ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ರೈತರು ಇಳಿಜಾರಿಗೆ ಅಡ್ಡಲಾಗಿ ಭೂಮಿಯನ್ನು ಸಿದ್ಧಪಡಿಸಿ ಸಾವಯವ ಗೊಬ್ಬರ ಸೇರಿಸಿ ಉಳುಮೆ ಮಾಡಿ ವ್ಯವಸಾಯ ಮಾಡಿದಾಗ ಫಲವತ್ತತೆ ಹೆಚ್ಚಾಗುತ್ತದೆ ಎಂದು ಗಾವಡಗೆರೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೆಂಕಟೇಶ್ ರೈತರಿಗೆ ಸಲಹೆ ನೀಡಿದರು.
ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಮರೂರು ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ರೈತ ಕ್ಷೇತ್ರ ಪಾಠ ಶಾಲೆಯ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ಯಾವುದೇ ಗೊಬ್ಬರ, ಬಿತ್ತನೆ ಬೀಜ ಖರೀದಿ ಮಾಡುವಾಗ ಅಂಗಡಿಗಳಲ್ಲಿ ರಸೀದಿ ಪಡೆದು ಬೆಳೆ ಬರುವ ತನಕ ಜೋಪಾನವಾಗಿ ಇಟ್ಟುಕೊಳ್ಳಬೇಕು

ಕೃಷಿ ಇಲಾಖೆಯಲ್ಲಿ ಮಾರ್ಚ್ ಮೊದಲ ವಾರದಿಂದ ಏಪ್ರಿಲ್ ಕೊನೆಯ ವಾರದ ತನಕ ಬಿತ್ತನೆ ಬೀಜಗಳು ದೊರೆಯುತ್ತವೆ.ಉದ್ದು, ಹೆಸರು, ಅಲಸಂದೆ, ಬಿತ್ತನೆ ಬೀಜಗಳಿಗೆ ಶೇ.50ರಷ್ಟು ರಿಯಾಯಿತಿ ದಿನದಲ್ಲಿ ನೀಡುವುದರ ಜೊತೆಗೆ ಸಾವಯವ ಗೊಬ್ಬರ ಶೇ. 50ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುವುದು. ಕೇಂದ್ರ ಸರ್ಕಾರವು ಸಾವಯುವ ಕೃಷಿಗೆ ಉತ್ತೇಜನ ನೀಡುತ್ತಿದೆ ಅಡಿಕೆ ತೆಂಗು ಬೆಳೆಯುವ ರೈತರಿಗೆ ಸಹಾಯಧನ ನೀಡಲಾಗುತ್ತಿದೆ ಎಂದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ನಾರಾಯಣಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಹದೇವಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಶಿವರಾಜು, ಮೇಲ್ವಿಚಾರಕಿ ರೇಣುಕಾ, ಕೃಷಿ ಮೇಲ್ವಿಚಾರಕ ಅಣ್ಣಪ್ಪ, ಸೇವಾ ಪ್ರತಿನಿಧಿ ಪವಿತ್ರ, ಸೇರಿದಂತೆ 50ಕ್ಕೂ ಹೆಚ್ಚು ರೈತರು ಇದ್ದರು.








