ಕೆ.ಆರ್.ನಗರ( ಜಿಟೆಕ್ ಶಂಕರ್): ಮಾಜಿ ಸಚಿವ ಸಾ.ರಾ.ಮಹೇಶ್ ಅಲ್ಪ ಸಂಖ್ಯಾತರ ವಿರೋಧಿ ಮತ್ತು ಹಿಂದುಳಿದವರ ದ್ರೋಹಿ ಎಂದು ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಚಿಮಂಜು ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿ ಗೋಷ್ಟಿ ಯಲ್ಲಿ ಮಾತನಾಡಿದ ಅವರು ಕಳೆದ ಮೂರು ದಿನಗಳ ಹಿಂದೆ ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ನಡೆದ ಜನರೊಂದಿಗೆ ಜನತಾ ದಳ ಎಂಬ ಕಾರ್ಯಕ್ರಮದಲ್ಲಿ ಸುಳ್ಳು ಆರೋಪ ಮಾಡಿರುವ ಅವರು ನಂಬಿಕೆಗೆ ಅನರ್ಹರು ಎಂದರು.
ಜಾತಿ ರಾಜಕಾರಣಕ್ಕೆ ಸೀಮಿತವಾಗಿರುವ ಸಾ.ರಾ.ಮಹೇಶ್ ಚುನಾವಣೆ ಬಂದಾಗ ಎಲ್ಲಾ ಸಮುದಾಯದವರನ್ನು ಓಲೈಸುತ್ತಾರೆ ಆನಂತರ ಸಣ್ಣ ಪುಟ್ಟ ಜಾತಿಯನ್ನು ನಿಕ್ರೂಷ್ಟವಾಗಿ ಕಾಣುವ ಮಾಜಿ ಸಚಿವರಿಗೆ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸುವರೆಂದು ಎಚ್ಚರಿಸಿದರು.
ತಮ್ಮ ಸ್ವಾರ್ಥ ಮತ್ತು ಅಧಿಕಾರದ ದಾಹಕ್ಕಾಗಿ ಸಮಾಜದಲ್ಲಿ ನೊಂದವರು ಬೆಂದವರು ಮತ್ತು ತುಳಿತಕ್ಕೊಳಗಾದವರನ್ನು ಬಳಸಿಕೊಂಡು ಆನಂತರ ಕಾಲು ಕಸಕ್ಕಿಂತ ಕಡೆಯಾಗಿ ಕಾಣುವ ಸಾ.ರಾ.ಮಹೇಶ್ ನಿಜವಾದ ದಲಿತ ಮತ್ತು ನೊಂದವರ ದ್ರೋಹಿ ಎಂದು ಜರೆದರು.

ಕ್ಷೇತ್ರದಲ್ಲಿ ಬಲಾಹೀನರು ಮತ್ತು ನೊಂದ ಸಮುದಾಯಕ್ಕೆ ಸೇರಿದ ಹತ್ತಾರು ಸಮುದಾಯದ ಜನರಿದ್ದು ಅವರನ್ನು ಸಾರ್ವಜನಿಕವಾಗಿ ಓಲೈಸುವ ಮಾಜಿ ಸಚಿವರು ರಾಜಕೀಯ ಬಂದಾಗ ವೋಟ್ ಬ್ಯಾಂಕ್ ರಾಜಕಾರಕ್ಕೆ ಬಳಸುತ್ತಿದ್ದು ಇದಕ್ಕೆ ನಮ್ಮ ಕ್ಷೇತ್ರದ ಮತದಾರ ಪ್ರಭುಗಳು ಸಕಾಲದಲ್ಲಿ ತಕ್ಕ ಉತ್ತರ ನೀಡುತ್ತಾರೆಂದರು.
ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾತ ಬೆಂಬಲಿಗರನ್ನು ಗುರಿ ಮಾಡಿ ಕೆಟ್ಟ ರಾಜಕೀಯ ಇತಿಹಾಸಕ್ಕೆ ನಾಂದಿಯಾಡಿರುವ ಸಾ.ರಾ.ಮಹೇಶ್ ತಮ್ಮಪಕ್ಷದ ಮುಖಂಡರು ಮತ್ತು ಬೆಂಬಲಿಗರು ಈ ಹಿಂದೆ ಯಾವ ದಂಧೆ ಮಾಡುತ್ತಿದ್ದರು ಎಂಬ ವಿಚಾರವನ್ನು ಬಹಿರಂಗ ಪಡಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.
ಕೆ.ಆರ್.ನಗರ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಹೇಮಂತ್, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಸ್ವರೂಪ್, ಯುವ ಮುಖಂಡರಾದ ದರ್ಶನ್, ಚೇತನ್, ಕಾಮೇನಹಳ್ಳಿವಿನಯ್, ಬೆನಕಪ್ರಸಾದ್, ಕುಳ್ಳಮೋಹನ್, ರಾಜಶೇಖರ, ಎಸ್.ಸಾಗರ್, ಸುನೀಲ್, ಸುಹಾಸ್ ಸೇರಿದಂತೆ ಇನ್ನಿತರರು ಹಾಜರಿದ್ದರು.








