LatestState

ಕಣಿವೆ ರಾಮಲಿಂಗೇಶ್ವರ ದೇವಾಲಯದ ಗುಡ್ಡದ ಗುಹೆಯೊಳಗಿನ ಶಿವಲಿಂಗ ನೋಡಿದ್ದೀರಾ?

ಕಣಿವೆಯ  ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವರ ವಾರ್ಷಿಕ ರಥೋತ್ಸವ ಏಪ್ರಿಲ್ ನಲ್ಲಿ ಜರುಗಲಿದೆ. ದೇವಾಲಯದ ಗೋಪುರದ ಹಿಂಭಾಗದಲ್ಲಿ ಗುಡ್ಡವೊಂದಿದ್ದು ಅದರಲ್ಲಿ ವಿಶಾಲವಾದ ಗುಹೆ ಒಂದಿದೆ. ಬೃಹತ್ ಬಂಡೆಯೊಳಗಿನ  ಗುಹೆಯೊಳಗೆ ಋಷಿಮುನಿಗಳು ತಪಸ್ಸು ಮಾಡಿರುವ ಕುರಿತು ಐತಿಹ್ಯಗಳಿವೆ. ಜೊತೆಗೆ ಇದೇ ಗುಹೆಯ ಒಳಗೆ ವಿಶೇಷವಾದ ಶಿವಲಿಂಗ ಒಂದಿದ್ದು ಅದರ ಬಗ್ಗೆ ಭಕ್ತರಿಗೆ ಅಷ್ಟೇನು  ಮಾಹಿತಿ ಇರುವುದಿಲ್ಲ‌.

ಅಂದರೆ ದೇವಾಲಯಕ್ಕೆ ಬಂದು ಸಾಕ್ಷಾತ್  ಶ್ರೀರಾಮನಿಂದ ಪ್ರತಿಷ್ಠಾಪಿಸಲ್ಪಟ್ಟ ಗರ್ಭಗುಡಿಯೊಳಗಿನ  ಶಿವಲಿಂಗವನ್ನು ದರ್ಶಿಸಿ ಪೂಜಿಸಿ ತೆರಳುತ್ತಾರೆಯೇ ವಿನಃ,  ದೇವಾಲಯದ ಗುಡ್ಡದ ಮೇಲಿನ ಎಡ ಪಾರ್ಶ್ವದಲ್ಲಿ ಇರುವ ಗುಹೆಯೊಳಗಿನ  ಶಿವಲಿಂಗವನ್ನು ನೋಡಿರಲಾರರು. ಏಕೆಂದರೆ, ಈ ಗುಹೆಯ ಮಾರ್ಗದ ಪರಿಸರ ಗಿಡಗಂಟಿಗಳಿಂದ ಮುಚ್ಚಿದ್ದು, ಸರಿಯಾದ ರಸ್ತೆಯೇ ಇರಲಿಲ್ಲ. ಹಾಗಾಗಿ ಬೆಂಗಳೂರು ಮೂಲದ ಭಕ್ತರೊಬ್ಬರು ದೇವಾಲಯಕ್ಕೆ ಆಗಮಿಸಿದ ಸಂದರ್ಭ ದೇವಾಲಯದ ಬಗ್ಗೆ  ಮಾಹಿತಿ ಕಲೆ ಹಾಕಿದ ಭಕ್ತರು, ಗುಡ್ಡದ ಮೇಲಿನ ಗುಹೆಯೊಳಗಿನ ಶಿವಲಿಂಗವನ್ನು ದರ್ಶಿಸಿದರು.

ಬಳಿಕ ದೇವಾಲಯದ ಮುಖ್ಯ ದ್ವಾರ ದಿಂದ ಗುಹೆಗೆ ತೆರಳುವ ದುರ್ಗಮ ಮಾರ್ಗವನ್ನು ಪರಿಶೀಲಿಸಿದ ಭಕ್ತರು, ತಾವೇ ಸ್ವತಃ ಖುದ್ದಾಗಿ ಗುಹೆಗೆ ತೆರಳುವ ರಸ್ತೆಯನ್ನು ನಿರ್ಮಾಣ ಮಾಡುವ ಶಪಥ ಗೈದರು. ಕಲ್ಲು ಬಂಡೆಗಳಿಂದ ಕೂಡಿದ್ದ ಮಾರ್ಗವನ್ನು ಸರಿಪಡಿಸಿ, ಪಾದಚಾರಿಗಳು ಸಂಚರಿಸುವಂತೆ ಮಾಡಲಾಗಿದೆ. ಗುಹೆಯ ಕಲ್ಲಿನ ಮೇಲ್ಭಾಗದಲ್ಲಿ ನೀರಿನ ಟ್ಯಾಂಕ್ ಅಳವಡಿಸಿ  ದೇವಾಲಯದೊಳಗಿನಿಂದ ಸುಮಾರು 500 ಮೀಟರ್ ದೂರದ ಪೈಪ್ ಅಳವಡಿಸಲಾಗಿದೆ. ಜೊತೆವೆ ನೀರಿನ ನಲ್ಲಿಗಳನ್ನು ಮತ್ತು  ವಿದ್ಯುತ್ ಸಂಪರ್ಕವನ್ನು ಅಳವಡಿಸಲಾಗಿದೆ.

