CinemaLatest

ಕರ್ನಾಟಕ ಫಿಲಂಸ್ – ಕಂಠೀರವ ಸ್ಟುಡಿಯೋಸ್ ಸ್ಥಾಪಕರಾದ ನಟ, ನಿರ್ಮಾಪಕ ಟಿ.ಎಸ್.ಕರಿಬಸವಯ್ಯರವರ ಬಣ್ಣದ ಬದುಕಿನ ಕಥೆ…

ಕನ್ನಡದ ಚಿತ್ರರಂಗದಲ್ಲಿ ಕೆಲವರು ಕೇವಲ ತೆರೆಯ ಮೇಲೆ ನಟರಾಗಿ ಮಾತ್ರ ಮಿಂಚಿಲ್ಲ. ಅದರ ಹಿಂದೆ ಹಲವು ರೀತಿಯ ಸಾಧನೆಗಳನ್ನು ಮಾಡಿ ಹೋಗಿದ್ದಾರೆ. ಅದರಲ್ಲೂ ಹಿಂದಿನ ಆ ಹಿರಿಯ ನಟರು ಅಂತಹದೊಂದು ಸಾಧನೆ ಮತ್ತು ಚಿತ್ರರಂಗಕ್ಕೆ ಬೇಕಾದ ಸವಲತ್ತುಗಳನ್ನು ಮಾಡದೆ ಹೋಗಿದ್ದರೆ ಕಷ್ಟವಾಗುತ್ತಿತ್ತೆನೋ ಆದರೆ ಅವರೆಲ್ಲರೂ ಚಿತ್ರರಂಗ ಇರುವಷ್ಟು ದಿನವೂ ನೆನಪು ಮಾಡಿಕೊಳ್ಳಲೇ ಬೇಕಾದ ಕಾರ್ಯವನ್ನು ಮಾಡಿಟ್ಟು ಹೋಗಿದ್ದಾರೆ. ಅಂತಹ ಹಿರಿಯ ಜೀವಗಳಲ್ಲಿ ಟಿ.ಎಸ್.ಕರಿಬಸಯ್ಯ ಒಬ್ಬರಾಗಿದ್ದಾರೆ.

ಕರಿಬಸವಯ್ಯ ಅವರ ಕುರಿತಂತೆ ಬಾಲ್ಯ, ನಟನೆ ಮತ್ತು ಚಿತ್ರರಂಗದ ಅವರ ನಂಟು, ಹಾಗೆಯೇ ಅವರು ಮಾಡಿಟ್ಟು ಹೋದ ಕಾರ್ಯಗಳ ಕುರಿತಂತೆ ಹಿರಿಯ ಬರಹಗಾರರಾದ ಕುಮಾರಕವಿ ಬಿ.ಎನ್.ನಟರಾಜ ಅವರು ಒಂದಷ್ಟು ವಿಚಾರಗಳನ್ನು ಇಲ್ಲಿ ಮೆಲುಕು ಹಾಕುವ ಮೂಲಕ ಅವರ ಬದುಕಿನ ಚಿತ್ರವನ್ನು ಇಲ್ಲಿ ತೆರೆದಿಟ್ಟಿದ್ದಾರೆ…. ಓದಿದ ಮೇಲೆ ನಮ್ಮ ಕನ್ನಡ ಸಿನಿಮಾರಂಗದಲ್ಲಿ ಎಂತಹ ದಿಗ್ಗಜರಿದ್ದರು ಎಂಬ ಹೆಮ್ಮೆ ಮೂಡುವುದರಲ್ಲಿ ಎರಡು ಮಾತಿಲ್ಲ.

