DistrictLatest

ಮುಂಗಾರು ಆರಂಭದಲ್ಲಿಯೇ ಭರ್ತಿಯಾಗುವ ಹಂತದಲ್ಲಿ ಕಬಿನಿ ಜಲಾಶಯ… ನದಿಗೆ ನೀರು ಬಿಡುಗಡೆ… ತಗ್ಗು ಪ್ರದೇಶದ ಜನರಿಗೆ ಎಚ್ಚರವಾಗಿರಲು ಸೂಚನೆ

ಮೈಸೂರು: ರಾಜ್ಯದಲ್ಲಿ ಬಹುಬೇಗ ಭರ್ತಿಯಾಗುವ ಜಲಾಶಯ ಎಂಬ ಖ್ಯಾತಿ ಪಡೆದಿರುವ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯ ಮುಂಗಾರು ಆರಂಭದಲ್ಲಿಯೇ ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಜಲಾಶಯಕ್ಕೆ ಒಳಹರಿವು ಹೆಚ್ಚಿರುವ ಕಾರಣದಿಂದಾಗಿ ಇದೀಗ ನದಿಗೆ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಬಾರಿ ಜಲಾಶಯ ಆರಂಭದಲ್ಲಿಯೇ ಭರ್ತಿಯಾಗುವ ಹಂತ ತಲುಪಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಜಲಾಶಯ ಭರ್ತಿಯಾಗುತ್ತಿದ್ದರೂ ಇಷ್ಟು ಬೇಗ ಭರ್ತಿಯಾಗಿರಲಿಲ್ಲ. ಮುಂಗಾರು ತಡವಾಗಿ ಆರಂಭವಾಗುತ್ತಿದ್ದರಿಂದ ಜೂನ್ ಕೊನೆಯಲ್ಲಿ ಅಥವಾ ಜುಲೈನಲ್ಲಿ ಭರ್ತಿಯಾಗಿ ಜಲಾಶಯದಿಂದ ನೀರನ್ನು ಬಿಡಲಾಗುತ್ತಿತ್ತು. ಆದರೆ ಈ ಬಾರಿ ಮುಂಗಾರು ಆರಂಭವೇ ಬಿರುಸು ಪಡೆದುಕೊಂಡಿದ್ದು ಕೇರಳದ ವೈನಾಡು ಮತ್ತು ಕಬಿನಿ ಜಲಾನಯನ ಪ್ರದೇಶಗಳಾದ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದ ಕಾರಣ ನೀರು ಜಲಾಶಯಕ್ಕೆ ಹರಿದು ಬಂದಿದ್ದು ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಾ ಸಾಗುತ್ತಿದೆ.

ಸದ್ಯ ಕಬಿನಿ ಜಲಾಶಯಕ್ಕೆ ಸುಮಾರು  18 ಸಾವಿರ ಕ್ಯೂಸಕ್ ಗಿಂತ ಅಧಿಕ ನೀರು ಹರಿದು ಬರುತ್ತಿದ್ದು ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಗರಿಷ್ಠ 2284 ಅಡಿಯ ಜಲಾಶಯದಲ್ಲಿ ಸದ್ಯ 2279 ಅಡಿಯಷ್ಟು ನೀರಿದೆ ಈ ಜಲಾಶಯವು  ಒಟ್ಟು 19.52 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದ್ದು  ಪ್ರಸ್ತುತ 16 ಟಿಎಂಸಿ ನೀರು ಶೇಖರಣೆ ಆಗಿದೆ. ಮುಂದಿನ ದಿನಗಳಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಾದರೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸಬೇಕಾಗಿರುವುದರಿಂದ ನದಿ ಪಾತ್ರದಲ್ಲಿ ಪ್ರವಾಹದ ಪರಿಸ್ಥಿತಿ ತಲೆದೋರುವ ಸಾಧ್ಯತೆ ಹೆಚ್ಚಾಗಿದೆ.

ಇದೀಗ ನದಿಗೆ 5ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತದೆಯಾದರೂ ಯಾವುದೇ ಕ್ಷಣದಲ್ಲಾದರೂ ಇದರ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ತಗ್ಗು ಪ್ರದೇಶದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಜಲಾಶಯದಲ್ಲಿ ನೀರಿನ ಪ್ರಮಾಣ ತಗ್ಗಿ ಹಿನ್ನೀರಿನಲ್ಲಿ ಮುಳುಗಿದ ಗ್ರಾಮಗಳ ಅವಶೇಷಗಳು ಕಾಣಿಸುತ್ತಿದ್ದವು. ಆದರೆ ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಉತ್ತಮವಾಗಿ ಸುರಿದ ಕಾರಣ ಜಲಾಶಯದಲ್ಲಿ ನೀರಿನ ಪ್ರಮಾಣ ತಳ ಸೇರಿರಲಿಲ್ಲ.