ಕ್ರಮೇಣ, ಈ ಮಾರ್ಗದ ರಸ್ತೆಗೆ ಕಾಂಕ್ರೀಟ್ ಅಳವಡಿಸಿ ರಸ್ತೆಯ  ಒಂದು ಬದಿಯಲ್ಲಿ ಕಬ್ಬಿಣದ ತಡೆಗೋಡೆ ನಿರ್ಮಾಣ ಮಾಡುವ ಶಪಥ ಹೊಂದಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ಗುಹೆಯನ್ನು ದರ್ಶಿಸಿದ ಕುಶಾಲನಗರದ ಭಕ್ತರಾದ ಪ್ರದೀಪ್ ನಾಗರಾಜು ಎಂಬವರು, ಬೃಹತ್ ಕಲ್ಲು ಹಾಸಿನ ಗುಹೆಯೊಳಗೆ ಮಾರ್ಬಲ್ ಅಳವಡಿಸಿ ಭಕ್ತರು  ಶಿವಲಿಂಗದ ಮುಂದೆ ಕುಳಿತು ಧ್ಯಾನ ಮಾಡಲು ಅನುಕೂಲವಾಗುವಂತೆ ಮಾಡಿದ್ದಾರೆ.

ಗುಹೆಯೊಳಗಿನ ಶಿವಲಿಂಗದ ಮುಂಭಾಗ ಕಲ್ಲುಗಳ ರಾಶಿಯ ಮೇಲೆ ವಿಸ್ಮಯ ಎಂಬಂತೆ ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆ ಗಿಡವೊಂದು ಬೆಳೆದಿದೆ. ಜೊತೆಗೆ ಗುಹೆಯ ಮೇಲ್ಭಾಗದಲ್ಲಿ ಅರಳಿ ಗಿಡವೊಂದು ಬೆಳೆದು ಬೃಹದಾಕಾರದ ವೃಕ್ಷವಾಗಿ ಮಾರ್ಪಟ್ಟು ಶಿವಲಿಂಗದ ಗುಡ್ಡಕ್ಕೆ ನೆರಳಾಗಿರುವುದು ವಿಸ್ಮಯ ಮೂಡಿಸಿದೆ.ಒಟ್ಟಾರೆ, ಈ ಬಾರಿಯ ಏಪ್ರಿಲ್ ನಲ್ಲಿ ನಡೆವ ಶ್ರೀ ರಾಮಲಿಂಗೇಶ್ವರ ಬ್ರಹ್ಮರಥೋತ್ಸವಕ್ಕೆ ಭಕ್ತರ ಪಾಲಿಗೆ ಈ ಬಾರಿ ಗುಹೆಯ ಒಳಗಿನ ಶಿವಲಿಂಗದ ದರ್ಶನ ಭಾಗ್ಯವೂ ದೊರಕುವುದರಲ್ಲಿ ಸಂಶಯವಿಲ್ಲ.

ಈ ಬಗ್ಗೆ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎನ್.ಸುರೇಶ್ ಮಾತನಾಡಿ,  ಐತಿಹಾಸಿಕ ಹಿನ್ನೆಲೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಸಮಗ್ರ ಅಭಿವೃದ್ಧಿ ಭಕ್ತರಿಂದಲೇ ನಡೆಯುತ್ತಿರುವ ಕಾರಣ ಬೆಂಗಳೂರಿನ ಭಕ್ತರೊಬ್ಬರು ಗುಹೆಗೆ ತೆರಳುವ ರಸ್ತೆಯನ್ನು ಅಭಿವೃದ್ದಿ ಪಡಿಸಲು ಮುಂದಾಗಿರುವುದು ಸಂತಸ ತಂದಿದೆ ಎನ್ನುತ್ತಾರೆ.

-ಕೆ.ಎಸ್.ಮೂರ್ತಿ, ಕುಶಾಲನಗರ

admin
the authoradmin

Leave a Reply

Translate to any language you want