ನಿಸರ್ಗದ ಸುಂದರತೆಯನ್ನು ಕಣ್ತುಂಬಿಕೊಳ್ಳಲು ಚಾಮರಾಜನಗರದ ಕರಿವರದರಾಜ ಸ್ವಾಮಿಬೆಟ್ಟಕ್ಕೆ ಬನ್ನಿ… ಇಲ್ಲಿ ಮನಶಾಂತಿ ಖಚಿತ!

ಮಳೆ ಸುರಿದ ಹಿನ್ನಲೆಯಲ್ಲಿ ನಿಸರ್ಗಕ್ಕೊಂದು ಹಸಿರ ಕಳೆ ಬಂದಿದೆ. ಈಗ ಚಾಮರಾಜನಗರದತ್ತ ತೆರಳುವ ಪ್ರವಾಸಿಗರ ಕಣ್ಣಿಗೆ ನಿಸರ್ಗದ ಸುಂದರತೆ ರಾಚುತ್ತದೆ. ಇಡೀ ಜಿಲ್ಲೆ ನಿಸರ್ಗದ ಸ್ವರ್ಗವನ್ನು ತೆರೆದಿಡುತ್ತದೆ. ವೀಕೆಂಡ್ ಟ್ರಿಪ್ ಹೊರಡುವವರು ಚಾಮರಾಜನಗರದತ್ತ ಮುಖ ಮಾಡುತ್ತಿದ್ದಾರೆ. ಅಂತಹವರಿಗಾಗಿ ಕರಿವರದರಾಜ ಸ್ವಾಮಿಬೆಟ್ಟದ ಕುರಿತ ಮಾಹಿತಿ ಇಲ್ಲಿದೆ..
ಚಾಮರಾಜನಗರ ಜಿಲ್ಲೆಯಲ್ಲಿ ದೇವರ ಸೃಷ್ಠಿಯೋ? ಪ್ರಕೃತಿಯ ವರದಾನವೋ ಒಂದಲ್ಲ ಒಂದು ರೀತಿಯಲ್ಲಿ ಸುಂದರ ಪ್ರಕೃತಿಯ ರಮಣೀಯ ತಾಣಗಳಿವೆ. ಅವು ಐತಿಹಾಸಿಕ ಮತ್ತು ಪೌರಾಣಿಕವಾಗಿಯೂ ಗಮನಸೆಳೆಯುತ್ತವೆ. ಜತೆಗೆ ವನ್ಯಧಾಮಗಳು ಪರಿಸರ ಪ್ರೇಮಿಗಳಿಗೆ ಉತ್ಸಾಹ ತುಂಬುತ್ತಿವೆ.
ಸಾಮಾನ್ಯವಾಗಿ ಚಾಮರಾಜನಗರದತ್ತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಾರೆ. ಅಲ್ಲಿನ ನಿಸರ್ಗದ ನಡುವೆ ಒಂದಷ್ಟು ಸಮಯ ಕಳೆದು ಹಿಂತಿರುಗುತ್ತಾರೆ. ಬಹಳಷ್ಟು ಪ್ರವಾಸಿಗರು ಕೆಲವೇ ಕೆಲವು ಪ್ರಸಿದ್ಧ ತಾಣಗಳಿಗೆ ಮಾತ್ರ ಭೇಟಿ ನೀಡಿ ಹಿಂತಿರುಗುತ್ತಾರೆ. ಹೀಗೆ ಹೋಗುವವರು ಚಾಮರಾಜನಗರದ ಹೊರ ವಲಯದಲ್ಲಿರುವ ಕರಿವರದರಾಜ ಸ್ವಾಮಿಬೆಟ್ಟದ ಕಡೆಗೆ ಹೋದರೆ ನಿಸರ್ಗದ ಚೆಲುವನ್ನು ಕಣ್ತುಂಬಿಸಿಕೊಳ್ಳಲು ಸಾಧ್ಯವಾಗಲಿದೆ… ಹೀಗಾಗಿ ಚಾಮರಾಜನಗರದ ಟ್ರಿಪ್ ನಲ್ಲಿ ಕರಿವರದರಾಜ ಸ್ವಾಮಿಬೆಟ್ಟವನ್ನು ಸೇರಿಸಿಕೊಂಡರೆ ಒಳ್ಳೆಯದು..
