, ಗುಣಸಾಗರಿ, ಮಹಾಕವಿಕಾಳಿದಾಸ, ಆಷಾಢಭೂತಿ, ಪಂಚರತ್ನ, ಜಗಜ್ಯೋತಿಬಸವೇಶ್ವರ, ಕಠಾರಿವೀರ ಹಾಗೂ ಕಟ್ಟಕಡೆಯಚಿತ್ರ ಸದಾನಂದ.

admin
the authoradmin

1 Comment

  • ಅಖಿಲಭಾರತ ಶ್ರೇಷ್ಠ ಅಭಿನಯ ನೀಡುತ್ತಿದ್ದ ನಮ್ಮ ಅಪ್ಪಾ ತಾತನ ಕಾಲದ ನಟನ ಬಗ್ಗೆ ತಿಳಿಸಿದ ತಮಗೆ ಸಾಮಾಜಿಕ ವಂದನೆ

Leave a Reply