LatestState

ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ: ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ನೀರಿನ ಮಟ್ಟ ಏರಿಕೆ

ಬೆಂಗಳೂರು: ರಾಜ್ಯಕ್ಕೆ ಮುಂಗಾರು  ಜೂನ್ ತಿಂಗಳ ಮುನ್ನವೇ ಆಗಮಿಸಿದ್ದು, ಕರಾವಳಿ, ಮಲೆನಾಡು, ಸೇರಿದಂತೆ ಕಳೆದ ಕೆಲವು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಅದರಲ್ಲೂ ಕಾವೇರಿಯ ತವರು ಕೊಡಗಿನಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ಕೊಡಗಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ, ನೀರಿನ ಮಟ್ಟ ಏರಿಕೆಯಾಗುತ್ತಿದೆ. ಜಿಲ್ಲೆಯ ಎಲ್ಲಾ ಕಡೆ ಹೊಳೆ ತೊರೆಗಳು ತುಂಬಿ ಹರಿಯುತ್ತಿದೆ. ಭಾಗಮಂಡಲ ನಾಪೋಕ್ಲು ವ್ಯವಸ್ಥೆಯಲ್ಲೂ  ಮರದ ಕೊಂಬೆಗಳು ರಸ್ತೆಗೆ ಬಿದ್ದಿರುವ ಬಗೆ ವರದಿಯಾಗಿದ್ದು ವಿರಾಜಪೇಟೆಯ ಆರ್ಜಿ ಗ್ರಾಮದಲ್ಲಿ ಮನೆ ಮೇಲೆ ಮರದಕೊಂಬೆ ಬಿದ್ದು ಗೌರಿ(50) ಎಂಬುವರು ಮೃತಪಟ್ಟಿದ್ದಾರೆ.

ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳ ಕರಾವಳಿಗೆ ಅಪ್ಪಳಿಸುವ ಮುಂಗಾರು ಮಳೆ, ತದ ನಂತರ ಒಂದು ವಾರದಲ್ಲಿ ಕರ್ನಾಟಕಕ್ಕೆ ಕಾಲಿಡುತ್ತಿತ್ತು. ಆದರೆ, ಈ ಸಲ ಒಂದು ವಾರ ಮೊದಲು ಕೇರಳಕ್ಕೆ, ರಾಜ್ಯಕ್ಕೆ ಎರಡು ವಾರ ಮೊದಲೇ ಆಗಮಿಸಿದೆ. ಇದರಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಜತೆಗೆ ಬಿರುಗಾಳಿಯೂ ಬೀಸುತ್ತಿರುವುದರಿಂದ ಹಲವು ಅವಾಂತರ ಸೃಷ್ಟಿಯಾಗಿದೆ.

ಚಿಕ್ಕಮಗಳೂರಿನ ಬಣಕಲ್‌ನ ರಾಮಣ್ಣನಂಗಡಿ ಬಳಿ, ಧಾರಾಕಾರ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಮೂರು ಕಾರುಗಳು ಪಲ್ಟಿಯಾಗಿವೆ. ಚಕಮಕ್ಕಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಘಟನೆ ನಡೆದಿದೆ. ಹೇಮಾವತಿ ನದಿ ತೀರಕ್ಕೆ ಕಾರು ಉರುಳಿ ಬಿದ್ದಿದ್ದು, ಚಾಲಕನಿಗೆ ಗಂಭೀರ ಗಾಯವಾಗಿದೆ. ಅದೃಷ್ಟವಶಾತ್ ನಾಲ್ವರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಕೊಡಗಿನ ಮಂಗಳೂರು ರಸ್ತೆಯ ಕಾಟಕೇರಿ  ಬಳಿ ಲಾರಿಯ ಮೇಲೆ  ಮರ ಬಿದ್ದು ಸ್ವಲ್ಪ ಕಾಲ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.  ಕುಶಾಲನಗರ- ಸೋಮವಾರಪೇಟೆ  ಮಾರ್ಗಮಧ್ಯದಲ್ಲಿ  ಮರ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದೆ.  ಪೊನ್ನಂಪೇಟೆ ತಾಲ್ಲೂಕಿನ ಕಾನೂರಿನಲ್ಲಿ ಗಾಳಿ ಮಳೆಗೆ ಕರೆಂಟ್ ಕಂಬಗಳ  ತುದಿ ಭಾಗ ತುಂಡರಿಸಿ ವಯರ್‌ನ ಆಸರೆಯಲ್ಲಿ ನಿಂತಿರುವ ದೃಶ್ಯ ಕಂಡು ಬಂದಿದೆ.

