18 ವರ್ಷಗಳ ಬಳಿಕ ಐಪಿಎಲ್ ಕಪ್ ಗೆದ್ದ ಆರ್ ಸಿಬಿ… ಕೊನೆಗೂ ಈಡೇರಿತು ಅಭಿಮಾನಿಗಳ ‘ಕಪ್ ನಮ್ದೇ’ ಬಯಕೆ.. ಎಲ್ಲೆಡೆ ಸಡಗರ.. ಸಂಭ್ರಮ..

ಕಳೆದ 18 ವರ್ಷಗಳಿಂದಲೂ ಕಪ್ ನಮ್ದೇ ಎನ್ನುವ ಅಭಿಮಾನಿಗಳ ಕನಸನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನನಸು ಮಾಡಿದೆ. ಆ ಮೂಲಕ ಇಡೀ ಅಭಿಮಾನಿಗಳ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಸಂಭ್ರಮದ ಹೊನಲು ಹರಿಸಿದ್ದಾರೆ. ಅಷ್ಟೇ ಅಲ್ಲದೆ ವಿರಾಟ್ ಕೊಯ್ಲಿಯ ಐಪಿಎಲ್ ಕಪ್ ಗೆಲ್ಲಲು ಸಾಧ್ಯವಾಗಿಲ್ಲವಲ್ಲ ಎಂಬ ಕೊರಗನ್ನು ನೀಗಿಸಿ ಆನಂದ ಭಾಷ್ಪ ಸುರಿಸುವಂತೆ ಮಾಡಿದೆ.
ಕೊನೆಗೂ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ನ 18ನೇ ಆವೃತ್ತಿಯ ಫೈನಲ್ ಪಂದ್ಯ ಆರ್ ಸಿಬಿಯ ಗೆಲುವಿನ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಪಂಜಾಬ್ ಮತ್ತು ಆರ್ ಸಿಬಿ ತಂಡಗಳ ರೋಚಕ ಪಂದ್ಯ ಹಲವು ವಿಶೇಷತೆಗಳಿಗೆ ನಿದರ್ಶನವಾಗಿದೆ. ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳು ಆರ್ ಸಿಬಿ ಗೆಲ್ಲುತ್ತಿದ್ದಂತೆಯೇ ಸಂಭ್ರದಲ್ಲಿ ತೇಲಾಡಿದರೆ, ಇತ್ತ ಕರ್ನಾಟಕದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಖುಷಿಯನ್ನು ಹಂಚಿಕೊಂಡಿದ್ದಾರೆ.
ಆರ್ ಸಿಬಿ ಪಾಲಿಗೆ ಜೂ3, 2025 ಮರೆಯಲಾರದ ದಿನವಾಗಿ ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಉಳಿದು ಹೋಗಲಿದೆ. ಐಪಿಎಲ್ – 2025ರ ಅಂತಿಮ ಪಂದ್ಯದಲ್ಲಿ ಪಂಜಾಬ್ ತಂಡ ಟಾಸ್ ಗೆದ್ದು ಆರ್ ಸಿಬಿಗೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದು ಅದರಂತೆ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಆರಂಭಿಕ ಬ್ಯಾಟಿಂಗ್ ಬರುತ್ತಿದ್ದಂತೆಯೇ ಇಡೀ ಸ್ಟೇಡಿಯಂನಲ್ಲಿ ಹರ್ಷೋದ್ಘಾರದ ಮಳೆ ಸುರಿಸಿತು. ಆ ನಂತರ ಏನಾಯಿತು ಎಂಬುದನ್ನು ಕ್ರಿಕೆಟ್ ಪ್ರೇಮಿಗಳು ಟಿವಿ ಮುಂದೆ ಕುಳಿತು ನೋಡಿದ್ದಾರೆ ಅದನ್ನು ಇಲ್ಲಿ ತಿಳಿಸುವ ಅಗತ್ಯವಿಲ್ಲ. ಕೊನೆಗೂ ಪಂಜಾಬ್ ವಿರುದ್ಧ 6 ರನ್ ಗಳ ಅಂತರದಲ್ಲಿ ಗೆಲುವಿನ ಪತಾಕೆ ಹಾರಿಸುವ ಮೂಲಕ ಕಪ್ ನಮ್ದೆ ಎನ್ನುವ ಅಭಿಮಾನಿಗಳ ಬಯಕೆ ಈಡೇರಿಸಿದ್ದಾರೆ.