ಬ್ರಿಟೀಷರ ಕಾಲದಲ್ಲಿದ್ದ ಮೈಸೂರು ಮಹಾರಾಜರ ಸಂಸ್ಥಾನ ಕಾಲವದು. 1905ರಲ್ಲಿ ತುಮಕೂರು ಬಳಿಯ ತಿಪಟೂರಿನಲ್ಲಿ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿದ ಟಿ.ಎಸ್.ಕರಿಬಸಯ್ಯ ಬಾಲ್ಯದಿಂದಲೂ ಗೆಳೆಯರೊಡಗೂಡಿ ನಾಟಕ ನೋಡುವ ಮತ್ತು ಅದರಲ್ಲಿ ನಟಿಸುವ ಗೀಳನ್ನು ಅಳವಡಿಸಿಕೊಂಡು, ಬೆಳೆಯುತ್ತಿದ್ದರು.

ಒಮ್ಮೆ ಇವರ ತಂದೆಯು ಮನೆಯವರ ಮತ್ತು ಮಿತ್ರರ ಮುಂದೆ ಮಗನನ್ನು ಕುರಿತು: “ದೊಡ್ಡವನಾದ ಮೇಲೆ ನೀನು ಏನಾಗಬೇಕೆಂದು ಬಯಸಿರುವೆ” ಎಂದು ಕೇಳಿದರಂತೆ ಆಗ ತಂದೆಯ  ಪ್ರಶ್ನೆಗೆ ಬಾಲಕ ಕರಿಬಸಯ್ಯ ಥಟ್ಟನೆ ಉತ್ತರ ನೀಡಿದ್ದು: “ನಾನು ದೊಡ್ಡ ನಟನಾಗಬೇಕೆಂದಿರುವೆ” ಎಂದು…

ಅಂದಿನಿಂದ ಇವರ ಪ್ರಿಯಹವ್ಯಾಸ ಪಂಚಪ್ರಾಣ ಅಭ್ಯಾಸ ಮತ್ತೇನೂ ಅಲ್ಲದೆ ಅಭಿನಯ ಮಾತ್ರವಾಗಿತ್ತು. 365 ದಿನದ 24ಗಂಟೆ ರಂಗಭೂಮಿ ಜೀವನದ ಒಳಗೇ ಬೆರೆತು ಹೋದರು. ತಂದೆ ತಾಯಿ ಬಂಧು ಬಳಗ ಮಿತ್ರ ಎಲ್ಲರಿಗಿಂತಲೂ ರಂಗಾಯಣವನ್ನೇ ಹೆಚ್ಚಿನ ಆಪ್ಯಾಯಮಾನವಾಗಿ ಸ್ವೀಕರಿಸಿದರು. ಬಣ್ಣ ಹಚ್ಚಿಸಿಕೊಳ್ಳುವ ಹುಚ್ಚನ್ನು ಜೀವಿತಾವಧಿಯ ಬಹುಪಾಲಿನ ವಾಸಸ್ಥಾನವಾಗಿಸಿ ಕೊಂಡರು.

ಟಿ.ಎಸ್.ಕರಿಬಸಯ್ಯನವರು ಯಾವಾಗಲೂ ನಾಟಕ- ಚಲನಚಿತ್ರ ರಂಗಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿ, ನಂತರದ ಸ್ಥಾನಮಾನವನ್ನು ತಮ್ಮ ಕುಟುಂಬಕ್ಕೆ ನೀಡುತ್ತಿದ್ದರು. ತಮ್ಮ ಹೆಚ್ಚಿನ ಆಯುಷ್ಯವನ್ನು ಅಭಿನಯಕ್ಕೇ ಮುಡಿಪಾಗಿಟ್ಟ ಮಹಾನ್ ಕಲಾವಿದ, ಕಲೆಯ ಆರಾಧಕ! ತಮ್ಮ ಬಳಿ ಇದ್ದ ಎಲ್ಲವನ್ನು ಕಲಾವಿದರಿಗಾಗಿ ಮಾತ್ರ ಮೀಸಲಿರಿಸಿ ಕಲಾಸೇವೆಗಾಗಿ ತಮ್ಮ ತನು, ಮನ, ಧನ, ಧಾರಾಳವಾಗಿ ಖರ್ಚು ಮಾಡಿದರು. ಇವರು ಕೇವಲ ನಟ- ನಿರ್ಮಾಪಕ ಮಾತ್ರನಲ್ಲ, ನಾಟಕ ರಚನೆಕಾರನೂ ಚಿತ್ರಸಾಹಿತಿಯೂ ಹೌದೆನ್ನುವುದೇ ಅಚ್ಚರಿಯ ಸಂಗತಿ. ಒಬ್ಬ ವ್ಯಕ್ತಿಯಲ್ಲಿ ಇಷ್ಟೆಲ್ಲದರಲ್ಲೂ ತೊಡಗಿಸಿಕೊಳ್ಳಬಹುದು ಎಂಬುದಕ್ಕೆ ಅವರು ಸಾಕ್ಷಿ.