ಹಾಗೆನೋಡಿದರೆ ಎರಡು ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದ ಸಂಪರ್ಕ ಹೊಂದಿರುವ ಚಾಮರಾಜನಗರಕ್ಕೆ ಪ್ರವಾಸಿಗರ ದಂಡು ಹರಿದು ಬರುತ್ತಲೇ ಇರುತ್ತದೆ. ಹೀಗೆ ಬರುವ ಪ್ರವಾಸಿಗರು ಇಲ್ಲಿನ ಪ್ರವಾಸಿತಾಣಗಳಿಗೆ ಭೇಟಿ ನೀಡಿ ತೆರಳುತ್ತಾರೆ. ಇಂತಹವರ ಪೈಕಿ ಕೆಲವರಷ್ಟೇ ಚಾಮರಾಜನಗರ ಪಟ್ಟಣಕ್ಕೆ ಹತ್ತಿರವಿರುವ ಕರಿವರದರಾಜ ಸ್ವಾಮಿಬೆಟ್ಟಕ್ಕೆ ತೆರಳುತ್ತಾರೆ. ಇಲ್ಲಿಗೆ ಹೋಗದೆ ಹಿಂತಿರುಗಿದರೆ ಒಂದು ಸುಂದರ ಅನುಭವದಿಂದ ವಂಚಿತರಾಗಬೇಕಾಗುತ್ತದೆ.
ಕೆಲವೊಮ್ಮೆ ಚಾಮರಾಜನಗರಕ್ಕೆ ಬರುವ ಪ್ರವಾಸಿಗರು ಹತ್ತಿರದಲ್ಲಿ ಯಾವುದಾದರು ಪ್ರವಾಸಿ ತಾಣಗಳಿವೆಯಾ ಎಂದು ಕೇಳಿದರೆ ಪಟ್ಟಣದ ಹೊರವಲಯದಲ್ಲಿರುವ ಕರಿವರದರಾಜ ಸ್ವಾಮಿಬೆಟ್ಟದತ್ತ ಕೈ ತೋರಿಸುವುದು ಒಳ್ಳೆಯದು. ಕರಿವರದರಾಜ ಸ್ವಾಮಿಬೆಟ್ಟದ ಬಗ್ಗೆ ಹೇಳಬೇಕೆಂದರೆ ಇದು ಚಾಮರಾಜನಗರ ಪಟ್ಟಣಕ್ಕೆ ನಾಲ್ಕು ಕಿ.ಮೀ.ದೂರದಲ್ಲಿದ್ದು ಪಟ್ಟಣಕ್ಕೆ ಮುಕುಟ ಮಣಿಯಂತಿದೆ. ಸಮುದ್ರಮಟ್ಟದಿಂದ 480 ಅಡಿ ಎತ್ತರದಲ್ಲಿದೆ.
ಈ ಬೆಟ್ಟವನ್ನು ಹಿಂದೆ ವೃದ್ದಾಚಲ ಪರ್ವತ ಸ್ತೋಮವೆಂದು ಕರೆಲಾಗುತ್ತಿತ್ತಂತೆ. ಈ ಬೆಟ್ಟದ ಮಧ್ಯ ಭಾಗದಲ್ಲಿ ಸಂಜೀವಿನಿ ಆಂಜನೇಯಸ್ವಾಮಿ ಗುಡಿ ಇದೆ. ಜತೆಗೆ ಹೊಯ್ಸಳರ ಕಾಲದ 2.5 ಅಡಿ ಎತ್ತರದ ಕರಿವರದರಾಜ ವೆಂಕಟರಮಣಸ್ವಾಮಿಯ ಸುಂದರ ಮೂರ್ತಿಯೂ ಇಲ್ಲಿದೆ. ಈ ದೇವಸ್ಥಾನ ಕ್ರಿ.ಶ. 1688ರಲ್ಲಿ ನಿರ್ಮಾಣವಾಗಿರಬಹುದು ಅಥವಾ ಜೀರ್ಣೊದ್ದಾರವಾಗಿರಬಹುದೆಂದು ಹೇಳಲಾಗಿದೆ..
ಬೆಟ್ಟವೇರಲು ಸುಮಾರು 400 ಮೆಟ್ಟಿಲುಗಳಿವೆ. ಈ ಮೆಟ್ಟಿಲನ್ನು ಶತಮಾನಗಳ ಹಿಂದೆ ಭೇಟಿ ನೀಡಿದ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದರೆಂದು ಹೇಳಲಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರು ಮತ್ತು ಭಕ್ತರಿಗೆ ಅನುಕೂಲವಾಗುವಂತೆ ಕೆಲವು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಆ ಮೂಲಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಗೊಳಿಸುವ ಕೆಲಸ ಮಾಡಲಾಗಿದೆ. ಬೆಟ್ಟದಲ್ಲಿ ಸುತ್ತಲಿನ ಎಡಬೆಟ್ಟ ಹಾಗೂ ಪ್ರಕೃತಿ ಸೌಂದರ್ಯ ವೀಕ್ಷಿಸುವ ಸಲುವಾಗಿ ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದ್ದು ಇಲ್ಲಿಂದ ಕಂಡು ಬರುವ ದೃಶ್ಯ ಮನಮೋಹಕವಾಗಿದೆ.