ಮೇ 25ರ ತನಕ ಜಲಾಶಯದ ನೀರಿನ ಮಟ್ಟ 2260 ಅಡಿ ಇತ್ತು. ಆದರೆ ಮೇ.26ರ ನಂತರ  ಒಂದೇ ಸಮನೆ  ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚುತ್ತಾ ಹೋಗಿದ್ದು ಇದೀಗ ಜಲಾಶಯದ ಮಟ್ಟ 2279 ಅಡಿಗೆ ತಲುಪಿದೆ.  ಸಂಪೂರ್ಣ ಭರ್ತಿಯಾಗಲು ಇನ್ನು 5 ಅಡಿಯಷ್ಟೇ ಬಾಕಿಯಿರುವುದರಿಂದ ಮುಂಜಾಗ್ರತಾ ದೃಷ್ಟಿಯಿಂದ ನೀರನ್ನು ನದಿಗೆ ಬಿಡಲಾಗುತ್ತಿದೆ. ಹವಾಮಾನ ವರದಿ ಪ್ರಕಾರ ಮೇ 31 ರವರೆಗೆ ಮುಂಗಾರು ಮಳೆ ಇದ್ದು ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಳೆ ನಿರಂತರವಾಗಿ ಬೀಳುತ್ತಿದೆ. ಇದರಿಂದ ಜಲಾಶಯದ ಗರಿಷ್ಠ ಮಟ್ಟ ತಲುಪಿದೆ.

ವಾಡಿಕೆಯಂತೆ ಜೂನ್ ತಿಂಗಳಲ್ಲಿ ಜಲಾಶಯ ಭರ್ತಿ ಆಗುತಿತ್ತು. ಈ ಬಾರಿ ಮೇ ತಿಂಗಳಲ್ಲಿ ಜಲಾಶಯ ಭರ್ತಿಯಾಗಿ ಈ ಭಾಗದ ರೈತರಲ್ಲಿ ಹರ್ಷ ಉಂಟು ಮಾಡಿದ್ದಂತು ನಿಜ. ಜಲಾಶಯದ ಬಗ್ಗೆ ಹೇಳಬೇಕೆಂದರೆ ಸಂಕಷ್ಟ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲು ಸರ್ಕಾರಗಳು ಈ ಜಲಾಶಯವನ್ನೇ ಅವಲಂಬಿಸಿರುವುದು ಕಂಡು ಬರುತ್ತದೆ. ಜತೆಗೆ ಈ ಜಲಾಶಯದಿಂದಲೇ ಬೆಂಗಳೂರು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆ ಸೇರಿದಂತೆ ಹಲವಾರು ನಗರಗಳಿಗೆ ಪ್ರತಿನಿತ್ಯ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ಇನ್ನು ಜಲಾಶಯ ಮುಂಭಾಗದಲ್ಲಿ ಹೊಸದಾಗಿ ಸೇತುವೆ ನಿರ್ಮಾಣ ಕಾಮಗಾರಿ ಕುಂಠಿತವಾಗಿದ್ದು ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟರೆ ಜಲಾಶಯದ ಹಳೇ ಸೇತುವೆ ಮುಳುಗಡೆ ಆಗಿ ಬೀಚನಹಳ್ಳಿ-ಬಿದರಹಳ್ಳಿ ಸಂಪರ್ಕ ರಸ್ತೆ ಕಡಿದು ಹೋಗಲಿದ್ದು ಸುಮಾರು ಹತ್ತು ಹದಿನೈದು ಗ್ತಾಮಗಳಿಗೆ ವಾಹನಗಳ ಓಡಾಟಕ್ಕೆ ತೊಂದರೆ ಆಗಲಿದೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ಈ ಭಾಗದ ಜನರು ಇಂತಹದೊಂದು ಸಂಕಷ್ಟವನ್ನು ಅನುಭವಿಸಿಕೊಂಡೇ ಬರುತ್ತಿದ್ದಾರೆ.

2019 ರಲ್ಲಿ ಗಡಿಭಾಗದಲ್ಲಿ ಹಾಗೂ ಕೇರಳದ ವಯನಾಡ್ ಜಿಲ್ಲೆಯಲ್ಲಿ ಸುರಿದ ಬಾರಿ ಮಳೆಯಿಂದಾಗಿ ಜಲಾಶಯಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಅಷ್ಟು ಪ್ರಮಾಣದ ನೀರನ್ನು ನದಿಗೆ ಬಿಟ್ಟಿದರಿಂದ ಜಲಾಶಯದ ಮುಂಭಾಗದ ತಗ್ಗು ಪ್ರದೇಶದ ಗ್ರಾಮಗಳು ಹಾಗೂ ತುಂಬಸೋಗೆ, ಮಾದಾಪುರ, ಹೊಮ್ಮರಗಳ್ಳಿ ಸೇರಿದಂತೆ ಹಲವಾರು ಸೇತುವೆಗಳು ಮುಳುಗಡೆ ಆಗಿ ರಸ್ತೆ ಗಳು ಕಡಿತಗೊಂಡ ಜನಜೀವನ ಅಸ್ತವ್ಯಸ್ತ ಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅದು ಏನೇ ಇರಲಿ ಮುಂದಿನ ಮಳೆಗಾಲದ ದಿನಗಳಲ್ಲಿ ಇನ್ನಷ್ಟು ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ತಗ್ಗು ಪ್ರದೇಶದ ಜನ ಎಚ್ಚರವಾಗಿರುವುದು ಒಳಿತು.

 

admin
the authoradmin

Leave a Reply