1939ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಗೈದ ಕರಿಬಸಯ್ಯ‘ಗುಣಸಾಗರಿ’ ಚಿತ್ರದಲ್ಲಿ ಚಿಕ್ಕದೊಂದು ಪಾತ್ರವನ್ನು ಚೊಕ್ಕವಾಗಿ ಅಭಿನಯಿಸಿ ಎಲ್ಲರಿಂದ ಶಹಬ್ಬಾಷ್‍ ಗಿರಿ ಪಡೆದರು. ನಂತರ ಅನೇಕ ಚಿತ್ರಗಳಲ್ಲಿ ಸಣ್ಣ ಪುಟ್ಟ ಚಿಕ್ಕದೊಡ್ಡ ಪಾತ್ರಗಳನ್ನು ಆಸಕ್ತಿ ಮತ್ತು ಶ್ರದ್ಧೆಯಿಂದ ನಿರ್ವಹಿಸಿ ಸೈ ಎನಿಸಿಕೊಂಡ ಧೀರ. ಯಾರೇನೇ ಬೇಡವೆಂದರೂ ಕೇಳದೆ ಗುಬ್ಬಿವೀರಣ್ಣನವರ ನಾಟಕ ಕಂಪನಿ ಸೇರಿ ವೃತ್ತಿನಿರತ ನಟನಾದ ಅಪರೂಪದ ವ್ಯಕ್ತಿ ಕನ್ನಡ ಶಕ್ತಿ ಕರಿಬಸಯ್ಯ!

ವರನಟ ರಾಜಕುಮಾರ ಮತ್ತು ವಧು ನಟಿ ಲೀಲಾವತಿ ಜೋಡಿಯ ಮೋಡಿಯುಳ್ಳ ಬೊಂಬಾಟ್ ಐತಿಹಾಸಿಕ “ರಾಣಿಹೊನ್ನಮ್ಮ” ಸಿನಿಮಾವನ್ನು ತಮ್ಮ ಚೊಚ್ಚಲ ಕಾಣಿಕೆಯಾಗಿ ಚಂದನವನ ಚಿತ್ರರಂಗಕ್ಕೆ ನೀಡುವ ಮೂಲಕ ದಾಖಲೆ ಬರೆದರು. ಒಂದು ಕಾಲಕ್ಕೆ ಜನಪ್ರಿಯತೆ ಶಿಖರವೇರಿದ್ದ “ಕರ್ನಾಟಕ ಫಿಲಂಸ್” ಎಂಬ ಚಲನಚಿತ್ರ ನಿರ್ಮಾಣ ಹಾಗೂ ಹಂಚಿಕೆ ಸಂಸ್ಥೆಯ ಸ್ಥಾಪಕರಲ್ಲಿ ಇವರೂ ಸಹ ಅಗ್ರಗಣ್ಯ. ಈ ಸಂಸ್ಥೆಯ ಹಲವಾರು ಫಿಲಂಗಳಲ್ಲೊಂದು ಡಾ.ರಾಜಕುಮಾರ್, ಬಿ.ಸರೋಜಾದೇವಿ ಅಭಿನಯದ ‘ಅಣ್ಣತಂಗಿ’.