2025ರ ಐಪಿಎಲ್ ಫೈನ್ಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ, 20 ಓವರ್ಗಳಲ್ಲಿ 9 ವಿಕೆಟ್ಗೆ 190 ರನ್ ಗಳ ಗುರಿಯನ್ನು ಪಂಜಾಬ್ ಗೆ ನೀಡಿತು. ಇದನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 184 ರನ್ಗಳನ್ನು ಮಾತ್ರ ಗಳಿಸುವುದರೊಂದಿಗೆ ಆರ್ಸಿಬಿ ಎದುರು ಆರು ರನ್ಗಳ ಅಂತರದಿಂದ ಕೈಚೆಲ್ಲಿತು. ಅಂತಿಮವಾಗಿ ಆರ್ ಸಿಬಿ ಗೆಲುವಿನ ನಗೆ ಬೀರಿತು.
ಆರ್ ಸಿಬಿ ಕಪ್ ಗೆಲ್ಲುವ ಮೂಲಕ ಕೊಹ್ಲಿ ಅವರಿಗೆ ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಕಾಡುತ್ತಿದ್ದ ಅವರ ಕೊರಗನ್ನು ನೀಗಿಸಿದೆ. ಅವರ ದಾಖಲೆಗಳ ಆಟಗಳ ಬಗ್ಗೆ ನೋಡಿದ್ದೇ ಆದರೆ ಐಪಿಎಲ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಅವರಿಗಿದೆ. 267 ಐಪಿಎಲ್ ಪಂದ್ಯಗಳಲ್ಲಿ 771 ಬೌಂಡರಿ ಪಡೆದಿದ್ದು, 9 ಸಾವಿರ ರನ್ ಗಳಿಗೆ ಸಮೀಪದಲ್ಲಿದ್ದಾರೆ. ಇನ್ನು ಪಂಜಾಬ್ ವಿರುದ್ಧ 159 ರನ್ ಗಳಿಸುವ ಮೂಲಕ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ಖ್ಯಾತಿಯನ್ನು ಪಡೆದಿದ್ದಾರೆ.
ಪಂದ್ಯಗೆದ್ದ ಬಳಿಕ ವಿರಾಟ್ ಕೊಹ್ಲಿ “ನನ್ನ ಹೃದಯ ಬೆಂಗಳೂರಿನೊಂದಿಗಿದೆ, ನನ್ನ ಆತ್ಮ ಬೆಂಗಳೂರಿನೊಂದಿಗಿದೆ” ಎನ್ನುವ ಮೂಲಕ ಆರ್ಸಿಬಿ ಅಭಿಮಾನಿಗಳ ಮನಸ್ಸಿಗೆ ಹತ್ತಿರ ಆಗಿದ್ದಾರೆ. (My Heart is with bangalore, my soul is with bangalore). ಇಷ್ಟೇ ಅಲ್ಲದೆ ಕ್ರಿಸ್ ಗೇಯ್ಲ್, ಎಬಿ ಡಿವಿಲಿಯರ್ಸ್ ಜೊತೆ ಮಾತನಾಡಿದ ಕೊಹ್ಲಿ ‘ಈ ಸಲ ಕಪ್ ನಮ್ದು’ ಎಂದು ಸಂಭ್ರಮಿಸಿದ್ದು ನೋಡುಗರ ಗಮನಸೆಳೆದಿದೆ. ಒಟ್ಟಾರೆ 17 ವರ್ಷಗಳ ಶ್ರಮ, ಕಾತರ, ನಿರೀಕ್ಷೆ ಎಲ್ಲದಕ್ಕೂ ವಿರಾಮ ಬಿದ್ದಿದೆ. ಜತೆಗೆ ಐಪಿಎಲ್ ಕಪ್ ಗೆದ್ದಿದೆ.
First class information news article 🙌