ಮರ ರಸ್ತೆಗೆ ಅಡ್ಡಲಾಗಿ ಬಿದ್ದು  ಗುಡ್ಡೆಹೊಸೂರು – ಸಿದ್ದಾಪುರ ರಸ್ತೆ ಸಂಚಾರ ಬಂದ್ ಆಗಿದೆ. ಶನಿವಾರ ರಾತ್ರಿ ಮತ್ತು ಭಾನುವಾರ ಹೆಚ್ಚಿನ ಪ್ರಮಾಣದಲ್ಲಿ ಗಾಳಿ ಕಾಣಿಸಿಕೊಂಡಿದ್ದು, ಹಲವು ಕಾಫಿ ತೋಟಗಳಲ್ಲಿ ಮರಗಳು ಹಾಗೂ ಕೊಂಬೆಗಳು ಕಾಫಿ ಗಿಡಗಳ ಮೇಲೆ ಬಿದ್ದು ಹಲವು ಬೆಳೆಗಾರರಿಗೆ  ನಷ್ಟ ಉಂಟಾಗಿದೆ. ಹವಾಮಾನ ಇಲಾಖೆಯ ವರದಿಯಂತೆ ಮೇ 31ರವರೆಗೆ ಕೊಡಗಿನಲ್ಲಿ ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಸಿದ್ಧತೆಗಳನ್ನು ನಡೆಸಿಕೊಂಡಿವೆ. ಮಳೆಯ ಪ್ರಮಾಣ ಏರಿಕೆಯಾದರೆ, ಸಿದ್ದಾಪುರ ಕರಡಿಗೋಡು ಮತ್ತು ಇತರ ಹೊಳೆಯ ದಂಡೆಯ ಸಮೀಪ ವಾಸಿಸುವವರನ್ನು ಸ್ಥಳಾಂತರ ಗೊಳಿಸಲು ಚಿಂತನೆ ನಡೆಸಲಾಗಿದೆ.

ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಗಾಳಿ ಮಳೆ ಜೋರಾಗಿದ್ದು, ಕಾವೇರಿ ನದಿ ತುಂಬಿ ಹರಿಯುತ್ತಿದೆ.  ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಹೊಳೆ ವೇಗದಿಂದ ಚಲಿಸುತ್ತಿದೆ. ಪಿಂಡಪ್ರದಾನ ಸ್ಥಳ, ಎರಡು ಕೋಟಿ ವೆಚ್ಚದ ಉದ್ಯಾನವನ ಎಲ್ಲವೂ ಮುಳುಗಡೆಯಾಗಿದೆ. ಇನ್ನೆರಡು ಅಡಿ ನೀರು ಬಂದರೆ ಕೆಳಗಿನ ರಸ್ತೆ ಮುಳುಗಡೆಯಾಗಿ ಭಾಗಮಂಡಲ ದೇವಾಲಯದ ಮುಂಭಾಗದ ಮೆಟ್ಟಿಲು ವರೆಗೆ ನೀರು ಬರುವ ಸಾಧ್ಯತೆ ಇದೆ. ಕಳೆದ ಹಲವು ವರ್ಷಗಳ ನಂತರ  ಇದೇ ಮೊದಲ ಬಾರಿ ಮೇ ತಿಂಗಳಲ್ಲಿ ತ್ರಿವೇಣಿ ಸಂಗಮ ಭರ್ತಿಯಾಗಿದ್ದು ವಿಶೇಷವಾಗಿದೆ. ಸಾಧಾರಣವಾಗಿ ಜೂಲೈ ಆಗಸ್ಟ್ ತಿಂಗಳಲ್ಲಿ ತ್ರಿವೇಣಿ ಸಂಗಮ ಭರ್ತಿಯಾಗುವುದು ವಾಡಿಕೆ . ಆದರೆ ಈ ಬಾರಿ ಮೇ ಮೊದಲ ವಾರದಲ್ಲಿ ತ್ರಿಮಣಿ ಸಂಗಮ ಭರ್ತಿಯಾಗಿದೆ.

ಇಲ್ಲಿನ ಕೆಲವು ಆಸ್ತಿಕರು ಹೇಳುವಂತೆ, ಕಳೆದ ಮೇ 11 ರಿಂದ 20ರ ತನಕ ತಲಕಾವೇರಿಯಲ್ಲಿ ಇದೇ ಮೊದಲ ಬಾರಿ  ಋತಿವಿಕರು ಕೋಟಿ ಜಪ ಯಜ್ಞದ ಪ್ರಯುಕ್ತ ಅತಿರುದ್ರ ಜಪ ಯಜ್ಞವನ್ನು ದಿನದ ಮೂರು ಬಾರಿ ಏಳುವರೆ ತಾಸು ಶ್ರದ್ಧಾ ಭಕ್ತಿಯಿಂದ ಜಪ ಯಜ್ಞ ಮಾಡಿದ ಪರಿಣಾಮ ಈ ಮೇ ತಿಂಗಳ ಎರಡನೇ ವಾರದಲ್ಲೇ ಮಳೆ ಕಾಣಿಸಿಕೊಂಡಿದ್ದೆ. ಜಪ ಯಜ್ಞ ಆರಂಭಿಸಿದ ಮೇ 11 ರಂದೇ ಮೊದಲ ಮಳೆ ಇಲ್ಲಿ ಕಾಣಿಸಿಕೊಂಡಿತ್ತು ಎಂಬುದನ್ನು ಜನ ಸ್ಮರಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆ ಮಳೆ ಅವಧಿಗೆ ಮುನ್ನವೇ ಅಬ್ಬರಿಸುತ್ತಿರುವುದು ಅಚ್ಚರಿಯ ಜತೆಗೆ ಆತಂಕ ಮತ್ತು ಸಂಕಷ್ಟವನ್ನು ತಂದೊಡ್ಡಿದೆ.

admin
the authoradmin

Leave a Reply