ಇದು ಆ ಕಾಲಕ್ಕೆ ಭರ್ಜರಿ ಯಶಸ್ಸು ಕಂಡು ಚಂದನವನದಲ್ಲಿ ಸಂಚಲನ ಉಂಟುಮಾಡಿತು. ರಾಣಿಹೊನ್ನಮ್ಮ, ಮುಂತಾದ ಯಶಸ್ವಿ ಚಿತ್ರಗಳು ಸೇರಿದಂತೆ ಅನೇಕ ಚಿತ್ರಗಳ ನಿರ್ಮಾಪಕರಾಗಿ ಹಂಚಿಕೆದಾರರಾಗಿ ಕೀರ್ತಿ, ಹಣ ಗಳಿಸಿದರು. ಕನ್ನಡ ಚಿತ್ರ ನಿರ್ಮಾಣದ ಶೂಟಿಂಗ್ಗಾಾಗಿ ಕನ್ನಡ ನಿರ್ಮಾಪಕರು ಅನ್ಯರಾಜ್ಯ ಸ್ಟುಡಿಯೋಗಳಿಗೆ ಎಡತಾಕುವುದನ್ನು ಮತ್ತು ಅಲ್ಲಿನ ಫ್ಲೋರ್ ಗಾಗಿ ಗೋಗರೆಯುವುದನ್ನು ತಪ್ಪಿಸಲು 1960ರ ದಶಕದಲ್ಲಿ 4 ಫ್ಲೋರ್ ಉಳ್ಳ ಒಂದು ಸುಸಜ್ಜಿತ ಸಿನಿಮ ಸ್ಟುಡಿಯೋ ನಿರ್ಮಿಸಲು ನಿರ್ಧಾರ ಮಾಡಿದರು.

ಇದಕ್ಕೂ ಮುನ್ನ ತಮ್ಮ ತವರೂರಾದ ತಿಪಟೂರಲ್ಲಿ ಒಂದು ಸುಸಜ್ಜಿತ ಚಿತ್ರಮಂದಿರ “ವಿನೋದ ಟಾಕೀಸ್”ಕಟ್ಟಿಸಿದರು. ಆದರೆ ಸಿನಿಮಾ ಸ್ಟುಡಿಯೊ ನಿರ್ಮಾಣಕ್ಕೆ ಬೇಕಾದ ಬೃಹತ್ ಜಾಗ ಬೆಂಗಳೂರು-ತುಮಕೂರು ಹೆದ್ದಾರಿ ಅಕ್ಕಪಕ್ಕ ಇತ್ತು. ಸುಮಾರು 18 ಎಕರೆಯಷ್ಟು ಜಮೀನನ್ನು ಒಂದೇ ಕಡೆ ಖರೀದಿಸಲು ನೂರಾರು ಬೇರೆ ಬೇರೆ ರೈತರ ಮನ ಒಲಿಸಬೇಕಾದ ಸಂದರ್ಭ?! ಅಂತಹ ಸಂದಿಗ್ಧ ಸ್ಥಿತಿಯ ಅನಿವಾರ್ಯತೆ ಇದ್ದಾಗ ಅಂದಿನ ಮೈಸೂರು ರಾಜ್ಯ ಸರ್ಕಾರದ ಮಂತ್ರಿಯಾಗಿದ್ದ ಮಂಡ್ಯ ಮೂಲದ ಕೆ.ವಿ.ಶಂಕರೇಗೌಡರ ಸಹಾಯ ಸಹಕಾರ ಅವಶ್ಯಕವಾಗಿ ಪಡೆದರು.