ಸಾಮಾನ್ಯವಾಗಿ ಕೆಲಸದ ಒತ್ತಡದಲ್ಲಿ ಸಿಲುಕಿದವರು ತಮ್ಮೆಲ್ಲ ಜಂಜಾಟಗಳನ್ನು ಮರೆತು ಒಂದಷ್ಟು ಹೊತ್ತು ಸಂತೋಷವಾಗಿದ್ದು ಬರಲು ನಿಸರ್ಗ ರಮಣೀಯ ತಾಣಗಳಿಗೆ ಭೇಟಿ ನೀಡುವುದು ಈಗ ಹೆಚ್ಚಾಗಿದೆ. ಏಕೆಂದರೆ ನಮ್ಮೆಲ್ಲ ಮಾನಸಿಕ ವೇದನೆಯನ್ನು ದೂರಗೊಳಿಸುವ ಅದ್ಭುತ ಶಕ್ತಿಯಿರುವುದು ಪ್ರಕೃತಿಗೆ ಮಾತ್ರ. ಹೀಗಾಗಿ. ಪೇಟೆಪಟ್ಟಣದ ಗೌಜು ಗದ್ದಲ., ಕೆಲಸ, ಕಾರ್ಯಗಳ ಒತ್ತಡದಲ್ಲಿ ಸಿಲುಕಿದವರು ಒಂದಷ್ಟು ಸಮಯವನ್ನು ಯಾವುದಾದರೂ ಸುಂದರ ರಮಣೀಯ ಸ್ಥಳದಲ್ಲಿ ಕಳೆದು ಬರಬೇಕೆಂದು ಆಲೋಚಿಸುತ್ತಾರೆ. ಅಂತಹವರಿಗೆ ಕರಿವರದರಾಜ ಸ್ವಾಮಿಬೆಟ್ಟ ವರದಾನವಾಗಿ ಗೋಚರಿಸಿದರೆ ಅಚ್ಚರಿಪಡಬೇಕಾಗಿಲ್ಲ.
ಇನ್ನು ನಗರದ ಮತ್ತು ಸುತ್ತಮುತ್ತಲಿನ ನಿಸರ್ಗಪ್ರೇಮಿಗಳಿಗೆ ಇದೊಂದು ವರದಾನ ಎಂದರೂ ತಪ್ಪಾಗಲಾರದು. ಇಲ್ಲಿಗೆ ಬರುವವರು ಒಂದಷ್ಟು ಸಮಯಗಳನ್ನು ಪ್ರಕೃತಿಯ ನಡುವೆ ಕಳೆದು ಹೋಗುತ್ತಾರೆ. ನಿಸರ್ಗ ಚೆಲುವು ಸವಿಯಲು ಬರುವ ಪ್ರವಾಸಿಗರಿಗಾಗಲೀ, ಕರಿವರದರಾಜಸ್ವಾಮಿಯ ದರ್ಶನಕ್ಕೆ ಬರುವ ಭಕ್ತರಿಗಾಗಲೀ ಯಾವುದೇ ತೊಂದರೆಯಾಗದಿರಲಿ ಎಂದು ಬೆಟ್ಟದ ಮೇಲಿರುವ. ನೆಲಬಾವಿಗೆ ಸುರಕ್ಷತೆಯ ದೃಷ್ಠಿಯಿಂದ ಕಬ್ಬಿಣದ ಗ್ರಿಲ್ ಗಳನ್ನು ಅಳವಡಿಸಲಾಗಿದೆ. ಕಲ್ಲುಬಂಡೆಗಳ ಗುಡ್ಡ ಹೊಂದಿರುವ ಇಲ್ಲಿಂದ ನಿಂತು ಇಣುಕಿದರೆ ಸುಂದರ ನಿಸರ್ಗ ರಮಣೀಯ ನೋಟ ನಮ್ಮೆಲ್ಲ ಜಂಜಾಟಗಳನ್ನು ಮರೆಸಿ ಮನಕ್ಕೆ ಮುದ ನೀಡುತ್ತದೆ.
ಶ್ರಾವಣ ಮಾಸದಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಈ ಸಮಯದಲ್ಲಿ ಕರಿವರದರಾಜಸ್ವಾಮಿಯ ದರ್ಶನ ಮಾಡಿದರೆ ಇಷ್ಟಾರ್ಥ ಲಭಿಸುತ್ತವೆ ಎಂಬ ನಂಬಿಕೆಯೂ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಹೋಗುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ನಿಸರ್ಗದ ಸುಂದರತೆಯನ್ನು ಸವಿಯುವ ಕಾತರ ಹೊಂದಿದವರು, ಸದಾ ಜಂಜಾಟದಲ್ಲಿಯೇ ಬದುಕು ಕಟ್ಟಿಕೊಂಡವರು ಇಲ್ಲಿಗೆ ಬಂದರೆ ಮನಸ್ಸಿಗೆ ನೆಮ್ಮದಿ ಸಿಗುವುದರಲ್ಲಿ ಎರಡು ಮಾತಿಲ್ಲ.
B.M.Lavakumar