ಈ ಘಟನೆಯನ್ನು ಕರಿಬಸಯ್ಯ ತಮ್ಮ ಕೊನೆ ಉಸಿರಿನ ತನಕ ಕೃತಜ್ಞತೆಯಿಂದ ನೆನಪು ಮಾಡಿಕೊಳ್ಳುತ್ತಿದ್ದರು. ಅಂತೂ ಇಂತೂ ಛಲಬಿಡದ ತ್ರಿವಿಕ್ರಮನಂತೆ ತಾವು ಅಂದುಕೊಂಡಂತೆಯೇ 1968ರಲ್ಲಿ ಕಂಠೀರವ ಸ್ಟುಡಿಯೋ ನಿರ್ಮಿಸಿ ಉದ್ಘಾಟಿಸಿದರು. 1970ರಲ್ಲಿ ಇದೇ ಸ್ಟುಡಿಯೋದಲ್ಲಿ ಶೂಟಿಂಗ್ ಪ್ರಾರಂಭಿಸಿ ಚಿತ್ರೀಕರಣ ಮುಗಿಸಿ ಬಿಡುಗಡೆಯಾದ ಮೊಟ್ಟ ಮೊದಲ ಚಿತ್ರ ಉದಯಕುಮಾರ್ ನಟಿಸಿದ ಠಕ್ಕಬಿಟ್ರೆಸಿಕ್ಕ!

ಕರ್ನಾಟಕ ಫಿಲಂಸ್ ಮತ್ತು ಕಂಠೀರವ ಸ್ಟುಡಿಯೋಸ್ ಸ್ಥಾಪಿಸುವ ಮೂಲಕ ಅಶಕ್ತ ಕಲಾವಿದರಿಗೆ ನೆರವಾಗಲು ಅಗತ್ಯವಿದ್ದ ಸಂಸ್ಥೆಗಳನ್ನು ಕಟ್ಟಿ ಖ್ಯಾತರಾದರು. ನಾಟಕ ಮತ್ತು ಸಿನಿಮಾ ರಂಗಕ್ಕೆ ನೀಡಿದ ಅಮೋಘ ಕೊಡುಗೆ ಸಮಾಜ ಸೇವೆ ಅಲ್ಲದೇ ಅನೇಕ ನಿಸ್ವಾರ್ಥ ಸೇವೆಗಳನ್ನು ಪರಿಗಣಿಸಿದ ಘನತೆವೆತ್ತ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಟಿ.ಎಸ್.ಕರಿಬಸಯ್ಯನವರಿಗೆ ಪ್ರಶಸ್ತಿ ಬಹುಮಾನ ನೀಡಿ ಗೌರವ ಸಲ್ಲಿಸಿದೆ. ಕರಿಬಸಯ್ಯನವರು ಪಡೆದ “ಕಲಾಚೂಡಾರತ್ನ” ಹಾಗೂ “ಕಲಾಕಂಠೀರವ” ಬಿರುದುಗಳ ಜತೆಗೆ ಭಾರತ ದೇಶದ ವಿವಿಧ ಸಂಘ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿ ಬಿರುದು ಬಿನ್ನವತ್ತಳೆ ಸನ್ಮಾನ ಪಡೆದರು.

2009ರಲ್ಲಿ ಇವರ ಜೀವನಚರಿತ್ರೆ ಕುರಿತು ಎ.ಎನ್.ಪ್ರಹ್ಲಾದರಾವ್ ಬರೆದಿರುವ ಪುಸ್ತಕವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಪ್ರಕಟಿಸಿದ್ದು ಇದಕ್ಕೆ ರಾಜ್ಯ ಸರ್ಕಾರದ ಬಹುಮಾನ ದೊರಕಿದೆ. 1990ರಲ್ಲಿ ನಿಧನರಾದ ಟಿ.ಎಸ್.ಕರಿಬಸಯ್ಯ ನಟಿಸಿದ ಪ್ರಮುಖ ಫಿಲಂಸ್:- ಗುಣಸಾಗರಿ, ಸಂಸಾರನೌಕ, ಜೀವನನಾಟಕ, ಸದಾರಮೆ, ರಣಧೀರಕಂಠೀರವ,ರಾಣಿಹೊನ್ನಮ್ಮ, ಅಣ್ಣತಂಗಿ, ಮುಂತಾದವು ಚಿರಸ್ಮರಣೀಯ

admin
the authoradmin

4 Comments

  • Excellent and extraordinary article sir. Thank you so much for wonderful information about olden days previous generations for the better knowledge and good purpose of the present youth (generations). Keep on publishing this type of useful article in future days also. Once again thanks sir 🙏

Leave a Reply